ಬೀಟಮ್ಮ ಗ್ಯಾಂಗ್‌ನಲ್ಲಿರುವ ಹಂತಕ ಸಲಗ ಭೀಮ: ಸಿಕ್ಕ-ಸಿಕ್ಕ ಕಡೆ ಸಂಚಾರ ಮಾಡುತ್ತಿರುವ ಕಾಡಾನೆ ಹಿಂಡು

By Govindaraj SFirst Published Jan 29, 2024, 8:12 PM IST
Highlights

ಕಳೆದ ಮೂರು ದಿನಗಳಿಂದ ಚಿಕ್ಕಮಗಳೂರು ತಾಲ್ಲೂಕಿನ ಕೆ.ಆರ್.ಪೇಟೆ ಸುತ್ತ ಮುತ್ತಲಿನ ಪ್ರದೇಶದಲ್ಲಿ ಸುತ್ತಾಡುತ್ತಿದ್ದ ಬೀಟಮ್ಮ ತಂಡದ 28 ಆನೆಗಳ ಹಿಂಡು ಇಂದು  ನಗರ ಸಮೀಪದ ಸಿರಗಾಪುರದ ಅಂಬರ್ ವ್ಯಾಲಿ ಶಾಲೆ ಬಳಿ ಬೀಡುಬಿಟ್ಟಿದ್ದು, ಸಾರ್ವಜನಿಕರನ್ನು ಆತಂಕಕ್ಕೆ ತಳ್ಳಿದೆ.

ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು 

ಚಿಕ್ಕಮಗಳೂರು (ಜ.29): ಕಳೆದ ಮೂರು ದಿನಗಳಿಂದ ಚಿಕ್ಕಮಗಳೂರು ತಾಲ್ಲೂಕಿನ ಕೆ.ಆರ್.ಪೇಟೆ ಸುತ್ತ ಮುತ್ತಲಿನ ಪ್ರದೇಶದಲ್ಲಿ ಸುತ್ತಾಡುತ್ತಿದ್ದ ಬೀಟಮ್ಮ ತಂಡದ 28 ಆನೆಗಳ ಹಿಂಡು ಇಂದು  ನಗರ ಸಮೀಪದ ಸಿರಗಾಪುರದ ಅಂಬರ್ ವ್ಯಾಲಿ ಶಾಲೆ ಬಳಿ ಬೀಡುಬಿಟ್ಟಿದ್ದು, ಸಾರ್ವಜನಿಕರನ್ನು ಆತಂಕಕ್ಕೆ ತಳ್ಳಿದೆ. ಮುಂಜಾಗ್ರತಾ ಕ್ರಮವಾಗಿ ಜಿಲ್ಲಾಡಳಿತ ಸುತ್ತಲಿನ ಏಳೆಂಟು ಹಳ್ಳಿಗಳಲ್ಲಿ ಸೆಕ್ಷನ್ 144 ಪ್ರಕಾರ ನಿಷೇದಾಜ್ಞೆ ಹೊರಡಿಸಿದ್ದು, ಆ ವ್ಯಾಪ್ತಿಯ ಎಲ್ಲಾ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಿದೆ.

28 ಆನೆಗಳ ಹಿಂಡಿನಲ್ಲಿ 10 ಕ್ಕೂ ಹೆಚ್ಚು ಮರಿಗಳು: ಬೇಲೂರಿನ ಬಿಕ್ಕೋಡು ಮಾರ್ಗವಾಗಿ ಚಿಕ್ಕಮಗಳೂರು ತಾಲ್ಲೂಕಿನ ಕೆ.ಆರ್.ಪೇಟೆ ಪ್ರವೇಶಿಸಿದ್ದ ಬೀಟಮ್ಮ ಒಳಗೊಂಡ 28 ಆನೆಗಳ ಹಿಂಡಿನಲ್ಲಿ 10 ಕ್ಕೂ ಹೆಚ್ಚು ಮರಿಗಳು ಹಾಗೂ ಕಾಲರ್ ಹಾಕಿರುವ ಭೀಮ ಆನೆಯೂ ಇದೆ.ನಿನ್ನೆಯಷ್ಟೇ ಮಾವಿನ ಕೆರೆ ಗ್ರಾಮದಬಳಿ ಭತ್ತದ ಬಣವೆಗಳನ್ನು ಮನಸೋಇಚ್ಛೆ ಎಳೆದಾಡಿ ತಿಂದುಹಾಕಿದ್ದ ಆನೆಗಳು ಪಕ್ಕದ ಪ್ಲಾಂಟೇಶನ್ನಲ್ಲಿ ರಾತ್ರಿ ಕಳೆದಿದ್ದವು. ಸ್ಥಳದಲ್ಲೇ ಠಿಕಾಣಿ ಹೂಡಿದ್ದ 70 ಮಂದಿ ಅರಣ್ಯ ಸಿಬ್ಬಂದಿ ಕಟ್ಟೆಚ್ಚರ ವಹಿಸಿದ್ದರು.ಇಂದು ಬೆಳಗಾಗುತ್ತಿದ್ದಂತೆ ಆನೆಗಳ ಪಯಣ ಮತ್ತೆ ಆರಂಭವಾಯಿತು. ನೇರವಾಗಿ ಅವು ನಗರದ ಕಡೆಗೆ ದಾರಿ ಹಿಡಿದಿದ್ದವು. ಇದರಿಂದ ಅರಣ್ಯ ಸಿಬ್ಬಂದಿಗಳೂ ವಿಚಲಿತಗೊಂಡಿದ್ದರು. 

ಕಾಫಿನಾಡಿಗೆ ಎಂಟ್ರಿ ಕೊಟ್ಟ ಬೀಟಮ್ಮ ಅಂಡ್ ಗ್ಯಾಂಗ್: ಸ್ಥಳಕ್ಕೆ ಅರಣ್ಯಾಧಿಕಾರಿಗಳು ದೌಡು!

ಕದ್ರಿ ಮಿದ್ರಿವರೆಗೆ ನಿರಂತರ ನಡೆದು ಬಂದ ಆನೆಗಳ ಮಾರ್ಗ ಬದಲಿಸಲು ಅರಣ್ಯ ಸಿಬ್ಬಂದಿ ಹರಸಾಹಸ ಪಟ್ಟರು. ಆವೇಳೆಗಾಗಲೇ ಸುತ್ತಲಿನ ಜನರಿಗೆ ಎಚ್ಚರಿಕೆಯಿಂದಿರಲು ಸೂಚನೆ ನೀಡಿ, ಸುತ್ತಲಿನ ಶಾಲೆಗಳಿಗೆ ರಜೆ ನೀಡಲಾಯಿತು.ಆನೆಗಳ ಹಿಂಡು ಅಂಬರ್ ವ್ಯಾಲಿ ಶಾಲೆಯ ಹಿಂಭಾಗದ ಪ್ಲಾಂಟೇಶನ್ ಪ್ರವೇಶಿಸಿ ವಿಶ್ರಮಿಸಲಾರಂಭಿಸಿದವು. ಇದರಿಂದ ಜನರು ಸೇರಿದಂತೆ ಅರಣ್ಯ ಇಲಾಖೆ ಸ್ವಲ್ಪ ನಿಟ್ಟುಸಿರು ಬಿಡುವಂತಾಯಿತು. ಕೇವಲ ಒಂದೆರಡು ಕಿ.ಮೀ.ಕ್ರಮಿಸಿದ್ದರೆ ಆನೆಗಳ ಹಿಂಡು ರಾಂಪುರ ಪ್ರವೇಶಿಸಿಬಿಡುತ್ತಿದ್ದವು.ಆನೆಗಳ ಹಿಂಡಿನಲ್ಲಿ ಅಪಾಯಕಾರಿ ಭೀಮ ಆನೆ ಸೇರಿದಂತೆ ಮರಿಗಳು ಇರುವುದು ಅರಣ್ಯ ಇಲಾಖೆಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಈ ಹಿನ್ನೆಲೆಯಲ್ಲಿ ದ್ರೋಣ್ ಬಳಸಿ ಅವುಗಳ ಮೇಲೆ ನಿಗಾ ಇರಿಸಲಾಗಿದೆ. ಸಂಜೆ ವೇಳೆಗೆ ಆನೆಗಳನ್ನು ಬೇಲೂರು ಕಡೆಯ ಅರಣ್ಯಕ್ಕೆ ಓಡಿಸಲು ಕಾರ್ಯತಂತ್ರ ರೂಪಿಸಿವೆ.
 
ಕಾರ್ಯಾಚರಣೆಗೆ ಕುಮ್ಕಿ ಆನೆಗಳು: ಆಂಬರ್ ವ್ಯಾಲಿ ಶಾಲೆಯ ಅರಣ್ಯದಲ್ಲಿ ಬೀಡುಬಿಟ್ಟಿರುವ ಆನೆಗಳ ಹಿಂಡನ್ನು ಅರಣ್ಯಕ್ಕೆ ಹಿಮ್ಮೆಟ್ಟಿಸಲು 8 ಕುಮ್ಕಿ ಆನಗೆಳನ್ನು ಬಳಸಿಕೊಳ್ಳಲು ತೀರ್ಮಾನಿಸಲಾಗಿದೆ ಎಂದು ಜಿಲ್ಲಾಧಿಕಾರಿ ಸಿ.ಎನ್.ಮೀನಾ ನಾಗರಾಜ್ ತಿಳಿಸಿದ್ದಾರೆ.ಅರಣ್ಯ ಇಲಾಖೆಯ ಎಲ್ಲಾ ಅಧಿಕಾರಿ, ಸಿಬ್ಬಂಧಿಗಳ ಜೊತೆಗೆ ಮೂಡಿಗೆರೆಯ ಆನೆ ಕಾರ್ಯಪಡೆಯ ಮಾರ್ಗದರ್ಶನ ಪಡೆಯಲಾಗುತ್ತಿದ್ದು, ದುಬಾರೆ ಆನೆ ಶಿಬರದಿಂದ 4 ಮತ್ತು ನಾಗರಹೊಳೆ ಆನೆ ಶಿಬಿರದಿಂದ 4 ಕುಮ್ಕಿ ಆನೆಗಳನ್ನು ಕರೆಸಿಕೊಳ್ಳಲಾಗುತ್ತಿದೆ ಎಂದು ತಿಳಿಸಿದ್ದಾರೆ.

ಆತಂಕ ಪಡುವ ಅಗತ್ಯವಿಲ್ಲ: ಸಾರ್ವಜನಿಕರು ಆತಂಕ ಪಡುವ ಅಗತ್ಯವಿಲ್ಲ ಎಂದಿರುವ ಜಿಲ್ಲಾಧಿಕಾರಿಗಳು ಸುತ್ತಮುತ್ತಲ ಗ್ರಾಮಗಳಾದ ಮುಗ್ತಿಹಳ್ಳಿ, ಕದ್ರಿಮಿದ್ರಿ, ಶ್ರೀನಿವಾಸ ನಗರ, ಆದಿಶಕ್ತಿನಗರ, ಕೆಸವಿನ ಮನೆ, ಮತ್ತಾವರ, ನಲ್ಲೂರು, ರಾಂಪುರ, ಗವನಹಳ್ಳಿ, ತೇಗೂರು, ದಂಬದಹಳ್ಳಿ ಮತ್ತು ದುಮ್ಮಿಗೆರೆ ಗ್ರಾಮಗಳು ಮತ್ತು ಚಿಕ್ಕಮಗಳೂರು ನಗರ ಹಾಗೂ ಸುತ್ತಮುತ್ತಲಿನ ಜನರು ಜಾಗರೂಕತೆಯಿಂದಿರಲು ಹಾಗೂ ಅರಣ್ಯ ಇಲಾಖೆಯ ಕಾರ್ಯಾಚರಣೆಗೆ ಸಹಕರಿಸಲು ಕೋರಿದ್ದಾರೆ.

ಅಯೋಧ್ಯೆಯಲ್ಲಿ ಜಗದ್ಗುರು ಇಲ್ಲ: ಅಲ್ಲಿರೋದು ವಿಶ್ವಗುರು: ಪ್ರಧಾನಿ ಮೋದಿ ವಿರುದ್ದ ಬಿ.ಕೆ.ಹರಿಪ್ರಸಾದ್ ಟೀಕೆ

11 ಗ್ರಾಮಗಳಲ್ಲಿ ನಿಷೇದಾಜ್ಞೆ: ನಗರದ ಕಡೆಗೆ ದಾಂಗುಡಿ ಇಟ್ಟಿರುವ 28 ಆನೆಗಳನ್ನು ಅರಣ್ಯಕ್ಕೆ ಓಡಿಸುವ ಕಾರ್ಯಾಚರಣೆ ಕೈಗೊಳ್ಳಲಿರುವ ಹಿನ್ನೆಲೆಯಲ್ಲಿ ಮುಗ್ತಿಹಳ್ಳಿ, ಕದ್ರಿಮಿದ್ರಿ, ಶ್ರೀನಿವಾಸ ನಗರ, ಆದಿಶಕ್ತಿನಗರ, ಕೆಸವಿನ ಮನೆ, ಮತ್ತಾವರ, ನಲ್ಲೂರು, ರಾಂಪುರ, ಗವನಹಳ್ಳಿ, ತೇಗೂರು, ದಂಬದಹಳ್ಳಿ ಮತ್ತು ದುಮ್ಮಿಗೆರೆ ಗ್ರಾಮಗಳ ವ್ಯಾಪ್ತಿಯಲ್ಲಿ ಸೆಕ್ಷನ್ 144ಪ್ರಕಾರ ನಿಷೇದಾಜ್ಞೆ ಹೊರಡಿಸಿ ಉಪ ವಿಭಾಗಾಧಿಕಾರಿ ದಲ್ಜೀತ್ ಕುಮಾರ್ ತಿಳಿಸಿದ್ದಾರೆ.

click me!