ಅಹಂನಿಂದ ದೂರಾಗಲು ಗುರುವಿನ ದರ್ಶನ, ಆಶೀರ್ವಾದ ಅವಶ್ಯ: ಬೊಮ್ಮಾಯಿ

By Kannadaprabha NewsFirst Published Jan 23, 2020, 7:48 AM IST
Highlights

ಉತ್ಕೃಷ್ಠವಾದ ಪ್ರೀತಿಯೇ ಭಕ್ತಿ| ಪಂಢರಪುರದಲ್ಲಿ ಅರ್ಧಕ್ಕೆ ನಿಂತಿರುವ ಕರ್ನಾಟಕ ಭವನ ನಿರ್ಮಾಣ ಕಾಮಗಾರಿ ಮುಂದುವರಿಸಬೇಕು| ರಾಜ್ಯದಿಂದ ಆಗಮಿಸುವ ಲಕ್ಷಾಂತರ ಭಕ್ತರಿಗೆ ರಾಜ್ಯ ಸರ್ಕಾರ ವಸತಿ ವ್ಯವಸ್ಥೆ ಕಲ್ಪಿಸಬೇಕು| 

ಸವಣೂರು(ಜ.23): ಆಸೆ, ಆಮಿಷಗಳಿಗೆ ಬಲಿಯಾಗದೆ ಭಕ್ತಿಯೊಂದಿಗೆ ಭಾವಸಾರ ಕ್ಷತ್ರಿಯ ಸಮಾಜದ ವಿವಿಧ ಧಾರ್ಮಿಕ ಕಾರ್ಯಕ್ರಮ ಆಯೋಜಿಸುತ್ತಿರುವುದು ಶ್ಲಾಘನೀಯ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಗುರು ನಿವೃತ್ತಿನಾಥ ಮಹಾರಾಜರ ಸಮಾಧಿ ಸೋಹಳಾ (ಪುಣ್ಯತಿಥಿ) ಅಂಗವಾಗಿ ಪಟ್ಟಣದ ಹರಿಮಂದಿರದಲ್ಲಿ ಇತ್ತೀಚೆಗೆ ನಡೆದ ದಿಂಡಿ ಮಹೋತ್ಸವದ ಧರ್ಮಸಭೆ ಹಾಗೂ ಸಂಗೀತ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಉತ್ಕೃಷ್ಠವಾದ ಪ್ರೀತಿಯೇ ಭಕ್ತಿ. ಭಾವಸಾರ ಕ್ಷತ್ರಿಯ ಸಮಾಜದ ಭಕ್ತಿ ಸರ್ವರಿಗೂ ಪ್ರೇರಣೆಯಾಗಿದೆ. ಸ್ಥಾನ, ಮಾನ ಪ್ರತಿ ಒಬ್ಬ ವ್ಯಕ್ತಿಗೂ ಅಹಂ ತರಿಸುತ್ತದೆ. ಅಹಂನಿಂದ ದೂರಾಗಲು ಗುರುವಿನ ದರ್ಶನ ಹಾಗೂ ಆಶೀರ್ವಾದ ಅವಶ್ಯವಾಗಿದೆ ಎಂದರು.

ಸಾನ್ನಿಧ್ಯ ವಹಿಸಿದ್ದ ಫಂಡರಪುರದ ಗುರುವರ್ಯ ಪ್ರಭಾಕರಬುವಾ ಬೋಧಲೆ ಮಹಾರಾಜರು, ಪಂಢರಪುರದಲ್ಲಿ ಅರ್ಧಕ್ಕೆ ನಿಂತಿರುವ ಕರ್ನಾಟಕ ಭವನ ನಿರ್ಮಾಣ ಕಾಮಗಾರಿ ಮುಂದುವರಿಸಬೇಕು. ರಾಜ್ಯದಿಂದ ಆಗಮಿಸುವ ಲಕ್ಷಾಂತರ ಭಕ್ತರಿಗೆ ರಾಜ್ಯ ಸರ್ಕಾರ ವಸತಿ ವ್ಯವಸ್ಥೆ ಕಲ್ಪಿಸಬೇಕು. ಈ ಕುರಿತು ಮುಖ್ಯಮಂತ್ರಿಯೊಂದಿಗೆ ಚರ್ಚಿಸಿ ನಿರ್ಣಯ ಕೈಗೊಳ್ಳುವಂತೆ ಸಚಿವ ಬೊಮ್ಮಾಯಿಗೆ ತಿಳಿಸಿದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಚಿಕ್ಕಮಂಗಳೂರಿನ ಸುರೇಶ ಗವಾಯಿ ಸಂಗೀತ ಸೇವೆ ಸಲ್ಲಿಸಿದರು. ವಿವಿಧ ರಂಗದಲ್ಲಿ ಸಾಮಾಜಿಕ ಕಾರ್ಯದಲ್ಲಿ ತೊಡಗಿರುವ ಮಹನಿಯರನ್ನು ಸನ್ಮಾನಿಸಲಾಯಿತು. ಹರಿಮಂದಿರದಿಂದ ಅಹೋರಾತ್ರಿ ದಿಂಡಿ ಉತ್ಸವ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಾಗಿ ಹರಿಮಂದಿರ ತಲುಪಿತು. ಆನಂತರ ಫಂಡರಪುರದ ಗುರುವರ್ಯ ಪ್ರಭಾಕರಬುವಾ ಬೋಧಲೆ ಮಹಾರಾಜರಿಂದ ಕಿರ್ತನೆ ಹಾಗೂ ಅನ್ನಸಂತರ್ಪಣೆಯೊಂದಿಗೆ ದಿಂಡಿ ಮಹೋತ್ಸವ ಸಂಪನ್ನಗೊಂಡಿತು.

ಪ್ರಮುಖರಾದ ನಾರಾಯಣರಾವ್‌ ರಾಶಿನಕರ, ಮೋಹನ ಮೆಣಸಿನಕಾಯಿ, ಜಯಂತ ಕೋಟಕ್‌, ಮನೋಹರ ಮಹೇಂದ್ರಕರ, ಪಾಂಡುರಂಗ ಮಹೇಂದ್ರಕರ, ಮುರಳಿಧರ ಶೆಂಡಗೆ, ಶಂಕರರಾವ್‌ ಮಹೇಂದ್ರಕರ, ಮಲ್ಲಿಕಾರ್ಜುನ ಮಧುಕರ, ಎಸ್‌.ವೈ. ಪಾಟೀಲ, ದೀಪಕ ಅಚಲಕರ, ಮುರಳಿ ಮಹೇಂದ್ರಕರ, ಮಲಕಾಜಿ ರಾಂಪೂರೆ, ಜ್ಞಾನೇಶ್ವರ ಹಂಚಾಟೆ, ರಾಜು ಮಹೇಂದ್ರಕರ, ರಾಜೇಂದ್ರ ಸುಲಾಖೆ, ಏಕನಾಥ ರಾಶಿನಕರ, ನಾಮದೇವ ರಾಶಿನಕರ, ಖಂಡೋಜಿರಾವ್‌ ರಾಶಿನಕರ, ಉಮೇಶ ದಾಮೋದರ, ಪರಶುರಾಮ ಅಚಲಕರ, ಅಶೋಕ ರಾಶಿನಕರ, ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ಭಾವಸಾರ ಕ್ಷತ್ರಿಯ ಸಮಾಜ ಬಾಂಧವರು ಇದ್ದರು.
 

click me!