ದುಬಾರೆ ಶಿಬಿರದಿಂದ ತಪ್ಪಿಸಿಕೊಂಡಿದ್ದ ಆನೆ 2 ವರ್ಷದ ಬಳಿಕ ಸೆರೆ

By Kannadaprabha NewsFirst Published Mar 31, 2021, 4:24 PM IST
Highlights

ದುಬಾರೆ ಆನೆ ಶಿಬಿರದಿಂದ ತಪ್ಪಿಸಿಕೊಂಡು ಓಡಿದ್ದ ಆನೆ ಕುಶ ಬರೋಬ್ಬರಿ ಎರಡು ವರ್ಷದ ಬಳಿಕ ಪತ್ತೆಯಾಗಿದೆ.  ವಿವಿಧ ಆನೆಗಳನ್ನು ಬಳಸಿ ಯಶಸ್ವಿ ಕಾರ್ಯಾಚರಣೆ ನಡೆಸಲಾಗಿದೆ. 

 ಕುಶಾಲನಗರ (ಮಾ.31):  ಸುಮಾರು ಎರಡು ವರ್ಷದ ಹಿಂದೆ ದುಬಾರೆ ಸಾಕಾನೆ ಶಿಬಿರದಿಂದ ಚೈನು ಮತ್ತು ಬೇಡಿಯನ್ನು ತುಂಡರಿಸಿ ತಪ್ಪಿಸಿಕೊಂಡಿದ್ದ ಕುಶ ಆನೆಯನ್ನು ಕುಶಾಲನಗರ ವಲಯದ ಮೀನುಕೊಲ್ಲಿ ಶಾಖಾ ವ್ಯಾಪ್ತಿಯ ಮೀಸಲು ಅರಣ್ಯದಲ್ಲಿ ಸೆರೆಹಿಡಿಯುವಲ್ಲಿ ಇಲಾಖಾ ಸಿಬ್ಬಂದಿಗಳು ಯಶಸ್ವಿಯಾಗಿದ್ದಾರೆ.

ದುಬಾರೆ ಸಾಕಾನೆ ಶಿಬಿರದ ಆನೆಗಳಾದ ಪ್ರಶಾಂತ, ಧನಂಜಯ, ಸುಗ್ರೀವ ಮತ್ತು ಲಕ್ಷ್ಮಣ ಇವುಗಳ ಸಹಾಯದಿಂದ ಮಂಗಳವಾರ ಮುಂಜಾನೆ 5 ಗಂಟೆ ಸುಮಾರಿಗೆ ಕುಶ ಆನೆಯನ್ನು ಕಾಡಾನೆಗಳ ಗುಂಪಿನಿಂದ ಬೇರ್ಪಡಿಸಿ, ಸೆರೆಹಿಡಿದು ಪ್ರಸ್ತುತ ಮೀನುಕೊಲ್ಲಿ ಶಾಖೆಯ ಸಿಬ್ಬಂದಿ ವಸತಿಗೃಹದಮೀಸಲು ಅರಣ್ಯದ ಬಳಿ ಕಟ್ಟಿಹಾಕಲಾಗಿದೆ. 2019 ನವೆಂಬರ್‌ನಲ್ಲಿ ಕುಶ ತಪ್ಪಿಸಿಕೊಂಡಿತ್ತು.

ಕೊಡಗಿನ ನರಭಕ್ಷಕ ಹುಲಿ ಗುಂಡೇಟಿಗೆ ಬಲಿ: ನಿಟ್ಟುಸಿರು ಬಿಟ್ಟ ಜನತೆ ..

ಕುಶ ಆನೆಯನ್ನು ಶೀಘ್ರದಲ್ಲಿಯೇ ದುಬಾರೆ ಸಾಕಾನೆ ಶಿಬಿರಕ್ಕೆ ಕರೆದೊಯ್ದು ಮತ್ತೆ ಪಳಗಿಸಲಾಗುವುದು ಎಂದು ಕುಶಾಲನಗರ ವಲಯ ಅರಣ್ಯಾ​ಕಾರಿಗಳು ತಿಳಿಸಿದ್ದಾರೆ. ಕುಶ ಆನೆಯ ಸೆರೆಹಿಡಿಯುವ ಕಾರ್ಯಾಚರಣೆಯು ಇಲಾಖಾ ಪಶು ವೈದ್ಯಾಧಿಕಾರಿ ಡಾ. ಮುಜೀಬ್‌, ಉಪ ವಲಯ ಅರಣ್ಯಾಧಿ​ಕಾರಿ ಹಾಗೂ ಮೋಜಣಿದಾರರಾದ ಕೆ.ಪಿ. ರಂಜನ್‌ ಮತ್ತು ಕೆ.ಎಸ್‌. ಸುಬ್ರಾಯ ಇವರ ನೇತೃತ್ವದಲ್ಲಿ ದುಬಾರೆ ಸಾಕಾನೆ ಶಿಬಿರದ ಮಾವುತರು ಮತ್ತು ಕಾವಾಡಿಯವರು ಹಾಗೂ ಮೀನುಕೊಲ್ಲಿ ಶಾಖೆಯ ಸಿಬ್ಬಂದಿಗಳ ಭಾಗವಹಿಸಿದ್ದರು.

click me!