Eco Friendly Ganesha; ಏಕಕಾಲದಲ್ಲಿ 3308 ಗಣೇಶ ತಯಾರಿಸಿ ಗಿನ್ನೆಸ್‌ ರೆಕಾರ್ಡ್‌

By Kannadaprabha NewsFirst Published Aug 29, 2022, 6:14 AM IST
Highlights

 ಅರ್ಧ ಗಂಟೆಯಲ್ಲಿ 3.5 ಕೇಜಿ ಜೇಡಿ ಮಣ್ಣಿನಲ್ಲಿ ಪರಿಸರ ಗಣಪ ತಯಾರಿ. 100ಕ್ಕೂ ಅಧಿಕ ಕಲಾವಿದರಿಂದ ಮಾರ್ಗದರ್ಶನ . ಏಕಕಾಲದಲ್ಲಿ 3308 ಗಣೇಶ ಸಿದ್ಧ ಗಿನ್ನೆಸ್‌ ರೆಕಾರ್ಡ್‌

 ಬೆಂಗಳೂರು (ಆ.29): ಬಸವನಗುಡಿಯ ನ್ಯಾಷನಲ್‌ ಕಾಲೇಜು ಮೈದಾನದಲ್ಲಿ ಶನಿವಾರ ನಡೆದ ‘ಪರಿಸರ ಸ್ನೇಹಿ ಗಣೇಶ ಹಬ್ಬ-2022’ ಕಾರ್ಯಕ್ರಮದಲ್ಲಿ ಮೂರು ಸಾವಿರಕ್ಕೂ ಅಧಿಕ ಮಂದಿ ಸ್ಥಳದಲ್ಲಿಯೇ ಮಣ್ಣಿನ ಗಣೇಶ ಮೂರ್ತಿ ಸಿದ್ಧಪಡಿಸುವ ಮೂಲಕ ಗಿನ್ನೆಸ್‌ ದಾಖಲೆ ಬರೆದರು. ಪರಿಸರ ಸ್ನೇಹ ಹಬ್ಬಕ್ಕೆ ಆದ್ಯತೆ ನೀಡುವ ನಿಟ್ಟಿನಲ್ಲಿ ಈ ಬಾರಿ ಬೆಂಗಳೂರಿನಲ್ಲಿ ಮಾಲಿನ್ಯ ನಿಯಂತ್ರಣ ಮಂಡಳಿ ಮತ್ತು ಬೆಂಗಳೂರು ಗಣೇಶೋತ್ಸವ ಸಮಿತಿ ಸಹಯೋಗದಲ್ಲಿ ಮಣ್ಣು ಮತ್ತು ಔಷಧೀಯ ಸಸ್ಯಗಳ ಬೀಜದಿಂದ ಗಣೇಶ ಮೂರ್ತಿ ತಯಾರಿಸುವ ಕಾರ್ಯಗಾರ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಪ್ರತಿಯೊಬ್ಬರಿಗೂ ಗಣೇಶ ಮೂರ್ತಿ ತಯಾರಿಕೆಗೆ ಬೇಕಾದ ಹದ ಮಾಡಿದ 3.5 ಕೇಜಿ ಜೇಡಿ ಮಣ್ಣು, ಹೂವು ಮತ್ತು ಔಷಧ ಗುಣವುಳ್ಳ ಸಸ್ಯಗಳ ಬೀಜ, ಮುಂತಾದವುಗಳನ್ನು ಒಳಗೊಂಡ ಕಿಟ್‌ ನೀಡಲಾಗಿತ್ತು. ವಿಶ್ವಕರ್ಮ ಸಮುದಾಯದ ಮುಖ್ಯ ಕಲಾವಿದರನ್ನು ಸೇರಿದಂತೆ 100ಕ್ಕೂ ಅಧಿಕ ಕಲಾವಿದರು ಸಾರ್ವಜನಿಕರಿಗೆ ಗಣೇಶ ಮೂರ್ತಿ ತಯಾರಿಸಲು ಮಾರ್ಗದರ್ಶನ ನೀಡಿದರು. 30 ನಿಮಿಷಗಳಲ್ಲಿ ಮೂರ್ತಿ ತಯಾರಿಸಿ ನೆರೆದಿದ್ದವರು ಖುಷಿಪಟ್ಟರು. ಕಾರ್ಯಾಗಾರದಲ್ಲಿ ಒಟ್ಟಾರೆ 3,308 ಮಂದಿ ಭಾಗವಹಿಸಿದ್ದು, ಈ ಮೂಲಕ ಗಿನ್ನೆಸ್‌ ದಾಖಲೆ ಸೃಷ್ಟಿಯಾಗಿದೆ.

ಸಮಾರಂಭದ ಬಳಿಕ ತಯಾರಿಸಿದ ಮೂರ್ತಿಗಳನ್ನು ಮನೆಗಳಿಗೆ ತೆಗೆದುಕೊಂಡು ಹೋದರು. ಮನೆಯಲ್ಲಿ ರಾಸಾಯನಿಕ ಬಣ್ಣ ಬಳಿಯದೇ ಆಹಾರ ಧಾನ್ಯ, ತರಕಾರಿ, ಕುಂಕುಮ, ಅರಿಶಿಣದಲ್ಲಿ ಮೂರ್ತಿ ಅಲಂಕಾರ ಮಾಡಿ ಪೂಜಿಸಲು ಆಯೋಜಕರು ಸಲಹೆ ನೀಡಿದರು.

 ಮುಂದಿನ ಬಾರಿ ಎಲ್ಲ ಜಿಲ್ಲೆಗಳಲ್ಲಿ ಮೂರ್ತಿ ತಯಾರಿ ಕಾರ್ಯಾಗಾರ: ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಶಾಂತ ಎ.ತಿಮ್ಮಯ್ಯ, ಕಾರ್ಯಕ್ರಮದಲ್ಲಿ ಸಾವಿರಾರು ಮಂದಿ ಭಾಗವಹಿಸಿದ್ದು, ಅತ್ಯುತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಮುಂದಿನ ವರ್ಷದಿಂದ ಗಣೇಶ ಹಬ್ಬದ ಸಂದರ್ಭದಲ್ಲಿ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿಯೂ ಸ್ಥಳೀಯ ಗಣೇಶೋತ್ಸವ ಸಮಿತಿಗಳ ಸಹಯೋಗದಲ್ಲಿ ಕಾರ್ಯಗಾರ ಹಮ್ಮಿಕೊಳ್ಳಲಾಗುವುದು ಎಂದರು.

Ganesh Chaturthi 2022; ಭಾರೀ ಬಂದೋಬಸ್ತ್, ಸೂಕ್ಷ್ಮ ಪ್ರದೇಶಗಳ ಮೇಲೆ ಪೊಲೀಸರ ಹದ್ದಿನ ಕಣ್ಣು

ಕಳೆದ ವರ್ಷ ಸಾಮಾಜಿಕ ಜಾಲತಾಣಗಳ ಮೂಲಕ ಪಿಒಪಿ ಗಣೇಶ ಬದಲು ಅರಿಶಿನ ಗಣೇಶ ಮೂರ್ತಿ ತಯಾರಿಸಿ ಬಳಸುವ ಬಗ್ಗೆ ‘ಅರಿಶಿನ ಗಣೇಶ ಅಭಿಯಾನ’ವನ್ನು ಮಂಡಳಿ ಆಯೋಜಿಸಿತ್ತು. ಈ ಅಭಿಯಾನದಲ್ಲಿ 2,138 ಮೂರ್ತಿಗಳನ್ನು ತಯಾರಿಸುವ ಮೂಲಕ ಅಭೂತಪೂರ್ವ ಯಶಸ್ಸು ಕಂಡಿತು.

Ganesh Chaturthi 2022; ಗಣೇಶ ಕೂರಿಸಲು ಹತ್ತು ಹಲವು ನಿಬಂಧನೆ ಸಿದ್ಧಪಡಿಸಿದ ಪೊಲೀಸ್

ಜತೆಗೆ ಏಷಿಯಾ ಬುಕ್‌ ಆಫ್‌ ರೆಕಾರ್ಡ್‌ನಲ್ಲಿ ದಾಖಲಾಗಿತ್ತು. ಈ ಬಾರಿ ‘ಪರಿಸರ ಸ್ನೇಹಿ ಗಣೇಶ ಹಬ್ಬ-2022’ ಮೂಲಕ ರಾಸಾಯನಿಕ ಬಣ್ಣಲೇಪಿತ ಬದಲು ಮಣ್ಣಿನ ಮತ್ತು ಔಷಧೀಯ ಸಸ್ಯಗಳ ಬೀಜ ಒಳಗೊಂಡ ಗಣೇಶ ಮೂರ್ತಿ ಬಳಸುವಂತೆ ಸಾರ್ವಜನಿಕರಿಗೆ ಅರಿವು ಮೂಡಿಸಲಾಗುತ್ತಿದೆ. ಸಾರ್ವಜನಿಕರು, ಶಾಲಾ ಕಾಲೇಜಿನ ವಿದ್ಯಾರ್ಥಿಗಳು, ಸರ್ಕಾರೇತರ ಸಂಸ್ಥೆಗಳು ಮತ್ತು ಸಾರ್ವಜನಿಕರು ಭಾಗವಹಿಸಿದ್ದಾರೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳು, ಬೆಂಗಳೂರು ಗಣೇಶೋತ್ಸವ ಸಮಿತಿ ಸದಸ್ಯರು ಭಾಗಿಯಾಗಿದ್ದರು.

click me!