ಮಳೆ ಹಾನಿ ಕಾಮಗಾರಿಗೆ ತುರ್ತು ಅನುದಾನ: ಸಚಿವ ಗೋವಿಂದ ಕಾರಜೋಳ

By Govindaraj SFirst Published Aug 22, 2022, 12:59 AM IST
Highlights

ಜಿಲ್ಲೆಯಲ್ಲಿ ಮಳೆ ಹಾನಿಯಿಂದಾಗಿ ಕೈಗೊಳ್ಳಬೇಕಾಗಿರುವ ತುರ್ತು ಕಾಮಗಾರಿಗಳಿಗೆ ಅನುದಾನ ಒದಗಿಸಲಾಗುವುದು ಎಂದು ಜಲಸಂಪನ್ಮೂಲ ಸಚಿವ ಗೋವಿಂದ ಎಂ. ಕಾರಜೋಳ ತಿಳಿಸಿದರು. 

ತುಮಕೂರು (ಆ.22): ಜಿಲ್ಲೆಯಲ್ಲಿ ಮಳೆ ಹಾನಿಯಿಂದಾಗಿ ಕೈಗೊಳ್ಳಬೇಕಾಗಿರುವ ತುರ್ತು ಕಾಮಗಾರಿಗಳಿಗೆ ಅನುದಾನ ಒದಗಿಸಲಾಗುವುದು ಎಂದು ಜಲಸಂಪನ್ಮೂಲ ಸಚಿವ ಗೋವಿಂದ ಎಂ. ಕಾರಜೋಳ ತಿಳಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿ, ಜಿಲ್ಲೆಯಲ್ಲಿ ಸುರಿದ ಭಾರಿ ಮಳೆಯಿಂದಾಗಿ ಭೀಮಸಂದ್ರ, ಅಡಗೂರು ಮತ್ತು ಮಲ್ಲಸಂದ್ರ ಕೆರೆ ಹಾಗೂ ತುಮಕೂರು ಶಾಖಾ ನಾಲೆಯ 131ನೇ ಕಿ.ಮೀ.ನಲ್ಲಿ ಮತ್ತು 97.8ನೇ ಕಿ.ಮೀ.ನಲ್ಲಿ ಉಂಟಾಗಿರುವ ಹಾನಿ ಕಾಮಗಾರಿಗಳನ್ನು ತುರ್ತಾಗಿ ಕೈಗೊಳ್ಳುವ ಅವಶ್ಯಕತೆ ಇರುವುದರಿಂದ ಇದಕ್ಕೆ ಬೇಕಾಗುವ ಅನುದಾನ ಹಾಗೂ ವಲಯದ ಒಟ್ಟಾರೆ ಮಳೆ ಹಾನಿಯಾಗಿರುವುದನ್ನು ಪುನರ್‌ ಸ್ಥಾಪಿಸಲು ಪ್ರಸ್ತಾವನೆಯನ್ನು ಪರಿಶೀಲಿಸಿ ಅಗತ್ಯ ಅನುದಾನವನ್ನು ಒದಗಿಸಲಾಗುವುದು. 

ತುಮಕೂರು ಶಾಖಾ ನಾಲೆಯ ಸರಪಳಿ 131 ಕಿ.ಮೀ. ನಾಲಾ ಪಂಕ್ತೀಕರಣವು ತುಮಕೂರು-ಗುಬ್ಬಿ ಹೆದ್ದಾರಿಯನ್ನು ಹಾದು ಹೋಗುತ್ತಿದ್ದು, ಸದರಿ ಸರಪಳಿಯ ಹತ್ತಿರದಲ್ಲಿ ತುಮಕೂರು ನಗರದ ವ್ಯಾಪ್ತಿಯಲ್ಲಿ ಬರುವ ತುಮಕೂರು ಅಮಾನಿಕೆರೆಯ ಕೋಡಿ ಹಳ್ಳವು ಒತ್ತುವರಿಯಾಗಿದೆ. ಇತ್ತೀಚಿನ ಭಾರಿ ಮಳೆಯಿಂದಾಗಿ ತುಮಕೂರು ಅಮಾನಿಕೆರೆಯು ತುಂಬಿ ಹೆಚ್ಚುವರಿ ನೀರನ್ನು ಹಳ್ಳದ ಮುಖಾಂತರ ಹರಿದು ಹೋಗುವ ಸಮಯದಲ್ಲಿ ಹಳ್ಳ ಒತ್ತುವರಿಯಿಂದಾಗಿ ತುಮಕೂರು ಶಾಖಾ ನಾಲೆಯ ಸರಪಳಿ 131 ಕಿ.ಮೀ.ನಲ್ಲಿ ನಾಲೆಗೆ ಪ್ರವೇಶಿಸಿದ್ದರಿಂದ ನಾಲೆಯ ಪಾಶ್ವ ರ್‍ ಹಾಗೂ ಅಡ್ಡ ಮೋರಿಗಳಿಗೆ ಹಾನಿ ಉಂಟಾಗಿದೆ ಎಂದು ತಿಳಿಸಿದರು. 

ಕೆ.ಎನ್.ರಾಜಣ್ಣ, ಜೆಡಿಎಸ್ ಶಾಸಕ ಗೌರಿ ಶಂಕರ್‌ಗೆ ಓಪನ್ ಆಫರ್ ಕೊಟ್ಟ ಬಿಜೆಪಿ ನಾಯಕ

ಜಿಲ್ಲೆಯ ಗುಬ್ಬಿ ತಾಲೂಕು ಅಡಗೂರು ಕೆರೆಯ ಕೋಡಿಯು ಹೆಚ್ಚು ಹಾನಿಯಾಗಿದೆ. ಇದನ್ನು ಶೀಘ್ರವಾಗಿ ದುರಸ್ತಿ ಪಡಿಸದಿದ್ದರೆ ನೀರು ಅಚ್ಚುಕಟ್ಟು ಪ್ರದೇಶಕ್ಕೆ ನುಗ್ಗುವ ಸಂಭವವಿದ್ದು, ಬೆಳೆ ನಾಶ ಹಾಗೂ ಪ್ರಾಣ ಹಾನಿಯಾಗುವ ಸಂಭವವಿರುವುದರಿಂದ ಕೂಡಲೇ ಅಧಿಕಾರಿಗಳು ಅಗತ್ಯ ಕ್ರಮವಹಿಸುವಂತೆ ಸೂಚಿಸಿದರು.

ದುರಸ್ತಿ ಕಾರ್ಯಕ್ಕೆ ಅಧಿಕಾರಿಗಳಿಗೆ ಸೂಚನೆ: ಒಟ್ಟಾರೆ ಜುಲೈ 31 ರಿಂದ ಆಗಸ್ಟ್‌ 10ರವರೆಗೆ ಸುರಿದ ಭಾರಿ ಮಳೆಯಿಂದಾಗಿ ಜಿಲ್ಲೆಯಲ್ಲಿ ಅಪಾರ ಪ್ರಮಾಣದಲ್ಲಿ ನಷ್ಟಉಂಟಾಗಿರುತ್ತದೆ. ಒಟ್ಟಾರೆ ಜಲಸಂಪನ್ಮೂಲ ಇಲಾಖೆಯಿಂದ ಒಟ್ಟು 65 ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಬೇಕಾಗಿದ್ದು, ಇದಕ್ಕೆ ಅಂದಾಜು ಪಟ್ಟಿಯನ್ನು ಸಿದ್ಧಪಡಿಸುವಂತೆ ಸೂಚಿಸಲಾಗಿದೆ. 

ಇದಕ್ಕೆ 49.50ಕೋಟಿಯಷ್ಟುಹಣ ಬೇಕಾಗಲಿದ್ದು, ಇದಕ್ಕೆ ಕೂಡಲೇ ಅನುದಾನ ಬಿಡುಗಡೆ ಮಾಡುವುದಕ್ಕೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ ಮುಖ್ಯಮಂತ್ರಿಗಳೊಂದಿಗೆ ಈ ಸಂಬಂಧ ಚರ್ಚಿಸಿ ಅನುದಾನ ಬಿಡುಗಡೆ ಮಾಡಿಸಿ, ಆದಷ್ಟುಬೇಗನೆ ಕೆರೆ, ಕಟ್ಟೆಗಳ, ಕಾಲುವೆಗಳ ದುರಸ್ತಿ ಕಾರ್ಯವನ್ನು ಕೈಗೊಳ್ಳುವುದಾಗಿ ಸಚಿವ ಗೋವಿಂದ ಎಂ. ಕಾರಜೋಳ ತಿಳಿಸಿದರು. ಸಂಸದ ಜಿ.ಎಸ್‌. ಬಸವರಾಜು, ಕಾವೇರಿ ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಶಂಕರೇಗೌಡ, ಹೇಮಾವತಿ ನಾಲಾ ವಲಯದ ಮುಖ್ಯ ಎಂಜಿನಿಯರ್‌ ಎಂ.ವರದಯ್ಯ, ಕಾರ್ಯಪಾಲಕ ಎಂಜಿನಿಯರ್‌ ಸಿ.ಆರ್‌.ಮೋಹನ್‌ ಕುಮಾರ್‌, ವಿವಿಧ ಅಧಿಕಾರಿಗಳು, ಜನಪ್ರತಿನಿಧಿಗಳು ಉಪಸ್ಥಿತರಿದ್ದರು.

ಬಿಜೆಪಿ ಸಚಿವ ಸೇರಿ ಇಬ್ಬರು ಕಾಂಗ್ರೆಸ್ ಸೇರಲು ಆಸಕ್ತಿ ಹೊಂದಿದ್ದಾರೆ: ಕೆ.ಎನ್.ರಾಜಣ್ಣ

ಸಿದ್ದರಾಮಯ್ಯಗೆ ಮುಪ್ಪಿನ ಕಾಲಕ್ಕೆ ಜ್ಞಾನೋದಯವಾಗಿದೆ: 75ನೇ ವರ್ಷದ ಜನ್ಮದಿನೋತ್ಸವದ ನಂತರ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯಗೆ ಮಠ, ದೇವಾಲಯಗಳ ಬಗ್ಗೆ ಜ್ಞಾನೋದಯವಾಗಿದೆ ಎಂದು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಮಾರ್ಮಿಕವಾಗಿ ನುಡಿದರು. ತುಮಕೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, 75 ವರ್ಷಗಳ ಕಾಲ ತಿರಸ್ಕಾರದ ಮನೋಭಾವನೆಯಲ್ಲಿದ್ದರು. ಮುಪ್ಪಿನ ಕಾಲಕ್ಕೆ ಜ್ಞಾನೋದಯವಾಗಿದೆ. ಟೆಂಪಲ್‌ರನ್‌ ಮಾಡುತ್ತಾ, ಮಠಗಳಿಗೆ ಹೋಗುತ್ತಿದ್ದಾರೆ. ಹಿಂದೆ ಧರ್ಮ ಒಡೆಯಲು ಮಾಡಿದ ಕೆಲಸಕ್ಕೂ ಪಶ್ಚಾತಾಪ ಮಾಡಿಕೊಳ್ಳುತ್ತಿದ್ದಾರೆ. ಮಠಾಧೀಶರ ಬಳಿ ತೆರಳಿ ಅಂಗಲಾಚಿ ಬೇಡಿಕೊಳ್ಳುತ್ತಿದ್ದಾರೆ. ಮುಂದೆ ಈ ರೀತಿ ಮಾಡುವುದಿಲ್ಲ ಎಂದು ಹೇಳಿದ್ದಾರೆ. ಇದು ಸಂತೋಷ, ಒಳ್ಳೆ ವಿಚಾರ ಎಂದರು.

click me!