ಕೊರೋನಾ ಹಿನ್ನೆಲೆ: ಬೇಲೂರು ಚನ್ನಕೇಶವ ರಥೋತ್ಸವ ರದ್ದು

By Kannadaprabha NewsFirst Published Mar 18, 2020, 11:47 AM IST
Highlights

900 ವರ್ಷಗಳ ಇತಿಹಾಸವುಳ್ಳ ಪ್ರಸಿದ್ಧ ಚೆನ್ನಕೇಶವ ದೇಗುಲದ ರಥೋತ್ಸವವನ್ನು ರದ್ದು ಮಾಡಲಾಗಿದೆ. ಕೊರೋನಾ ವೈರಸ್ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗುತ್ತಿದೆ. 

ಹಾಸನ [ಮಾ.18]:  900 ವರ್ಷಗಳ ಇತಿಹಾಸದಲ್ಲೇ ಪ್ರಪ್ರಥಮವಾಗಿ ಇಲ್ಲಿನ ಇತಿಹಾಸ ಪ್ರಸಿದ್ಧ ಶ್ರೀಚನ್ನಕೇಶವ ರಥೋತ್ಸವವನ್ನು ಕೊರೋನಾ ವೈರಸ್‌ ಹಿನ್ನೆಲೆಯಲ್ಲಿ ರದ್ದು ಮಾಡಲಾಗಿದೆ ಎಂದು ಚನ್ನಕೇಶವಸ್ವಾಮಿ ದೇಗುಲದ ಕಾರ್ಯ ನಿರ್ವಹಣಾಧಿಕಾರಿ ವಿದ್ಯುಲ್ಲತಾ ತಿಳಿಸಿದರು.

ಪಟ್ಟಣದ ಶ್ರೀಚನ್ನಕೇಶವ ಸ್ವಾಮಿ ದೇಗುಲದ ಕಚೇರಿಯಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇಶವ್ಯಾಪಿ ಕೊರೋನಾ ವೈರಸ್‌ ಅಧಿಕವಾಗುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಆದೇಶದಂತೆ ಮಾ.28 ರಿಂದ ಏ.10ರ ವರೆಗೆ ನಡೆಯಬೇಕಿದ್ದ ಪ್ರತಿಷ್ಠಿತ ಬೇಲೂರು ಚನ್ನಕೇಶವ ಸ್ವಾಮಿ ದಿವ್ಯ ರಥೋತ್ಸವ ಹಾಗೂ ಜಾತ್ರಾ ಮಹೋತ್ಸವವನ್ನು ರದ್ದುಗೊಳಿಸಲಾಗಿದೆ ಎಂದರು.

ಆದರೆ, ರಥೋತ್ಸವದ ಸಂಬಂಧ ಧಾರ್ಮಿಕ ಉತ್ಸವಗಳನ್ನು ಆಗಮೊತ್ತ ಸೇವಾ ಉತ್ಸವಗಳನ್ನು ಯಾವುದೇ ಅಡಚಣೆ ಇಲ್ಲದೆ ಸಾರ್ವಜನಿಕರಿಗೆ ನಿಷೇಧ ಹೇರಿ ದೇವಾಲಯದ ಪ್ರಾಂಗಣದಲ್ಲಿ ವಿಭ್ರಂಭಣೆಯಿಲಗಲ್ಲದಂತೆ ಶಾಸೊತ್ರೕಕ್ತವಾಗಿ ನಡೆಸುವಂತೆ ಆದೇಶಿಸಲಾಗಿದೆ ಎಂದರು.

ಹಾವೇರಿಯಲ್ಲೂ ಕೊರೋನಾ ಕಾಟ: 165 ಜನರ ಆರೋಗ್ಯ ತಪಾಸಣೆ..

ಜಿಲ್ಲಾಧಿಕಾರಿ ಕಚೇರಿಯಲ್ಲಿ ದೇಗುಲದ ಇಒ ಪ್ರಧಾನ ಅರ್ಚಕರು ಹಾಗೂ ನಾಲ್ಕು ಮೂಲೆ ಅಡ್ಡೆಗಾರರು ಮತ್ತು ಸ್ಥಳೀಯರನ್ನು ಕರೆಸಿ ತೀರ್ಮಾನಿಸಲಾಯಿತು. ಅದರಂತೆ ಮಾ.17ರಿಂದ ಮಾ.31ರ ವರೆಗೂ ದಾಸೋಹದ ವ್ಯವಸ್ಥೆ ಸಂಪೂರ್ಣ ನಿಷೇಧಿಸಲಾಗಿದೆ. ಅದರಂತೆ ಜಾತ್ರೋತ್ಸವದಂದು ನೀಡಲಾಗುತ್ತಿದ್ದ ಪ್ರಸಾದವನ್ನು ಸಹ ರದ್ದು ಪಡಿಸಲಾಗಿದೆ. ರಥೋತ್ಸವಕ್ಕೆ ಸಂಬಂಧಿಸಿದಂತೆ ಈಗಾಗಲೇ ಹೆಚ್ಚುವರಿ ವಾದ್ಯ, ವಿದ್ಯುತ್‌ ಅಲಂಕಾರ, ಹೂವಿನ ಅಲಂಕಾರ ಸೇರಿದಂತೆ ಇನ್ನು ಕೆಲವು ಟೆಂಡರ್‌ಗಳನ್ನು ರದ್ದುಪಡಿಸಲಾಗಿದೆ.

ರಥೋತ್ಸವದ ದಿನದಂದು ದೇಗುಲದ ಪ್ರಾಂಗಣದಲ್ಲಿಯೇ ಚಿಕ್ಕ ರಥವನ್ನು ಎಳೆಯುವಂತೆ ಸೂಚನೆ ನೀಡಿದ್ದಾರೆ. ಭಕ್ತಾದಿಗಳು ಸಾರ್ವಜನಿಕರು,ನಾಡ ಪಟೇಲರು, ಚನ್ನಕೇಶವ ಕುಲ ಭಕ್ತರು, ನಮ್ಮೊಡನೆ ಕೈಜೋಡಿಸಬೇಕು ಎಂದು ಮನವಿ ಮಾಡಿದರು.

ಪ್ರಧಾನ ಅರ್ಚಕ ಕೃಷ್ಣಸ್ವಾಮಿ ಭಟ್‌ ಮತ್ತು ಶ್ರೀನಿವಾಸ ಭಟ್‌ ಮಾತನಾಡಿ, ನಮ್ಮ ಪೂರ್ವಿಕರಿಂದಲೂ ರಥೋತ್ಸವವು ರದ್ದುಗೊಂಡಿದ್ದ ಇತಿಹಾಸವೇ ಇಲ್ಲ. ಆದರೆ, ಇಂತಹ ಮಹಾಮಾರಿ ವೈರಸ್‌ನಿಂದ ಈಗ ಕಂಟಕ ಬಂದಿದೆ. ಆದರೂ ಸಹ ನಮಗೆ ನಂಬಿಕೆ ಇದ್ದು, ಶ್ರೀಚನ್ನಕೇಶವಸ್ವಾಮಿ ಭಕ್ತರ ಕೈಯಲ್ಲಿ ಅವನ ಸೇವೆಯನ್ನು ಮಾಡಿಸಿಕೊಳ್ಳುವುದರಲ್ಲಿ ಎರಡು ಮಾತಿಲ್ಲ. ಎಂದರು.

ಲೋಕಕ್ಕೆ ಕಂಟಕವಾಗಿರುವ ಈ ವೈರಸ್‌ ಬೇಗನೆ ಮುಕ್ತಿ ಹೊಂದಬೇಕು. ಅದರಂತೆ ದೇವಾಲಯದಲ್ಲಿ ಉತ್ಸವದ ಅಂಗವಾಗಿ ಪೂಜಾ ಕೈಂಕರ್ಯಗಳಿಗೆ ಯಾವುದೇ ನಿರ್ಬಂಧ ಇರುವುದಿಲ್ಲ. 900 ವರ್ಷಗಳ ಆಚಾರ, ವಿಚಾರಗಳು ಮತ್ತು ಧಾರ್ಮಿಕ ಕಾರ್ಯಕ್ರಮಗಳಿಗೆ ಯಾವುದೇ ಅಡ್ಡಿ ಇಲ್ಲ. ಯುಗಾದಿ ಹಬ್ಬದ ದಿನದಂದು ಚನ್ನಕೇಶವನ ಚಿನ್ನಾಭರಣ, ನವರತ್ನಗಳಿಂದ ಅಲಂಕರಿಸಿ ಪೂಜಿಸಲಾಗುವುದು ಎಂದರು.

ಈ ವೇಳೆ ವ್ಯವಸ್ಥಾಪನಾ ಸಮಿತಿಯ ಮಾಜಿ ಸದಸ್ಯರಾದ ಬಿ.ಎಂ.ರವೀಶ್‌, ವೆಂಕಟೇಗೌಡ ಇತರರು ಇದ್ದರು.
 
ಸಾರ್ವಜನಿಕರಿಗೆ ಪ್ರವೇಶವಿಲ್ಲ

ಯಾಗಶಾಲೆ, ಬಲಿ ಪ್ರದಾನ, ಸ್ವಾಮಿಯ ಎಲ್ಲ ರೀತಿಯ ಪೂಜೆಗಳನ್ನು ಮಾಡಲಾಗುವುದು. ಆದರೆ, ಸಾರ್ವಜನಿಕರಿಗೆ ಅವಕಾಶ ಇಲ್ಲ. ಈಗಾಗಲೇ ಜಿಲ್ಲಾಧಿಕಾರಿಗಳಿಗೆ ಸಾರ್ವಜನಿಕರಿಗಾಗಿ ಒಂದು ದಿನಕ್ಕಾದರೂ ಅವಕಾಶ ನೀಡಿ ಎಂದರೂ ಸಹ ಕೊರೋನಾ ವೈರಸ್‌ ಬಗ್ಗೆ ಸಂಪೂರ್ಣ ಮಾಹಿತಿ ತಿಳಿದಿರುವಂತವರು ನೀವು ನಮಗೆ ಸಹಕಾರ ನೀಡಬೇಕು. ಸಾರ್ವಜನಿಕರ ಹಿತದೃಷ್ಟಿಯಿಂದ ಇದು ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರದ ಆದೇಶ ಅದನ್ನು ಪ್ರತಿಯೊಬ್ಬರೂ ಅನುಸರಿಸಬೇಕು ಎಂದು ಹೇಳಿದ್ದಾರೆ ಎಂದು ತಿಳಿಸಿದರು.

click me!