ಮಡಿಕೇರಿ: ವಲಸೆಯಿಂದಾಗಿ ಶಾಲೆಯಿಂದ ಹೊರಗುಳಿದ ಮಕ್ಕಳು

By Kannadaprabha NewsFirst Published Dec 3, 2019, 10:12 AM IST
Highlights

ಮಧ್ಯಾಹ್ನದ ಬಿಸಿಯೂಟ, ಉಚಿತ ಸಮವಸ್ತ್ರ, ಪಠ್ಯಪುಸ್ತಕ ವಿತರಣೆ ಸೇರಿದಂತೆ ಶಿಕ್ಷಣ ಇಲಾಖೆಯಿಂದ ಹತ್ತು ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡರೂ ಕೊಡಗು ಜಿಲ್ಲೆಯಲ್ಲಿ 2019-20ನೇ ಸಾಲಿನಲ್ಲಿ 70 ಮಕ್ಕಳು ಶಾಲೆಯಿಂದ ಹೊರಗುಳಿದಿದ್ದಾರೆ.

ಮಡಿಕೇರಿ(ಡಿ.03) : ಮಧ್ಯಾಹ್ನದ ಬಿಸಿಯೂಟ, ಉಚಿತ ಸಮವಸ್ತ್ರ, ಪಠ್ಯಪುಸ್ತಕ ವಿತರಣೆ ಸೇರಿದಂತೆ ಶಿಕ್ಷಣ ಇಲಾಖೆಯಿಂದ ಹತ್ತು ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡರೂ ಕೊಡಗು ಜಿಲ್ಲೆಯಲ್ಲಿ 2019-20ನೇ ಸಾಲಿನಲ್ಲಿ 70 ಮಕ್ಕಳು ಶಾಲೆಯಿಂದ ಹೊರಗುಳಿದಿದ್ದಾರೆ.

ಜಿಲ್ಲೆಯ ಮಡಿಕೇರಿ ತಾಲೂಕಿನಲ್ಲಿ 4, ಸೋಮವಾರಪೇಟೆ ತಾಲೂಕಿನಲ್ಲಿ 48 ಹಾಗೂ ವಿರಾಜಪೇಟೆ ತಾಲೂಕಿನಲ್ಲಿ 18 ಮಕ್ಕಳು ಶಾಲೆಯಿಂದ ಹೊರಗುಳಿದಿದ್ದಾರೆ. ಈ ಪೈಕಿ ಜಿಲ್ಲೆಯಲ್ಲಿ ಒಟ್ಟು 23 ಮಕ್ಕಳನ್ನು ಶಿಕ್ಷಣಾಧಿಕಾರಿಗಳು ಹಾಗೂ ಸಂಬಂಧಿಸಿದ ಶಿಕ್ಷಕರು ಮುಖ್ಯ ವಾಹಿನಿಗೆ ತಂದಿದ್ದಾರೆ. ಇದರಲ್ಲಿ 9 ಬಾಲಕರು ಹಾಗೂ 14 ಬಾಲಕಿಯರು. ಮಡಿಕೇರಿ ತಾಲೂಕಿನಲ್ಲಿ ಒಂದು, ಸೋಮವಾರಪೇಟೆ ತಾಲೂಕಿನಲ್ಲಿ 11 ಹಾಗೂ ವಿರಾಜಪೇಟೆ ತಾಲೂಕಿನಲ್ಲಿ 10 ಮಕ್ಕಳನ್ನು ಮುಖ್ಯ ವಾಹಿನಿಗೆ ತರುವಲ್ಲಿ ಶಿಕ್ಷಕರು ಯಶಸ್ವಿಯಾಗಿದ್ದಾರೆ.

ಸುಬ್ರಹ್ಮಣ್ಯದಲ್ಲಿ 314 ಮಂದಿಯಿಂದ ಎಡೆಸ್ನಾನ

ವಲಸೆ ಪ್ರಮಖ ಕಾರಣ :

ಕೊಡಗು ಜಿಲ್ಲೆಯಲ್ಲಿ ಕೂಲಿ ಕೆಲಸಕ್ಕೆಂದು ಹೊರ ಜಿಲ್ಲೆ ಹಾಗೂ ಹೊರ ರಾಜ್ಯಗಳಿಂದ ಜನರು ವಲಸೆ ಬರುತ್ತಾರೆ. ಕಾಫಿ ಕೊಯ್ಲಿನ ಅವಧಿಯಲ್ಲಿ ಮಾತ್ರ ಅವರಿಗೆ ಇಲ್ಲಿ ಕೆಲಸ ನೀಡಲಾಗುತ್ತದೆ. ಇದಾದ ನಂತರ ಮರಳಿ ಅವರು ತಮ್ಮ ಊರಿಗೆ ತೆರಳಿತ್ತಾರೆ. ಆದರೆ ಇದರಿಂದಾಗಿ ಮಕ್ಕಳು ಶಿಕ್ಷಣದಿಂದಾಗಿ ವಂಚಿತರಾಗುತ್ತಾರೆ. ಶಾಲೆಗೆ ಮಕ್ಕಳನ್ನು ಸೇರಿಸಿದ ಬಳಿಕ ಕೆಲಸ ಪೂರ್ಣಗೊಂಡು ಅರ್ಧದಲ್ಲೇ ಮಕ್ಕಳ ಶಿಕ್ಷಣವನ್ನು ಮೊಟಕುಗೊಳಿಸುವಂತೆ ಮಾಡಲಾಗುತ್ತದೆ. ಇಂತಹ ಪ್ರಕರಣಗಳಿಂದಲೇ ಕೊಡಗು ಜಿಲ್ಲೆಯಲ್ಲಿ ಸಾಕಷ್ಟುಮಕ್ಕಳು ಶಿಕ್ಷಣದಿಂದ ದೂರ ಉಳಿದಿದ್ದಾರೆ. ಪ್ರಸ್ತುತ ಸಾಲಿನಲ್ಲಿ ಜಿಲ್ಲಾ ಶಿಕ್ಷಣಾಧಿಕಾರಿಗಳು, ಶಿಕ್ಷಕರು ಶಾಲೆಯಿಂದ ಹೊರಗುಳಿದ ಮತ್ತೆ ಸೇರ್ಪಡೆಗೊಳಿಸುವಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.

ಕೆಲವು ಮಕ್ಕಳಿಗೆ ಶಿಕ್ಷಣವೇ ಇಲ್ಲ:

ಇದೀಗ ಕೊಡಗಿನಲ್ಲಿ ಕಾಫಿ ಕೊಯ್ಲಿನ ಸಮಯವಾಗಿರುವುದರಿಂದ ಜಿಲ್ಲೆಯಲ್ಲಿ ಅಸ್ಸಾಂ, ಪಶ್ಚಿಮ ಬಂಗಾಳ ಸೇರಿದಂತೆ ಹಲವು ಕಡೆಗಳಿಂದ ಕಾರ್ಮಿಕರು ಬಂದು ನೆಲೆಸಿದ್ದಾರೆ. ಕೆಲವು ಕಾರ್ಮಿಕರು ಇಲ್ಲೇ ವಾಸ್ತವ್ಯ ಕಂಡುಕೊಂಡಿದ್ದಾರೆ. ಆದರೆ ಅವರ ಮಕ್ಕಳಿಗೆ ಶಿಕ್ಷಣ ನೀಡಲು ನಿರುತ್ಸಾಹ ತೋರುತ್ತಿದ್ದಾರೆ. ಇದರಿಂದಾಗಿ ಇಂದಿಗೂ ಕೂಡ ಜಿಲ್ಲೆಯಲ್ಲಿ ಕಾರ್ಮಿಕರ ಮಕ್ಕಳು ಶಿಕ್ಷಣದಿಂದ ದೂರ ಉಳಿದಿದ್ದಾರೆ.

ಹೊರಗುಳಿಯುವುದು ಎಂದರೆ?:

ಶಾಲೆಗೆ ದಾಖಲಾದ 1ರಿಂದ 10ನೇ ತರಗತಿಯ ಯಾವುದೇ ವಿದ್ಯಾರ್ಥಿ 7 ದಿನ ತರಗತಿಗೆ ಗೈರು ಹಾಜರಾದರೆ ಶಾಲೆಯ ಮುಖ್ಯ ಶಿಕ್ಷಕರು ವಿದ್ಯಾರ್ಥಿಯನ್ನು ತಗರತಿಗೆ ಕರೆತರುವ ಪ್ರಯತ್ನ ಮಾಡಬೇಕು. ಇಷ್ಟಾದರೂ ವಿದ್ಯಾರ್ಥಿ ಬಾರದೆ ಹೋದರೆ ಅಂತಹ ಮಗವನ್ನು ‘ಶಾಲೆಯಿಂದ ಹೊರಗುಳಿದ ವಿದ್ಯಾರ್ಥಿ’ ಎಂದು ಪರಿಗಣಿಸಲಾಗುತ್ತದೆ.

ಶಾಲೆ ಬಿಡಲು ಕಾರಣ :

ಕೊಡಗು ಜಿಲ್ಲೆಯಲ್ಲಿ ವಲಸೆ ಕಾರಣಕ್ಕೆ ಹೆಚ್ಚಿನ ಮಕ್ಕಳು ಶಾಲೆಯನ್ನು ಬಿಟ್ಟಿದ್ದಾರೆ. ಶಿಕ್ಷಣದಲ್ಲಿ ನಿರಾಸಕ್ತಿ, ಅನಾರೋಗ್ಯವೂ ಶಾಲೆ ಬಿಡಲು ಇನ್ನೊಂದು ಮುಖ್ಯ ಕಾರಣವಾಗಿದೆ. ಋುತುಮತಿಯಾಗಿರುವ ಕಾರಣಕ್ಕಾಗಿ ಬಾಲಕಿಯರನ್ನು ಶಾಲೆ ಕಳುಹಿಸಲು ಪೋಷಕರು ಹಿಂದೇಟು ಹಾಕುವ ಪ್ರಕರಣ ಸಹ ದಾಖಲಾಗಿದೆ.

ವಾಹನ ತಪಾಸಣೆ ವೇಳೆ ಮೂಲ ದಾಖಲೆ ಕಡ್ಡಾಯ

ಶೈಕ್ಷಣಿಕ ವರ್ಷದಲ್ಲಿ ಶಾಲೆ ಬಿಟ್ಟ70 ವಿದ್ಯಾರ್ಥಿಗಳಲ್ಲಿ 23 ಮಕ್ಕಳನ್ನು ಮತ್ತೆ ಶಾಲೆಗೆ ಸೇರಿಸುವಲ್ಲಿ ಯಶಸ್ವಿಯಾಗಿದ್ದೇವೆ. ವಲಸೆ ಹೋಗುವ ಕುಟುಂಬದ ಮಕ್ಕಳು ಯಾವುದೇ ಮಾಹಿತಿ ನೀಡದೆ ಶಾಲೆಗಳನ್ನು ಬಿಡುತ್ತಾರೆ. ಶಾಲೆಯಿಂದ ಹೊರಗುಳಿದ್ದ ಮಕ್ಕಳನ್ನು ಶಾಲೆಗೆ ಕರೆತರಲು ಅಗತ್ಯವಿರುವ ಕಾರ್ಯಕ್ರಮ ಮಾಡಲಾಗುತ್ತಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರು ಮಚ್ಚಾಡೋ ಹೇಳಿದ್ದಾರೆ.

-ವಿಘ್ನೇಶ್‌ ಎಂ ಭೂತನಕಾಡು

click me!