ಪ್ಲ್ಯಾಟ್ ಕೊಡದ ಡೆವಲಪರ್ಸ್‍ಗೆ ಬಡ್ಡಿ ಜತೆ ರೂ.65 ಲಕ್ಷ ಹಿಂದಿರುಗಿಸಲು ಧಾರವಾಡ ಗ್ರಾಹಕರ ಆಯೋಗ ಆದೇಶ

By Suvarna NewsFirst Published Jul 24, 2023, 8:16 PM IST
Highlights

ಧಾರವಾಡದ ಕೃಪಾಲಿಸ್ ಕಂಪೌಂಡ್ ನಿವಾಸಿಗಳಿಗೆ ಮೋಸ ಮಾಡಲು ಯತ್ನಿಸಿದ ಡೆವಲಪರ್ಸ್‍ಗೆ ಬಡ್ಡಿ ಜತೆ ರೂ.65 ಲಕ್ಷ ಹಣ ಹಿಂದಿರುಗಿಸಲು ಧಾರವಾಡ ಗ್ರಾಹಕರ ಆಯೋಗ ಆದೇಶಿಸಿದೆ.

ವರದಿ : ಪರಮೇಶ್ವರ ಅಂಗಡಿ ಏಷ್ಯಾನೆಟ್ ಸುವರ್ಣ ನ್ಯೂಸ್  

ಧಾರವಾಡ (ಜು.24): ಧಾರವಾಡದ ಕೃಪಾಲಿಸ್ ಕಂಪೌಂಡ್ ನಿವಾಸಿ ಭಾವನಾ, ಕೃತಿಕಾ, ಅಪೂರ್ವಾ, ಪೂಜಾ ಇಜಂತಕರ್ ಪರ ಮೃತ ಲವಾ ಇಜಂತಕರ್ ಮತ್ತು ಸ್ಥಳೀಯ ನಾರಾಯಣಪುರದ ವಾಸಿ ಶೇಷಪ್ಪಾ ಲೆಂಡಿ ಎಂಬುವವರು ಬೆಂಗಳೂರಿನ ಹೆಸರಾಂತ ಬಿಲ್ಡರ್‍ರಾದ ಸಾಲಂಕಿ ಅಸೋಸಿಯೇಟ್ಸ್‍ನ ಮುಖ್ಯಸ್ಥರಾದ ಕವಿತಾ ಮತ್ತು ರವಿಂದ್ರ ಸಾಲಂಕಿ ಅವರುಗಳೊಡನೆ ಸೈದಾಪುರದಲ್ಲಿ ನೂತನವಾಗಿ ನಿರ್ಮಿಸುತ್ತಿದ್ದ ಅಪಾರ್ಟಮೆಂಟ್‍ನಲ್ಲಿ ಪ್ಲ್ಯಾಟ್ ಮತ್ತು ಶಾಪ್‍ ಖರೀದಿಸಲು ದಿ.22/12/2018 ರಂದು ಖರೀದಿ ಕರಾರು ಒಪ್ಪಂದ ಮಾಡಿಕೊಂಡಿದ್ದರು. 

Latest Videos

ಆ ಪೈಕಿ ಇಜಂತಕರ್ ಅವರು ರೂ.32 ಲಕ್ಷ ಮೌಲ್ಯದ ಪ್ಲ್ಯಾಟ್‍ಗಾಗಿ ರೂ.25 ಲಕ್ಷ ಹಾಗೂ ಶೇಷಪ್ಪ ಲೆಂಡಿರವರು ಪ್ಲ್ಯಾಟ್ ಮತ್ತು ಶಾಪ್‍ನ್ನು ರೂ.41 ಲಕ್ಷಗಳಿಗೆ ಖರೀದಿಸಿ ಅದರ ಪೈಕಿ ರೂ.40 ಲಕ್ಷಗಳನ್ನು ಮುಂಗಡವಾಗಿ ಕೊಟ್ಟು ಖರೀದಿ ಕರಾರು ಪತ್ರ ಮಾಡಿಕೊಂಡಿದ್ದರು. ಒಪ್ಪಂದದ ಪತ್ರದ ಪ್ರಕಾರ ದಿ:30/04/2019 ರೊಳಗಾಗಿ ನಿರ್ಮಾಣಕಾರ್ಯ ಮುಗಿಸಿ ಸ್ವಾಧೀನತೆ ಕೊಡಲು ಷರತ್ತು ಇತ್ತು. ಆದರೆ ನಿಗದಿತ ಅವಧಿಯೊಳಗೆ ಪ್ಲ್ಯಾಟ್ ಮತ್ತು ಶಾಪಿನ ಪಕ್ಕಾ ಖರೀದಿ ಪತ್ರ ಮಾಡಿಕೊಟ್ಟಿಲ್ಲ ಹಾಗೂ ತಮ್ಮ ಮುಂಗಡ ಹಣವನ್ನೂ ಸಹ ಎದುರುದಾರರು ಹಿಂದಿರುಗಿಸಿಲ್ಲದ ಕಾರಣ ಅವರ ನಡಾವಳಿಕೆ ಗ್ರಾಹಕರ ರಕ್ಷಣಾ ಕಾಯ್ದೆ ಅಡಿ ಸೇವಾ ನ್ಯೂನ್ಯತೆ ಆಗುತ್ತದೆ ಅಂತಾ ಹೇಳಿ ಎದುರುದಾರ/ಡೆವಲಪರ್ಸ್ ಮತ್ತು ಬಿಲ್ಡ್‍ರ್ಸ್ ವಿರುದ್ಧ ಗ್ರಾಹಕರ ರಕ್ಷಣಾ ಕಾಯ್ದೆ ಅಡಿ ಸೂಕ್ತ ಕ್ರಮ ಕೈಗೊಳ್ಳುವಂತೆ ದೂರುದಾರರು ಧಾರವಾಡ ಜಿಲ್ಲಾ ಗ್ರಾಹಕರ ಆಯೋಗಕ್ಕೆ ಪ್ರತ್ಯೇಕ ಎರಡು ದೂರುಗಳನ್ನು ಸಲ್ಲಿಸಿದ್ದರು.

ರಾಜ್ಯದಲ್ಲಿ ಇನ್ನೂ ಜೀವಂತ ಭ್ರೂಣ ಹತ್ಯೆ, 4 ತಿಂಗಳ ಭ್ರೂಣದ ಶವ ರಸ್ತೆ ಬದಿ ಎಸೆದ ಕಿಡಿಗೇಡಿಗಳು!

ಸದರಿ ದೂರಿನ ಬಗ್ಗೆ ಆಯೋಗದ ಅಧ್ಯಕ್ಷ ಈಶಪ್ಪ ಭೂತೆ ಸದಸ್ಯರುಗಳಾದ ವಿಶಾಲಾಕ್ಷಿ. ಅ.ಬೋಳಶೆಟ್ಟಿ ಹಾಗೂ ಪ್ರಭು .ಸಿ. ಹಿರೇಮಠ ಅವರು ವಿಚಾರಣೆ ಮಾಡುವಾಗ ಭೂ ಮಾಲೀಕರ ಸಂಬಂಧಿ ಇಂದಿರಾಬಾಯಿ ಧಾರವಾಡದ ಸಿವಿಲ್ ಕೋರ್ಟನಲ್ಲಿ ಓ.ಎಸ್.ನಂ.199/2021 ದಾವೆ ಹೂಡಿ ಪ್ಲ್ಯಾಟ್ ಮತ್ತು ಶಾಪ್ ಮಾರಾಟ ಮಾಡದಂತೆ ತಡೆಯಾಜ್ಞೆ ತಂದಿರುವುದರಿಂದ ತಮ್ಮ ತಪ್ಪಿನಿಂದ ದೂರುದಾರರಿಗೆ ತೊಂದರೆಯಾಗಿಲ್ಲ ಅಂತಾ ಹೇಳಿ ಎದುರುದಾರ/ಬಿಲ್ಡರ್ ಆಕ್ಷೇಪಣೆ ಎತ್ತಿದ್ದರು. 

ಈ ಬಗ್ಗೆ ಕೂಲಂಕುಶ ವಿಚಾರಣೆ ನಡೆಸಿ ಕರಾರು ಒಪ್ಪಂದ ಪತ್ರದಲ್ಲಿ ದಿ:30/09/2019 ರೊಳಗಾಗಿ ಎಲ್ಲ ರೀತಿಯಿಂದ ಕಟ್ಟಡ ನಿರ್ಮಾಣದ ಕೆಲಸ ಮುಗಿಸಿ ಧರಣಿ ಬ್ಯಾಂಕಿನ ನಿರಾಪೇಕ್ಷಣಾ ಪತ್ರ ಪಡೆದು ದೂರುದಾರರಿಗೆ ಸ್ವಾಧೀನತೆ ಕೊಡಬೇಕು ಅಂತಾ ಕರಾರು ಇದ್ದು ಅದರನ್ವಯ ನಡೆದುಕೊಳ್ಳದ ಎದುರುದಾರರ ನಡಾವಳಿಕೆ ಗ್ರಾಹಕರ ರಕ್ಷಣಾ ಕಾಯ್ದೆ ಅಡಿ ಸೇವಾ ನ್ಯೂನ್ಯತೆ ಆಗುತ್ತದೆ ಅಂತಾ ಆಯೋಗ ಅಭಿಪ್ರಾಯಪಟ್ಟು ತೀರ್ಪು ನೀಡಿದೆ.

ಚಿತ್ರದುರ್ಗ: ಶುದ್ದ ಕುಡಿಯುವ ನೀರಿಗಾಗಿ ಮನೆ ಮನೆ ಅಲೆಯುವ ಪರಿಸ್ಥಿತಿ!

ಇಬ್ಬರೂ ದೂರುದಾರರಿಂದ ಪಡೆದ ರೂ.25 ಲಕ್ಷ ಮತ್ತು ರೂ.40 ಲಕ್ಷ ಹಣವನ್ನು ಕರಾರಾದ ದಿ:22/12/2018 ರಿಂದ ಅದರ ಮೇಲೆ ಶೇ.8 ರಂತೆ ಬಡ್ಡಿ ಲೆಕ್ಕ ಹಾಕಿ ತೀರ್ಪು ನೀಡಿದ ಒಂದು ತಿಂಗಳ ಒಳಗಾಗಿ ದೂರುದಾರರಿಗೆ ಹಣ ಸಂದಾಯ ಮಾಡುವಂತೆ ಆಯೋಗ ಆದೇಶಿಸಿದೆ ಅದರ ಜೊತೆ ದೂರುದಾರರಿಗೆ ಆಗಿರುವ ಅನಾನುಕೂಲ ಮತ್ತು ಮಾನಸಿಕ ತೊಂದರೆಗಾಗಿ ತಲಾ ರೂ.1 ಲಕ್ಷ ಪರಿಹಾರ ಮತ್ತು ತಲಾ ರೂ.10 ಸಾವಿರ ಪ್ರಕರಣದ ಖರ್ಚು ವೆಚ್ಚ ನೀಡುವಂತೆ ಆಯೋಗ ತಿಳಿಸಿದೆ.

click me!