
ಟಿ. ನರಸೀಪುರ ಇನ್ಸ್ಪೆಕ್ಟರ್ ಧನಂಜಯ್ ಅವರು ಹಿಂದೂ ಕಾರ್ಯಕರ್ತರಿಗೆ ಧಮ್ಕಿ ಹಾಕಿದ್ದಾರೆನ್ನಲಾದ ಪ್ರಕರಣ ಇದೀಗ ರಾಜ್ಯಾದ್ಯಂತ ಭಾರೀ ಕಾಡ್ಗಿಚ್ಚಿನಂತೆ ಹಬ್ಬಿದೆ. ಈ ವಿಚಾರವಾಗಿ ಚಿಕ್ಕಮಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಹಿರಿಯ ಬಿಜೆಪಿ ನಾಯಕ ಸಿ.ಟಿ. ರವಿ, ಪೊಲೀಸ್ ಅಧಿಕಾರಿಯ ವರ್ತನೆ ಹಾಗೂ ಸರ್ಕಾರದ ಮೌನದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಇನ್ಸ್ಪೆಕ್ಟರ್ ಧನಂಜಯ್ ಅವರ ಮಾತು ಮತ್ತು ನಡವಳಿಕೆ ಸಂಪೂರ್ಣವಾಗಿ ಅಹಂಕಾರದಿಂದ ಕೂಡಿದ್ದು, ಅವರು ಖಾಕಿ ಸಮವಸ್ತ್ರ ತೊಟ್ಟು ಗೂಂಡಾಗಿರಿ ಮಾಡುತ್ತಿದ್ದಾರೆ ಎಂದು ರೋಷಾವೇಷದಿಂದ ಕಿಡಿಕಾರಿದ್ದಾರೆ.
ಪ್ರಕರಣದ ಹಿನ್ನೆಲೆಯನ್ನು ಉಲ್ಲೇಖಿಸಿ ಮಾತನಾಡಿದ ಸಿ.ಟಿ. ರವಿ, "ಈ ಭಾರತ ದೇಶದಲ್ಲಿ ಯಾವುದೇ ಬೀದಿಯೂ ನಿಷೇಧಿತ ಬೀದಿಯಲ್ಲ. ಸಾರ್ವಜನಿಕ ರಸ್ತೆಯಲ್ಲಿ ಮಸೀದಿ ಇದೆ ಎಂಬ ಒಂದೇ ಕಾರಣಕ್ಕೆ ಮೆರವಣಿಗೆ ಹೋಗಬಾರದು ಎಂದು ತಡೆಯುವುದು ಅಥವಾ ಆ ರೀತಿ ಆದೇಶಿಸುವುದು ನಿಮ್ಮ ಭಯವನ್ನು ತೋರಿಸುತ್ತದೆ. ಸಾರ್ವಜನಿಕ ಸ್ಥಳದಲ್ಲಿ ಶೋಭಾಯಾತ್ರೆ ಅಥವಾ ಮೆರವಣಿಗೆಗೆ ತಡೆ ಒಡ್ಡುವುದೇ ಸಂಪೂರ್ಣವಾಗಿ ಸಂವಿಧಾನ ಬಾಹಿರ" ಎಂದು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದರು. ಇನ್ಸ್ಪೆಕ್ಟರ್ ದೊಡ್ಡ ದೊಡ್ಡ ಮಾತುಗಳನ್ನಾಡಿ ಸಾರ್ವಜನಿಕರಿಗೆ ಬೆದರಿಕೆ ಹಾಕುತ್ತಿದ್ದಾರೆ, ಆದರೆ ಇಂತಹ ಧಮ್ಕಿಗಳಿಗೆ ಬಿಜೆಪಿ ಅಥವಾ ಹಿಂದೂ ಕಾರ್ಯಕರ್ತರು ಹೆದರುವುದಿಲ್ಲ. ಈ ರೀತಿ ಬೆದರಿಕೆ ಹಾಕುವ ಅಧಿಕಾರಿಗಳನ್ನು ಕಾನೂನಾತ್ಮಕವಾಗಿ ಹಾಗೂ ಸಾಂಘಿಕವಾಗಿ ಹೇಗೆ ಎದುರಿಸಬೇಕು ಎಂಬುದು ನಮಗೂ ಚೆನ್ನಾಗಿ ಗೊತ್ತಿದೆ ಎಂದು ಎಚ್ಚರಿಸಿದರು.
ಇದೇ ವೇಳೆ ಗೃಹ ಸಚಿವ ಜಿ. ಪರಮೇಶ್ವರ್ ಹಾಗೂ ಕಾಂಗ್ರೆಸ್ ನಾಯಕತ್ವವನ್ನು ಗುರಿಯಾಗಿಸಿಕೊಂಡು ಮಾತನಾಡಿದ ಅವರು, ಇನ್ಸ್ಪೆಕ್ಟರ್ ಧನಂಜಯ್ ಅವರನ್ನು ತಕ್ಷಣವೇ ಸೇವೆಯಿಂದ ಅಮಾನತು (Suspension) ಮಾಡಬೇಕು ಎಂದು ಆಗ್ರಹಪೂರ್ವಕವಾಗಿ ಮನವಿ ಮಾಡಿದರು. "ಒಂದು ವೇಳೆ ಈ ಅಧಿಕಾರಿಯನ್ನು ಅಮಾನತು ಮಾಡದಿದ್ದರೆ, ಸರ್ಕಾರ ಮತ್ತು ಸಚಿವರು ಸಂಪೂರ್ಣವಾಗಿ ಪಕ್ಷಪಾತಿಗಳು ಎಂಬ ಭಾವನೆ ಸಾರ್ವಜನಿಕರಲ್ಲಿ ಮೂಡುತ್ತದೆ. ಇದೇ ರೀತಿಯ ಧಮ್ಕಿಯನ್ನು ಏನಾದರೂ ಅನ್ಯಕೋಮಿನವರಿಗೆ ಅಥವಾ ಅಲ್ಪಸಂಖ್ಯಾತರಿಗೆ ಹಾಕಿದ್ದರೆ, ರಾಜ್ಯದ ಕಾಂಗ್ರೆಸ್ ನಾಯಕರು ಏನೇನೋ ಆಗಿದೆ ಎಂಬಂತೆ ಬಾಯಿ ಬಡ್ಕೊಳ್ಳುತ್ತಿದ್ದರು" ಎಂದು ನೇರವಾಗಿ ವಾಗ್ದಾಳಿ ನಡೆಸಿದರು. ಮುಂದುವರಿದು, ಈ ವಿಚಾರದಲ್ಲಿ ಸರ್ಕಾರದ ಮೌನವನ್ನು ಪ್ರಶ್ನಿಸಿದ ಅವರು, "ನಿಮ್ಮ ಈ ಮೌನವೇ ನಿಮ್ಮ ನಕಲಿ ಜಾತ್ಯಾತೀತತೆಯ ವಿರುದ್ಧ ಇರುವ ದೊಡ್ಡ ಅಸ್ತ್ರ. ಈ ಘಟನೆಯಿಂದ ನಿಮ್ಮ ಜಾತ್ಯತೀತತೆ ಸಂಪೂರ್ಣವಾಗಿ ಸತ್ತು ಹೋಗಿದೆ ಎಂಬುದು ಸಾಬೀತಾಗಿದೆ" ಎಂದು ಕುಟುಕಿದರು.
ಟಿ. ನರಸೀಪುರದ ಸ್ಥಳೀಯ ಜನತೆ ಮತ್ತು ಹಿಂದೂ ಕಾರ್ಯಕರ್ತರಿಗೆ ಧೈರ್ಯ ತುಂಬಿದ ಸಿ.ಟಿ. ರವಿ, "ಸ್ಥಳೀಯ ಸಾರ್ವಜನಿಕರು ಮತ್ತು ನಮ್ಮ ಕಾರ್ಯಕರ್ತರು ಅಪೇಕ್ಷೆ ಪಟ್ಟರೆ, ನಾವೇ ಖುದ್ದಾಗಿ ಟಿ. ನರಸೀಪುರಕ್ಕೆ ಬಂದು ನಿಲ್ಲುತ್ತೇವೆ. ಯಾವ ಅಧಿಕಾರಿ ಏನು ಮಾಡಿಕೊಳ್ಳುತ್ತಾನೋ, ನಾವೂ ನೋಡ್ತೀವಿ" ಎಂದು ಸವಾಲು ಎಸೆದಿದ್ದಾರೆ. ಖಾಕಿ ಅಧಿಕಾರಿಯೋರ್ವನ ಅಹಂಕಾರದ ಮಾತುಗಳು ಹಾಗೂ ಅದಕ್ಕೆ ಪ್ರತಿಯಾಗಿ ಬಿಜೆಪಿ ನಾಯಕರ ಈ ಕಠಿಣ ಎಚ್ಚರಿಕೆಗಳು ಮೈಸೂರು ಮತ್ತು ಚಿಕ್ಕಮಗಳೂರು ಸೇರಿದಂತೆ ರಾಜ್ಯದ ರಾಜಕೀಯ ವಲಯದಲ್ಲಿ ತೀವ್ರ ಸಂಚಲನ ಮೂಡಿಸಿವೆ. ಸರ್ಕಾರವು ಈ ಬಗ್ಗೆ ಯಾವ ಕ್ರಮ ಕೈಗೊಳ್ಳಲಿದೆ ಎಂಬುದರ ಮೇಲೆ ಎಲ್ಲರ ಕಣ್ಣ ನೆಟ್ಟಿದೆ.