ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಯೋಚನೆ ರಾಷ್ಟ್ರಮಟ್ಟಕ್ಕೂ ವಿಸ್ತರಣೆ: ಡಾ.ಹೆಗ್ಗಡೆ

By Kannadaprabha NewsFirst Published Aug 12, 2022, 8:17 AM IST
Highlights

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಯೋಚನೆ ರಾಷ್ಟ್ರಮಟ್ಟಕ್ಕೂ ವಿಸ್ತರಿಸಲಾಗುವುದು ಎಂದು  ಧರ್ಮಸ್ಥಳದ ಧರ್ಮಾಧಿಕಾರಿ, ರಾಜ್ಯಸಭಾ ಸದಸ್ಯ ಡಾ.ಡಿ.ವೀರೇಂದ್ರ ಹೆಗ್ಗಡೆ ಹೇಳಿದ್ದಾರೆ.

ಬೆಳ್ತಂಗಡಿ (ಆ.12) : ಬೆಳ್ತಂಗಡಿ ತಾಲೂಕು ಹಾಗೂ ರಾಜ್ಯದಲ್ಲಿ ಗ್ರಾಮಾಭಿವೃದ್ಧಿ ಯೋಜನೆ ಮೂಲಕ ಪ್ರಾಯೋಗಿಕವಾಗಿ ಅನುಷ್ಠಾನಗೊಳಿಸಿದ ಯೋಚನೆಗಳನ್ನು ಹಾಗೂ ಯೋಜನೆಗಳನ್ನು ರಾಷ್ಟ್ರಮಟ್ಟದಲ್ಲಿ ವಿಸ್ತರಿಸಲಾಗುವುದು ಎಂದು ಧರ್ಮಸ್ಥಳದ ಧರ್ಮಾಧಿಕಾರಿ, ರಾಜ್ಯಸಭಾ ಸದಸ್ಯ ಡಾ.ಡಿ.ವೀರೇಂದ್ರ ಹೆಗ್ಗಡೆ ಹೇಳಿದ್ದಾರೆ. ಗುರುವಾರ, ಧರ್ಮಸ್ಥಳದಲ್ಲಿ ವಸಂತಮಹಲ್‌ ಬಳಿ ರಾಜ್ಯಸಭಾ ಸದಸ್ಯರ ಅಧಿಕೃತ ಕಾರ್ಯಾಲಯದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಕನ್ನಡದಲ್ಲಿ, ದೇವರ ಹೆಸರಲ್ಲಿ ಡಾ.ವೀರೆಂದ್ರ ಹೆಗ್ಗಡೆ ಪ್ರಮಾಣ ವಚನ ಸ್ವೀಕಾರ

 

ಕೃಷಿಕರು ಹಾಗೂ ಅಡಕೆ ಬೆಳೆಗಾರರು ಅನೇಕ ಸಮಸ್ಯೆಗಳಿಂದ ಇಂದು ಹತಾಶರಾಗಿದ್ದಾರೆ. ಅವರ ಬಗ್ಗೆ ಸಂಸತ್ತಿನಲ್ಲಿ ಧ್ವನಿ ಎತ್ತುವುದಲ್ಲದೆ ರೈತರು ಹಾಗೂ ಜನಸಾಮಾನ್ಯರ ಸಮಸ್ಯೆಗಳ ಪರಿಹಾರಕ್ಕೆ ಶ್ರದ್ಧೆ, ನಿಷ್ಠೆ ಮತ್ತು ಪ್ರಾಮಾಣಿಕತೆಯಿಂದ ಪ್ರಯತ್ನಿಸುವುದಕ್ಕಾಗಿ ಭರವಸೆ ನೀಡಿದರು. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ(Dharamsthala Village Development Scheme) ಮೂಲಕ ರಾಜ್ಯದಲ್ಲಿ ಏಳು ಸಾವಿರ ಸಾಮಾನ್ಯ ಸೇವಾ ಕೇಂದ್ರಗಳನ್ನು ಈಗಾಗಲೆ ಪ್ರಾರಂಭಿಸಿದ್ದು ಜನಸಾಮಾನ್ಯರಿಗೆ ಆಧಾರ್‌ಕಾರ್ಡ್‌, ಆರೋಗ್ಯ ವಿಮೆ, ನೆರೆ-ಬರ ಪರಿಹಾರ, ಕೂಲಿ ಕಾರ್ಮಿಕರಿಗೆ ಇ-ಶ್ರಮ ಕಾರ್ಡ್‌, ಆಯುಷ್ಮಾನ್‌ಕಾರ್ಡ್‌ ಮೊದಲಾದ ಸೌಲಭ್ಯಗಳನ್ನು ಉಚಿತವಾಗಿ ಒದಗಿಸಲಾಗಿದೆ ಎಂದರು.

ರಾಜಕೀಯ ರಹಿತ ದೇಶಸೇವೆ: ರಾಜ್ಯಸಭಾ ಸದಸ್ಯನಾದರೂ ತನ್ನ ಆಹಾರ-ವಿಹಾರ, ಆಚಾರ-ವಿಚಾರ, ಧರಿಸುವ ದಿರಿಸು, ಶಿಷ್ಟಾಚಾರದಲ್ಲಿ ಯಾವುದೇ ಬದಲಾವಣೆಯಾಗುವುದಿಲ್ಲ. ತಾನು ಎಂದಿನಂತೆ ಜನಸಾಮಾನ್ಯರ ಮಧ್ಯೆ ಪ್ರೀತಿ-ವಿಶ್ವಾಸ, ಗೌರವದಿಂದ ಇರುತ್ತೇನೆ. ಪಕ್ಷಾತೀತನಾಗಿ, ರಾಜಕೀಯರಹಿತವಾಗಿ ದೇಶ ಸೇವೆ ಮಾಡುವುದಾಗಿ ಹೆಗ್ಗಡೆ ಭರವಸೆ ನೀಡಿದರು. ಎಲ್ಲಿಯೂ ಸನ್ಮಾನ ಸಮಾರಂಭದಲ್ಲಿ ಭಾಗವಹಿಸುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಕಾರ್ಯಾಲಯ ಉದ್ಘಾಟಿಸಿ ಶಾಸಕ ಹರೀಶ್‌ ಪೂಂಜ ಮಾತನಾಡಿ, ರಾಜ್ಯ ಸಭೆಯು ಹಿರಿಯ ಹಾಗೂ ಅನುಭವಿ ಸದಸ್ಯರ ವೇದಿಕೆಯಾಗಿದ್ದು ಪ್ರಧಾನಿ ನರೇಂದ್ರ ಮೋದಿ ಅವರೇ ಹೆಗ್ಗಡೆಯವರ ಸೇವೆ, ಸಾಧನೆ ಮತ್ತು ವರ್ಚಸ್ಸನ್ನು ಗಮನಿಸಿ ರಾಜ್ಯಸಭಾ ಸದಸ್ಯರಾಗಿ ನಾಮನಿರ್ದೇಶನ ಮಾಡಿದ್ದಾರೆ. ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸಂಸದರ ಕಾರ್ಯಾಲಯ ಆರಂಭವಾಗಿರುವುದು ದೇಶದಲ್ಲೆ ಇದು ಪ್ರಥಮ ಹಾಗೂ ಐತಿಹಾಸಿಕ ಘಟನೆಯಾಗಿದೆ. ಇದುವೆ ‘ಧರ್ಮಸ್ಥಳ ಕ್ಷೇತ್ರ ಮಹಾತ್ಮೆ’ ಎಂದು ಪೂಂಜ ಬಣ್ಣಿಸಿದರು.

ಧರ್ಮಸ್ಥಳಕ್ಕೆ ತಮ್ಮ ಪೂರ್ವಜರಿಗೆ ಸಂದ ಗೌರವ: ಡಾ. ವೀರೇಂದ್ರ ಹೆಗ್ಗಡೆ

ವಿಧಾನ ಪರಿಷತ್‌ ಸದಸ್ಯ ಕೆ. ಪ್ರತಾಪಸಿಂಹ ನಾಯಕ್‌, ವಿಧಾನ ಪರಿಷತ್‌ ಸದಸ್ಯ ಕೆ. ಹರೀಶ್‌ಕುಮಾರ್‌ ಮಾತನಾಡಿದರು.

ಧರ್ಮಸ್ಥಳದ ಡಿ. ಹರ್ಷೇಂದ್ರಕುಮಾರ್‌, ಸುಪ್ರಿಯಾ ಹರ್ಷೇಂದ್ರಕುಮಾರ್‌, ಎಸ್‌.ಡಿ. ಸಂಪತ್‌ ಸಾಮ್ರಾಜ್ಯ ಶಿರ್ತಾಡಿ, ಮಾಜಿ ಸಚಿವ ಕೆ.ಅಭಯಚಂದ್ರಜೈನ್‌, ಎಸ್‌ಡಿಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ.ಎಸ್‌. ಸತೀಶ್ಚಂದ್ರ, ಕಾರ್ಯನಿರ್ವಹಣಾಧಿಕಾರಿ ಎಂ.ವೈ.ಹರೀಶ್‌, ಪೂರಣ್‌ ವರ್ಮ ಹಾಜರಿದ್ದರು. ಸಂಸದರ ಆಪ್ತಕಾರ್ಯದರ್ಶಿ ಕೆ.ಎನ್‌. ಜನಾರ್ದನ್‌ ಸ್ವಾಗತಿಸಿದರು. ಹೆಗ್ಗಡೆ ಅವರ ಆಪ್ತ ಕಾರ್ಯದರ್ಶಿ ಎ.ವಿ. ಶೆಟ್ಟಿವಂದಿಸಿದರು. ಗ್ರಾಮಾಭಿವೃದ್ಧಿ ಯೋಜನೆಯ ಶಿವಕುಮಾರ್‌ ಮತ್ತು ಸುಷ್ಮಾ ಕಾರ್ಯಕ್ರಮ ನಿರ್ವಹಿಸಿದರು.

click me!