
ಚಿಕ್ಕಮಗಳೂರು (ಫೆ.15): ವಿಘ್ನನಾಶಕ ವಿನಾಯಕನ ದೇವಾಲಯಗಳು ಎಲ್ಲೆಡೆ ಕಂಡು ಬರುವುದು ಸಾಮಾನ್ಯ ಸಂಗತಿ ಇದರ ನಡುವೆ ಅಪರೂಪದಲ್ಲಿ ಅಪರೂಪವೆನ್ನಲಾದ ಶ್ರೀ ಬಲಮುರಿ ಗಣಪತಿಯ ಶಿಲಾಮಯ ದೇಗುಲ ಚಿಕ್ಕಮಗಳೂರು ತಾಲೂಕಿನ ಆಲ್ದೂರಿನಲ್ಲಿ ನಿರ್ಮಾಣಗೊಂಡಿದ್ದು ಇದೇ ತಿಂಗಳು ಫೆ.23 ರಂದು ಲೋಕಾರ್ಪಣೆಗೊಳ್ಳಲಿದೆ. ದಾನಿಗಳು , ಸರ್ಕಾರದ ಅನುದಾನದಲ್ಲಿ ನಿರ್ಮಾಣವಾಗಿರುವ ದೇವಸ್ಥಾನ ಆಲ್ದೂರಿನ ಮುಖ್ಯ ರಸ್ತೆಯಲ್ಲಿ ಭವ್ಯವಾಗಿ ನಿರ್ಮಾಣಗೊಂಡಿದೆ.
ಕೋಟ್ಯಾಂತರ ವೆಚ್ಚದಲ್ಲಿ ನಿರ್ಮಾಣವಾಗಿರುವ ಭವ್ಯ ದೇವಸ್ಥಾನ : 48 ವರ್ಷಗಳ ಹಿಂದೆ 22.2.1977 ರಲ್ಲಿ ಮಾಜಿ ಶಾಸಕ ಸಿ. ಎ. ಚಂದ್ರೇಗೌಡ ಅವರ ನೇತೃತ್ವದಲ್ಲಿ. ಜಾತ್ರೆ ವೇಳೆ ಶ್ರೀ ಮಳಲೂರಮ್ಮನವರನ್ನು ಭಕ್ತಾದಿಗಳಿಗೆ ಪೂಜೆಗೆ, ದರ್ಶನಕ್ಕೆ ಅನುಕೂಲವಾಗುವಂತೆ ತಂದು ಕೂರಿಸುತ್ತಿದ್ದ ಆಲ್ದೂರಿನ ಹೃದಯ ಭಾಗವಾದ ಗ್ರಾಮ ಠಾಣಾ ಜಾಗದಲ್ಲಿ ಶ್ರೀ ಬಲಮುರಿ ಗಣಪತಿ ದೇವಾಲಯವನ್ನು ನಿರ್ಮಿಸಲಾಗಿತ್ತು.ಶಿಥಿಲಾವಸ್ತೆಯಲ್ಲಿದ್ದ ಆ ದೇವಾಲಯವನ್ನು ಕೆಡವಿ ಇದೀಗ ಸಿ. ಎ. ಚಂದ್ರೇಗೌಡರ ಪುತ್ರ ಸಿ. ಸುರೇಶ್ ಅವರ ಮುಂದಾಳತ್ವದಲ್ಲಿ ಮೂರೂವರೆ ಕೋಟಿ ರೂ ವೆಚ್ಚದಲ್ಲಿ ದ್ರಾವಿಡ ಶೈಲಿಯಲ್ಲಿ ನೂತನ ದೇವಾಲಯವನ್ನು ಸುಂದರವಾಗಿ ನಿರ್ಮಿಸಲಾಗಿದೆ.
ದ್ರಾವಿಡ ಶೈಲಿಯಲ್ಲಿರುವ ನೂತನ ದೇವಾಲಯ : 6 ಸಾವಿರ ಅಡಿಯಷ್ಟು ವಿಶಾಲವಾದ ನಿವೇಶನದಲ್ಲಿ ಕುಸುರಿ ಕಲೆಯುಳ್ಳ40 ಕಂಬಗಳ ಸಂಪೂರ್ಣ ಶಿಲಾಮಯ ದೇಗುಲ ನಿರ್ಮಾಣಗೊಂಡಿದ್ದು. ದೇವಾಲಯದ ಮೇಲ್ಚಾವಣಿಯಲ್ಲಿನ ಅದ್ಭುತ ಶಿಲ್ಪಕಲೆ. ದೇಗುಲದ ಮೇಲ್ಭಾಗದಲ್ಲಿ ಪ್ರತಿಷ್ಠಾಪಿಸಿರುವ ಶಿವ ಪಾರ್ವತಿ, ಸುಬ್ರಹ್ಮಣ್ಯ, ಅಯ್ಯಪ್ಪ ಸ್ವಾಮಿ, ಲಕ್ಷ್ಮಿ, ವೀಣಾ ಪಾಣಿ ಶಾರದೆಯ ವಿಗ್ರಹಗಳು, ಮುಖ್ಯದ್ವಾರದ ಮುಂಭಾಗ ನಿರ್ಮಿಸಿರುವ ಕಲ್ಲಿನ ಆನೆಗಳು ಕಣ್ಮನ ಸೆಳೆಯುತ್ತಿವೆ. ಭಕ್ತರಿಗೆ ಸುಲಭ ದರ್ಶನಕ್ಕೆ ಅನುಕೂಲ ವಾಗುವಂತೆ ದೇವಾಲಯಕ್ಕೆ ಮೂರು ಬಾಗಿಲುಗಳನ್ನು, ಅರ್ಚಕರಿಗೆ ದೇಗುಲದ ಆವರಣದಲ್ಲೇ ಮನೆಯನ್ನು ಸಹ ನಿರ್ಮಿಸಲಾಗಿದೆ.
ಇದನ್ನೂ ಓದಿ: ಮೈಸೂರು ಪ್ರಕರಣ ಬೆನ್ನಲ್ಲೇ ಚಿಕ್ಕಮಗಳೂರಿನ ಮನೆಗಳ ಮೇಲೆ ಕಲ್ಲು ತೂರಾಟ
ದೇವಾಲಯ ಲೋಕಾರ್ಪಣೆಯ ಧಾರ್ಮಿಕ ವಿಧಿ ವಿಧಾನಗಳು ಫೆ 21ರಿಂದ ಆರಂಭಗೊಳ್ಳಲಿದ್ದು ಅಂದು ಯಾಗ ಶಾಲೆ ಪ್ರವೇಶ. ಗುರು ಪ್ರಾರ್ಥನೆ. ಗಣಪತಿ ಹೋಮ. ವಾಸ್ತು ರಾಕ್ಷೋಘ್ನ ಹೋಮ. ನವಗ್ರಹ ಹೋಮ. ಪ್ರಾಯಶ್ಚಿತ್ತ ಹೋಮ. 22 ರಂದು ಕಲಶ ಪ್ರತಿಷ್ಠಾಪನೆ. ಬಿಂಬಶುದ್ದಿ. ಜಲಾದಿವಾಸ. ಆದಿವಾಸ ಹೋಮ. ಭಜನಾ ಮೆರವಣಿಗೆ. ವೀರಗಾಸೆ ಪ್ರದರ್ಶನ ಜರುಗಲಿದೆ.23ರಂದು ಶ್ರೀ ಕ್ಷೇತ್ರ ಹೊರನಾಡಿನ ಶ್ರೀ ಅನ್ನಪೂರ್ಣೇಶ್ವರಿ ದೇವಾಲಯದ ಧರ್ಮ ಕರ್ತ ಡಾ. ಜಿ. ಭೀಮೇಶ್ವರ ಜೋಶಿ ಅವರಿಂದ ಶ್ರೀ ಗಣಪತಿ ವಿಗ್ರಹದ ಪ್ರತಿಷ್ಠಾಪನೆ ಮತ್ತು ಕಳಸಾರೋಹಣ ಕಳಶಾಭಿಷೇಕ ನಡೆಯಲಿದೆ.
ಆದಿ ಚುಂಚನಗಿರಿ ಶೃಂಗೇರಿ ಶಾಖಾ ಮಠದ ಶ್ರೀ ಗುಣನಾಥ ಸ್ವಾಮೀಜಿ. ಬೇರುಗಂಡಿ ಮಠದ ಶ್ರೀ ರೇಣುಕ ಮಹಾಂತ ಶಿವಾಚಾರ್ಯ ಸ್ವಾಮೀಜಿ ಪಾಲ್ಗೊಳ್ಳಲಿದ್ದಾರೆ.24 ರಂದು ಪಂಚಾಮೃತ ಅಭಿಷೇಕ. 25 ರಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಅವರಿಂದ ದೇವಾಲಯದ ಲೋಕಾರ್ಪಣೆ ಜರುಗಲಿದ್ದು. ಆದಿಚುಂಚನಗಿರಿ ಮಹಾ ಸಂಸ್ಥಾನದ ಶ್ರೀ ಡಾ. ನಿರ್ಮಲಾನಂದನಾಥ ಸ್ವಾಮೀಜಿ. ಛಲವಾದಿ ಗುರುಪೀಠದ ಶ್ರೀ ಬಸವನಾಗಿದೇವ ಶರಣರು. ಜಿಲ್ಲಾ ಉಸ್ತುವಾರಿ ಸಚಿವ ಕೆ. ಜೆ. ಜಾರ್ಜ್. ಪ್ರವಾಸೋದ್ಯಮ ಸಚಿವ ಹೆಚ್. ಕೆ. ಪಾಟೀಲ್. ಉಪ ಸಭಾಪತಿ ಎಂ. ಕೆ. ಪ್ರಾಣೇಶ್. ಶಾಸಕರಾದ ಸಿ.ಟಿ. ರವಿ. ಟಿ.ಡಿ. ರಾಜೇಗೌಡ. ನಯನ ಮೋಟಮ್ಮ. ಎಚ್. ಡಿ. ತಮ್ಮಯ್ಯ. ಎಸ್.ಎಲ್. ಭೋಜೇಗೌಡ. ಡಾ. ಧನಂಜಯ ಸರ್ಜಿ. ಮಾಜಿ ಸಭಾಪತಿ ಬಿ. ಎಲ್. ಶಂಕರ್. ಸಂಸದರಾದ ಕೋಟ ಶ್ರೀನಿವಾಸ ಪೂಜಾರಿ. ಜೈರಾಮ್ ರಮೇಶ್. ಆಲ್ದೂರು ಗ್ರಾಪಂ ಅಧ್ಯಕ್ಷೆ ಶ್ರೀದೇವಿ ಕುಮಾರಸ್ವಾಮಿ ಭಾಗವಹಿಸಲಿದ್ದಾರೆ.ದೇವಾಲಯ ಲೋಕಾರ್ಪಣೆ ಅಂಗವಾಗಿ 23ರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಕೂಡ ನಡೆಯುಲಿದೆ.
ಇದನ್ನೂ ಓದಿ: Chikkamagaluru: ಸರ್ವೇಯರ್ ಸಾವಿನ ಪ್ರಕರಣಕ್ಕೆ ಬಿಗ್ ಟ್ವಿಸ್ಟ್: ಕಛೇರಿಯಲ್ಲಿ ಡೆತ್ನೋಟ್ ಪತ್ತೆ!