14 ತಿಂಗಳ ಮಗುವಿನಿಂದ ಎರಡು ಕಣ್ಣುಗಳು ದಾನ! ಅಪ್ಪು ಅಂದ್ರೆ ಪ್ರಾಣ!

By Ravi JanekalFirst Published Jan 10, 2023, 10:24 PM IST
Highlights
  • ಸಾವಿನಲ್ಲೂ ಇನ್ನೊಬ್ಬರ ಬದುಕಿಗೆ ಬೆಳಕಾದ ಮಗು ಬಸವಪ್ರಭು!
  • ಮಗು ಬಸವಪ್ರಭು ಅನಾರೋಗ್ಯಕ್ಕೆ ತುತ್ತಾಗಿ ನರಳಾಟ
  • 6 ಸಾವಿರ ಮಕ್ಕಳಲ್ಲಿ ಒಂದು ಮಗುವಿಗೆ ಬರುವ ವಿಚಿತ್ರ ಕಾಯಿಲೆ
  • ವೈದ್ಯಕೀಯ ಕ್ಷೇತ್ರಕ್ಕೆ ಸವಾಲ್ ಆದ ಮಗು ಬಸವಪ್ರಭು  ಕಾಯಿಲೆ!

ವರದಿ: ಜಗನ್ನಾಥ ಪೂಜಾರ್, ಏಷ್ಯಾನೆಟ್ ಸುವರ್ಣನ್ಯೂಸ

ರಾಯಚೂರು (ಜ.10) : ಈ ಭೂಮಿ ಮೇಲೆ ಹುಟ್ಟು ಸಹಜ. ಸಾವು ಎಲ್ಲರಿಗೂ ಅನಿವಾರ್ಯ. ಹುಟ್ಟು- ಸಾವಿನ  ಮಧ್ಯೆ ಬದುಕಿದ ದಿನಗಳಲ್ಲಿ ನಾವು ಮಾಡಿದ ಉತ್ತಮ ಕಾರ್ಯಗಳು ಮಾತ್ರ ಉಳಿಯುವುದು‌. ಕಷ್ಟ ಅಂತ ಬಂದವರಿಗೆ ನಮ್ಮ ಕೈಲಾದ ಸಹಾಯ ಮಾಡಬೇಕು. ಸತ್ತ ಮೇಲೆಯೂ ನಮ್ಮನ್ನು ನೆನಪಿಸಿಕೊಳ್ಳುವಂತೆ ಬದುಕಿ ತೋರಿಸಬೇಕು. ಇಲ್ಲಿ 14 ತಿಂಗಳ ಮಗುವೊಂದು ಸಾವಿಗೆ ಮುನ್ನ ಎರಡು ಕಣ್ಣು ದಾನ ಮಾಡಿ ಇಡೀ ಮನುಷ್ಯ ಕುಲಕ್ಕೆ ಮಾದರಿ ಆಗಿದೆ.

ಯಾರು ಆ ‌ಮಗು?

ರಾಯಚೂರು(Raichur) ಜಿಲ್ಲೆ ಲಿಂಗಸೂಗೂರು(Lingsuguru) ತಾಲೂಕಿನ ಗೆಜ್ಜಲಗಟ್ಟಾ(Gejjalagatta) ಗ್ರಾಮದ ಅಮರೇಗೌಡ ಮತ್ತು ವಾಣಿ ದಂಪತಿ ಮಗು ಬಸವಪ್ರಭು(Basavaprabhu). ಮಗುವಿನ ತಂದೆ ಅಮರೇಗೌಡ  ಹಟ್ಟಿ ಚಿನ್ನದ ಗಣಿ(hatti gold mines)ಯಲ್ಲಿ ಕೆಲಸ ಮಾಡುತ್ತಾರೆ. ಅಮರೇಗೌಡರ ಉದ್ಯೋಗ ನೋಡಿ 2016ರಲ್ಲಿ ಕರಡಕಲ್ ಗ್ರಾಮದ ಸಂಬಂಧಿಕರು ವಾಣಿ ಜೊತೆಗೆ ವಿವಾಹ ಮಾಡಿದರು. ವಾಣಿ ಮತ್ತು ಅಮರೇಗೌಡ ದಂಪತಿಗೆ ಈವರೆಗೆ ಮೂರು ಮಕ್ಕಳಾಗಿವೆ. 

ಮೊದಲು ಜನಿಸಿದ ಗಂಡು ಮಗು ಕಾಯಿಲೆಯೊಂದಕ್ಕೆ ತುತ್ತಾಗಿ 9 ದಿನಗಳಲ್ಲಿ ಸಾವನ್ನಪ್ಪಿತ್ತು.  ಎರಡನೇ ಹೆಣ್ಣು ಮಗು ಜನಿಸಿದೆ ಆ ಮಗು ಈಗ 3 ವರ್ಷದ್ದಾಗಿದೆ. ಯಾವುದೇ ಕಾಯಿಲೆ ಇಲ್ಲ. ಮಗು ಆರೋಗ್ಯವಾಗಿದೆ. ಹೀಗಾಗಿ ಈ ದಂಪತಿ ಅಮರೇಗೌಡ ಹಾಗೂ ವಾಣಿ ದಂಪತಿ ಮೂರನೇ ಮಗುವಿಗೆ ಪ್ಲಾನ್ ‌ಮಾಡಿದ್ರು‌. ಮೂರನೇ ಮಗು ಬಸವಪ್ರಭು ಹುಟ್ಟಿನಿಂದ ಆರೋಗ್ಯವಾಗಿತ್ತು. ಆದ್ರೆ ಹುಟ್ಟಿದ ಕೆಲ ದಿನಗಳ ಬಳಿಕ ಮಗು ಬಸವಪ್ರಭು ಅನಾರೋಗ್ಯಕ್ಕೆ ತುತ್ತಾಗಿದೆ. ಪೋಷಕರು ಮಗವಿಗೆ ಚಿಕಿತ್ಸೆ ಕೊಡಿಸಿ ಮಗು ಉಳಿಸಿಕೊಳ್ಳಲು ನಾನಾ ಕಡೆ ಆಸ್ಪತ್ರೆಗೆ ತೋರಿಸಿದ್ದಾರೆ. ಆದ್ರೆ ದಿನ ಕಳೆದಂತೆ ಮಗುವಿನ ಆರೋಗ್ಯ ಕ್ಷಿಣಿಸುತ್ತಾ ಹೋಗಿದೆ. 

ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಚಿಕಿತ್ಸೆ ಕೊಡಿಸಿದ್ದಾರೆ. ಆದರೆ ಆ ಮಗುವಿಗೆ ಇರುವ ರೋಗದ ಬಗ್ಗೆ ವೈದ್ಯರು ತಿಳಿಸಿದಾಗ ಕುಟುಂಬದವರು ಬೆರಗಾಗಿದ್ದಾರೆ. ಮಗು ಬಸವಪ್ರಭು ಅನುವಂಶಿಕ ಕಾಯಿಲೆ ನರಳಾಟ(Genetic Disorders)ನಡೆಸಿತ್ತು. 
ಮಕ್ಕಳಲ್ಲಿ ಏಕೆ ಬರುತ್ತೆ ಈ ಅನುವಂಶಿಕ ರೋಗ:

ಅಮರೇಗೌಡ ಮತ್ತು ವಾಣಿ ಸಂಬಂಧದಲ್ಲಿ ವಿವಾಹವಾಗಿದ್ರು‌. ಹೀಗಾಗಿ ಈ ದಂಪತಿಗೆ ಹುಟ್ಟುವ ಗಂಡು ಮಕ್ಕಳಲ್ಲಿ ಈ ವಿಚಿತ್ರ ಕಾಯಿಲೆ ಕಾಣಿಸಿಕೊಂಡಿದೆ. ವಂಶ ಪರಂಪರೆಯಿಂದ ಬರುವ ರೋಗ ಇದ್ದಾಗಿದ್ದು,  6 ಸಾವಿರ ಮಕ್ಕಳಲ್ಲಿ ಒಂದು ಮಗುವಿಗೆ ಇಂತಹ ವಿಚಿತ್ರ ಕಾಯಿಲೆ ಅದು ಗಂಡು ಮಕ್ಕಳಿಗೆ ಮಾತ್ರ ಬರುತ್ತದೆ. ಈ ಕಾಯಿಲೆಯನ್ನು ವಾಸಿ ಮಾಡಲು ಅಸಾಧ್ಯ ಎಂದು ವೈದ್ಯರು ತಿಳಿಸಿದ್ದಾರೆಂದು ಮಗುವಿನ ತಂದೆ ಹೇಳಿದ್ದಾರೆ.

National Epilepsy Day: ಅಪಸ್ಮಾರ ಸಮಸ್ಯೆ ಅನುವಂಶಿಕವಾಗಿ ಬರುತ್ತಾ?

ಪುನೀತ್ ಹಾಡು ಅಂದ್ರೆ ಮಗುವಿಗೆ ಪಂಚಪ್ರಾಣ:

14 ತಿಂಗಳ ಮಗು ಬಸವಪ್ರಭು ಅನಾರೋಗ್ಯದಿಂದ ನರಳಾಟ ನಡೆಸುತ್ತಿದ್ರು, ಅಪ್ಪು ಅಭಿಮಾನಿ(Appu fan) ಆಗಿತ್ತು. ಇನ್ನೊಂದು ವಿಚಿತ್ರವೆಂದರೆ ಪುನೀತ್‌ರಾಜಕುಮಾರ(Puneet rajkumar) ನಿಧನದ ನಂತರ ನವೆಂಬರ್ 6 ರಂದು ಈ ಮಗು ಜನಿಸಿತು. ಅಪ್ಪು ಸಿನಿಮಾದ ಹಾಡುಗಳನ್ನು ಕೇಳಿಸಿದರೆ ಮಗು ಅಳುವುದೇ ನಿಲ್ಲಿಸಿ ಸುಮ್ಮನಾಗುತ್ತಿತ್ತಂತೆ. ಇಲ್ಲದಿದ್ದರೆ ಆ ಮಗು ಕಾಯಿಲೆಯ ಭೀಕರತೆಗೆ ಹಗಲು-ರಾತ್ರಿ ನಿದ್ರೆ ಇಲ್ಲದೇ ಅಳುತ್ತಿತ್ತಂತೆ. ಹೀಗಾಗಿ ಅಪ್ಪುವಿನ ಹಾಡನ್ನ ಆ ಮಗುವಿಗೆ ಕೇಳಿಸುತ್ತಿದ್ದರು.

Uncombable Hair Syndrome: ತಲೆ ತುಂಬಾ ಕೆದರಿದ ಕೂದಲು, ಪುಟ್ಟ ಮಗುವನ್ನು ಕಾಡುತ್ತಿದೆ ವಿಚಿತ್ರ ರೋಗ

ಇನ್ನು ತಮ್ಮ ಮಗು ಉಳಿಯಲ್ಲ ಅಂತ ವೈದ್ಯರೇ ಖಚಿತಪಡಿಸಿದ ಮೇಲೆ ಆ ಕುಟುಂಬದವರು ನಮ್ಮ ಮಗು ಇನ್ನೂ ಬದುಕಲು ಸಾಧ್ಯವಿಲ್ಲ ಅಂತ ಸುಮ್ಮನಾಗಿದ್ದರು. ಅಂತಹ ವೇಳೆಯಲ್ಲಿ ವೈದ್ಯರ ಸಲಹೆ ಮೇರೆಗೆ ಮಗು ಬಸವಪ್ರಭು ಪೋಷಕರು ಮಗುವಿನ ಎರಡು ‌ಕಣ್ಣುಗಳು ದಾನ (eye donate)ಮಾಡಿದ್ದಾರೆ. ಈಗ ಮಗು ಅಸುನೀಗಿದ ಬಳಿಕ ಮಗುವಿನ ಸಾವಿನ ನೋವಿನಲ್ಲೂ ಅಮರೇಗೌಡ ಹಾಗೂ ವಾಣಿ, ಮಗುವಿನ ದಂಪತಿ ಕಣ್ಣುಗಳು ದಾನ ಮಾಡಿದ್ದಾರೆ. ಇದಕ್ಕಿಂತ ಇನ್ನೊಂದು ಹೆಜ್ಜೆ ಮುಂದೆ ಹೋಗಿ ಮುಂದಿನ ದಿನಗಳಲ್ಲಿ ಇಡೀ ಕುಟುಂಬದ ಸದಸ್ಯರೆಲ್ಲರೂ ದೇಹದಾನ ಮಾಡಲು ನಿರ್ಧರಿಸಿದ್ದೇವೆಂದು ಮಗುವಿನ ತಂದೆ ಅಮರೇಗೌಡ ತಿಳಿಸಿದ್ದಾರೆ. ಒಟ್ಟಿನಲ್ಲಿ ಮಗು ಬಸವಪ್ರಭು ಬದುಕಿದ್ದು 14 ತಿಂಗಳು ಆದ್ರೂ, ಇಬ್ಬರು ಅಂಧರ ಬದುಕಿಗೆ ಬೆಳಕು ಆಗಿದ್ದಾರೆ.

click me!