7500 ಮೆ.ಟನ್‌ ಕೊಬ್ಬರಿ ಖರೀದಿಗೆ ಕೇಂದ್ರ ಅಸ್ತು: ಕೇಂದ್ರ ಸಚಿವ ಸೋಮಣ್ಣ

By Kannadaprabha NewsFirst Published Jul 19, 2024, 4:12 PM IST
Highlights

ರಾಜ್ಯದ ಕೊಬ್ಬರಿ ಬೆಳೆಗಾರರಿಗೆ ಕೇಂದ್ರ ಸರ್ಕಾರದ ಜಲಶಕ್ತಿ ಮತ್ತು ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಅವರು ಸಿಹಿ ಸುದ್ದಿ ನೀಡಿದ್ದಾರೆ. ಸಚಿವ ವಿ.ಸೋಮಣ್ಣ ಅವರ ಮಧ್ಯಸ್ಥಿಕೆಯಿಂದ 7500 ಮೆಟ್ರಿಕ್ ಟನ್ ಹೆಚ್ಚುವರಿ ಕೊಬ್ಬರಿ ಖರೀದಿಗೆ ಕೇಂದ್ರ ಸರ್ಕಾರದ ಒಪ್ಪಿಗೆ ದೊರಕಿದೆ. 

ತುಮಕೂರು (ಜು.19): ರಾಜ್ಯದ ಕೊಬ್ಬರಿ ಬೆಳೆಗಾರರಿಗೆ ಕೇಂದ್ರ ಸರ್ಕಾರದ ಜಲಶಕ್ತಿ ಮತ್ತು ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಅವರು ಸಿಹಿ ಸುದ್ದಿ ನೀಡಿದ್ದಾರೆ. ಸಚಿವ ವಿ.ಸೋಮಣ್ಣ ಅವರ ಮಧ್ಯಸ್ಥಿಕೆಯಿಂದ 7500 ಮೆಟ್ರಿಕ್ ಟನ್ ಹೆಚ್ಚುವರಿ ಕೊಬ್ಬರಿ ಖರೀದಿಗೆ ಕೇಂದ್ರ ಸರ್ಕಾರದ ಒಪ್ಪಿಗೆ ದೊರಕಿದೆ. 2024ನೇ ಸಾಲಿನಲ್ಲಿ ಮಿಲ್ಲಿಂಗ್ ಕೋಪ್ರ ವಿಷಯದಲ್ಲಿ ರಾಜ್ಯ ಸರ್ಕಾರಕ್ಕೆ 2999 ಮೆಟ್ರಿಕ್ ಟನ್ ಖರೀದಿಗೆ ಕೇಂದ್ರ ಸರ್ಕಾರ ಅನುಮತಿ ನೀಡಿತ್ತು. ರಾಜ್ಯ ಸರ್ಕಾರ ಈ ಸೌಲಭ್ಯವನ್ನು ದಕ್ಷಿಣ ಕನ್ನಡ, ಹಾಸನ, ಉಡುಪಿ ಜಿಲ್ಲೆಗಳಿಗೆ ವಿಸ್ತರಿಸಲಾಗಿದೆ. 

ಅತಿ ಹೆಚ್ಚು ಕೊಬ್ಬರಿ ಬೆಳೆಯುವ ಜಿಲ್ಲೆಯಾದ ತುಮಕೂರು, ರಾಮನಗರ, ಮಂಡ್ಯ ಜಿಲ್ಲೆಗಳೊಂದಿಗೆ ಇತರೆ ಜಿಲ್ಲೆಗಳು ಈ ಸೌಲಭ್ಯದಿಂದ ವಂಚಿತವಾಗಿದ್ದವು. ಇದನ್ನು ಮನಗಂಡು ಸಚಿವ ಸೋಮಣ್ಣ ರಾಜ್ಯ ಸರ್ಕಾರಕ್ಕೆ ಈ ವಿಷಯವನ್ನು ಮನವರಿಕೆ ಮಾಡಿ ಹೊಸ ಪ್ರಸ್ತಾವನೆಯನ್ನು ಸಲ್ಲಿಸಲು ತಿಳಿಸಿದರು. ಅದರಂತೆ ರಾಜ್ಯ ಸರ್ಕಾರ ತಮಕೂರು, ರಾಮನಗರ, ಚಿತ್ರದುರ್ಗ, ಚಿಕ್ಕಮಗಳೂರು, ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಗಳಿಗೆ ಈ ಸೌಲಭ್ಯ ವಿಸ್ತರಿಸುವ ಸಲುವಾಗಿ 2024ನೇ ಸಾಲಿನ ಖರೀದಿ ಮಿತಿಯನ್ನು 2999 ಮೆಟ್ರಿಕ್ ಟನ್‌ನಿಂದ 10000 ಮೆಟ್ರಕ್ ಟನ್‌ಗಳಿಗೆ ಏರಿಸುವಂತೆ ಕೋರಿದ ಪ್ರಸ್ತಾವನೆ ಸಲ್ಲಿಸಿತು.

Latest Videos

ರಾಜ್ಯದಲ್ಲಿ ಆನ್‌ಲೈನ್ ಉದ್ಯೋಗದ ಹೆಸರಲ್ಲಿ 2348 ಕೋಟಿ ವಂಚನೆ: ಸಚಿವ ಪರಮೇಶ್ವರ್

ಸಚಿವ ವಿ.ಸೋಮಣ್ಣ ಅವರು ಸದರಿ ಪ್ರಸ್ತಾವನೆಗೆ ಕೂಡಲೇ ಒಪ್ಪಿಗೆ ನೀಡುವಂತೆ ಕೇಂದ್ರ ಸರ್ಕಾರದ ಕೃಷಿ ಸಚಿವರೊಂದಿಗೆ ಮಾಡಿದ ಮನವಿಗೆ ಸ್ಪಂದಿಸಿದ ಕೇಂದ್ರ ಸರ್ಕಾರ 2024 ನೇ ಸಾಲಿಗೆ ಮಿಲ್ಲಿಂಗ್ ಕೋಪ್ರ ಖರೀದಿ ಮಿತಿಯನ್ನು 10000 ಮೆಟ್ರಿಕ್ ಟನ್‌ಗಳಿಗೆ ಏರಿಸಿ ಆದೇಶ ಹೊರಡಿಸಿದೆ ಎಂದು ಸಚಿವ ವಿ.ಸೋಮಣ್ಣ ಹೇಳಿದ್ದಾರೆ. ರಾಜ್ಯದ ರೈತರ ಹಿತಾಸಕ್ತಿಗೆ ಪೂರಕವಾದ ನಿರ್ಣಯವನ್ನು ತುರ್ತಾಗಿ ಕೈಗೊಂಡ ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿಯವರಿಗೂ ಹಾಗೂ ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್‌ರವರಿಗೆ ಸಚಿವ ವಿ.ಸೋಮಣ್ಣ ವಂದನೆ ತಿಳಿಸಿದ್ದಾರೆ.

ಹಳೆಯ ಸಿದ್ದರಾಮಯ್ಯ ಕಳೆದು ಹೋಗಿದ್ದಾರೆ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹಿಂದೆ ಇದ್ದ ರೀತಿ ಇಲ್ಲ. ಈಗ 10-12 ಸೈಟ್‌ ಯಾಕೆ ಮಾಡಿಕೊಂಡಿದ್ದಾರೋ ಗೊತ್ತಿಲ್ಲ. ಮೈಸೂರಿನ ಮುಡಾ ಹಗರಣಕ್ಕೆ ಸಂಬಂಧಿಸಿ ಎಲ್ಲವನ್ನೂ ಸರೆಂಡರ್‌ ಮಾಡಿ ಆಗಿರುವ ತಪ್ಪಿಗೆ ಅವರು ರಾಜೀನಾಮೆ ನೀಡಿ ಆರಾಮವಾಗಿ ಇದ್ದರೆ ಒಳ್ಳೆಯದು ಎಂದು ಕೇಂದ್ರ ರೈಲ್ವೆ ಮತ್ತು ಜಲಶಕ್ತಿ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ಹೇಳಿದರು. ಸುದ್ದಿಗಾರರ ಜತೆಗೆ ಮಾತನಾಡಿ, ಹಳೆಯ ಸಿದ್ದರಾಮಯ್ಯ ಕಳೆದು ಹೋಗಿದ್ದಾರೆ. ನಮ್ಮ ಜತೆಯಲ್ಲಿದ್ದ ಸಿದ್ದರಾಮಯ್ಯ ಇಂದು ಇಲ್ಲ. 

ವಾಲ್ಮೀಕಿ ನಿಗಮದ ತನಿಖೆ ಮುಗಿಯೋವರೆಗೂ ಸಿಎಂ ಸಿದ್ದರಾಮಯ್ಯ ಕೆಳಗಿಳಿಯಲಿ: ವಿಪಕ್ಷ ಆಗ್ರಹ

10-12 ಸೈಟ್‌ಗಾಗಿ ಅವರು ಈ ಮಟ್ಟಕ್ಕೆ ಯೋಚನೆ ಮಾಡುತ್ತಾರೆ ಎಂಬುದು ನನಗಂತು ಗೊತ್ತಿರಲಿಲ್ಲ. ಇದು ಆಗಬಾರದಿತ್ತು. ನಾವೆಲ್ಲ ಜೊತೆಯಲ್ಲಿ ಬೆಳೆದವರು. ಸಿದ್ದರಾಮಯ್ಯ ಅವರನ್ನು ಹತ್ತಿರದಿಂದ ನೋಡಿದ್ದೇನೆ. ಅಂಥವರು ಯಾವುದೋ ಒಂದು ಸಣ್ಣ ವಿಚಾರದಲ್ಲಿ ತನ್ನತನವನ್ನು ಪರೀಕ್ಷೆಗೆ ಇಟ್ಟರಲ್ಲ ಎಂಬ ನೋವಿದೆ. ಮುಡಾ ಹಗರಣವನ್ನು ಮುಖ್ಯಮಂತ್ರಿ ಸಮರ್ಥನೆ ಮಾಡಿಕೊಳ್ಳುತ್ತಿರುವುದು ಒಳ್ಳೆಯದಲ್ಲ. ಇಂಥವರು ಸಮರ್ಥನೆ ಮಾಡಿಕೊಳ್ಳಲೂ ಬಾರದು. ತಪ್ಪನ್ನು ಒಪ್ಪಿಕೊಳ್ಳಬೇಕಿತ್ತು ಎಂದು ಅಭಿಪ್ರಾಯಪಟ್ಟರು.

click me!