
ವರದಿ: ಕಿರಣ್ಎಲ್ ತೊಡರನಾಳ್ ಏಷ್ಯಾನೆಟ್ ಸುವರ್ಣ ನ್ಯೂಸ್
ಚಿತ್ರದುರ್ಗ (ಸೆ.2) : ಈ ಭಾಗದ ಪ್ರಮುಖ ಯೋಜನೆಗಳಲ್ಲಿ ನೇರ ರೈಲು ಮಾರ್ಗವೂ ಒಂದಾಗಿದೆ. ಚುನಾವಣೆ ಸಂದರ್ಭದಲ್ಲಿ ಕೇವಲ ಪ್ರಚಾರಕ್ಕೆ ಬಳಸಿಕೊಳ್ಳುವ ರಾಜಕಾರಣಿಗಳೇ ಈ ಜಿಲ್ಲೆಗಳ ಮೇಲೆ ಯಾಕಿಷ್ಟು ಅಸಡ್ಡೆ. ಚುನಾವಣೆ ಹತ್ತಿರ ಬಂದರೂ ಕಾಮಗಾರಿ ಶುರುವಾಗದಿದ್ದಕ್ಕೆ ಅನ್ನದಾತರ ಆಕ್ರೋಶ. ಅಷ್ಟಕ್ಕೂ ಈ ಸಮಸ್ಯೆ ಆಗಿರೋದಾದ್ರು ಎಲ್ಲಿ ಅಂತೀರಾ ಈ ಸ್ಟೋರಿ ನೋಡಿ.
ಚಿತ್ರದುರ್ಗ-ದಾವಣಗೆರೆ-ತುಮಕೂರು ನೇರ ರೈಲು ಮಾರ್ಗ ಯೋಜನೆ ಇಡೀ ಮಧ್ಯ ಕರ್ನಾಟಕದ ಜನರ ಕನಸಿನ ಕೂಸಾಗಿದೆ. ಪ್ರತೀ ಚುನಾವಣೆ ಸಂದರ್ಭದಲ್ಲಿ ರಾಜಕಾರಣಿಗಳು ನೇರ ರೈಲು ಮಾರ್ಗ ವಿಚಾರವನ್ನು ಮುನ್ನೆಲೆಗೆ ತರುತ್ತಾರೆ. ಆದ್ರೆ ಚುನಾವಣೆ ಮುಗಿದ ಬಳಿಕ ಅದರ ಚಕಾರ ಎತ್ತದೇ ಇರುವುದು ನಿಜಕ್ಕೂ ನೋವಿನ ಸಂಗತಿ.
ಮೂಲಭೂತ ಸೌಕರ್ಯಗಳ ವ್ಯವಸ್ಥೆ ಕಲ್ಪಿಸುವಂತೆ BSC ನರ್ಸಿಂಗ್ ವಿಧ್ಯಾರ್ಥಿಗಳ ಧರಣಿ
ಸುಮಾರು ವರ್ಷಗಳಿಂದಲೂ ಈ ವಿಚಾರವಾಗಿ ಅನ್ನದಾತರು ಅನೇಕ ಪ್ರತಿಭಟನೆ ನಡೆಸಿದ್ರು ಕೂಡ ಯಾವುದೇ ಪ್ರಯೋಜನ ಆಗಿಲ್ಲ. ಇನ್ನೂ ಕಳೆದ ಲೋಕಸಭಾ ಚುನಾವಣಾ ಸಂದರ್ಭದಲ್ಲಿ ಈ ನೇರ ರೈಲು ಮಾರ್ಗ ಯೋಜನೆ ಜಾರಿ ಮಾಡಿಯೇ ತೀರುತ್ತೇವೆ ಎಂದಿದ್ದ ಬಿಜೆಪಿ ಸಂಸದ ನಾರಾಯಣಸ್ವಾಮಿ(Narayanaswamy bjp MP) ಅಧಿಕಾರ ಅವಧಿ ಮುಗಿಯುವ ಹಂತಕ್ಕೆ ಬಂದರೂ ಯೋಜನೆ ಕಾರ್ಯರೂಪಕ್ಕೆ ಮುಂದಾಗಿಲ್ಲ.
ನಮ್ಮ ಭಾಗಕ್ಕೆ ನೇರ ರೈಲು ಮಾರ್ಗ ಮಾಡೋದ್ರಿಂದ ರೈತರು ತಮ್ಮ ಬೆಳೆಯನ್ನು ನೇರವಾಗಿ ಉನ್ನತ ಮಾರುಕಟ್ಟೆಗೆ ಸಾಗಿಸಿ ಲಾಭ ಗಳಿಸುವ ಕೆಲಸ ಆಗುತ್ತದೆ. ಅಲ್ಲದೇ ವಿದ್ಯಾರ್ಥಿಗಳಿಗೂ ಇದರ ಅನುಕೂಲ ಸಾಕಷ್ಟಿದೆ. ನೇರ ರೈಲು ಮಾರ್ಗ ಇಲ್ಲದೇ ಇರುವ ಕಾರಣ ರೈತರು ಸ್ಥಳೀಯ ಮಾರುಕಟ್ಟೆಯಲ್ಲಿ ಸಿಕ್ಕ ಬೆಲೆಗೆ ಮಾರಿ ತನ್ನ ಬೆಳೆಯಿಂದ ನಷ್ಟ ಅನುಭವಿಸ್ತಿದ್ದಾರೆ. ಉನ್ನತ ವ್ಯಾಸಾಂಗಕ್ಕೆ ವಿಧ್ಯಾರ್ಥಿಗಳು ಬೇರೆಡೆ ಹೋಗಲಾರದೇ, ಸ್ಥಳೀಯವಾಗಿ ಸಿಗುವ ಶಿಕ್ಷಣದಲ್ಲಿಯೇ ತೃಪ್ತಿ ಪಟ್ಟುಕೊಳ್ಳುವ ಪರಿಸ್ಥಿತಿ ನಮ್ಮ ಜಿಲ್ಲೆಯ ಜನರಿಗೆ ಬಂದೊದಗಿದೆ. ಇನ್ನಾದ್ರು ಜನಪ್ರತಿನಿಧಿಗಳು ಕೇವಲ ಆಶ್ವಾಸನೆಯ ದಾಳಕ್ಕೆ ಇದನ್ನು ಬಳಸಿಕೊಳ್ಳದೇ ಜಿಲ್ಲೆಯ ಅಭಿವೃದ್ಧಿಗಾಗಿ ಶೀಘ್ರವೇ ನೇರ ರೈಲು ಮಾರ್ಗ ಅತ್ಯಗತ್ಯವಿದೆ ಅಂತಾರೆ ಸ್ಥಳೀಯರು.
ಇನ್ನೂ ಕಳೆದ ಚುನಾವಣೆಯಲ್ಲಿ ನೇರ ರೈಲು ಮಾರ್ಗ ಮಾಡುವುದೇ ನಮ್ಮ ಉದ್ದೇಶ ಎಂದು ಉದ್ದದ ಭಾಷಣ ಮಾಡಿದ್ದ ಚಿತ್ರದುರ್ಗ ಸಂಸದ ಎ ನಾರಾಯಣಸ್ವಾಮಿ ಅವರನ್ನೇ ವಿಚಾರಿಸಿದ್ರೆ, ಈ ವಿಚಾರವಾಗಿ ನಾನು ಮೊದಲು ಮಾತನಾಡಿದ್ದೆ ನಿಜ, ಆದ್ರೆ ಈಗ ದಾವಣಗೆರೆಯಿಂದ ಭರಮಸಾಗರದವರೆಗೆ ಟೆಂಡರ್ ಪ್ರಕ್ರಿಯೆ ಆಗಿದೆ. ಇನ್ನು ಮೂರು ತಿಂಗಳಲ್ಲಿ ಕಾಮಗಾರಿ ಶುರುವಾಗಲಿದೆ, ಮುಂದಿನ ದಿನಗಳಲ್ಲಿ ಚಿತ್ರದುರ್ಗ, ಹಿರಿಯೂರಿನಲ್ಲಿಯೂ ಟೆಂಡರ್ ಪ್ರಕ್ರಿಯೆ ಶುರುವಾಗಲಿದೆ. ನಿಮ್ಮ ಕನಸಿನ ನೇರ ರೈಲು ಮಾರ್ಗಕ್ಕೆ 1900 ಕೋಟಿ ಹಣ ಮೀಸಲಿಡಲಾಗಿದೆ.
ಕೆಲವೆಡೆ ಜಮೀನು ವಿಚಾರವಾಗಿ ತಗಾದೆಗಳಿವೆ ಆದಷ್ಟು ಬೇಗ ಎಲ್ಲಾ ಬಗೆಹರಿಸಿ ಕಾಮಗಾರಿ ಶುರು ಮಾಡ್ತಾರೆ ಎಂದರು. ಆದ್ರೆ ಕೆಲವೇ ತಿಂಗಳುಗಳು ಬಂದ್ರೆ ಸಾಕು ಲೋಕಸಭಾ ಚುನಾವಣೆ(Loksabha election) ಕಣ್ಮುಂದೆ ಇದೆ, ಆದ್ದರಿಂದ ಇನ್ನಾದ್ರು ಸಂಸದರು ಹೇಳಿದ ಮಾತು ಕೇವಲ ಮಾತಾಗಿ ಉಳಿಯದೇ ಆದಷ್ಟು ಬೇಗ ಕಾರ್ಯ ರೂಪಕ್ಕೆ ಬರಲಿ ಎನ್ನುವುದು ಎಲ್ಲರ ಆಶಯ.
ಗ್ಯಾರಂಟಿ ಯೋಜನೆ ಯಶಸ್ಸಿಗೆ ಹೆದರಿ ಸಿಲಿಂಡರ್ ಬೆಲೆ ಇಳಿಸಿದ ಕೇಂದ್ರ : ಮಾಜಿ ಸಚಿವ ಆಂಜನೇಯ
ಒಟ್ಟಾರೆಯಾಗಿ ಸುಮಾರು ವರ್ಷಗಳಿಂದ ಕನಸಾಗಿಯೇ ಉಳಿದಿರುವ ನೇರ ರೈಲು ಮಾರ್ಗಕ್ಕೆ ಆದಷ್ಟು ಬೇಗ ಮುಕ್ತ ಸಿಕ್ಕು, ಕಾಮಗಾರಿ ಶುರುವಾಗಲಿ ಎಂಬುದು ಮಧ್ಯ ಕರ್ನಾಟಕದ ಪ್ರತಿಯೊಬ್ಬ ಅನ್ನದಾತನ ಹಾರೈಕೆಯಾಗಿದೆ.