ಪುಲಸಾನಿಒಡ್ಡು ಗ್ರಾಮದಲ್ಲಿ ಅಪರೂಪದ ವೀರರಗುಡಿ ಪತ್ತೆ; ರಾಜರ ಬೇಟೆಯ ಪರಾಕ್ರಮ ಅನಾವರಣ

Published : Jun 18, 2026, 08:45 AM IST
Temple

ಸಾರಾಂಶ

ಪುಲಸಾನಿಒಡ್ಡು ಗ್ರಾಮದಲ್ಲಿ ಪುರಾತತ್ವ ಸರ್ವೇಕ್ಷಣೆ ವೇಳೆ ವಿಜಯನಗರ ಶೈಲಿಯ ಅಪರೂಪದ ವೀರರಗುಡಿಯೊಂದು ಪತ್ತೆಯಾಗಿದೆ. ಈ ದೇವಾಲಯವು ಬೇಟೆಗೆ ಸಂಬಂಧಿಸಿದ ವೀರಗಲ್ಲುಗಳನ್ನು ಹೊಂದಿದ್ದು, 16-17ನೇ ಶತಮಾನದ ಇತಿಹಾಸ ಮತ್ತು ಅಂದಿನ ರಾಜರ ಬೇಟೆಯ ಪರಾಕ್ರಮವನ್ನು ಅನಾವರಣಗೊಳಿಸುತ್ತದೆ.

ಚಿಕ್ಕಬಳ್ಳಾಪುರ: ಪುರಾತತ್ವ ಇಲಾಖೆಯ ಗ್ರಾಮವಾರು ಸರ್ವೆ ಕಾರ್ಯದ ವೇಳೆ ತಾಲೂಕಿನ ಹಂಪಸಂದ್ರ ಗ್ರಾಪಂಗೆ ಸೇರಿದ ಪುಲಸಾನಿಒಡ್ಡು ಗ್ರಾಮದಲ್ಲಿ ವಿಶೇಷವಾದ ವೀರರಗುಡಿ ಪತ್ತೆಯಾಗಿದೆ. ಇದರ ಶಿಲ್ಪಕಲೆ, ವಾಸ್ತುಶೈಲಿ ಹಾಗೂ ವೀರಗಲ್ಲುಗಳು ವಿಜಯನಗರ ಕಾಲದ ಇತಿಹಾಸವನ್ನು ಅನಾವರಣಗೊಳಿಸುತ್ತಿವೆ. ಇತಿಹಾಸಕಾರರಾದ ಕೆ. ಧನಪಾಲ್ ಹಾಗೂ ತ್ಯಾಗರಾಜ್ ಅವರು ಈ ಸ್ಮಾರಕವನ್ನು ಅಧ್ಯಯನ ನಡೆಸಿ ಮಹತ್ವದ ಮಾಹಿತಿಗಳನ್ನು ಹೊರತಂದಿದ್ದಾರೆ.

ಸಾಮಾನ್ಯವಾಗಿ ವೀರರಗುಡಿಗಳನ್ನು ಕಲ್ಲಿನಿಂದ ನಿರ್ಮಿಸಿದ ಸಣ್ಣ ಮಂಟಪಗಳ ರೂಪದಲ್ಲಿ ಹೊಲಗಳಲ್ಲಿ ಅಥವಾ ಗ್ರಾಮದ ಹೊರಭಾಗದಲ್ಲಿ ನಿರ್ಮಿಸಲಾಗುತ್ತದೆ. ಆದರೆ ಈ ಗ್ರಾಮದಲ್ಲಿ ವೀರರಗುಡಿ ಊರಿನ ಮಧ್ಯದಲ್ಲಿಯೇ ಇರುವುದು ವಿಶೇಷವಾಗಿದೆ.

ಈ ವೀರರಗುಡಿಯ ದೇವಾಲಯ ರಚನೆಯು ವಿಜಯನಗರ ಶೈಲಿಯನ್ನು ಹೊಂದಿದ್ದು, ಮುಂಭಾಗದ ಮಂಟಪದಲ್ಲಿ ವಿಜಯನಗರ ಕಾಲದ ಯಾಳಿ ಶಿಲ್ಪಗಳನ್ನು ಕೆತ್ತಲಾಗಿದೆ. ಅಲ್ಲದೆ, ಸುಂದರ ನರ್ತಕಿಯರ ಎರಡು ಶಿಲ್ಪಗಳೂ ಕಂಡುಬರುತ್ತವೆ. ಈ ನರ್ತಕಿಯರು ನೆರಿಗೆಯ ವಸ್ತ್ರ ಧರಿಸಿದ್ದು, ಒಂದು ಶಿಲ್ಪದಲ್ಲಿ ಸ್ತನಪಟ್ಟಿಕೆಯನ್ನು ಧರಿಸಿರುವಂತೆ ಹಾಗೂ ಇನ್ನೊಂದು ಶಿಲ್ಪದಲ್ಲಿ ಅರೆನಗ್ನವಾಗಿ ಕೆತ್ತಲಾಗಿದೆ. ಈ ಶಿಲ್ಪಗಳು ಭಕ್ತಾದಿಗಳನ್ನು ಸ್ವಾಗತಿಸುವ ರೀತಿಯಲ್ಲಿ ರೂಪುಗೊಂಡಿವೆ.

ಸುಮಾರು ಎಂಟು ಸ್ಮಾರಕ ಶಿಲ್ಪಗಳು

ದೇವಾಲಯವು ಗರ್ಭಗುಡಿ, ಅಂತರಾಳ ಹಾಗೂ ನವರಂಗಗಳನ್ನು ಹೊಂದಿದೆ. ವಿಶಾಲವಾದ ಗರ್ಭಗುಡಿಯಲ್ಲಿ ಸುಮಾರು ಎಂಟು ಸ್ಮಾರಕ ಶಿಲ್ಪಗಳಿದ್ದು, ಅವೆಲ್ಲವೂ ಬೇಟೆಗೆ ಸಂಬಂಧಿಸಿದ ವೀರಗಲ್ಲುಗಳಾಗಿವೆ. ಒಂದು ಶಿಲ್ಪದಲ್ಲಿ ಈ ಪ್ರದೇಶವನ್ನು ಆಳುತ್ತಿದ್ದ ರಾಜನು ತನ್ನ ನಾಯಿಯೊಂದಿಗೆ ಬೇಟೆಗೆ ತೆರಳಿ ಹುಲಿಯನ್ನು ಬೇಟೆಯಾಡಿದ ದೃಶ್ಯವನ್ನು ಚಿತ್ರಿಸಲಾಗಿದೆ. ಕೆಲವು ಶಿಲ್ಪಗಳಲ್ಲಿ ರಾಜನೊಂದಿಗೆ ಸೇವಕರೂ ಬೇಟೆಗೆ ತೆರಳಿರುವುದನ್ನು ಕಾಣಬಹುದು. ಆ ಕಾಲದಲ್ಲಿ ಈ ಪ್ರದೇಶವನ್ನು ಆಳಿದ ರಾಜರು ಅಥವಾ ವಿಜಯನಗರ ಅರಸರ ಸಾಮಂತರಾಗಿದ್ದ ಪಾಳೇಗಾರರ ವಂಶದವರೇ ಬೇಟೆಗೆ ತೆರಳಿದ್ದರೆಂಬ ಸಾಧ್ಯತೆಯಿದೆ ಎಂದು ಈ ಕುರಿತು ಅಧ್ಯಯನ ನಡೆಸಿದ ಕೆ. ಧನಪಾಲ್ ತಿಳಿಸಿದ್ದಾರೆ.

ಈ ಬೇಟೆಗಳಲ್ಲಿ ಅನೇಕ ವೀರರು ಮಡಿದಿರುವ ಸಾಧ್ಯತೆಯಿದ್ದು, ನಂತರ ಅವರ ಪತ್ನಿಯರು ಸತಿಯಾದಿರಬಹುದೆಂಬ ಊಹೆಯೂ ಇದೆ. ಒಂದು ಶಿಲ್ಪದಲ್ಲಿ ಶಾಸನವಿದ್ದು, ಅದರ ಲಿಪಿಯ ಆಧಾರದ ಮೇಲೆ ಈ ಶಿಲ್ಪಗಳು ಸುಮಾರು 16-17ನೇ ಶತಮಾನಕ್ಕೆ ಸೇರಿದವುಗಳಾಗಿರಬಹುದೆಂದು ಅಂದಾಜಿಸಲಾಗಿದೆ. ಈ ಶಾಸನದಲ್ಲಿ ವೀರನ ಹೆಸರು ‘ಎರಕದುರಯ್ಯ’ ಎಂದು ತಿಳಿದುಬರುವ ಸಾಧ್ಯತೆಯಿದೆ.

ಈಗಿರುವಂತೆ ಆಗಲೂ ಈ ಪ್ರದೇಶವು ದಟ್ಟ ಕಾಡಿನಿಂದ ಕೂಡಿದ್ದು, ಕ್ರೂರ ಪ್ರಾಣಿಗಳ ಉಪಟಳದಿಂದ ಪ್ರಜೆಗಳನ್ನು ರಕ್ಷಿಸಲು ಸ್ವತಃ ರಾಜರೇ ಬೇಟೆಗೆ ತೆರಳಿ ಮಡಿದಿರಬಹುದೆಂಬ ಸಾಧ್ಯತೆಯಿದೆ. ಅಂತಹ ವೀರರಿಗೆ ದೇವರ ಸ್ಥಾನಮಾನ ನೀಡಿ ಈ ದೇವಸ್ಥಾನವನ್ನು ನಿರ್ಮಿಸಿರುವ ಸಾಧ್ಯತೆಯೂ ಇದೆ. ಎಲ್ಲಾ ಶಿಲ್ಪಗಳಲ್ಲಿಯೂ ಕೈಲಾಸದ ಚಿತ್ರಣವಿರುವುದರಿಂದ ಅವರು ಶೈವ ಸಂಪ್ರದಾಯಕ್ಕೆ ಸೇರಿದವರಾಗಿದ್ದರೆಂಬುದು ತಿಳಿದುಬರುತ್ತದೆ.

ದೇವಸ್ಥಾನದ ಕುರಿತು ಜಾನಪದ ಕಥೆ

ಈ ಗ್ರಾಮದಲ್ಲಿ ಈ ದೇವಸ್ಥಾನದ ಕುರಿತು ಒಂದು ಜಾನಪದ ಕಥೆಯೂ ಜನಪ್ರಿಯವಾಗಿದೆ. ಹಿಂದೆ ಪುಲಸಾನಿ ಎಂಬ ಮಹಿಳೆ ಇಲ್ಲಿಂದ ಲೇಪಾಕ್ಷಿಗೆ ಬುಟ್ಟಿಯಲ್ಲಿ ಊಟ ತೆಗೆದುಕೊಂಡು ಹೋಗುತ್ತಿದ್ದಳು. ಅಲ್ಲಿಂದ ಹಿಂದಿರುಗುವಾಗ ಈ ಕಲ್ಲುಗಳನ್ನು ಒಂದೊಂದಾಗಿ ತಂದು ಇಲ್ಲಿ ಮಂದಿರವನ್ನು ನಿರ್ಮಿಸಿದ್ದಾಳೆ ಎಂದು ಗ್ರಾಮಸ್ಥರು ಹೇಳುತ್ತಾರೆ.

ಈ ಕ್ಷೇತ್ರ ಕಾರ್ಯದಲ್ಲಿ ಗ್ರಾಮಸ್ಥರಾದ ಕಿಶೋರ್, ಚಂದು, ಜಸ್ವಂತ್, ಸೋಮು, ಕುಮಾರ, ಗಂಗಾಧರಪ್ಪ ಹಾಗೂ ನಾರಾಯಣಸ್ವಾಮಿ ಪಾಲ್ಗೊಂಡು ಸಹಕಾರ ನೀಡಿದ್ದಾರೆ.

PREV
Read more Articles on
click me!

Recommended Stories

ಹಾಸನ ನಗರದ ರೈಲ್ವೆ ಸೇತುವೆ ಎರಡೂ ಬದಿ ಸಂಚಾರ ಯಾವಾಗ? ಸಂಸದ ಶ್ರೇಯಸ್ ಪಟೇಲ್ ಮಹತ್ವದ ಘೋಷಣೆ
ಆರ್‌ಎಸ್‌ಎಸ್‌ನ ಲೆಕ್ಕ ಕೇಳಿದ ಬೆನ್ನಲ್ಲೇ ಖರ್ಗೆ ಕುಟುಂಬದ ಆಸ್ತಿ ಕೆದಕಿದ ಎಂಪಿ ರೇಣುಕಾಚಾರ್ಯ!