'ಕೊರೋನಾ ಪ್ರಕರಣ ನಿಯಂತ್ರಿಸುವಲ್ಲಿ ಯಶಸ್ವಿಯಾದ ಹುಣಸೂರು'

By Kannadaprabha NewsFirst Published Oct 1, 2020, 2:43 PM IST
Highlights

ಕೊರೋನಾ ಮಹಾಮಾರಿ ನಿಯಂತ್ರಿಸುವಲ್ಲಿ ಹುಣಸೂರು ಯಶಸ್ವಿಯಾಗಿದೆ. ಇದೀಗ ಇನ್ನಷ್ಟು ಕಠಿಣ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ

ಹುಣಸೂರು (ಅ.01):  ತಾಲೂಕಿನಲ್ಲಿ ಕೋವಿಡ್‌ 19 ಪ್ರಕರಣಗಳ ಸಂಖ್ಯೆ ಇಳಿಮುಖವಾಗುತ್ತಿದ್ದು, ನಾಗರಿಕರಲ್ಲಿ ಇನ್ನಷ್ಟುಅರಿವು ಮೂಡಿಸುವ ಕಾರ್ಯಕ್ಕೆ ಜನಪ್ರತಿನಿಧಿಗಳು ಮತ್ತು ಎಲ್ಲ ಇಲಾಖೆಗಳ ಸಹಕಾರ ಅಗತ್ಯ ಎಂದು ತಾಲೂಕು ಆರೋಗ್ಯಾಧಿಕಾರಿ ಡಾ. ಕೀರ್ತಿಕುಮಾರ್‌ ಹೇಳಿದರು.

ತಾಲೂಕು ಸಭಾಂಗಣದಲ್ಲಿ ಆಯೋಜಿಸಿದ್ದ ತಾಪಂ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಅವರು, ತಾಲೂಕಿನಲ್ಲಿ ಈವರೆಗೆ ಕೊರೋನಾ ವೈರಸ್‌ನಿಂದ 13,500 ಮಂದಿ ಸೋಂಕಿತರಾಗಿದ್ದರು. ಪ್ರಸ್ತುತ ತಾಲೂಕಿನಲ್ಲಿ ಕೇವಲ 300 ಸಕ್ರಿಯ ಪ್ರಕರಣಗಳಿವೆ. ಸರ್ಕಾರದ ನಿರ್ದೇಶನದಂತೆ ಆರ್‌ಟಿಪಿಎಸಿಆರ್‌ ಪರೀಕ್ಷೆಯನ್ನು 12 ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ (ಪ್ರತಿದಿನ 300ಕ್ಕೂ ಹೆಚ್ಚು)ನಡೆಯುತ್ತಿದ್ದು, ಜನಪ್ರತಿನಿಧಿಗಳು ಜನರಲ್ಲಿ ತಪಾಸಣೆಗೊಳಗಾಗುವ ಅವಶ್ಯಕತೆ ಕುರಿತು ಅರಿವು ಮೂಡಿಸಿ ಸಹಕರಿಸಬೇಕು. ತಾಲೂಕಿನಲ್ಲಿ ಸೋಂಕಿತರ ಸಂಖ್ಯೆಯಲ್ಲಿ ಇಳಿಮುಖವಾಗುತ್ತಿದ್ದು, ಜನರು ಮಾಸ್ಕ್‌, ಸ್ಯಾನಿಟೈಸರ್‌ ಬಳಕೆ ಅಗತ್ಯವೆಂದು ಮನವಿ ಮಾಡಿದರು.

ಸಕ್ರಿಯ ಸೋಂಕಿತರಲ್ಲಿ ಕರ್ನಾಟಕ ದೇಶದಲ್ಲೇ ನಂ 2; ಮೈಮರೆತರೆ ಅಪಾಯ ನಿಶ್ಚಿತ ..

ತಾಲೂಕು ಎಡಿಎಲ್‌ಆರ್‌ ಮಮತಾ ಮಾತನಾಡಿ, ಕೇಂದ್ರ ಸರ್ಕಾರ ಇತ್ತೀಚೆಗೆ ಜಾರಿಗೊಳಿಸಿದ ಸ್ವಮಿತ್ವ ಯೋಜನೆಯನ್ನು ಪ್ರಾಯೋಗಿಕವಾಗಿ ಮೂರು ಗ್ರಾಪಂ ವ್ಯಾಪ್ತಿಯಲ್ಲಿ ಜಾರಿಯಲ್ಲಿದ್ದು, ಹಳೇಬೀಡು ಗ್ರಾಪಂನಲ್ಲಿ ಪೂರ್ಣಗೊಂಡಿದೆ. ಮೋದೂರು ಪಂಚಾಯಿತಿ ವ್ಯಾಪ್ತಿಯ 4 ಗ್ರಾಮಗಳು ಪೂರ್ಣಗೊಂಡಿದ್ದು, ಹಿರೀಕ್ಯಾತನಹಳ್ಳಿಯಲ್ಲಿ ಆರಂಭಿಸಬೇಕಿದೆ. ಜನರು ಸಕಾರಾತ್ಮಕವಾಗಿ ಸ್ಪಂದಿಸುತ್ತಿದ್ದಾರೆ ಎಂದರು. ಸದಸ್ಯ ಗಣಪತಿ ರಾವ್‌ ಇಂಡೋಲ್ಕರ್‌ ಕೇಂದ್ರ ಸರ್ಕಾರ ಉತ್ತಮ ಯೋಜನೆ ರೂಪಿಸಿದ್ದು, ಅಧಿಕಾರಿಗಳು ಪರಿಣಾಮಕಾರಿಯಾಗಿ ಜಾರಿಗೊಳಿಸಬೇಕೆಂದು ಕೋರಿದರು.

ನಿಲ್ಲದ ವೈರಸ್‌ ಅಟ್ಟಹಾಸ: ಬೆಂಗಳೂರಲ್ಲಿ 30 ದಿನದಲ್ಲಿ 1 ಲಕ್ಷ ಮಂದಿಗೆ ಕೊರೋನಾ...!

ಆಶ್ರಮಶಾಲೆ ಮಕ್ಕಳಿಗೆ ಊಟವಿಲ್ಲ: ತಾಲೂಕಿನ 6 ಆಶ್ರಮಶಾಲೆಯ 400ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಕಳೆದ ಮೂರು ತಿಂಗಳಿನಿಂದ ಪರಿಶಿಷ್ಟವರ್ಗಗಳ ಕಲ್ಯಾಣ ಇಲಾಖೆ ಊಟೋಪಚಾರ ನೀಡುತ್ತಿಲ್ಲವೆಂದು ಸದಸ್ಯರದ ಪುಟ್ಟಮ್ಮ, ಗಣಪತಿ ರಾವ್‌ ಇಂಡೋಲ್ಕರ್‌ ಮತ್ತು ಪ್ರೇಮ್‌ಕುಮಾರ್‌ ಆರೋಪಿಸಿದರು. ಇಲಾಖೆಯು ಆದಿವಾಸಿ ಮಕ್ಕಳನ್ನು ಕಡೆಗಣಿಸುತ್ತಿದೆ. ಶಿಕ್ಷಣ ಇಲಾಖೆ ಪಡಿತರದ ಕಿಟ್‌ನ್ನು ವಿದ್ಯಾರ್ಥಿಯ ಮನೆಗೆ ತಲುಪಿಸುತ್ತಿರುವಾಗ ಇವರು ಯಾಕೆ ಸುಮ್ಮನಿದ್ದಾರೆ. ಇದಕ್ಕೆ ಸರ್ಕಾರ ಮತ್ತು ಇಲಾಖೆ ಎರಡೂ ಹೊಣೆಯಾಗಿವೆ ಎಂದು ಬೇಸರ ವ್ಯಕ್ತಪಡಿಸಿದರು.

ಪ. ವರ್ಗಗಳ ಕಲ್ಯಾಣಾಧಿಕಾರಿ ಬಸವರಾಜು ಮಾತನಾಡಿ, ಆ. 8ರಂದೇ ಈ ಕುರಿತು ಸರ್ಕಾರಕ್ಕೆ ವರದಿ ಸಲ್ಲಿಸಲಾಗಿದ್ದು, ನಿರ್ಣಯ ಸರ್ಕಾರದ ಹಂತದಲ್ಲಿದೆ. ಶೀಘ್ರ ವ್ಯವಸ್ಥೆ ಆಗುವ ನಿರೀಕ್ಷೆಯಲ್ಲಿದ್ದೇವೆ ಎಂದರು.

ಸಭೆಯಲ್ಲಿ ಅಧ್ಯಕ್ಷೆ ಪದ್ಮಮ್ಮ, ಉಪಾಧ್ಯಕ್ಷ ಪ್ರೇಮೇಗೌಡ, ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ರವಿಪ್ರಸನ್ನ, ಇಒ ಎಚ್‌.ಡಿ. ಗಿರೀಶ್‌, ಸದಸ್ಯರು ಮತ್ತು ಅಧಿಕಾರಿಗಳು ಇದ್ದರು.

click me!