ಧಾರವಾಡ: ರೊಟ್ಟಿಗವಾಡ ಹೋರಾಟಕ್ಕೆ ಸಿಕ್ಕ ಜಯ, ಪಿಡಿಒಗಳಿಂದ 23 ಲಕ್ಷ ವಸೂಲಿಗೆ ಜಿ.ಪಂ. ಸಿಇಒ ಆದೇಶ

By Girish GoudarFirst Published Nov 5, 2022, 2:30 PM IST
Highlights

4 ವರ್ಷಗಳಿಂದ ಹೋರಾಟ ಮಾಡಿ ಅಕ್ರಮ ಬಯಲು ಮಾಡಿದ್ದ ಸಾಮಾಜಿಕ ಹೋರಾಟಗಾರ ಮಲ್ಲಿಕಾರ್ಜುನ ರೊಟ್ಟಿಗವಾಡ

ವರದಿ: ಪರಮೇಶ್ವರ ಅಂಗಡಿ, ಏಷ್ಯಾನೆಟ್ ಸುವರ್ಣ ನ್ಯೂಸ್, ಧಾರವಾಡ 

ಧಾರವಾಡ(ನ.05): ಧಾರವಾಡ ತಾಲೂಕಿನ ಯರಿಕೊಪ್ಪ ಗ್ರಾ.ಪಂ.ನಲ್ಲಿ ಸಾಮಾನ್ಯವಾಗಿದ್ದ ಹಣಕಾಸಿನ ಅಕ್ರಮ ಕೊನೆಗೂ ಬಯಲಾಗಿದೆ. ಇದಕ್ಕೆ ಕಾರಣರಾದ ಇಬ್ಬರು ಪಿಡಿಒಗಳಿಂದ 23,89,902 ಲಕ್ಷ ರೂ. ವಸೂಲಿ ಮಾಡುವಂತೆ ಜಿ.ಪಂ. ಸಿಇಒ ಆದೇಶಿಸಿದ್ದಾರೆ. ಈ ಹಿಂದೆ ಯರಿಕೊಪ್ಪ ಗ್ರಾ.ಪಂ. ಪ್ರಭಾರ ಪಿಡಿಒ ಆಗಿದ್ದ ಆರ್.ಆರ್. ಪಾಟೀಲ ಹಾಗೂ ಹಾಲಿ ಪಿಡಿಒ ಶಕುಂತಲಾ ಭಜಂತ್ರಿ ಅವರಿಂದ ಹಣ ವಸೂಲಿ ಮಾಡುವಂತೆ ಆದೇಶಿಸಲಾಗಿದೆ. ಈ ಅಕ್ರಮವನ್ನು 4 ವರ್ಷಗಳಿಂದ ಹೋರಾಟ ಮಾಡಿ ಬಯಲು ಮಾಡಿದ್ದು ಸಾಮಾಜಿಕ ಹೋರಾಟಗಾರ ಮಲ್ಲಿಕಾರ್ಜುನ ರೊಟ್ಟಿಗವಾಡ.

Latest Videos

ಧಾರವಾಡ ತಾಲೂಕಿನ ಯರಿಕೊಪ್ಪ ಗ್ರಾ.ಪಂ.ನಲ್ಲಿ 11 ಸದಸ್ಯರಿದ್ದು, ಅದರ ವ್ಯಾಪ್ತಿಯಲ್ಲಿ ನಾಯಕನ ಹುಲಿಕಟ್ಟಿ, ಕಣವಿ ಹೊನ್ನಾಪುರ ಮತ್ತು ಯರಿಕೊಪ್ಪ ಗ್ರಾಮಗಳು ಬರುತ್ತವೆ. ಖರ್ಚು- ವೆಚ್ಚಕ್ಕೆ ನಕಲಿ ವೋಚರ್ ಬಳಸುವುದು, ಸ್ವಚ್ಛತೆ ಕಾಮಗಾರಿಯಲ್ಲಿ ಅಕ್ರಮ, ಖೊಟ್ಟಿ ಕೂಲಿಕಾರರ ಬಳಕೆ, ನೀರಿನ ಪೈಪ್‌ಲೈನ್ ದುರಸ್ತಿ, ಮೋಟರ್‌ಗಳ ರಿಪೇರಿ, ನಡೆಯದ ಕಾಮಗಾರಿಗಳಿಗೆ ಹಣ ಪಾವತಿ, ಖೊಟ್ಟಿ ಬಿಲ್ ಸೃಷ್ಟಿ ಸೇರಿ ಹಲವು ಆರೋಪಗಳಿದ್ದವು. ಈ ಬಗ್ಗೆ ಸಾಮಾಜಿಕ ಹೋರಾಟಗಾರ ಮಲ್ಲಿಕಾರ್ಜುನ ರೊಟ್ಟಿಗವಾಡ ಎಂಬುವರು ಕಾನೂನು ಹೋರಾಟ ನಡೆಸಿದ್ದರು. ಅವ್ಯವಹಾರ ತನಿಖೆಗೆ ಆಗ್ರಹಿಸಿ ಹಲವಾರು ಬಾರಿ ಜಿ.ಪಂ. ಆವರಣದಲ್ಲಿ ಅಮರಣಾಂತ ಉಪವಾಸ ಸತ್ಯಾಗ್ರಹ ಕೂಡ ನಡೆಸಿದ್ದರು.

ಹುಬ್ಬಳ್ಳಿ: ಎನ್‌ಐಎ ದಾಳಿ, ಬೆಳ್ಳಂ ಬೆಳಗ್ಗೆ ಎಸ್‌ಡಿಪಿಐ ಮುಖಂಡನಿಗೆ ಭರ್ಜರಿ ಶಾಕ್‌..!

ಅಕ್ರಮವನ್ನು ಗಂಭೀರವಾಗಿ ಪರಿಗಣಿಸಿದ್ದ ಹಿಂದಿನ ಸಿಇಒ ಡಾ. ಬಿ. ಸುಶೀಲಾ ಅವರು ತನಿಖೆಗೆ ಆದೇಶಿಸಿದ್ದರು. ಸುದೀರ್ಘ 4 ವರ್ಷಗಳ ಹೋರಾಟದ ಫಲವಾಗಿ ಪ್ರಭಾರ ಪಿಡಿಒ ಆರ್.ಆರ್. ಪಾಟೀಲ ಅವರಿಂದ 8,86,047 ರೂ. ಹಾಗೂ ಪಿಡಿಒ ಶಕುಂತಲಾ ಭಜಂತ್ರಿ ಅವರಿಂದ 15,03,856 ರೂ. ಸೇರಿ 23,89,902 ರೂ. ವಸೂಲಿ ಮಾಡುವಂತೆ ಸಿಇಒ ಡಾ. ಸುರೇಶ ಇಟ್ನಾಳ ಇತ್ತೀಚೆಗೆ ಆದೇಶಿಸಿದ್ದಾರೆ. ಇಬ್ಬರ ವಿರುದ್ಧದ ಆರೋಪಗಳ ಕುರಿತು ತನಿಖೆ ಕೈಗೊಂಡು ಕಡತ- ದಾಖಲಾತಿಗಳನ್ನು ಪರಿಶೀಲನೆ ಮಾಡಲಾಗಿದೆ. ತಾಂತ್ರಿಕ ಅಂಶಗಳು ಮತ್ತು ಸ್ಥಾನಿಕ ಪರಿಶೀಲನೆಯ ನಂತರ ಇಬ್ಬರೂ ಹಣಕಾಸಿನ ದಾಖಲೆಗಳನ್ನು ಸಲ್ಲಿಸಿಲ್ಲ. ಆದ್ದರಿಂದ ಇಬ್ಬರಿಂದ ಹಣ ವಸೂಲಿ ಮಾಡುವಂತೆ ಸಿಇಒ ಡಾ. ಇಟ್ನಾಳ ಅವರು ತಾ.ಪಂ. ಇಒಗೆ ನಿರ್ದೇಶನ ನೀಡಿದ್ದಾರೆ.

ಧಾರವಾಡ: ಕೇಸ್ ದಾಖಲಿಸಿಕೊಳ್ಳದಿದ್ದರೆ ಅಧಿಕಾರಿಯೇ ಸಸ್ಪೆಂಡ್, ಎಸ್ಪಿ ಜಗಲಾಸರ್ ಖಡಕ್ ವಾರ್ನಿಂಗ್..!

ಸದಸ್ಯರಿಗೆ ಸಮಪಾಲು

ಅವ್ಯವಹಾರದಲ್ಲಿ ಶಾಮೀಲಾಗಿರುವ ಅಧಿಕಾರಿಗಳು ಕಾಮಗಾರಿಗಳ ಅಕ್ರಮದಲ್ಲಿ ಸದಸ್ಯರಿಗೆ ಸಮಪಾಲು ನೀಡಿರುವುದು ಬೆಳಕಿಗೆ ಬಂದಿದೆ. ಇದು 2017 ರಿಂದ 2020 ರವರೆಗೆ ನಡೆದ ಅವ್ಯವಹಾರವಾಗಿದ್ದು, ಇನ್ನೂ 2 ವರ್ಷಗಳ ತನಿಖೆಗೆ ಮಲ್ಲಿಕಾರ್ಜುನ ರೊಟ್ಟಿಗವಾಡ ಹೋರಾಟ ನಡೆಸಿದ್ದಾರೆ 4 ವರ್ಷಗಳ ಹೋರಾಟದ ಸಂದರ್ಭದಲ್ಲಿ ರೊಟ್ಟಿಗವಾಡ ಮೇಲೆ ಮಾರಣಾಂತಿಕ ಹಲ್ಲೆ ಕೂಡ ನಡೆದಿತ್ತು. ರಾಜಕೀಯ ಸೇರಿ ಹಲವು ಬಗೆಯ ಒತ್ತಡ ಹೇರಿದ್ದರೂ ಅವರು ಹೋರಾಟದಿಂದ ಹಿಂದೆ ಸರಿದಿರಲಿಲ್ಲ.

ಅವ್ಯವಹಾರದ ವಿರುದ್ಧ ಸತತ ಹೋರಾಟದ ಫಲವಾಗಿ ತಪ್ಪಿತಸ್ಥ ಅಧಿಕಾರಿಗಳಿಂದ ಹಣ ವಸೂಲಿ ಮಾಡಿ ಸರ್ಕಾರಕ್ಕೆ ಹಣ ಕಟ್ಟಿಸುವಂತೆ ಆದೇಶ ಮಾಡಿರುವುದು ಸ್ವಾಗತಾರ್ಹ. ಆದರೆ, ತಾ.ಪಂ. ಇಒಗೆ ವಹಿಸಿರುವುದು ಸರಿಯಾದ ಕ್ರಮವಲ್ಲ. ಸಿಇಒಗೆ ಎಲ್ಲ ಅಧಿಕಾರ ಇದ್ದು, ಅವರೇ ಹಣ ವಸೂಲಿ ಮಾಡಿ ಸರ್ಕಾರಕ್ಕೆ ಭರಣ ಮಾಡಿಸಬೇಕು. ಅವರು ಆದೇಶವನ್ನು ಮರುಪರಿಶೀಲಿಸಲು ಹಾಗೂ ತಪ್ಪಿತಸ್ಥರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲು ಮಲ್ಲಿಕಾರ್ಜುನ ರೊಟ್ಟಿಗವಾಡ ಆಗ್ರಹಿಸಿದ್ದಾರೆ. 
 

click me!