ಕೊಪ್ಪ ಸಹಕಾರ ಸಾರಿಗೆ ಸಂಸ್ಥೆ ಸಂಕಷ್ಟಕ್ಕೆ ಸ್ಪಂದಿಸಿದ ಸಿಎಂ

By Kannadaprabha NewsFirst Published Sep 11, 2019, 2:31 PM IST
Highlights

ಸಿಎಂ ಯಡಿಯೂರಪ್ಪ ಅವರು ಕೊಪ್ಪ ಸಹಕಾರಿ ಸಾರಿಗೆ ಸಂಸ್ಥೆಗೆ ಸರ್ಕಾರಿ ಸಾರಿಗೆ ಸೌಲಭ್ಯ ನೀಡುವ ಭರವಸೆಯನ್ನು ನೀಡಿದ್ದಾರೆ. ನಷ್ಟದಲ್ಲಿ ನಡೆಯುತ್ತಿದ್ದ ಸಂಸ್ಥೆಗೆ ನೆರವಾಗಲು ಸರ್ಕಾರ ನಿರ್ಧರಿಸಿದ್ದು, ಈ ಮೂಲಕ ಸುಮಾರು 300ಕ್ಕೂ ಹೆಚ್ಚು ಕುಟುಂಬಗಳು ಸಮಸ್ಯೆಯಿಂದ ಪಾರಾದಂತಾಗಿದೆ.

ಚಿಕ್ಕಮಗಳೂರು(ಸೆ.11): ಕೊಪ್ಪ ಕಾರ್ಮಿಕರೇ ಪ್ರಾರಂಭಿಸಿ ಸಹಕಾರ ತತ್ವದಡಿ ನಡೆಸುತ್ತಿರುವ ಏಷ್ಯಾ ಖಂಡದ ಏಕೈಕ ಸಂಸ್ಥೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಕೊಪ್ಪ ಸಹಕಾರ ಸಾರಿಗೆ ಸಂಸ್ಥೆಯನ್ನು ನಷ್ಟದಿಂದ ಪಾರು ಮಾಡಲು ಸರ್ಕಾರ ಸ್ಪಂದಿಸಿದೆ.

ಕೆಎಸ್‌ಆರ್‌ಟಿಸಿ, ಬಿಎಂಟಿಸಿ ಕಾರ್ಮಿಕರಿಗೆ ನೀಡುತ್ತಿರುವ ಸವಲತ್ತು ಕಲ್ಪಿಸುವ ನಿರ್ಧರಿಸಲಾಗಿದೆ. ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರ ನಿರ್ಧಾರ, ಸಂಸದೆ ಸಹಕಾರ ಈಗ ಕಾರ್ಮಿಕ ಕುಟುಂಬಗಳಲ್ಲಿ ಹರ್ಷ ತಂದಿದೆ.

ಸಿಎಂ ಸ್ಪಂದನೆಯಿಂದ ಪಾರಾಯ್ತು 300 ಕುಟುಂಬ:

ಸಂಸ್ಥೆ ನಷ್ಟದಲ್ಲಿರುವುದರಿಂದ 300 ಕಾರ್ಮಿಕ ಕುಟುಂಬಗಳು ಬೀದಿ ಪಾಲಾಗುವ ಆತಂಕದಲ್ಲಿದ್ದವು. ಆಗ ಸಂಸ್ಥೆಯ ಸವಿಸ್ತಾರ ವರದಿಯೊಂದಿಗೆ ಕಾರ್ಮಿಕರ ಪರವಾಗಿ ಸಂಸ್ಥೆಯ ಮುಖ್ಯಸ್ಥರು ಸಿದ್ಧರಾಮಯ್ಯ ನೇತೃತ್ವದ ಅಂದಿನ ಕಾಂಗ್ರೆಸ್‌ ಸರ್ಕಾರ, ನಂತರ ಸಮ್ಮಿಶ್ರ ಸರ್ಕಾರ, ಬಿ.ಎಸ್‌. ಯಡಿಯೂರಪ್ಪ ಅವರ ನೇತೃತ್ವದ ಈಗಿನ ಬಿಜೆಪಿ ಸರ್ಕಾರವೂ ಸೇರಿದಂತೆ ಎಲ್ಲ ಜನಪ್ರತಿನಿಧಿಗಳಿಗೆ ಮನವಿ ಸಲ್ಲಿಸಿ, ನಷ್ಟದಲ್ಲಿರುವ ಕೊಪ್ಪ ಸಾರಿಗೆ ಸಂಸ್ಥೆಯನ್ನು ಉಳಿಸುವಂತೆ ಮನವಿ ಮಾಡಲಾಗಿತ್ತು.

ಸಂಸದೆ ಶೋಭಾ ನೆರವು:

ಜಿಪಂ ಸದಸ್ಯರಾದ ಎಸ್‌.ಎನ್‌. ರಾಮಸ್ವಾಮಿ ಮತ್ತು ಬಿಜೆಪಿ ಜಿಲ್ಲಾಧ್ಯಕ್ಷ ಮತ್ತು ಮಾಜಿ ಶಾಸಕ ಡಿ.ಎನ್‌.ಜೀವರಾಜ್‌ ಈ ವಿಚಾರವಾಗಿ ಸಂಸದೆ ಶೋಭಾ ಅವರಲ್ಲಿ ಚರ್ಚಿಸಿ ವಿಷಯ ತಿಳಿಸಿದ್ದರು.ಸಂಸದೆ ಶೋಭಾ ಕರಂದ್ಲಾಜೆ ಅವರು ಸಿಎಂ ಯಡಿಯೂರಪ್ಪ ಅವರಿಗೆ ಸಹಕಾರ ಸಾರಿಗೆ ಸಂಸ್ಥೆ ವಿಚಾರವನ್ನು ಸವಿಸ್ತಾರವಾಗಿ ಪತ್ರ ಮುಖೇನ ತಿಳಿಸಿ, ಸಹಕಾರ ನೀಡುವಂತೆ ವಿನಂತಿಸಿದ್ದರು. ಇದಕ್ಕೆ ಸ್ಪಂದಿಸಿದ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರು ಸ್ಪಂದಿಸಿರುವುದು ಕಾರ್ಮಿಕರಲ್ಲಿ ಸಂತಸ ತಂದಿದೆ.

ಸಂತ್ರಸ್ತರ ಪುನರ್ವಸತಿಗೆ 249 ಎಕರೆ ಭೂಮಿ ಗುರುತು

ಕೆಎಸ್‌ಆರ್‌ಟಿಸಿ ಹಾಗೂ ಬಿಎಂಟಿಸಿಯವರಿಗೆ ನೀಡುತ್ತಿರುವ ಸವಲತ್ತುಗಳನ್ನು ಸಹಕಾರ ತತ್ವದಡಿ ಕಾರ್ಯಾಚರಿಸುತ್ತಿರುವ ಕೊಪ್ಪ ಸಹಕಾರ ಸಾರಿಗೆ ಸಂಸ್ಥೆಗೂ ತಕ್ಷಣ ಜಾರಿಗೊಳಿಸುವಂತೆ ಸೆ.7ರ ಪತ್ರದಲ್ಲಿ ಆದೇಶಿಸಿದ್ದಾರೆ. ಆ ಮೂಲಕ ಸಂಕಷ್ಟದಲ್ಲಿದ್ದ 300 ಕಾರ್ಮಿಕ ಕುಟುಂಬಗಳಿಗೆ ನೆರವಿನಹಸ್ತ ಚಾಚಿದ್ದಾರೆ. ಮುಖ್ಯಮಂತ್ರಿಯವರ ಈ ನಿರ್ಧಾರದಿಂದ ಕೆಲಸ ಕಳೆದುಕೊಳ್ಳಬೇಕಾಗಿದ್ದ ಕಾರ್ಮಿಕ ಕುಟುಂಬಗಳು ಹರ್ಷ ವ್ಯಕ್ತಪಡಿಸಿವೆ.

ಶಿವಮೊಗ್ಗದಲ್ಲಿನ್ನು ಪ್ರತಿದಿನ ವಾಹನ ದಾಖಲೆ ಪರಿಶೀಲನೆ..!

click me!