ಮೈಸೂರು : 7 ದಿನಗಳ ಕಾಲ ದಸರಾ ಸಾಂಸ್ಕೃತಿಕ ಕಾರ್ಯಕ್ರಮ

By Kannadaprabha NewsFirst Published Oct 2, 2021, 12:59 PM IST
Highlights
  • ಕೋವಿಡ್‌ ಹಿನ್ನೆಲೆಯಲ್ಲಿ ಸರಳ ಮತ್ತು ಸಾಂಪ್ರದಾಯಿಕ ದಸರಾ ಆಚರಣೆ  
  • ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಅ.7 ರಿಂದ 13 ರವರೆಗೆ ಅರಮನೆ ಆವರಣದಲ್ಲಿ ಆಯೋಜಿಸಲಾಗಿದೆ

ಮೈಸೂರು (ಅ.02): ಕೋವಿಡ್‌ (Covid 19) ಹಿನ್ನೆಲೆಯಲ್ಲಿ ಸರಳ ಮತ್ತು ಸಾಂಪ್ರದಾಯಿಕ ದಸರಾ (Dasara) ಆಚರಣೆ ಮಾಡಲಾಗುವುದು. ಧಾರ್ಮಿಕ, ಸಾಂಸ್ಕೃತಿಕ ಚಟುವಟಿಕೆಗಳನ್ನು ಗಟ್ಟಿಗೊಳಿಸುವ ನಿಟ್ಟಿನಲ್ಲಿ ಹೆಚ್ಚು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಅ.7 ರಿಂದ 13 ರವರೆಗೆ ಅರಮನೆ ಆವರಣದಲ್ಲಿ ಆಯೋಜಿಸಲಾಗಿದೆ ಎಂದು ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವ ಸುನಿಲ್‌ಕುಮಾರ್‌ (Sunil Kumar) ತಿಳಿಸಿದರು.

ಮೈಸೂರು (Mysuru) ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ದಸರಾ ಸಾಂಸ್ಕೃತಿಕ ಕಾರ್ಯಕ್ರಮದ ಪೋಸ್ಟರ್‌ ಬಿಡುಗಡೆಗೊಳಿಸಿ ಮಾತನಾಡಿದ ಅವರು, ಅ.7 ರಿಂದ 13 ರವರೆಗೆ ವೈವಿಧ್ಯಮಯ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು. ಸಂಜೆ 6 ರಿಂದ 9 ರವರೆಗೆ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ ಎಂದರು.

Latest Videos

ದಸರೆಯಲ್ಲಿ 100 ಕಿ.ಮೀ. ದೀಪಾಲಂಕಾರ

ಪ್ರಮುಖವಾಗಿ ಅ.10 ರಂದು ಸೂರ್ಯೋದಯದಿಂದ ಸೂರ್ಯಾಸ್ತಮದವರೆಗೂ 24 ತಾಸುಗಳ ವಿಶೇಷ ಕಾರ್ಯಕ್ರಮ ನಡೆಯಲಿದ್ದು, ಅ.11 ಮತ್ತು 12 ರಂದು ಕಲಾಮಂದಿರ ವೇದಿಕೆಯಲ್ಲಿಯೂ ವಿಶೇಷ ಸಾಂಸ್ಕೃತಿಕ ಕಾರ್ಯಕ್ರಮ ಜರುಗಲಿವೆ ಎಂದು ಅವರು ಹೇಳಿದರು.

ನಂಜನಗೂಡಿನಲ್ಲಿ ಕಾರ್ಯಕ್ರಮ

ಇದೇ ಮೊದಲ ಬಾರಿಗೆ ನಂಜನಗೂಡಿನ (Nanjanagudu) ಶ್ರೀಕಂಠೇಶ್ವರ ದೇವಸ್ಥಾನ ಆವರಣದಲ್ಲಿ ಅ.7 ರಿಂದ 13 ರವರೆಗೆ ವಿಶೇಷ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ. ಅ.7ರ ಸಂಜೆ 6ಕ್ಕೆ ಮುಖ್ಯಮಂತ್ರಿ ಬಸವರಾಜು ಬೊಮ್ಮಾಯಿ (Basavaraj Bommai) ಅವರು ಕಾರ್ಯಕ್ರಮ ಉದ್ಘಾಟಿಸುವರು. ಬಳಿಕ ರಾಜ್ಯ ಸಂಗೀತ ವಿದ್ವಾನ್‌ ಪ್ರಶಸ್ತಿ ಪ್ರಧಾನ ಮಾಡುವರು. ಪ್ರತಿನಿತ್ಯ ಸಂಜೆ 6 ರಿಂದ ರಾತ್ರಿ 9.30 ರವರೆಗೂ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿವೆ ಎಂದು ಅವರು ವಿವರಿಸಿದರು.

ಮೈಸೂರು ದಸರಾ ವೆಬ್‌ಸೈಟ್‌ನಲ್ಲಿ ಪ್ರಸಾರ - ಎಸ್‌ಟಿಎಸ್‌

ಸಹಕಾರ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಟಿ. ಸೋಮಶೇಖರ್‌, ಸಂಸದ ಪ್ರತಾಪ್‌ ಸಿಂಹ, ಶಾಸಕ ಬಿ. ಹರ್ಷವರ್ಧನ್‌, ಎಂಡಿಎ ಅಧ್ಯಕ್ಷ ಎಚ್‌.ವಿ. ರಾಜೀವ್‌, ಜಿಲ್ಲಾಧಿಕಾರಿ ಡಾ. ಬಗಾದಿ ಗೌತಮ್, ನಗರ ಪೊಲೀಸ್‌ ಆಯುಕ್ತ ಡಾ. ಚಂದ್ರಗುಪ್ತ, ಜಿಪಂ ಸಿಇಒ ಎ.ಎಂ. ಯೋಗೀಶ್‌ ಮೊದಲಾದವರು ಇದ್ದರು.

ಸಾಂಸ್ಕೃತಿಕ ಕಾರ್ಯಕ್ರಮ ವೇಳಾಪಟ್ಟಿ

ಅ.7 ರಂದು ಬೆಂಗಳೂರಿನ ಪ್ರಭಾತ್‌ ತಂಡದಿಂದ ಕರ್ನಾಟಕ ವೈಭ ನೃತ್ಯ ರೂಪಕ, ಅ.8 ರಂದು ಮಳವಳ್ಳಿ ಮಹದೇವಸ್ವಾಮಿ, ಅಪ್ಪಗೆರೆ ತಿಮ್ಮರಾಜು ಅವರಿಂದ ಜಾನಪದ ಕಾವ್ಯ ಗಾಯನ, ಶಿವಮೊಗ್ಗದ ಹೊಸಹಳ್ಳಿ ವೆಂಕಟರಾಮು ತಂಡದಿಂದ ವಯೋಲಿನ್‌, ವೈ.ಕೆ. ಮುದ್ದುಕೃಷ್ಣ ತಂಡದಿಂದ ಕನ್ನಡ ಡಿಂಡಿಮ ಕಾರ್ಯಕ್ರಮ ಜರುಗಲಿದೆ.

ಅ.9 ರಂದು ಮೈಸೂರಿನ ಎಚ್‌.ಎನ್‌. ಭಾಸ್ಕರ್‌ ತಂಡದಿಂದ ಸಂಗೀತ ದರ್ಬಾರ್‌, ಬೆಂಗಳೂರಿನ ಸಂಗೀತ ನಿರ್ದೇಶಕ ಹಂಸಲೇಖ ಅವರ ತಂಡದಿಂದ ದೇಸೀ ಸಂಸ್ಕೃತಿ ಹಬ್ಬ, ಅ.10 ರಂದು ಬೆಂಗಳೂರಿನ (Bengaluru) ಅಮೋಘ ವರ್ಷ ಡ್ರಮ್ಸ್‌ ಕಲೆಕ್ಟಿವ್‌ನಿಂದ ಮಿಶ್ರವಾದ್ಯ ಗಾಯನ, ಮೈಸೂರಿನ ಶಾಂತಲ ವಟ್ಟಂ ತಂಡದಿಂದ ಗಜಲ್‌, ತೀರ್ಥಹಳ್ಳಿಯ ಶಮಿತಾ ಮಲ್ನಾಡ್‌ ತಂಡದಿಂದ ಮಧುರ ಮಧುರವೀ ಮಂಜುಳಗಾನ.

ಅ.11 ರಂದು ಪೊಲೀಸ್‌ ಬ್ಯಾಂಡ್‌, ಬಾಗಲಕೋಟೆಯ (Bagalkot) ಶ್ರೇಯಾ ಪ್ರಹ್ಲಾದ್‌ ಕುಲಕರ್ಣಿ ಅವರಿಂದ ನೃತ್ಯ ರೂಪಕ, ರಾಯಚೂರು ಶೇಷಗಿರಿದಾಸ್‌ ತಂಡದಿಂದ ದಾಸವಾಣಿ. ಅ.12 ರಂದು ಅದಿತಿ ಪ್ರಹ್ಲಾದ್‌- ಸುಗಮ ಸಂಗೀತ, ಮುದ್ದುಮೋಹನ್‌ ತಂಡದ ಹಿಂದೂಸ್ತಾನಿ ಸಂಗೀತ, ಪ್ರವೀಣ್‌ ಗೋಡ್ಬಿಂಡಿ ಮತ್ತು ಷಡಜ್‌ ಗೋಡ್ಬಿಂಡಿ ಅವರಿಂದ ಕೊಳಲುವಾದನ ಜುಗಲ್‌ಬಂಧಿ. ಅ.13 ರಂದು ಪಂಡಿತ್‌ ಜಯತೀರ್ಥ ಮೇವುಂಡಿ ಅವರಿಂದ ಹಿಂದೂಸ್ತಾನಿ ಗಾಯನ, ಬಿ. ಜಯಶ್ರೀ ತಂಡದಿಂದ ರಂಗಗೀತೆ ಹಾಗೂ ಮೈಸೂರಿನ ಶ್ರೀಧರ್‌ ಜೈನ್‌ ತಂಡದಿಂದ ನೃತ್ಯರೂಪಕ ಏರ್ಪಡಿಸಲಾಗಿದೆ.

click me!