Chitradurga : ಬರದ ನಾಡಿನ ಅನ್ನದಾತರಿಗೆ ಹರ್ಷದ ವರ್ಷ

By Kannadaprabha NewsFirst Published Dec 31, 2022, 7:24 AM IST
Highlights

89 ವರ್ಷಗಳ ನಂತರ ವಿವಿ ಸಾಗರ ಕೋಡಿಬಿದ್ದದ್ದು, 12 ವರ್ಷಗಳ ನಂತರ ನಾಯಕನಹಟ್ಟಿಹಿರೇಕೆರೆ ತುಂಬಿ ಗುರುತಿಪ್ಪೇರುದ್ರಸ್ವಾಮಿ ತೆಪ್ಪೋತ್ಸವದ ವೈಭವ ಜನರು ಕಣ್‌ತುಂಬಿಕೊಂಡದ್ದು, ಮುರುಘಾಶ್ರೀ ಪೋಕ್ಸೊ ಪ್ರಕರಣದಲ್ಲಿ ಜೈಲು ಪಾಲಾಗಿ ಭಕ್ತರು ಘಾಸಿಗೊಂಡದ್ದು ಈ ವರ್ಷದ ಹೈಲೆಟ್‌

ಚಿತ್ರದುರ್ಗ ವರ್ಷದ ಹಿನ್ನೋಟ - 2022

ಚಿಕ್ಕಪ್ಪನಹಳ್ಳಿ ಷಣ್ಮುಖ

 ಚಿತ್ರದುರ್ಗ (ಡಿ.31) :

2023ಕ್ಕೆ ಎಂಟ್ರಿ ಕೊಡಲು ಕೇವಲ 24 ಗಂಟೆ ಮಾತ್ರ ಬಾಕಿ ಉಳಿದಿವೆ. ಸದಾ ಬರವನ್ನು ಉಂಡು, ಹಾಸಿ ಹೊದ್ದು ಮಲಗುತ್ತಿದ್ದ ಚಿತ್ರದುರ್ಗ ಜಿಲ್ಲೆಗೆ ಈ ವರ್ಷ ವರುಣ ಖುಷಿ ಸಂಗತಿ ಹಂಚಿದ್ದನಾದರೂ, ಜಿಲ್ಲೆಯ ಬಹುತೇಕ ಕೆರೆಗಳು ಹಲವು ದಶಕದ ನಂತರ ತುಂಬಿ ಜನತೆ ಸಂತಸ ತಂದಿದ್ದವು. ಈ ಮಧ್ಯೆ ಮುರುಘಾಶರಣರು ಅಪ್ರಾಪ್ತರಿಗೆ ಲೈಂಗಿಕ ಕಿರುಕುಳ ನೀಡಿ ಪೋಕ್ಸೋ ಪ್ರಕರಣದಲ್ಲಿ ಜೈಲು ಪಾದಾದದ್ದು ಸಿಹಿ ನೆನಪುಗಳನ್ನು ಮಸುಕಾಗಿಸಿತ್ತು.

2022ನ್ನು ಸಿಹಿ ಕಹಿಗಳ ಸಮ್ಮಿಶ್ರಣವೇ ಎಂದು ವ್ಯಾಖ್ಯಾನಿಸಲು ಸಾಧ್ಯವಾಗದಷ್ಟರ ಮಟ್ಟಿಗೆ ಮುರುಘಾಶ್ರೀ ಪೋಕ್ಸೋ ಪ್ರಕರಣ ಚಿತ್ರದುರ್ಗ ಜಿಲ್ಲೆಯ ಘಾಸಿ ಮಾಡಿತ್ತು. ಸರಿದು ಹೋಗುವ ಗತಕಾಲದ ಘಟನಾವಳಿಗಳಿಗೆ ಸೆಪ್ಟಂಬರ್‌ ಒಂದರ ದಿನಾಂಕ ವೈರುಧ್ಯಗಳ ದಾಖಲು ಮಾಡಿತು. 89 ವರ್ಷಗಳ ನಂತರ ಹಿರಿಯೂರಿನ ವಾಣಿ ವಿಲಾಸ ಸಾಗರ ಜಲಾಶಯ ಭರ್ತಿಯಾಗಿ ವೇದಾವತಿ ರೈತರ ಮೊಗದಲ್ಲಿ ಹರ್ಷ ಮೂಡಿಸಿದರೆ 800 ವರ್ಷಗಳಷ್ಟುಸುದೀರ್ಘ ಇತಿಹಾಸವಿರುವ ಮುರುಘಾಮಠದ ಪೀಠಾಧಿಪತಿ ಶಿವಮೂರ್ತಿ ಮುರುಘಾ ಶರಣರ ಅಂದೇ ಸಂಜೆ ಫೋಕ್ಸೋ ಪ್ರಕರಣದಲ್ಲಿ ಪೊಲೀಸರು ಬಂಧಿಸಿ ಕರೆದೊಯ್ದಿದ್ದರು.

88 ವರ್ಷಗಳ ಬಳಿಕ ವಾಣಿ ವಿಲಾಸ ಸಾಗರ ಡ್ಯಾಂ ಕೋಡಿ, ಹರಿದು ಬರ್ತಿರೋ ಜನಸಾಗರ

ದೇಶದ ವಿವಿಧ ಕಡೆ ಸೇರಿದಂತೆ ವಿದೇಶದಲ್ಲಿಯೂ ಬಸವಕೇಂದ್ರಗಳ ತೆರೆದು ಬಸವತತ್ವ ಪ್ರಚಾರದಲ್ಲಿ ನಿರತರಾಗಿದ್ದ, ಬಸವ ಮಾರ್ಗದಲ್ಲಿ ನಡೆದ ಮಹನೀಯರಿಗೆ ಬಸವಶ್ರಿ ಪ್ರಶಸ್ತಿ ನೀಡುತ್ತ ಸಾಗಿದ್ದ ಮುರುಘಾಶ್ರೀ ಸ್ವಯಂ ಬಸವತತ್ವ ವಿರುದ್ಧದ ಹಾದಿಯ ನಡಿಗೆಯಲ್ಲಿ ಕಾಲು ಜಾರಿ ಬಿದ್ದ ಆರೋಪ ಹೊತ್ತು ಜೈಲು ಪಾಲಾದದ್ದು 2022 ರ ಕರಾಳ ಸನ್ನಿವೇಷಗಳಿಗೆ ಸಾಕ್ಷಿಯಾಗಿತ್ತು. ಬಸವಶ್ರೀ ಪ್ರಶಸ್ತಿ ಪಡೆದವರು ಮುಜುಗರಕ್ಕೆ ಒಳಗಾಗಬೇಕಾಯಿತು. ಒಂದಿಬ್ಬರು ಪ್ರಶಸ್ತಿ ವಾಪಾಸ್ಸು ಕೂಡಾ ಮಾಡಿದರು. ಮೇರು ನಟ ಪುನೀತ್‌ ರಾಜಕುಮಾರ್‌ಗೆ ಇದೇ ವರ್ಷ ಮರಣೋತ್ತರ ಬಸವಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು.

ಮುರುಘಾಶ್ರೀ ಜೈಲು ಪಾಲಾದ ನಂತರ ಒಂದಿಷ್ಟುಸರಣಿ ಅವಘಡಗಳು ನಡೆದವು. ಶರಣ ಸಂಸ್ಕೃತಿ ಉತ್ಸವದ ವೇಳೆ ಮುರುಘಾಮಠದಲ್ಲಿ ನಾಡಿನ ಗಣ್ಯರ ಜೊತೆ ಇದ್ದ ಮುರುಘಾ ಶ್ರೀಗಳ 45 ಕ್ಕೂ ಹೆಚ್ಚು ಫೋಟೋಗಳ ಕಳ್ಳತನವಾಗಿತ್ತು. ನಂತರ ಇದೇ ಪ್ರಕರಣದಲ್ಲಿ ಮಾಜಿ ಶಾಸಕ ಎಸ್‌.ಕೆ.ಬಸವರಾಜನ್‌ ಹಾಗೂ ಅವರ ಪತ್ನಿ ಸೌಭಾಗ್ಯ ಬಸವರಾಜನ್‌ ಮೇಲೆ ಕಳ್ಳತನ ಆರೋಪದ ಪ್ರಕರಣ ದಾಖಲಾಗಿತ್ತು. ಇದಲ್ಲದೇ ಮುರುಘಾಶ್ರೀ ಮೇಲೆ ಪೋಕ್ಸೋ ಪ್ರಕರಣ ದಾಖಲಿಸುವಲ್ಲಿ ಪಿತೂರಿ ನಡೆಸಲಾಗಿದೆ ಎಂಬ ಗಂಭೀರ ಆರೋಪದ ಮೇರೆಗೆ ಬಸವರಾಜನ್‌ ಹಾಗೂ ಸೌಭಾಗ್ಯ ಕೂಡಾ ಜೈಲುಪಾಲಾದರು. ನಂತರ ಇವರಿಬ್ಬರೂ ಜಾಮೀನಿನ ಮೇಲೆ ಹೊರ ಬಂದಿದ್ದರು.

ಮುರುಘಾಶ್ರೀ ಜೈಲು ಪಾಲಾದ ನಂತರ ತಮಗಿರುವ ಸೋಲೋ ಟ್ರಸ್ಟಿಅಧಿಕಾರ ಬಳಸಿ ನಿವೃತ್ತ ನ್ಯಾಯಾಧೀಶ ವಸ್ತ್ರಮಠ ಅವರನ್ನು ಮುರುಘಾಮಠಕ್ಕೆ ಆಡಳಿತಾಧಿಕಾರಿಯಾಗಿ ನೇಮಕ ಮಾಡಿದ್ದರೆ ನಂತರದ ಬೆಳವಣಿಗೆಯಲ್ಲಿ ರಾಜ್ಯಸರ್ಕಾರ ನಿವೃತ್ತ ಐಎಎಸ್‌ ಅಧಿಕಾರಿ ವಸ್ತ್ರದ ಅವರನ್ನು ಆಡಳಿತಾಧಿಕಾರಿಯಾಗಿ ನೇಮಿಸಿತ್ತು. ರಾಜ್ಯದ ಧಾರ್ಮಿಕ ಇತಿಹಾಸದಲ್ಲಿಯೇ ಪ್ರಮುಖ ಮಠವೊಂದಕ್ಕೆ ರಾಜ್ಯ ಸರ್ಕಾರ ಆಡಳಿತಾಧಿಕಾರಿ ನೇಮಕ ಮಾಡಿದ ಸನ್ನಿವೇಶಕ್ಕೆ ಇದು ಸಾಕ್ಷಿಯಾಗಿತ್ತು.

ರಾಜಕೀಯ ಚಟುವಟಿಕೆ

ಪ್ರಮುಖ ರಾಜಕೀಯ ಚಟುವಟಿಕೆಗಳಿಗೆ ಚಿತ್ರದುರ್ಗ ಜಿಲ್ಲೆ 2022ರಲ್ಲಿ ಸಾಕ್ಷಿಯೊದಗಿಸಿತ್ತು.

  •  ಸ್ಥಳೀಯ ಸಂಸ್ಥೆಗಳ ಜನಪ್ರತಿನಿಧಿಗಳ ಸಮಾವೇಶವೊಂದನ್ನು ಚಿತ್ರದುರ್ಗದ ಅನುಭವ ಮಂಟಪದಲ್ಲಿ ಆಯೋಜಿಸಲಾಗಿದ್ದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಡ್ಡಾ ಪಾಲ್ಗೊಂಡಿದ್ದರು.
  • ದಾವಣಗೆರೆಯಲ್ಲಿ ನಡೆದ ಸಿದ್ದರಾಮೋತ್ಸವದಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದ ಕಾಂಗ್ರೆಸ್‌ ವರಿಷ್ಠ ರಾಹುಲ್‌ಗಾಂಧಿ ಮುರುಘಾಮಠಕ್ಕೆ ಭೇಟಿ ನೀಡಿ ಮುರುಘಾಶ್ರೀಗಳ ಆಶೀರ್ವಾದ ಪಡೆದಿದ್ದರು. ಲಿಂಗಧೀಕ್ಷೆ ಪಡೆದುಕೊಂಡು ತೆರಳಿದ್ದರು.
  •  ಭಾರತ್‌ ಜೋಡೋ ಯಾತ್ರೆ ಚಿತ್ರದುರ್ಗ ಜಿಲ್ಲೆಯಲ್ಲಿ ಸಾಗಿದಾಗ ನಾಲ್ಕು ದಿನಗಳ ಕಾಲ ರಾಹುಲ್‌ ಜಿಲ್ಲೆಯ ರಸ್ತೆಗಳ ಮೇಲೆ ನಡೆದು ಜನಸಮುದಾಯಗಳ ಜೊತೆ ಬೆರೆತಿದ್ದರು. ಜಿನುಗಿದ ಮಳೆ ಹನಿಗಳ ನಡುವೆಯೂ ರಾಹುಲ್‌ ಹೆಜ್ಜಿ ಹಾಕಿದ್ದು ವಿಶೇಷವಾಗಿತ್ತು.
  •  ಮಾದಾರ ಚನ್ನಯ್ಯ ಗುರುಪೀಠಕ್ಕೆ ಆರೆಸ್ಸೆಸ್‌್ಸ ಮುಖ್ಯಸ್ಥ ಮೋಹನ್‌ ಭಾಗವತ್‌ ಭೇಟಿ ನೀಡಿದ್ದು ರಾಜಕೀಯ, ಸಾಂಸ್ಕೃತಿಕವಾಗಿ ಚಿತ್ರದುರ್ಗ ರಾಷ್ಟ್ರವ್ಯಾಪಿ ಸುದ್ದಿಗೆ ಗ್ರಾಸವಾಗಿತ್ತು.
  • ಜಿಲ್ಲಾ ಉಸ್ತುವಾರಿ ಸಚಿವರಾಗಿ ಕಾರ್ಯನಿರ್ವಹಿಸುತ್ತಿದ್ದ ಶ್ರೀರಾಮುಲು ಅವರಿಂದ ಬಿ.ಸಿ.ಪಾಟೀಲ್‌ಗೆ ಉಸ್ತುವಾರಿ ಗಿರಿ ಹಸ್ತಾಂತರಕ್ಕೂ ಜಿಲ್ಲೆ ಸಾಕ್ಷಿಯಾಯಿತು,.

2022 ರ ಪ್ರಮುಖ ಘಟನಾವಳಿಗಳು:

  •  ಮೇ. 15 ಮಾಜಿ ಶಾಸಕ ಎಸ್‌.ಕೆ.ಬಸವರಾಜನ್‌ ಮುರುಘಾಮಠಕ್ಕೆ ರೀ ಎಂಟ್ರಿ. ಆಡಳಿತಾಧಿಕಾರಿಯಾಗಿ ನೇಮಕದ ಆದೇಶ ಹೊರಡಿಸಿದ ಶಿವಮೂರ್ತಿ ಮುರುಘಾಶರಣರು.
  •  ಮೇ.27-- ಮುರುಘಾಮಠಕ್ಕೆ ಉತ್ತರಾಧಿಕಾರಿಯಾಗಿ ಬಸವಾಧಿತ್ಯ ನೇಮಕ. ಗೌಪ್ಯವಾಗಿ ಉತ್ತರಾಧಿಕಾರಿ ನೇಮಕ ಮಾಡಿ ನಂತರ ಅಧಿಕೃತ ಘೋಷಣೆ ಮಾಡಿದ ಶಿಮುಶ.
  • ಆಗಸ್ಟ್‌ 29- ಶಾಲಾ ನಾಟಕದಲ್ಲಿ ಭಗತ್‌ ಸಿಂಗ್‌ ಪಾತ್ರದಲ್ಲಿ ಅಭಿನಯ ಮಾಡುತ್ತಿದ್ದ ಎಸ್‌ಎಲ್‌ವಿ ಶಿಕ್ಷಣ ಸಂಸ್ಥೆಯ ಏಳನೇ ತರಗತಿ ವಿದ್ಯಾರ್ಥಿ ಸಂಜಯಗೌಡ ರಿಹರ್ಸಲ್‌ ಮಾಡಲೆಂದು ತಮ್ಮ ಮನೆಯ ಫ್ಯಾನ್‌ಗೆ ನೇಣುಹಾಕಿಕೊಂಡು ಸಾವಿಗೀಡಾಗಿದ್ದ.
  •  ಅಕ್ಟೋಬರ್‌ 25 ಚಿತ್ರದುರ್ಗದ ಅವೈಜ್ಞಾನಿಕ ಡಿವೈಡರ್‌ಗಳಿಗೆ ಮೂವರು ಬಲಿ. ಪೋಷಕರಿಗೆ ಒಬ್ಬರೇ ಮಕ್ಕಳಿದ್ದವರ ಸಾವು.
  • ನವೆಂಬರ್‌ 1 ಯುವತಿಯೋರ್ವಳು ಶಾಸಕ ಜಿ.ಎಚ್‌.ತಿಪ್ಪಾರೆಡ್ಡಿ ಅವರಿಗೆ ನಗ್ನ ವಿಡಿಯೋ ರವಾನಿಸಿ ಹನಿ ಟ್ರ್ಯಾಪ್‌ ಮಾಡಲು ಯತ್ನ.
  • ನವೆಂಬರ್‌ 22 -89 ವರ್ಷಗಳ ನಂತರ ಭರ್ತಿಯಾಗಿ ಕೋಡಿ ಬಿದ್ದ ವಿವಿ ಸಾಗರ ಜಲಾಶಯಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬಾಗಿನ ಸಮರ್ಪಣೆ.
  • ಡಿಸೆಂಬರ್‌ 5 - ಚಿತ್ರದುರ್ಗದ ವಿಪಿ ಬಡಾವಣೆಯ ವೈದ್ಯೆಡಾ.ರೂಪಾ ಪಿಸ್ತೂಲ್‌ ನಿಂತ ತಲೆಗೆ ಹೊಡೆದುಕೊಂಡು ಆತ್ಮಹತ್ಯೆ ಜಿಲ್ಲೆಯ ಜನರ ಬೆಚ್ಚಿ ಬೀಳಿಸಿದ್ದ ಘಟನೆ.
  • ಡಿಸೆಂಬರ್‌ 18- ಮೊದಲ ಬಾರಿಗೆ ಚಿತ್ರದುರ್ಗದಲ್ಲಿ ರಾಜ್ಯಮಟ್ಟದ ಒನಕೆ ಓಬವ್ವ ಜಯಂತಿ ಆಚರಣೆ. ಸಿಎಂ ಸೇರಿದಂತೆ ಹಲವರು ಭಾಗಿ.

 

Chitradurga: ಕಾಂಗ್ರೆಸ್ ಟಿಕೆಟ್ ಗಾಗಿ ಜಿಲ್ಲೆಯ 6 ಕ್ಷೇತ್ರದ ಆಕಾಂಕ್ಷಿಗಳ ಮೆಗಾ ಫೈಟ್

click me!