World Tourism Day: ಚಿಕ್ಕಮಗಳೂರು ರಾಜ್ಯದ ಪ್ರವಾಸೋದ್ಯಮ ರಾಜಧಾನಿ

By Kannadaprabha NewsFirst Published Sep 28, 2022, 9:35 AM IST
Highlights
  • ಚಿಕ್ಕಮಗಳೂರು ರಾಜ್ಯದ ಪ್ರವಾಸೋದ್ಯಮ ರಾಜಧಾನಿ
  • ವಿಶ್ವ ಪ್ರವಾಸೋದ್ಯಮ ದಿನಾಚರಣೆಯಲ್ಲಿ ಡಿಸಿ ರಮೇಶ್‌
  • ಜಿಲ್ಲಾ ಪ್ರವಾಸೋದ್ಯಮ ಇಲಾಖೆಯ ಅಧಿಕೃತ ವೆಬ್‌ಸೈಟ್‌ಗೆ ಚಾಲನೆ

ಚಿಕ್ಕಮಗಳೂರು (ಸೆ.28) : ವಿಶ್ವ ಪ್ರವಾಸೋದ್ಯಮ ದಿನಾಚರಣೆ ಅಂಗವಾಗಿ ನಗರಾಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ.ಎ.ಬಸವರಾಜ(ಭೈರತಿ) ಅವರು ಚಿಕ್ಕಮಗಳೂರು ಜಿಲ್ಲೆಯ ಪ್ರವಾಸೋದ್ಯಮ ಇಲಾಖೆಯ ಅಧಿಕೃತ ವೆಬ್‌ಸೈಟ್‌ನ್ನು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಉದ್ಘಾಟಿಸಿದರು.

 

ಪ್ರವಾಸೋದ್ಯಮ ಬೆಳವಣಿಗೆಗೆ ಧಾರವಾಡ ಒಳ್ಳೆಯ ವಾತಾವರಣ ಹೊಂದಿದೆ: ತಹಶೀಲ್ದಾರ್‌ ಹಿರೇಮಠ

ಇದೇ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಕೆ.ಎನ್‌.ರಮೇಶ್‌ ಮಾತನಾಡಿ, ಉತ್ತಮವಾದಂತಹ ಸಾಕಷ್ಟುಪ್ರವಾಸಿ ತಾಣಗಳನ್ನು ಹೊಂದಿರುವ ಚಿಕ್ಕಮಗಳೂರು ಜಿಲ್ಲೆಯು ಪ್ರವಾಸೋದ್ಯಮದಲ್ಲಿ ರಾಜ್ಯದ ರಾಜಧಾನಿಯಾಗಿದೆ ಎಂದರು. ಪ್ರವಾಸಿಗರು ಮುಳ್ಳಯ್ಯನಗಿರಿ, ದತ್ತಪೀಠ, ಮಾಣಿಕ್ಯಧಾರ, ಝರಿ ಫಾಲ್ಸ್‌, ಕೆಮ್ಮಣ್ಣುಗುಂಡಿ, ಅಬ್ಬಿ ಫಾಲ್ಸ್‌, ಕುದುರೆಮುಖ, ಕಳಸ, ಹೊರನಾಡು, ಶೃಂಗೇರಿ, ಎತಿನ್ತಭುಜ, ಬಲ್ಲಾಳರಾಯನದುರ್ಗ, ರಾಣಿಝರಿ, ಸಂಸೆ-ಟೀ-ಎಸ್ಟೇಟ್‌, ದೇವರ ಮನೆ, ಗಾಳಿಕೆರೆ ವ್ಯೂ ಪಾಯಿಂಟ್‌ ಮುಂತಾದ ಕೆಲವೇ ಪ್ರವಾಸಿ ತಾಣಗಳಿಗೆ ಭೇಟಿ ನೀಡುತ್ತಿದ್ದಾರೆ. ಆದರೆ ವಿಶೇಷವಾಗಿ ಬೆಳಕಿಗೆ ಬಾರದ ಪ್ರವಾಸಿ ತಾಣಗಳಾದ ಉಕ್ಕಡ ಫಾಲ್ಸ್‌, ಬಂಡಜ್ಜಿ ಫಾಲ್ಸ್‌, ಕ್ಯಾತನಮಕ್ಕಿ ವ್ಯೂ ಪಾಯಿಂಟ್‌, ಕೊಡಿಗೆ ಫಾಲ್ಸ್‌, ರಂಗನಬೆಟ್ಟ, ಬಂಡೆಕಲ್ಲುಗುಡ್ಡ, ಕಣಿವೆ ವಾಟರ್‌ ಫಾಲ್ಸ್‌, ಪಂಚುಕಲ್ಲು ವ್ಯೂ ಪಾಯಿಂಟ್‌, ಕಿಗ್ಗಾ ಇಂತಹ ಹಲವಾರು ಪ್ರವಾಸಿ ತಾಣಗಳಿಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಹೇಳಿದರು.

ಛಾಯಾಚಿತ್ರಗ್ರಾಹಕರಿಂದ ಸಂಗ್ರಹವಾದಂತಹ ಜಿಲ್ಲೆಯ ಪ್ರವಾಸಿ ತಾಣಗಳ ಚಿತ್ರಗಳು ಪ್ರವಾಸೋದ್ಯಮ ಇಲಾಖೆಯ ವೆಬ್‌ಸೈಟ್‌ನಲ್ಲಿ ಬಿಡುಗಡೆಗೊಂಡು ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರವಾಸೋದ್ಯಮವನ್ನು ಉತ್ತೇಜನಗೊಳಿಸಲು ಸಹಾಯವಾಗುತ್ತವೆ. ಅಲ್ಲದೆ ಕರ್ನಾಟಕ ರಾಜ್ಯದ ಮಾದರಿಯಲ್ಲಿ ಟೂರಿಸಂ ಸೊಸೈಟಿಯನ್ನು ಒಳಗೊಂಡಂತೆ ಸಲಹೆ ಸೂಚನೆಗಳನ್ನು ರೂಪು ರೇಷೆಗಳನ್ನು ನಿರ್ಮಿಸಿ ಪ್ರವಾಸೋದ್ಯಮಕ್ಕೆ ಉತ್ತೇಜಿಸಲಾಗುತ್ತಿದೆ ಎಂದು ತಿಳಿಸಿದರು.

ಉಡುಪಿ ಜಿಲ್ಲೆಯ ಪ್ರವಾಸಿ ತಾಣಗಳ ಪ್ರಚಾರಕ್ಕೆ ಬ್ಲಾಗರ್ಸ್ ಮೀಟ್

ಯೂತ್‌ ಪೋಟೋಗ್ರಫಿ ಸೊಸೈಟಿ ಕಾರ್ಯದರ್ಶಿ ಮಂಜು ವಿಕಾಸ್‌ ಶಾಸ್ತ್ರಿ ಪ್ರವಾಸೋದ್ಯಮ ಇಲಾಖೆ ವೆಬ್‌ಸೈಟ್‌ ಬಗ್ಗೆ ಮಾಹಿತಿ ನೀಡಿದರು. ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಬಿ.ಆರ್‌. ರೂಪಾ, ಯೂತ್‌ ಪೋಟೋಗ್ರಫಿ ಸೊಸೈಟಿ ನಿರ್ದೇಶಕ ಹಾರ್ದಿಕ್‌ ಪಿ.ಷಾ, ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕ ಎಂ.ಆರ್‌.ಲೋಹಿತ್‌, ಚಿಕ್ಕಮಗಳೂರು ತಹಶೀಲ್ದಾರ್‌ ವಿನಾಯಕ ಸಾಗರ್‌ ಉಪಸ್ಥಿತರಿದ್ದರು.

click me!