ಬಿಜೆಪಿಯಿಂದ ನನ್ನ ಉಚ್ಛಾಟಿಸಿ ನೋಡಿ : ಸವಾಲು ಹಾಕಿದ ಮುಖಂಡ

By Kannadaprabha NewsFirst Published Oct 27, 2020, 2:55 PM IST
Highlights

ನನ್ನನ್ನು ಉಚ್ಛಾಟಿಸಿ ನೋಡಿ. ಯಾರಿಗೆ ನಷ್ಟಎಂಬುದನ್ನು ಸ್ವತಃ ಪಕ್ಷದ ನಾಯಕರೇ ಆತ್ಮಾವಲೋಕನ ಮಾಡಿಕೊಳ್ಳಲಿ ಎಂದು ಸವಾಲ್ ಹಾಕಿದ್ದಾರೆ

ದಾವಣಗೆರೆ (ಅ.27): ಬಿಜೆಪಿಯಿಂದ ನನ್ನನ್ನು ಉಚ್ಛಾಟಿಸಿದರೆ ಯಾರಿಗೆ ನಷ್ಟಎಂಬುದನ್ನು ಸ್ವತಃ ಪಕ್ಷದ ನಾಯಕರೇ ಆತ್ಮಾವಲೋಕನ ಮಾಡಿಕೊಳ್ಳಲಿ ಎಂದು ಆಗ್ನೇಯ ಪದವೀಧರರ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಡಿ.ಟಿ.ಶ್ರೀನಿವಾಸ ತಿರುಗೇಟು ನೀಡಿದ್ದಾರೆ. 

ಠೇವಣಿಯನ್ನೇ ಉಳಿಸಿಕೊಳ್ಳಲಾಗದ ಕಾಲದಲ್ಲಿ ಬಿಜೆಪಿಯನ್ನು ಕ್ಷೇತ್ರದಲ್ಲಿ ಕಟ್ಟಿಬೆಳೆಸಿ, ಪಕ್ಷವನ್ನು ಗೆಲ್ಲಿಸಿದ್ದೇನೆ, ಪಕ್ಷಕ್ಕಾಗಿ ದುಡಿದ ನನ್ನಂತಹವರಿಗೆ ಅವಕಾಶ ಸಿಗಬೇಕಿತ್ತು. ಆದರೆ, ಟಿಕೆಟ್‌ ತಪ್ಪಿದ್ದರಿಂದ ಬೆಂಬಲಿಗರು, ಹಿತೈಷಿಗಳ ಒತ್ತಾಸೆ ಮೇರೆಗೆ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದೇನೆ ಎಂದು ಸ್ಪಷ್ಟಪಡಿಸಿದರು.

18 ಜಿಲ್ಲೆಗಳಲ್ಲಿ ಮದ್ಯ ಮಾರಾಟ, ವಹಿವಾಟು ನಿಷೇಧ ...

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಒಂದು ವೇಳೆ ಪಕ್ಷದಿಂದ ನನ್ನನ್ನು ಉಚ್ಛಾಟಿಸಿದರೆ ನನಗಂತೂ ಯಾವುದೇ ನಷ್ಟವಿಲ್ಲ. ಪಕ್ಷದ ಚಿಹ್ನೆ ಇಲ್ಲದೇ ನಡೆಯುವ ಚುನಾವಣೆಯಲ್ಲಿ ಎಲ್ಲರೂ ಪಕ್ಷೇತರ ಅಭ್ಯರ್ಥಿಗಳೇ ಆಗಿರುವುದರಿಂದ ಮತದಾರರು ವ್ಯಕ್ತಿಯ ಹಿನ್ನೆಲೆ, ಸಾಧನೆ, ಮುನ್ನೋಟ ಆದರಿಸಿ, ಮತ ಚಲಾಯಿಸುತ್ತಾರೆಂಬ ವಿಶ್ವಾಸ ನನಗಿದೆ.

 ಕ್ಷೇತ್ರದಿಂದ ಈವರೆಗೆ ಗೆದ್ದಿರುವವರು ಶಿಕ್ಷಕರು, ಪದವೀಧರರ ಸಮಸ್ಯೆಗಳ ಪರಿಹಾರಕ್ಕೆ ಏನೂ ಮಾಡಿಲ್ಲ. ಕಳೆದ 2 ದಶಕದಿಂದಲೂ ಶೈಕ್ಷಣಿಕ ಕ್ಷೇತ್ರ ಹಾಗೂ ಕಳೆದೊಂದು ದಶಕದಿಂದ ಸಕ್ರಿಯ ರಾಜಕಾರಣದಲ್ಲಿರುವ ನನಗೆ ಪದವೀಧರರು, ಶಿಕ್ಷಕ ಸಮಸ್ಯೆಗಳ ಅರಿವಿದೆ. ಸುಮಾರು 44 ಸಾವಿರ ಪದವೀಧರರನ್ನು ಮತದಾರರ ನೋಂದಣಿ ಮಾಡಿಸಿದ್ದೇನೆ. ವಿಶೇಷವಾಗಿ ಅಹಿಂದ ಮತಗಳು ನನ್ನ ಕೈ ಹಿಡಿಯುವ ವಿಶ್ವಾಸವಿದೆ ಎಂದು ಹೇಳಿದರು. ಬೆಂಬಲಿಗರಾದ ಚಂದ್ರಶೇಖರ, ಸುರೇಶ, ಬಸವನಗೌಡ ಇತರರು ಇದ್ದರು.

click me!