
ಬೆಂಗಳೂರು (ಆ.18): ಕಾಂಗ್ರೆಸ್ ಪಕ್ಷದ ಕಾರ್ಯಕ್ರಮಗಳಲ್ಲಿ 'ವಂದೇ ಮಾತರಂ' ಗೀತೆಯ ಮೊದಲ ಎರಡು ಚರಣಗಳನ್ನು ಮಾತ್ರ ಹಾಡುವ ದಶಕಗಳ ಸಾಂಪ್ರದಾಯಿಕ ಪದ್ಧತಿಯನ್ನೇ ಮುಂದುವರಿಸಲಾಗುವುದು. "ನಮ್ಮನ್ನು ಜೈಲಿಗೆ ಹಾಕ್ತಾರೋ ಅಥವಾ ನೇಣಿಗೇ ಹಾಕ್ತಾರೋ, ನಾವು ಮೊದಲ ಎರಡು ಪ್ಯಾರಾಗಳನ್ನು ಮಾತ್ರ ಹಾಡುತ್ತೇವೆ" ಎಂದು ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಹೇಳಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಮಂಗಳವಾರ ದೆಹಲಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, 'ವಂದೇ ಮಾತರಂ' ಸಂಪೂರ್ಣ ಗೀತೆಯನ್ನು ಹಾಡುವ ಕುರಿತು ನಡೆಯುತ್ತಿರುವ ವಿವಾದದ ಕುರಿತು ಪ್ರತಿಕ್ರಿಯೆ ನೀಡಿದ್ದು, ಬಿಜೆಪಿ ಮತ್ತು ಆರೆಸ್ಸೆಸ್ (RSS) ನಾಯಕರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
ಕಾಂಗ್ರೆಸ್ ಪಕ್ಷದ ಇತಿಹಾಸವನ್ನು ನೆನಪಿಸಿದ ಬಿಕೆ ಹರಿಪ್ರಸಾದ್, 1896ರಿಂದಲೂ ಕಾಂಗ್ರೆಸ್ನ ಪ್ರತಿಯೊಂದು ಕಾರ್ಯಕ್ರಮಗಳಲ್ಲೂ ವಂದೇ ಮಾತರಂ'ನ ಮೊದಲ ಎರಡು ಚರಣಗಳನ್ನಷ್ಟೇ ಸಾಂಪ್ರದಾಯಿಕವಾಗಿ ಹಾಡಿಕೊಂಡು ಬರಲಾಗಿದೆ. ಗೀತೆಯ ಬಗ್ಗೆ ನಮಗೆ ಯಾವುದೇ ವಿರೋಧವಿಲ್ಲ. ಆದರೆ ನಮ್ಮ ಪಕ್ಷದ ಕಾರ್ಯಕ್ರಮಗಳಲ್ಲಿ ಸಂಪೂರ್ಣ ಹಾಡನ್ನು ಹಾಡುವುದಿಲ್ಲ, ಎರಡು ಚರಣಗಳನ್ನು ಮಾತ್ರ ಹಾಡುವುದು ನಮ್ಮ ಪಕ್ಷದ ಅಧಿಕೃತ ನಿರ್ಧಾರ ಎಂದರು.
ಇದೇ ವೇಳೆ, ಸರ್ಕಾರವೂ ಇದೇ ಪದ್ಧತಿಯನ್ನು ಅನುಸರಿಸಲಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಇದು ಕಾಂಗ್ರೆಸ್ ನೇತೃತ್ವದ ಸರ್ಕಾರವಾದರೂ, ಜನರಿಂದ ಆಯ್ಕೆಯಾದ ಸರ್ಕಾರವಾಗಿದೆ. ಸರ್ಕಾರವು ಕಾನೂನಿಗೆ ಬದ್ಧವಾಗಿರಬೇಕಾಗುತ್ತದೆ. ಸರ್ಕಾರ ಯಾವುದೇ ಕಾನೂನು ರೂಪಿಸಿದ್ದರೆ ಅದನ್ನು ಪಾಲಿಸಲೇಬೇಕಾಗುತ್ತದೆ ಎಂದಿದ್ದಾರೆ.
ದೆಹಲಿಗೆ ಹೋಗುವ ಮುನ್ನ ಬೆಂಗಳೂರಿನ ಕೆಂಗಲ್ ಗೇಟ್ನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ್ದು ಅವರು, ಬಿಜೆಪಿಯಿಂದ ಕಾಂಗ್ರೆಸ್ಗೆ ದೇಶಭಕ್ತಿ ಮತ್ತು ರಾಷ್ಟ್ರಪ್ರೇಮದ ಪ್ರಮಾಣಪತ್ರದ (Certificate) ಅಗತ್ಯವಿಲ್ಲ ಎಂದು ಹರಿಹಾಯ್ದರು. ಆರೆಸ್ಸೆಸ್ನವರು ತಮ್ಮ ಶಾಖೆಗಳಲ್ಲಿ 'ವಂದೇ ಮಾತರಂ' ಹಾಡುವುದಿಲ್ಲ, ಬದಲಾಗಿ 'ಸದಾ ವತ್ಸಲೇ' ಪ್ರಾರ್ಥನೆ ಹೇಳುತ್ತಾರೆ. 1925 ರಿಂದ 2026 ರವರೆಗೂ ಆರೆಸ್ಸೆಸ್ ಶಾಖೆಗಳಲ್ಲಿ ವಂದೇ ಮಾತರಂ ಹೇಳಿಲ್ಲ. ಅವರಿಂದ ನಾವು ದೇಶಭಕ್ತಿಯ ಪಾಠ ಕಲಿಯುವ ಅಗತ್ಯವಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಬಂಕಿಮ ಚಂದ್ರ ಚಟರ್ಜಿ ಅವರು ರಚಿಸಿದ ಈ ಗೀತೆಯನ್ನು ಮುಂದೆ ರವೀಂದ್ರನಾಥ ಠಾಗೋರ್ ಅವರು ಅಧಿಕೃತವಾಗಿ ಸಿದ್ಧಪಡಿಸಿದ ಇತಿಹಾಸ ನಮಗಿದೆ, ಬಿಜೆಪಿಯವರು ತಮಗೆ ಬೇಕಾದಂತೆ ವಿಷಯವನ್ನು ತಿರುಚುತ್ತಿದ್ದಾರೆ ಎಂದು ಹರಿಪ್ರಸಾದ್ ತಿರುಗೇಟು ನೀಡಿದರು.
ದೆಹಲಿ ಕಾಂಗ್ರೆಸ್ ಕಚೇರಿಯಲ್ಲಿ ಸೋನಿಯಾ ಗಾಂಧಿ ಅವರು ವಂದೇ ಮಾತರಂ ಹಾಡಿಗೆ ಆಕ್ಷೇಪವೆತ್ತಿದ್ದಾರೆ ಎಂಬ ಬಿಜೆಪಿಯ ಆರೋಪವನ್ನು ತಳ್ಳಿಹಾಕಿದ ಅವರು, ಸೋನಿಯಾ ಗಾಂಧಿ ವಿರುದ್ಧ ದೂರು ನೀಡಲು ಹೊರಟಿರುವುದು ಮೊಸರಿನಲ್ಲಿ ಕಲ್ಲು ಹುಡುಕುವ ಕೆಲಸ. ಅಂದು ವಂದೇ ಮಾತರಂ ಹಾಡುತ್ತಿದ್ದವರು ತಪ್ಪು ತಪ್ಪು ಪಂಕ್ತಿಗಳನ್ನು ಹಾಡುತ್ತಿದ್ದರು. ಅದನ್ನು 'ಸರಿಯಾಗಿ ಹಾಡಿ' ಎಂದು ಸೋನಿಯಾ ಗಾಂಧಿಯವರು ತಿದ್ದಿದರು. ಜತೆಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರಿಗೆ ಕುಳಿತುಕೊಳ್ಳಲು ಕುರ್ಚಿ ನೀಡಿ ಎಂದು ಹೇಳಿದ್ದಷ್ಟೇ ಎಂದು ಸ್ಪಷ್ಟನೆ ನೀಡಿದರು.
ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ಆರೆಸ್ಸೆಸ್ ಸಿದ್ಧಾಂತಗಳ ವಿರುದ್ಧ ವಾಗ್ದಾಳಿ ನಡೆಸಿದ ಹರಿಪ್ರಸಾದ್, "ಮಲ್ಲಿಕಾರ್ಜುನ ಖರ್ಗೆ ಭಾಷಣ ಮಾಡಿದ ಜಾಗವನ್ನು ಗಂಗಾ ನದಿಯ ನೀರು ತಂದು ಸ್ವಚ್ಛಗೊಳಿಸಿದ ಗೋಲ್ವಾಲ್ಕರ್ ಮನಸ್ಥಿತಿಯ ಚಿಂತನೆಗಳನ್ನು ಅಮಿತ್ ಶಾ ಅನುಷ್ಠಾನಗೊಳಿಸುತ್ತಿದ್ದಾರೆ" ಎಂದು ಗಂಭೀರ ಆರೋಪ ಮಾಡಿದರು.
Delhi:
“We will sing only two stanzas of Vande Mataram even if Modi govt sends us to jail or gives us the death penalty.”
- Karnataka Congress President BK Hariprasad pic.twitter.com/CWaNOzfiS7— News Arena India (@NewsArenaIndia) August 18, 2026