ಧ್ವನಿ ಇಲ್ಲದವರಿಗೆ ಧ್ವನಿ ನೀಡಿದ ಅರಸು ಎಲ್ಲರಿಗೂ ಮಾದರಿ: ಸಿದ್ದರಾಮಯ್ಯ

By Kannadaprabha NewsFirst Published Jun 7, 2023, 8:23 AM IST
Highlights

ದೇವರಾಜ ಅರಸು ಅವರು ಮುಖ್ಯಮಂತ್ರಿಯಾಗಿದ್ದಾಗ ಹಲವು ಕ್ರಾಂತಿಕಾರಿ ಕ್ರಮಗಳನ್ನು ಕೈಗೊಂಡಿದ್ದರು. ಧ್ವನಿ ಇಲ್ಲದ ಜನರಿಗೆ ಧ್ವನಿ ನೀಡುವಂತಹ ಕೆಲಸ ಮಾಡಿ ನಮಗೆಲ್ಲ ಆದರ್ಶವಾಗಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. 

ಬೆಂಗಳೂರು (ಜೂ.07): ದೇವರಾಜ ಅರಸು ಅವರು ಮುಖ್ಯಮಂತ್ರಿಯಾಗಿದ್ದಾಗ ಹಲವು ಕ್ರಾಂತಿಕಾರಿ ಕ್ರಮಗಳನ್ನು ಕೈಗೊಂಡಿದ್ದರು. ಧ್ವನಿ ಇಲ್ಲದ ಜನರಿಗೆ ಧ್ವನಿ ನೀಡುವಂತಹ ಕೆಲಸ ಮಾಡಿ ನಮಗೆಲ್ಲ ಆದರ್ಶವಾಗಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ಮಾಜಿ ಸಿಎಂ ದೇವರಾಜ ಅರಸು ಅವರ 41ನೇ ಪುಣ್ಯಸ್ಮರಣೆ ಅಂಗವಾಗಿ ವಿಧಾನಸೌಧದಲ್ಲಿನ ದೇವರಾಜ ಅರಸು ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಮಾತನಾಡಿ, ದೇವರಾಜ ಅರಸು ಅವರು ಮುಖ್ಯಮಂತ್ರಿಯಾಗಿ ಮಾಡಿದ ಕೆಲಸಗಳೆಲ್ಲವೂ ನಮಗೆ ಸ್ಫೂರ್ತಿ ತುಂಬುವಂತಹದ್ದು. ಕರ್ನಾಟಕ ಕಂಡ ಮುತ್ಸದ್ದಿ ರಾಜಕಾರಣಿ, ಸಾಮಾಜಿಕ ಸುಧಾರಣೆಯ ಹರಿಕಾರರಾಗಿದ್ದರು. 

ಭೂ ಸುಧಾರಣೆ ಕಾಯ್ದೆ, ಮಲ ಹೊರುವ ಪದ್ಧತಿ ರದ್ದು, ಜೀತ ಪದ್ಧತಿ ರದ್ದು, ರೈತರ ಸಾಲ ವಿಮೋಚನಾ ಕಾನೂನು ಜಾರಿ, ಹಾವನೂರು ಆಯೋಗ ರಚಿಸಿ ಹಿಂದುಳಿದ ವರ್ಗದವರಿಗೆ ಮೀಸಲಾತಿ ನೀಡಿದಂತಹ ಹಲವು ಕ್ರಾಂತಿಕಾರಿ ಕ್ರಮಗಳನ್ನು ಕೈಗೊಂಡರು ಎಂದು ತಿಳಿಸಿದರು. ರಾಜಕೀಯವಾಗಿ ಪ್ರಾತಿನಿಧ್ಯ ಇಲ್ಲದ ಸಮುದಾಯದವರನ್ನು ಶಾಸಕರು, ವಿಧಾನಪರಿಷತ್‌ ಸದಸ್ಯರನ್ನಾಗಿ ಮಾಡಿದ ಕೀರ್ತಿ ದೇವರಾಜ ಅರಸು ಅವರಿಗೆ ಸಲ್ಲುತ್ತದೆ. ಅಧಿಕಾರ ಎಲ್ಲರಿಗೂ ಸಿಗಬೇಕೆಂಬುದು ಅವರ ಆಶಯವಾಗಿತ್ತು. ಅದಕ್ಕೆ ತಕ್ಕಂತೆ ಕೆಲಸವನ್ನೂ ಮಾಡಿದರೂ. ಉಳುವವನೇ ಭೂಮಿಯ ಒಡೆಯ ಎಂಬ ಕಾನೂನು ಜಾರಿ ಮಾಡುವ ಮೂಲಕ ಭೂರಹಿತ ರೈತರು ಭೂಮಿಯ ಒಡೆಯನನ್ನಾಗಿ ಮಾಡಿದರು ಎಂದು ಶ್ಲಾಘಿಸಿದರು. ಸಚಿವರಾದ ಕೆ.ಎನ್‌. ರಾಜಣ್ಣ, ಶಿವರಾಜ ತಂಗಡಗಿ ಸೇರಿದಂತೆ ಹಲವರಿದ್ದರು.

ಬಾಡಿಗೆ ಮನೆಗಳಿಗೂ ಉಚಿತ ವಿದ್ಯುತ್‌: ಗೊಂದಲಕ್ಕೆ ತೆರೆ ಎಳೆದ ಸಿದ್ದು, ಇಂಧನ ಸಚಿವ ಜಾರ್ಜ್‌

ಮಡಗಾಸ್ಕರ್‌ನಲ್ಲಿ ಮಾತ್ರ ಸಿಗುವ ಸಸಿ ನೆಟ್ಟ ಸಿಎಂ: ದೇವರಾಜ ಅರಸು ಅವರ ಸ್ಮರಣಾರ್ಥ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿಧಾನಸೌಧ ಉದ್ಯಾನದಲ್ಲಿ ಟರ್ಮಿನಲ್‌ ಮೆಂಟಾಲಿ ಎಂಬ ಸಸಿಯನ್ನು ನೆಟ್ಟರು. ಆಫ್ರಿಕಾ ಖಂಡ ಮಡಗಾಸ್ಕರ್‌ನಲ್ಲಿ ಮಾತ್ರ ಕಾಣಸಿಗುವ ಈ ಗಿಡವನ್ನು ಇದೇ ಮೊದಲ ಬಾರಿಗೆ ವಿಧಾನಸೌಧ ಉದ್ಯಾನದಲ್ಲಿ ನೆಡಲಾಗಿದೆ. 40 ಅಡಿ ಎತ್ತರಕ್ಕೆ ಬೆಳೆಯುವ ಈ ಗಿಡವು, ವಾಯು ಮಾಲಿನ್ಯ ತಡೆಗೆ ಹೆಚ್ಚಿನ ಸಹಕಾರಿಯಾಗಲಿದೆ ಎಂದು ಸಿದ್ದರಾಮಯ್ಯ ವಿವರಿಸಿದರು.

ಕೃಷ್ಣರಾಜ ಒಡೆಯರ್‌ರಿಂದ ನಾಡು ಸಮೃದ್ಧ: ನಾಲ್ವಡಿ ಕೃಷ್ಣರಾಜ ಒಡೆಯರ್‌ ಅವರು ಕೈಗೊಂಡ ಅಭಿವೃದ್ಧಿ ಕಾರ್ಯ, ಮಹಿಳೆಯರು, ದೀನ ದಲಿತರ ಬಗ್ಗೆ ಹೊಂದಿದ್ದ ಕಾಳಜಿ, ಮುಸ್ಲಿಂ ಮಹಿಳೆಯರ ಶಿಕ್ಷಣಕ್ಕೆ ನೀಡಿದ್ದ ಆದ್ಯತೆ ಸೇರಿದಂತೆ ಅನೇಕ ಜನಪರ ಯೋಜನೆಗಳು ನಾಡನ್ನು ಸಮೃದ್ಧಗೊಳಿಸಿವೆ ಎಂದು ವಿವಿಧ ಗಣ್ಯರು ಹೇಳಿದರು. ಬೆಂಗಳೂರು ನಗರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಆಯೋಜಿಸಿದ್ದ ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್‌ ಅವರ 139ನೇ ಜಯಂತ್ಯುತ್ಸವದಲ್ಲಿ ಮಾತನಾಡಿದ ಅತಿಥಿಗಳು, ಒಡೆಯರ್‌ ನೀಡಿದ ಕೊಡುಗೆಯನ್ನು ಸ್ಮರಿಸಿಕೊಂಡರು. 

ಕನ್ನಡ ಜನಶಕ್ತಿ ಕೇಂದ್ರ ಅಧ್ಯಕ್ಷ ಸಿ.ಕೆ.ರಾಮೇಗೌಡ ಮಾತನಾಡಿ, ಒಡೆಯರ್‌ ಅವರು ಮೈಸೂರು ಪ್ರಾಂತ್ಯದಲ್ಲಿ ಕೈಗೊಂಡ ಅಭಿವೃದ್ಧಿ ಕಾರ್ಯಗಳು ಮತ್ತು ಜಾರಿಗೆ ತಂದ ಜನರಪರ ಯೋಜನೆಗಳು ವಿಶ್ವಮಟ್ಟದಲ್ಲಿ ಮಾನ್ಯತೆ ಪಡೆದಿವೆ. ಅವರು ಮಹಿಳೆಯರು ಮತ್ತು ದೀನ ದಲಿತರ ಬಗ್ಗೆ ಅಪಾರ ಕಾಳಜಿಯನ್ನು ಹೊಂದಿದ್ದರು. ಸಮಾಜದ ಕಟ್ಟಕಡೆಯ ವ್ಯಕ್ತಿಗೂ ನ್ಯಾಯ ಒದಗಿಸುವ ರೀತಿಯಲ್ಲಿ ಆಡಳಿತ ನಡೆಸಿ, ಮಹಾತ್ಮ ಗಾಂಧೀಜಿ ಅವರಿಂದ ರಾಜರ್ಷಿ ಎಂದು ಕರೆಸಿಕೊಂಡರು. ಅಂತಹ ಮಹಾನುಭಾವರ ಪ್ರತಿಮೆಯನ್ನು ಕನ್ನಡ ಸಾಹಿತ್ಯ ಪರಿಷತ್ತಿನ ಕೇಂದ್ರ ಅಧ್ಯಕ್ಷರು ತೆರವುಗೊಳಿಸಿ ಸಬೂಬು ಹೇಳುತ್ತಿರುವುದು ಸರಿಯಲ್ಲ ಎಂದು ಖಂಡಿಸಿದರು.

ಐಟಿ, ಜಿಎಸ್‌ಟಿ ರಿಟರ್ನ್ಸ್‌ ಸಲ್ಲಿಸುವವರ ಪತ್ನಿಗೆ 2000 ರು. ಸಿಗಲ್ಲ: ಗೃಹಲಕ್ಷ್ಮಿ ಯೋಜನೆಯ ಮಾರ್ಗಸೂಚಿ ಪ್ರಕಟ

ಇತಿಹಾಸ ಪ್ರಾಧ್ಯಾಪತಿ ಡಾ. ಆರ್‌.ಕಾವಲ್ಲಮ್ಮ ಮಾತನಾಡಿ, ಒಡೆಯರ್‌ ಕನ್ನಡ ನಾಡು ಕಂಡ ಶ್ರೇಷ್ಠ ಹಾಗೂ ದಾರ್ಶನಿಕ ಆಡಳಿತಗಾರರು. ದಲಿತ, ಹಿಂದುಳಿದ ಮತ್ತು ಅಲ್ಪಸಂಖ್ಯಾತರ ಕಲ್ಯಾಣಕ್ಕಾಗಿ ಅಹರ್ನಿಶಿ ದುಡಿದ ಧೀಮಂತ ಅರಸರು. ಮುಸ್ಲಿಂ ಮಹಿಳೆಯರ ಶಿಕ್ಷಣಕ್ಕೆ ಆದ್ಯತೆ, ದೇಸೀ ತಳಿ ಹಳ್ಳಿಕಾರ್‌ ಜಾನುವಾರುಗಳ ತಳಿ ಸಂವರ್ಧನೆಗೆ ಅರಸರು ಉತ್ತೇಜನ ನೀಡಿದ್ದರು ಎಂದು ಸ್ಮರಿಸಿದರು. ಬೆಂಗಳೂರು ನಗರ ಜಿಲ್ಲಾ ಕಸಾಪ ಅಧ್ಯಕ್ಷ ಎಂ.ಪ್ರಕಾಶಮೂರ್ತಿ ಮಾತನಾಡಿ, ದಕ್ಷಿಣ ಏಷ್ಯಾದಲ್ಲಿಯೇ ಪ್ರಪ್ರಥಮವಾಗಿ ಕ್ಷಯ ರೋಗಿಗಳಿಗೆ ಆಸ್ಪತ್ರೆ ಕಟ್ಟಿಸಿ ಎಲ್ಲರಿಗೂ ಚಿಕಿತ್ಸೆ ದೊರೆಯುವಂತೆ ಮಾಡಿದರು ಎಂದು ನೆನಪಿಸಿಕೊಂಡರು. ಲಾಲ್‌ಬಾಗ್‌ ಉದ್ಯಾನದ ತೋಟಗಾರಿಕಾ ಸಹಕಾರ ಸಂಘದ ಅಧಿಕಾರಿ ಎಸ್‌.ಆರ್‌.ಪ್ರಸನ್ನಕುಮಾರ್‌ ಉಪಸ್ಥಿತರಿದ್ದರು.

click me!