ಹರಜಾತ್ರೆಯಲ್ಲಿ ನಿಲುವು ಪ್ರಕಟ: ವಚನಾನಂದ ಶ್ರೀ

By Kannadaprabha NewsFirst Published Dec 31, 2022, 7:20 AM IST
Highlights
  • ಹರಜಾತ್ರೆಯಲ್ಲಿ ನಿಲುವು ಪ್ರಕಟ: ವಚನಾನಂದ ಶ್ರೀ
  • ಪಂಚಮಸಾಲಿ ಸಮಾಜದಿಂದ ಮೀಸಲಾತಿ ಸ್ವಾಗÜತಿಸುವುದೂ ಇಲ್ಲ, ವಿರೋಧಿಸುವುದೂ ಇಲ್ಲ
  • ಗೊಂದಲಗಳು ಬಗೆಹರೆಯಲಿ

ದಾವಣಗೆರೆ (ಡಿ.31) : ಪಂಚಮಸಾಲಿ ಸಮುದಾಯವನ್ನು ಮೀಸಲಾತಿಯನ್ನು 3ಬಿ ವರ್ಗದಿಂದ 2ಡಿ ಪ್ರವರ್ಗಕ್ಕೆ ಸೇರಿಸಿ ರಾಜ್ಯ ಸರ್ಕಾರ ಕೈಗೊಂಡ ನಿರ್ಣಯ ಸದ್ಯಕ್ಕೆ ಸ್ವಾಗತಿಸಲು ಅಥವಾ ವಿರೋಧಿಸಲು ಹೋಗುವುದಿಲ್ಲ. ಕಾನೂನು ತಜ್ಞರು, ಮೀಸಲಾತಿ ಹೋರಾಟಗಾರರು, ಸಮಾಜದ ಹಿರಿಯರೊಂದಿಗೆ ಚರ್ಚಿಸಿದ ನಂತರ ಜ.14 ಮತ್ತು 15ರಂದು ನಡೆಯುವ ಹರಜಾತ್ರೆಯನ್ನು ನಮ್ಮ ಅಭಿಪ್ರಾಯ ಪ್ರಕಟಿಸುತ್ತೇವೆ ಎಂದು ಹರಿಹರ ಪೀಠದ ಶ್ರೀ ವಚನಾನಂದ ಸ್ವಾಮೀಜಿ ತಿಳಿಸಿದರು.

ಹರಿಹರ(harihar)ದ ಪಂಚಮಸಾಲಿ ಪೀಠ(Panchamasali peetha)ದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಂಚಮಸಾಲಿಗೆ 2ಎ ಮೀಸಲಾತಿ(Panchamasali 2A reservation)ಗೆ ನಮ್ಮ ಬೇಡಿಕೆ ಇತ್ತು. ಆದರೆ, ಸರ್ಕಾರ 2ಬಿ ಪ್ರವರ್ಗದಿಂದ 2ಡಿ ಪ್ರವರ್ಗಕ್ಕೆ ಸೇರಿಸಿ ಕೈಗೊಂಡ ನಿರ್ಧಾರವನ್ನು ಸದ್ಯ ಸ್ವಾಗತಿಸುವುದಿಲ್ಲ. ವಿರೋಧಿಸುವುದೂ ಇಲ್ಲ ಎಂದರು.

 

ಸರ್ಕಾರದಿಂದ 10 ಕೋಟಿ ಬಂದಿದ್ದು ಮಠದ ಅಭಿವೃದ್ಧಿಗೆ: ವಚನಾನಂದ ಶ್ರೀ

ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಜಯಪ್ರಕಾಶ ಹೆಗಡೆ ಪಂಚಮಸಾಲಿ ಸಮಾಜದ ಸಮೀಕ್ಷೆಯ ಮಧ್ಯಂತರ ವರದಿ ನೀಡಿದ್ದಾರೆ. ಅಂತಿಮ ವರದಿ ಸಲ್ಲಿಕೆ ನಂತರ ಸಮುದಾಯಕ್ಕೆ ಮೀಸಲಾತಿ ನೀಡುವ ವಿಚಾರದಲ್ಲಿ ಸ್ಪಷ್ಟತೆ ಪ್ರಕಟವಾಗಲಿದೆ. ಸರ್ಕಾರ ಪ್ರಕಟಿಸಿದ ಮೀಸಲಾತಿ ನಿರ್ಧಾರದಲ್ಲೇ ಸಾಕಷ್ಟುಗೊಂದಲಗಳಿವೆ. ಇಡಬ್ಲ್ಯುಎಸ್‌ನಿಂದ ಮೀಸಲಾತಿ ತೆಗೆದು, ಒಬಿಸಿಗೆ ಮೀಸಲಾತಿ ನೀಡಲು ಸಾಧ್ಯವೆ? ಇಡಬ್ಲ್ಯುಎಸ್‌ನಿಂದ ನಮಗೆ ಮೀಸಲಾತಿ ನೀಡಿದರೆ, ನಾವು ಕೇಂದ್ರ ಸರ್ಕಾರದ ಒಬಿಸಿಯಿಂದ ಹೊರ ಬರುವಂತಾಗುತ್ತದೆ. ಆಗ ನಮ್ಮ ಮಕ್ಕಳಿಗೆ ದೊಡ್ಡ ಅನ್ಯಾಯ ಮಾಡಿದಂತಾಗುತ್ತದೆ ಎಂದು ಹೇಳಿದರು.

ಸುಪ್ರೀಂ ಕೋರ್ಚ್‌ ನ್ಯಾಯಾಧೀಶರು, ತಜ್ಞರು, ಸಮಾಜದ ಹಿರಿಯರು, ಮೀಸಲಾತಿ ಹೋರಾಟಗಾರರ ಜೊತೆಗೆ ಚರ್ಚಿಸುತ್ತೇವೆ. ಜಯಪ್ರಕಾಶ ಹೆಗಡೆಯವರ ಮಧ್ಯಂತರ ವರದಿ ಪಡೆದು, 2ಡಿ ಮಾಡಿರಬಹುದು. ಶ್ರೀಪೀಠದಲ್ಲಿ ಜ. 14 ಮತ್ತು 15ರಂದು ನಡೆಯಲಿರುವ ಹರಜಾತ್ರೆ ಮಹೋತ್ಸವ ಹಾಗೂ 5ನೇ ವರ್ಷದ ಪೀಠಾರೋಹಣ ಕಾರ್ಯಕ್ರಮದ ವೇಳೆಗೆ ಮೀಸಲಾತಿ ವಿಚಾರವಾಗಿ ಒಂದು ಸ್ಪಷ್ಟತೆ ಸಿಗಲಿದೆ ಎಂದು ತಿಳಿಸಿದರು.

ಪಂಚಮಸಾಲಿ ಸಮಾಜ ಸಂಘದ ಮಾಜಿ ರಾಜ್ಯಾಧ್ಯಕ್ಷ ಬಸವರಾಜ ದಿಂಡೂರು ಮಾತನಾಡಿ, ಪಂಚಮಸಾಲಿ ಸಮಾಜಕ್ಕೆ ಮೀಸಲಾತಿ ಘೋಷಿಸಿರುವ ಸರ್ಕಾರದ ನಿರ್ಣಯದಲ್ಲೇ ಸಾಕಷ್ಟುಗೊಂದಲಗಳಿವೆ ಎಂದು ಅಸಮಾಧಾನ ಹೊರ ಹಾಕಿದರು.

ಜ. 14ರಿಂದ ಹರ ಜಾತ್ರೆ, ಮೀಸಲಾತಿ ಜಾಗೃತಿ ಸಮಾವೇಶ

ದಾವಣಗೆರೆ: ಹರಿಹರದ ಪಂಚಮಸಾಲಿ ಪೀಠದಲ್ಲಿ ಜ.14 ಮತ್ತು 15ರಂದು ಹರ ಜಾತ್ರೆ-2023, ಐದನೇ ವರ್ಷದ ಪೀಠಾರೋಹಣ ಹಾಗೂ ಬೃಹತ್‌ ಮೀಸಲಾತಿ ಜನ ಜಾಗೃತಿ ಸಮಾವೇಶವನ್ನು ಆಯೋಜಿಸಲಾಗಿದೆ ಎಂದು ಶ್ರೀ ವಚನಾನಂದ ಸ್ವಾಮೀಜಿ ತಿಳಿಸಿದರು.

ಶ್ರೀಪೀಠದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹರ ಜಾತ್ರೆ ಸಮಿತಿ ಅಧ್ಯಕ್ಷರಾಗಿ ಪ್ರಕಾಶ ಪಾಟೀಲರನ್ನು ಆಯ್ಕೆ ಮಾಡಲಾಗಿದೆ. ಶ್ರೀಪೀಠದಿಂದ ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ಹಾಗೂ ಕೇಂದ್ರದಲ್ಲಿ ಒಬಿಸಿ ಮೀಸಲಾತಿ ದೊರಕಿಸಿಕೊಡಲು ಹೋರಾಟ ನಡೆಸಲಾಗುವುದು ಎಂದರು.

ಅಖಂಡ ಪಂಚಮಸಾಲಿ ಸಮುದಾಯ ಬಾಂಧವರಲ್ಲಿ ಜಾಗೃತಿ, ಒಗ್ಗಟ್ಟು ಮೂಡಿಸುವ ದೃಷ್ಟಿಯಿಂದ ಈ ಸಲ ಹರ ಜಾತ್ರೆಯಲ್ಲಿ ಬೃಹತ್‌ ಮೀಸಲಾತಿ ಜನ ಜಾಗೃತಿ ಸಮಾವೇಶ ನಡೆಯಲಿದೆ. ಹರ ಜಾತ್ರೆಯಲ್ಲಿ ರೈತರತ್ನ, ಯುವರತ್ನ, 5ನೇ ಪೀಠಾರೋಹಣ ಸಮಾರಂಭ ನಡೆಸಲಾಗುವುದು ಎಂದು ಹೇಳಿದರು.

ಜ.14ರ ಬೆಳಿಗ್ಗೆ 8.30ಕ್ಕೆ ಹರಿಹರದ ಶ್ರೀ ಹರಿಹರೇಶ್ವರ ದೇವಸ್ಥಾನ ಬಳಿಯಿಂದ ಪಂಚಮಸಾಲಿ ಬಾಂಧವರು ತಲೆ ಮೇಲೆ ಬುತ್ತಿ ಗಂಟು ಹೊತ್ತು, ಮೆರವಣಿಗೆ ಮೂಲಕ ಶ್ರೀ ಪೀಠಕ್ಕೆ ಆಗಮಿಸುವರು. ಅದೇ ಬೆಳಿಗ್ಗೆ 11ರಿಂದ ಮಧ್ಯಾಹ್ನ 1ರವರೆಗೆ ಜಾಗೃತಿ ಸಮಾವೇಶ, ಮಧ್ಯಾಹ್ನ 1ರಿಂದ 3 ಗಂಟೆವರೆಗೆ ರೈತರತ್ನ ಸಮಾವೇಶ ನಡೆಯಲಿದೆ ಎಂದು ತಿಳಿಸಿದರು.

ದಿ.15ರ ಬೆಳಿಗ್ಗೆ ಯುವರತ್ನ ಸಮಾವೇಶ, ಮಧ್ಯಾಹ್ನ 3ರಿಂದ 5ನೇ ವರ್ಷದ ಪೀಠಾರೋಹಣ ಸಮಾರಂಭ ನಡೆಯಲಿದೆ. ನಾಡಿನ ವಿವಿಧ ಮಠಾಧೀಶರು, ಜನಪ್ರತಿನಿಧಿಗಳು, ಚಿಂತಕರು, ಸಾಧಕರು, ಸಮುದಾಯ ಬಾಂಧವರು, ಸಮಾಜದ ಮುಖಂಡರು ಪಾಲ್ಗೊಳ್ಳುವರು ಎಂದು ಶ್ರೀ ವಚನಾನಂದ ಸ್ವಾಮೀಜಿ ಮಾಹಿತಿ ನೀಡಿದರು.

ಪಂಚಮಸಾಲಿ 2ಎ ಮೀಸಲಾತಿ: ಡಿಕೆಶಿ, ಸಿದ್ದು ಭೇಟಿಯಾದ ವಚನಾನಂದ ಶ್ರೀ

ಶ್ರೀಪೀಠದ ಪ್ರಧಾನ ಧರ್ಮದರ್ಶಿ ಬಿ.ಸಿ.ಉಮಾಪತಿ, ಸಮಾಜದ ಹಿರಿಯ ಮುಖಂಡರಾದ ಬಾವಿ ಬೆಟ್ಟಪ್ಪ, ಬಸವರಾಜ ದಿಂಡೂರು, ಪಿ.ಡಿ. ಶಿರೂರು, ಧರ್ಮದರ್ಶಿ ಚಂದ್ರಶೇಖರ ಪೂಜಾರ, ಹರ ಜಾತ್ರೆ ಮಹೋತ್ಸವ ಸಮಿತಿ ಅಧ್ಯಕ್ಷ ಪ್ರಕಾಶ ಪಾಟೀಲ್‌, ವಕೀಲ ಉಚ್ಚಂಗಿದುರ್ಗ ಬಸವರಾಜ ಇತರರು ಇದ್ದರು.

click me!