Border dispute: ಮರಾಠಿ ಪುಂಡರ ವಿರುದ್ಧ ಕ್ರಮ ಜರುಗಿಸಿ

By Kannadaprabha NewsFirst Published Dec 9, 2022, 8:13 AM IST
Highlights

ಬೆಳಗಾವಿಯಲ್ಲಿ ಕನ್ನಡಿಗರ ಮೇಲೆ ದಾಳಿ ಮಾಡಿ, ದೌರ್ಜನ್ಯ ಎಸಗುತ್ತಿರುವ ಮರಾಠಿ ಪುಂಡರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಜೊತೆಗೆ ಕೇಂದ್ರ ಸರ್ಕಾರದ ಮಧ್ಯ ಪ್ರವೇಶಕ್ಕೆ ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾ ಘಟಕದಿಂದ ಮಹಾರಾಷ್ಟ್ರ ಸರ್ಕಾರದ ಪ್ರತಿಕೃತಿ ದಹಿಸಿ, ಪ್ರತಿಭಟಿಸಲಾಯಿತು.

ದಾವಣಗೆರೆ (ಡಿ.9) ಬೆಳಗಾವಿಯಲ್ಲಿ ಕನ್ನಡಿಗರ ಮೇಲೆ ದಾಳಿ ಮಾಡಿ, ದೌರ್ಜನ್ಯ ಎಸಗುತ್ತಿರುವ ಮರಾಠಿ ಪುಂಡರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಜೊತೆಗೆ ಕೇಂದ್ರ ಸರ್ಕಾರದ ಮಧ್ಯ ಪ್ರವೇಶಕ್ಕೆ ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾ ಘಟಕದಿಂದ ಮಹಾರಾಷ್ಟ್ರ ಸರ್ಕಾರದ ಪ್ರತಿಕೃತಿ ದಹಿಸಿ, ಪ್ರತಿಭಟಿಸಲಾಯಿತು.

ನಗರದ ಪಾಲಿಕೆ ಆವರಣದಿಂದ ಕರವೇ ಜಿಲ್ಲಾಧ್ಯಕ್ಷ ಎಂ.ಎಸ್‌.ರಾಮೇಗೌಡ ನೇತೃತ್ವದಲ್ಲಿ ಪ್ರತಿಭಟನಾ ಮೆರವಣಿಗೆ ಹೊರಟು, ಹಳೆ ಪಿಬಿ ರಸ್ತೆಯಲ್ಲಿ ಪ್ರತಿಕೃತಿ ದಹಿಸುವ ಮೂಲಕ ಮಹಾರಾಷ್ಟ್ರ ಸರ್ಕಾರ, ಮರಾಠಿ ಪುಂಡರು, ಎಂಇಎಸ್‌ ಹಾಗೂ ಶಿವಸೇನೆ ವಿರುದ್ಧ ಘೋಷಣೆ ಕೂಗಿದ ಪ್ರತಿಭಟನಾಕಾರರು ನಂತರ ಉಪ ವಿಭಾಗಾಧಿಕಾರಿ ದುರ್ಗಾಶ್ರೀ ಮುಖಾಂತರ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದದ ಬಗ್ಗೆ ಕೇಂದ್ರ ಮೂಕ ಪ್ರೇಕ್ಷಕ ಏಕೆ?: ಪವಾರ್‌

ಈ ವೇಳೆ ಮಾತನಾಡಿದ ಎಂ.ಎಸ್‌.ರಾಮೇಗೌಡ, ಭಾಷಾವಾರು ಪ್ರಾಂತ್ಯ ವಿಂಗಡಣೆ ನಂತರ ಕರ್ನಾಟಕ ತನ್ನ ಅನೇಕ ಪ್ರದೇಶಗಳ ಕಳೆದುಕೊಂಡರೂ ರಾಷ್ಟ್ರೀಯ ಐಕ್ಯತೆಗೆ ಭಂಗ ಬರಬಾರದೆಂದು ಆದ ಅನ್ಯಾಯ ಸಹಿಸುತ್ತ ಬಂದಿದೆ. ಆದರೆ ಅಪ್ಪಟ ಕನ್ನಡದ ನೆಲವಾದ ಬೆಳಗಾವಿಯೂ ತಮಗೆ ಸೇರಬೇಕೆಂದು ಮಹಾರಾಷ್ಟ್ರ ದಶಕಗಳಿಂದಲೂ ತಗಾದೆ ತೆಗೆಯುತ್ತಾ ಬಂದಿದ್ದು, ಪರಿಣಾಮ ಗಡಿ ಜಿಲ್ಲೆಯಲ್ಲಿ ಪದೇ ಪದೇ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗುತ್ತಿದೆ ಎಂದು ಆಕ್ರೋಶ ಹೊರ ಹಾಕಿದರು.

ಎಂಇಎಸ್‌ ನಿಷೇಧಿಸಿ:

ಬೆಳಗಾವಿ ವಿವಾದ ಸುಪ್ರೀಂ ಕೋರ್ಚ್‌ನಲ್ಲಿ ವಿಚಾರಣೆ ಬಾಕಿ ಇದೆ. ಇಂತಹ ಸಂದರ್ಭದಲ್ಲಿ ಈ ನೆಲದ ಕಾನೂನಿಗೆ ಗೌರವ ನೀಡಿ, ತೀರ್ಪಿಗಾಗಿ ಕಾಯುವ ಬದಲಿದೆ ಬೆಳಗಾವಿಯಲ್ಲಿ ಸಂಘರ್ಷ ಹುಟ್ಟು ಹಾಕಲು ಮಹಾರಾಷ್ಟ್ರ ಸರ್ಕಾರ ಪ್ರಯತ್ನಿಸುತ್ತಿದೆ. ಇದರ ವಿರುದ್ಧ ಕರವೇ ರಾಜ್ಯಾಧ್ಯಕ್ಷ ಟಿ.ಎ. ನಾರಾಯಣಗೌಡ ನೇತೃತ್ವದಲ್ಲಿ ಮುಂಚಿನಿಂದಲೂ ಹೋರಾಟ ನಡೆಸುತ್ತಾ ಬಂದಿದ್ದೇವೆ. ಬೆಳಗಾವಿಯಲ್ಲಿ ಶಾಂತಿ ಸ್ಥಾಪನೆ ದೃಷ್ಟಿಯಿಂದ ಎಂಇಎಸ್‌ ಸಂಘಟನೆ ನಿಷೇಧಿಸುವಂತೆ ಒತ್ತಾಯಿಸುತ್ತಾ ಬಂದರೂ ಸರ್ಕಾರ ಮಾತ್ರ ಕಿವಿಗೊಟ್ಟಿಲ್ಲ ಎಂದು ದೂರಿದರು.

ರಾಜಕೀಯ ಪಕ್ಷಗಳು ಶಾಮೀಲು:

ಮಹಾರಾಷ್ಟ್ರದಲ್ಲಿ ಕನ್ನಡಿಗರ ಮೇಲೆ, ಕನ್ನಡಿಗರ ಆಸ್ತಿಪಾಸ್ತಿ, ಕನ್ನಡಿಗರು ಕಟ್ಟಿಬೆಳೆಸಿದ ಸಂಸ್ಥೆಗಳ ಮೇಲೆ ದಾಳಿ ಮಾಡುತ್ತಿರುವುದು ನಾಚಿಕೆಗೇಡಿನ ಸಂಗತಿ. ಇಂತಹವರ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ಮಹಾರಾಷ್ಟ್ರದ ಬಹುತೇಕ ರಾಜಕೀಯ ಪಕ್ಷಗಳು ಕನ್ನಡಿಗರ ವಿರುದ್ಧ ನಡೆಯುತ್ತಿರುವ ದಾಳಿಗಳಿಗೆ ಪ್ರಚೋದನೆ ನೀಡುತ್ತಿವೆ. ಶಿವಸೇನೆಯ ಎರಡೂ ಬಣಗಳು, ಎನ್‌ಸಿಪಿ, ಎಂಎನ್‌ಎಸ್‌ ಪಕ್ಷಗಳು ವಿಶೇಷವಾಗಿ ಇಂತಹ ಕುಕೃತ್ಯಗಳಲ್ಲಿ ನೇರವಾಗಿ ಶಾಮೀಲಾಗಿವೆ. ಈ ಹಿನ್ನೆಲೆಯಲ್ಲಿ ಮಹಾರಾಷ್ಟ್ರದ ಕನ್ನಡಿಗರ ರಕ್ಷಣೆಗೆ ಸಿಎಂ ಬಸವರಾಜ ಬೊಮ್ಮಾಯಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಮಧ್ಯ ಪ್ರವೇಶಿಸಬೇಕು ಎಂದು ಆಗ್ರಹಿಸಿದರು.

ಕರವೇ ಮಹಿಳಾ ಘಟಕದ ಜಿಲ್ಲಾಧ್ಯಕ್ಷ ಬಸಮ್ಮ, ಮಂಜುಳಾ ಮಹಾಂತೇಶ, ಸಾಕಮ್ಮ, ನಾಗಮ್ಮ, ಎನ್‌.ಟಿ.ಹನುಮಂತಪ್ಪ, ಗಜೇಂದ್ರ, ಜಿ.ಎಸ್‌.ಸಂತೋಷ್‌, ಗೋಪಾಲ ದೇವರಮನೆ, ಡಿ.ಮಲ್ಲಿಕಾರ್ಜುನ, ಆರ್‌.ರವಿಕುಮಾರ, ಜಬೀವುಲ್ಲಾ, ರಫೀಕ್‌, ಅನ್ವರ್‌, ನಾಗರಾಜ ಮೆಹರವಾಡೆ, ಎನ್‌.ಬಿ.ಎ.ಲೋಕೇಶ, ಹರಿಹರ ರಾಜೇಶ, ಮುಗ್ದುಂ, ಇಮ್ತಿಯಾಜ್‌, ರುದ್ರಗೌಡ, ಜಗಳೂರು ಮಹಾಂತೇಶ, ಸಿದ್ದೇಶ್‌, ರಹಮತ್‌, ಮುನ್ನಾ, ಸುರೇಶ, ತುಳಸಿರಾಮ, ಧೀರೇಂದ್ರ, ನಾಗರಾಜ, ಕರಿಬಸಪ್ಪ, ದಾದಾಪೀರ್‌ ಇತರರಿದ್ದರು.

ಗಡಿ ವಿವಾದ: ಪ್ರಚೋದನೆ ನಿಲ್ಲಿಸಿ, ‘ಮಹಾ’ ಸಿಎಂಗೆ ಬೊಮ್ಮಾಯಿ ತಾಕೀತು

ಮಹಾರಾಷ್ಟ್ರದ ಒತ್ತಡದಿಂದಲೇ ಕೇಂದ್ರ ಸರ್ಕಾರದಿಂದ ರಚಿಸಲ್ಪಟ್ಟಮಹಾಜನ್‌ ಏಕಸದಸ್ಯ ಆಯೋಗ ಬೆಳಗಾವಿ ಕರ್ನಾಟಕಕ್ಕೆ ಸೇರಬೇಕೆಂಬ ತೀರ್ಪು ನೀಡಿದೆ. ಆದರೆ, ಇದನ್ನು ಒಪ್ಪದ ಮಹಾರಾಷ್ಟ್ರ, ಅಲ್ಲಿನ ರಾಜಕಾರಣಿಗಳು ದಶಕಗಳಿಂದ ಬೆಳಗಾವಿಯಲ್ಲಿ ಕನ್ನಡಿಗರು, ಮರಾಠಿಗರ ಮಧ್ಯೆ ಸಂಘರ್ಷದ ವಾತಾವರಣ ನಿರ್ಮಿಸಲು ಪ್ರಯತ್ನಿಸುತ್ತಿದ್ದಾರೆ. ಬೆಳಗಾವಿಯಲ್ಲಿ ಭಾಷಾಂಧ ಗೂಂಡಾ ಸಂಘಟನೆ ಎಂಇಎಸ್‌ಗೆ ಹಣಕಾಸಿನ ಬೆಂಬಲ ನೀಡಿ, ಗಡಿ ಭಾಗದಲ್ಲಿ ದಾಳಿ ನಡೆಸಲು ಕಾರಣವಾಗುತ್ತಿದೆ.

ಎಂ.ಎಸ್‌.ರಾಮೇಗೌಡ, ಜಿಲ್ಲಾಧ್ಯಕ್ಷ, ಕರವೇ

click me!