ಕೃಷಿ ಭೂಮಿಯಲ್ಲಿ ಕೈಗಾರಿಕಾ ಕಾರಿಡಾರ್, KIADB ವಿರುದ್ಧ ತಿರುಗಿಬಿದ್ದ ರೈತರು

By Suvarna NewsFirst Published Jul 29, 2022, 7:01 PM IST
Highlights

 ಕೃಷಿ ಭೂಮಿಯಲ್ಲಿ ಕೈಗಾರಿಕಾ ಕಾರಿಡಾರ್ ನಿರ್ಮಿಸಲು ಭೂಸ್ವಾಧೀನ ಮಾಡಿಕೊಳ್ಳುವುದಾಗಿ ಹೇಳಿರುವ KIADB ವಿರುದ್ಧ ರೈತರು ಸಿಡಿದೆದ್ದಿದ್ದಾರೆ.

ವರದಿ: ವರದರಾಜ್ 

ದಾವಣಗೆರೆ ಜುಲೈ 29
 ತಾವಾಯಿತು ತಮ್ಮ ಕೃಷಿ ಕೆಲಸವಾಯಿತು ಎಂದು ನೆಮ್ಮದಿಯಾಗಿದ್ದ ರೈತರಿಗೆ  ಅದೊಂದು ನೋಟಿಸ್ ನಿದ್ರೆಗೆಡಿಸಿದೆ. ನಿಮ್ಮ ಭೂಮಿಯನ್ನುಕೈಗಾರಿಕಾ ಉದ್ದೇಶಕ್ಕೆ ಭೂಸ್ವಾಧೀನ ಮಾಡಿಕೊಳ್ಳುತ್ತೇವೆ ಎಂದು ನೋಟಿಸ್ ನೀಡಿದ ನಂತರ ರೈತರು ಕೆಂಡಾಮಂಡಲರಾಗಿದ್ದಾರೆ. ಪ್ರಾಣ ಹೋದರೂ ಪರವಾಗಿಲ್ಲ ನಮ್ಮ ಭೂಮಿ ಬಿಡೆವು ಎಂದು ಹೋರಾಟದ ಹಾದಿ ತುಳಿದಿದ್ದಾರೆ. ದಾವಣಗೆರೆ ಜಿಲ್ಲೆ ಮೆಳ್ಳೆಕಟ್ಟೆ ರೈತರು ಭೂ ಹೋರಾಟದ ಕತೆ ಇಲ್ಲಿದೆ ನೋಡಿ..  

 ದಾವಣಗೆರೆ ಕೆಐಎಡಿಬಿ ಕಚೇರಿಯಿಂದ ಮೆಳ್ಳೆಕಟ್ಟೆ ಗ್ರಾಮದ ರೈತರಿಗೆ ನೋಟಿಸ್ ಬಂದಿದ್ದ ತಡ  ಗ್ರಾಮದ ನೂರಾರು ರೈತರು ನಿಂತಲ್ಲಿ ಕುಂತಲ್ಲಿ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.   1150 ಎಕರೆ ಕೃಷಿ  ಭೂಮಿಯಲ್ಲಿ ಇಂಡಸ್ಟ್ರೀಯಲ್ ಕಾರಿಡಾರ್ ಮಾಡಲು  ಕೈಗಾರಿಕಾ ಅಭಿವೃದ್ಧಿ ವಿಶೇಷ ಭೂಸ್ವಾಧೀನಾಧಿಕಾರಿಗಳು  ನೂರಾರು ರೈತರಿಗೆ ನೋಟೀಸ್ ಜಾರಿ ಮಾಡಿದ್ದಾರೆ.  ಇಂಡಸ್ಟ್ರೀಯಲ್ ಕಾರಿಡಾರ್ ನಿರ್ಮಾಣ ಯೋಜ‌ನೆಗೆ ನಿಮ್ಮ ಜಮೀನುಗಳನ್ನು ಸ್ವಾಧೀನಪಡಿಸಿಕೊಳ್ಳುತ್ತಿದ್ದು  ಏನಾದ್ರು ಅಕ್ಷೇಪಣೆಗಳು 30 ದಿನದೊಳಗೆ ಉತ್ತರ ನೀಡಿ ಎಂದು ಸೂಚಿಸಿದ್ದಾರೆ. ಕೆಲವು ರೈತರು ನೋಟಿಸ್ ಸ್ವೀಕರಿಸಿದ್ರೆ ಇನ್ನು ಕೆಲವರು ನೋಟಿಸ್ ಧಿಕ್ಕರಿಸಿದ್ದಾರೆ. 

Cover Story: ಹಣ ಬಿಡುಗಡೆ, ಕೆಲಸ ಮಾತ್ರ ಆಗಿಲ್ಲ; ದಾವಣಗೆರೆಯಲ್ಲಿ ನರೇಗಾ ಕರ್ಮಕಾಂಡ!

ಮೆಳ್ಳೆಕಟ್ಟೆ ಅಂದ್ರೆ ಬೆಳ್ಳಿಕಟ್ಟೆ ಎಂದು ಇತಿಹಾಸದಲ್ಲಿ ಹೆಸರಿದೆ. ಬರಗಾಲದ ಸಂದರ್ಭದಲ್ಲಿ ಇಡೀ ಜಗಳೂರು ತಾಲ್ಲೂಕಿಗೆ ಅನ್ನಹಾಕಿದ ಊರು ನಮ್ಮದು. ಮೆಕ್ಕೆಜೋಳ ಅಡಿಕೆ ತರಕಾರಿ ಇತರ ವಾಣಿಜ್ಯ ಬೆಳೆಗಳನ್ನು ಸಮೃದ್ಧವಾಗಿ ಬೆಳೆ ಬೆಳೆಯುವ  ಭೂಮಿ ನಮ್ಮಲ್ಲಿದೆ.ಆದ್ರೆ ಯಾವ ರೈತರಿಗೆ ಸೂಚನೆ ನೀಡಿದೆ ಗ್ರಾಮದಲ್ಲಿ ಒಂದು ಸಭೆ ಮಾಡದೇ ಏಕಾಏಕಿ ಭೂಸ್ವಾಧೀನ ಪ್ರಕ್ರಿಯೆ ನೋಟಿಸ್ ಜಾರಿ ಮಾಡಿದ್ದಾರೆ. ಫಲವತ್ತಾದ ಎರೆಭೂಮಿ ಕೈಗಾರಿಕೆ ಉದ್ದೇಶಕ್ಕೆ ಭೂಮಿ ಕೊಟ್ಟರೆ ಇಡೀ ಊರೇ ಬಿಟ್ಟು ಗುಳೆ ಹೋಗಬೇಕಾದ ಪರಿಸ್ಥಿತಿ ಇದೆ... ನಮ್ಮ ಭೂಮಿ ಬಿಡೋದು ಒಂದೇ ಪ್ರಾಣ ಬಿಡೋದು ಒಂದೆ ರೈತರು ಅಳಲು ತೋಡಿಕೊಂಡಿದ್ದಾರೆ. 

ಹತ್ತು  ಅಡಿ ಕೆಳಗೆ ಗುಂಡಿ ತೆಗೆದರೂ ಫಲವತ್ತಾದ ಭೂಮಿ ಮಣ್ಣು ಸಿಗುತ್ತದೆ. ಇದು ಜವುಳು ಭೂಮಿ ಅಲ್ಲ.. ಕರಲು ಭೂಮಿಯಲ್ಲ ಬೇಸಿಗೆಯಲ್ಲಿ ಬೆಳೆವಿಮೆ ನೆಪದಲ್ಲಿ ರೈತರ ಗಮನಕ್ಕೆ ಬಾರದೇ  ಸ್ಕೆಚ್ ಮಾಡಿದ್ದಾರೆ.. ಈಗ ಮಳೆಗಾಲ ಇದೆ ಇಲ್ಲಿನ ಮೆಕ್ಕೆಜೋಳ ನೋಡಿ.. ಅಡಿಕೆ ನೋಡಿ.. ಇಂತಹ ಭೂಮಿಯನ್ನು ಬಿಡೋದು ಹೇಗೆ ಕೆಲ ರೈತರು ಕಣ್ಣೀರು ಹಾಕಿದ್ದಾರೆ.  ಜಗಳೂರು ಭಾಗದಲ್ಲಿ  57 ಕೆರೆ ತುಂಬಿಸುವ ಏತ  ನೀರಾವರಿ ಯೋಜನೆ, ರಾಜನಹಳ್ಳಿ 22 ಕೆರೆ ತುಂಬಿಸುವ ಯೋಜನೆಯಿಂದ ಈ ಭಾಗದಲ್ಲಿ ಅಂತರ್ಜಲ ಹೆಚ್ಚಾಗಿದೆ.. ಸಿರಿಗೆರೆ ಶ್ರೀಗಳ ಆರ್ಶೀವಾದದಿಂದ ಬರಡು ಭೂಮಿಗೆ ನೀರಿನ ಗಂಗೆ ಹರಿದಿದ್ದಾಳೆ. ಇಂತಹ ಸಮಯದಲ್ಲಿ ಕೈಗಾರಿಕೆ ಭೂಮಿ ಕೊಟ್ಟು ನಾವು ಏನು ಮಾಡುವುದು ಎಂದು ರೈತರು ಸ್ಥಳೀಯ ಜನಪ್ರತಿನಿಧಿಗಳ ವಿರುದ್ಧ, ಬಿಜೆಪಿ ಸರ್ಕಾರದ ವಿರುದ್ಧ ಆಕ್ರೋಶವ್ಯಕ್ತಪಡಿಸಿದ್ದಾರೆ. 

ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವರು ಸಂಸದರು ಜಿಲ್ಲೆಯ ಶಾಸಕರು ಮೆಳ್ಳೆಕಟ್ಟೆ ಗ್ರಾಮದ ರೈತರ ಮೇಲೆ ಚಪ್ಪಡಿ ಎಳೆಯಲು ಹೊರಟಿದ್ದಾರೆ. ಅಂದೆಂತಹ ಹೋರಾಟವಾದ್ರು ಸರಿ ನಮ್ಮ ಭೂಮಿಯನ್ನು ಉಳಿಸಿಕೊಳ್ಳುತ್ತೇವೆ ಎಂದು ಸರ್ಕಾರಕ್ಕೆ ಎಚ್ಚರಿಕೆಯನ್ನು ನೀಡಿದ್ದಾರೆ.

click me!