ಉಡುಪಿ: ಜನಸ್ಪಂದನೆಗೆ ಸಿದ್ಧರಿಲ್ಲದ ಅಧಿಕಾರಿಗಳು ಹುದ್ದೆ ಬಿಡಿ, ಸಿಎಂ ಸಿದ್ದರಾಮಯ್ಯ

Published : Aug 02, 2023, 12:00 AM IST
ಉಡುಪಿ: ಜನಸ್ಪಂದನೆಗೆ ಸಿದ್ಧರಿಲ್ಲದ ಅಧಿಕಾರಿಗಳು ಹುದ್ದೆ ಬಿಡಿ, ಸಿಎಂ ಸಿದ್ದರಾಮಯ್ಯ

ಸಾರಾಂಶ

ಅಧಿಕಾರಿಗಳಿಗೆ ಸ್ಥಾನಮಾನ, ಸಂಬಳ, ಸವಲತ್ತುಗಳು ಸಿಗುವುದು ಜನರ ತೆರಿಗೆ ಹಣದಿಂದ. ಜಿಲ್ಲಾ ಮಟ್ಟದ ಅಧಿಕಾರಿಗಳು ಕಚೇರಿಯಲ್ಲಿ ಕುಳಿತು ಕೆಲಸ ಮಾಡದೆ, ಕಡ್ಡಾಯವಾಗಿ ಸ್ಥಳಕ್ಕೆ ಭೇಟಿ ನೀಡಬೇಕು. ಜಿಲ್ಲಾ ರಕ್ಷಣಾಧಿಕಾರಿಗಳು ಪ್ರತಿ ಠಾಣೆಗಳಿಗೆ ಭೇಟಿ ನೀಡಬೇಕು. ಠಾಣೆಗಳಲ್ಲಿ ಯಾವುದೇ ದೂರುಗಳು ಬಂದಾಗ ಮೊದಲು ಎಫ್‌ಐಆರ್‌ ದಾಖಲಿಸಿಕೊಳ್ಳಿ ಎಂದು ಕಿವಿಮಾತು ಹೇಳಿದ ಮುಖ್ಯಮಂತ್ರಿ ಸಿದ್ದರಾಮಯ್ಯ 

ಉಡುಪಿ(ಆ.02):  ಎಷ್ಟೇ ದೊಡ್ಡ ಅಧಿಕಾರಿಯಾಗಿದ್ದರೂ, ಜನರ ಸಮಸ್ಯೆಗಳಿಗೆ ಸ್ಪಂದಿಸದಿದ್ದರೆ, ನಿರ್ಲಕ್ಷ್ಯ, ಉದಾಸೀನ ತೋರಿಸಿದರೆ ಸಹಿಸಲು ಸಾಧ್ಯವಿಲ್ಲ. ಜನ ಸ್ಪಂದನೆಗೆ ಸಿದ್ಧರಿಲ್ಲದ ಅಧಿಕಾರಿಗಳು ಸ್ಥಾನ ತ್ಯಾಗ ಮಾಡಿ, ಜನಸ್ಪಂದನೆಗೆ ಸಿದ್ಧರಿರುವ ಸಾಕಷ್ಟುಅಧಿಕಾರಿಗಳು ನಮ್ಮಲ್ಲಿ ಇದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅಧಿಕಾರಿಗಳಿಗೆ ಖಡಕ್‌ ಎಚ್ಚರಿಕೆ ನೀಡಿದ್ದಾರೆ.

ಸಿಎಂ ಆದ ಬಳಿಕ ಇದೇ ಮೊದಲ ಬಾರಿಗೆ ಕರಾವಳಿ ಜಿಲ್ಲೆಗಳಿಗೆ ಭೇಟಿ ನೀಡಿದ ಸಿದ್ದರಾಮಯ್ಯ, ಉಡುಪಿ ಜಿ.ಪಂ.ಸಭಾಂಗಣದಲ್ಲಿ ಮಂಗಳವಾರ ಜಿಲ್ಲಾ ಪ್ರಗತಿ ಪರಿಶೀಲನಾ ಸಭೆ ನಡೆಸಿದರು. ಅಧಿಕಾರಿಗಳಿಗೆ ಸ್ಥಾನಮಾನ, ಸಂಬಳ, ಸವಲತ್ತುಗಳು ಸಿಗುವುದು ಜನರ ತೆರಿಗೆ ಹಣದಿಂದ. ಜಿಲ್ಲಾ ಮಟ್ಟದ ಅಧಿಕಾರಿಗಳು ಕಚೇರಿಯಲ್ಲಿ ಕುಳಿತು ಕೆಲಸ ಮಾಡದೆ, ಕಡ್ಡಾಯವಾಗಿ ಸ್ಥಳಕ್ಕೆ ಭೇಟಿ ನೀಡಬೇಕು. ಜಿಲ್ಲಾ ರಕ್ಷಣಾಧಿಕಾರಿಗಳು ಪ್ರತಿ ಠಾಣೆಗಳಿಗೆ ಭೇಟಿ ನೀಡಬೇಕು. ಠಾಣೆಗಳಲ್ಲಿ ಯಾವುದೇ ದೂರುಗಳು ಬಂದಾಗ ಮೊದಲು ಎಫ್‌ಐಆರ್‌ ದಾಖಲಿಸಿಕೊಳ್ಳಿ ಎಂದು ಕಿವಿಮಾತು ಹೇಳಿದರು.

ಉಡುಪಿ ಕಾಲೇಜು ವಿಡಿಯೋ ಕೇಸ್‌ ಎಸ್‌ಐಟಿಗೆ ಕೊಡೋಲ್ಲ; ಸಿಎಂ ಸಿದ್ದರಾಮಯ್ಯ

ಪೂರ್ಣ ಮನೆ ಹಾನಿಗೆ 5 ಲಕ್ಷ ರು:

ಮಳೆ ಅನಾಹುತಗಳಲ್ಲಿ ಪೂರ್ಣ ಮನೆ ಹಾನಿ ಆಗಿದ್ದರೆ 5 ಲಕ್ಷ ರು. ಪರಿಹಾರ ನೀಡುವುದಕ್ಕೆ ಸರ್ಕಾರದ ನಿರ್ಧರಿಸಿದೆ. ಮನೆಯನ್ನು ಸ್ವಂತ ಜಾಗದಲ್ಲಿ ಕಟ್ಟಿದ್ದಾರೋ, ಇಲ್ಲವೋ, ಹಕ್ಕುಪತ್ರ ಇದೆಯೋ -ಇಲ್ಲವೋ ಎನ್ನುವುದನ್ನು ನೋಡದೆ ಮಳೆಯಿಂದ ಬಿದ್ದ ಮನೆಗೆ ಪರಿಹಾರ ನೀಡಿ. ಮೊದಲು ವಾಸಿಸುವುದಕ್ಕೆ ಮನೆ ಆಗಬೇಕು. ಬೆಳೆ ಹಾನಿಗೊಳಗಾದವರಿಗೂ ತಪ್ಪದೆ ಪರಿಹಾರ ನೀಡಿ. ಅಡಕೆ ಬೆಳೆಗೆ ಬಂದಿರುವ ಎಲೆಚುಕ್ಕಿ ರೋಗದ ಬಗ್ಗೆ ಕೃಷಿ ವಿಜ್ಞಾನಿಗಳ ನೆರವು ಪಡೆದು ಪರಿಹಾರ ಕಂಡುಕೊಳ್ಳಿ. ಗ್ರಾಮೀಣ ಭಾಗದಲ್ಲಿ ಮಳೆಗಾಲದಲ್ಲಿ ಕಾಲುಸಂಕಗಳಿಂದ ಅನಾಹುತವಾಗುತ್ತಿದೆ. ಆದ್ದರಿಂದ ಕಾಲುಸಂಕಗಳಿರುವಲ್ಲಿ ಇನ್ನೆರಡು ವರ್ಷದೊಳಗೆ ಸೇತುವೆಗಳನ್ನು ನಿರ್ಮಿಸಿ ಎಂದು ಸೂಚಿಸಿದರು.

ಆರೋಗ್ಯ, ಶಿಕ್ಷಣದಲ್ಲಿ ಉಡುಪಿ ಕುಸಿತ

ಬಿಜೆಪಿ ಸರ್ಕಾರದ ಅವಧಿಯಲ್ಲಿ ಉಡುಪಿ ಜಿಲ್ಲೆ ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರದಲ್ಲಿ ಸಂಪೂರ್ಣ ಕುಸಿದಿದ್ದು, ಈ ಪರಿಸ್ಥಿತಿಯನ್ನು ಸುಧಾರಿಸದಿದ್ದಲ್ಲಿ ಜಿಲ್ಲಾ ಶಿಕ್ಷಣಾಧಿಕಾರಿ ಮತ್ತು ಆರೋಗ್ಯಾಧಿಕಾರಿಗಳನ್ನು ಮನೆಗೆ ಕಳುಹಿಸುವುದಾಗಿ ಖಡಕ್‌ ಎಚ್ಚರಿಕೆ ನೀಡಿದರು.

ಪೃಕೃತಿಯ ಮಡಿಲಲ್ಲಿ ಗಣಪನ ಉದ್ಭವ; ಎಂದಿಗೂ ಬತ್ತಲ್ಲ ಇಲ್ಲಿನ ವಿಸ್ಮಯಕಾರಿ ಕೊಳ..!

ಉಡುಪಿ ಜಿಲ್ಲೆ ಶಿಕ್ಷಣ ಕ್ಷೇತ್ರದಲ್ಲಿ 2017 ಮತ್ತು 2018ರಲ್ಲಿ 1ನೇ ಸ್ಥಾನದಲ್ಲಿತ್ತು. 23ರಲ್ಲಿ 13ನೇ ಸ್ಥಾನಕ್ಕೆ ಕುಸಿದಿದೆ. ಈ ಕುಸಿತ ನಿಮಗೆ ನಾಚಿಕೆ, ಬೇಸರ ತರುವುದಿಲ್ಲವೇ ಎಂದು ಜಿಲ್ಲಾ ಶಿಕ್ಷಣಾಧಿಕಾರಿಯನ್ನು ತರಾಟೆಗೆ ತೆಗೆದುಕೊಂಡರು. ಈ ವರ್ಷ ನಿಮ್ಮ ಕಾರ್ಯಕ್ಷಮತೆ ಹೆಚ್ಚಾಗದಿದ್ದರೆ, ಶಿಕ್ಷಣದಲ್ಲಿ ಜಿಲ್ಲೆಯಲ್ಲಿ ಪ್ರಗತಿ ಕಾಣದಿದ್ದರೆ ನಿಮ್ಮನ್ನು ಶಾಶ್ವತವಾಗಿ ಮನೆಗೆ ಕಳಹಿಸಬೇಕಾಗುತ್ತದೆ ಎಂದು ಹೇಳಿದರು.

ರಾಜ್ಯ ಆರೋಗ್ಯ ಸೂಚ್ಯಾಂಕದಲ್ಲಿ 2015ರಲ್ಲಿ 1ನೇ ಸ್ಥಾನದಲ್ಲಿದ್ದ ಉಡುಪಿ ಜಿಲ್ಲೆ ಈಗ 19ನೇ ಸ್ಥಾನಕ್ಕೆ ಇಳಿದಿದ್ದು, ಈ ಬಗ್ಗೆ ಅಧಿಕಾರಿಗಳಿಂದ ಉತ್ತರ ಕೇಳಿದಾಗ ಸಮರ್ಪಕ ಉತ್ತರ ಬರಲಿಲ್ಲ. ತಕ್ಷಣ, ಪಕ್ಕದಲ್ಲಿದ್ದ ಉಸ್ತುವಾರಿ ಸಚಿವೆ ಲಕ್ಷ್ಮೇ ಹೆಬ್ಬಾಳ್ಕರ್‌ ಅವರಿಗೆ, ಈ ಬಗ್ಗೆ ನಿಗಾ ವಹಿಸಿ, ಸುಧಾರಣೆ ಕಾಣದಿದ್ದರೆ ಡಿಎಚ್‌ಒ ಅವರನ್ನು ಮುಲಾಜಿಲ್ಲದೆ ಸಸ್ಪೆಂಡ್‌ ಮಾಡಿ ಎಂದು ಸೂಚಿಸಿದರು.

PREV
Read more Articles on
click me!

Recommended Stories

ಅಬಕಾರಿ ಭ್ರಷ್ಟಾಚಾರ: ಲೋಕಾಯುಕ್ತದಿಂದ ಜೈಲು ಸೇರಿರುವ ಅಧಿಕಾರಿಗಳ ಬ್ಯಾಂಕ್ ಖಾತೆ ಪರಿಶೀಲನೆ, ಹೆಚ್ಚು ನಗದು ಹಣ ಪಡೆದಿರೋ ಶಂಕೆ
ಶಿಡ್ಲಘಟ್ಟ ಪೌರಾಯುಕ್ತೆ ಆಯ್ತು, ಈಗ ಸಿಎಂ ತವರಲ್ಲೇ ಮಹಿಳಾ ಅಧಿಕಾರಿ ತಲೆ ತೆಗೆಯುತ್ತೇನೆಂದ ಕಿಡಿಗೇಡಿಗಳು!