ಬಿಜೆಪಿ ತೆಕ್ಕೆಗೆ ಅಧಿಕಾರ ಒಲಿದಿದೆ. ಜೆಡಿಎಸ್ಗೆ ಮುಖಭಂಗವಾಗಿದೆ. ಬಹುಮತವಿದ್ದರೂ ಜೆಡಿಎಸ್ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನವನ್ನು ದಕ್ಕಿಸಿಕೊಳ್ಳಲಾಗಲಿಲ್ಲ. ಅಧ್ಯಕ್ಷ-ಉಪಾಧ್ಯಕ್ಷ ಮೀಸಲಾತಿ ಪ್ರಕಾರ ಅಧ್ಯಕ್ಷ, ಉಪಾಧ್ಯಕ್ಷ ಪಟ್ಟಗಳೆರಡು ಬಿಜೆಪಿ ಪಾಲಾಗಿವೆ.
ಹಾಸನ (ಏ.24): ಬಹು ನಿರೀಕ್ಷೆಯ ನಗರಸಭೆ ಅಧ್ಯಕ್ಷ ಉಪಾಧ್ಯಕ್ಷರ ನೇಮಕಾತಿ ಕೊನೆಗೂ ನೆರವೇರಿದೆ. ಬಹುಮತವಿದ್ದರೂ ಜೆಡಿಎಸ್ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನವನ್ನು ದಕ್ಕಿಸಿಕೊಳ್ಳಲಾಗಲಿಲ್ಲ. ಅಧ್ಯಕ್ಷ-ಉಪಾಧ್ಯಕ್ಷ ಮೀಸಲಾತಿ ಪ್ರಕಾರ ಅಧ್ಯಕ್ಷರಾಗಿ ಬಿಜೆಪಿ ಬೆಂಬಲಿಗರಾದ ಮೋಹನ್ ಹಾಗೂ ಉಪಾಧ್ಯಕ್ಷರಾಗಿ ಮಂಗಳಾ ಶುಕ್ರವಾರ ಅಧಿಕಾರ ಸ್ವೀಕರಿಸಿದರು.
ನಗರಸಭೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಆಯ್ಕೆ ಮಾಡಲು ಚುನಾವಣಾಧಿಕಾರಿ ಹಾಗೂ ಹಾಸನ ಉಪವಿಭಾಗಾಧಿಕಾರಿ ಜಗದೀಶ್ ಘೋಷಣೆ ಮಾಡಿದರು. ನ್ಯಾಯಾಲಯದ ಆದೇಶದಂತೆ ಫಲಿತಾಂಶ ಘೋಷಣೆ ಮಾಡಿದ ಚುನಾವಣಾ ಅಧಿಕಾರಿಗಳು 2020 ಅ.29ರಂದು ಚುನಾವಣೆ ನಿಗದಿ ಮಾಡಿದ್ದರು. ಕೋರ್ಟ್ ಆದೇಶದಂತೆ ಫಲಿತಾಂಶ ತಡೆ ಹಿಡಿಯಲಾಗಿತ್ತು. ಮೊನ್ನೆಯಷ್ಟೇ ಮೀಸಲು ಪ್ರಶ್ನಿಸಿ ಜೆಡಿಎಸ್ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ಪೀಠ ತಿರಸ್ಕರಿಸಿದ ಹಿನ್ನೆಲೆಯಲ್ಲಿ ಹೊರಬಿದ್ದ ಫಲಿತಾಂಶದ ಪ್ರಕಾರ ಅಧ್ಯಕ್ಷ- ಉಪಾಧ್ಯಕ್ಷ ಎರಡೂ ಬಿಜೆಪಿ ಪಕ್ಷಕ್ಕೆ ದಕ್ಕಿದಂತಾಗಿದೆ.
ಕಾಂಗ್ರೆಸ್ ಮುಖಂಡಗೆ ಸೋಲಿನ ಭೀತಿ : ಜೆಡಿಎಸ್ ನಾಯಕರಿಂದ ತಿರುಗೇಟು .
ಜೆಡಿಎಸ್ಗೆ ಮುಖಭಂಗ: ಜೆಡಿಎಸ್ ಬಹುಮತವಿದ್ದರೂ ಉಪಾಧ್ಯಕ್ಷ ಸ್ಥಾನಕ್ಕೆ ಸರಿಯಾದ ಸಮಯಕ್ಕೆ ನಾಮಪತ್ರ ಸಲ್ಲಿಸದೆ ಪ್ರತಿಭಟನೆಯಲ್ಲಿ ತೊಡಗಿತ್ತು. ಹಾಗಾಗಿ ಉಪಾಧ್ಯಕ್ಷ ಆ ಸ್ಥಾನವೂ ಬಿಜೆಪಿ ಪಾಲಾಗುವ ಮೂಲಕ ಹಾಸನದ ನಗರಸಭೆ ಐತಿಹಾಸಿಕ ಎಂಬಂತೆ ಬಿಜೆಪಿ ಪಾಲಾಗಿದೆ. ಪರಿಶಿಷ್ಟಪಂಗಡಕ್ಕೆ ಅಧ್ಯಕ್ಷ ಸ್ಥಾನ ಮೀಸಲಾದ್ದರಿಂದ ಬಹುಮತವಿಲ್ಲದಿದ್ದರೂ ಆ ಮೀಸಲಿನಿಂದ ಗೆದ್ದ ಏಕೈಕ ಸದಸ್ಯ ಮೋಹನ್ ಅಧ್ಯಕ್ಷರಾಗಿದ್ದಾರೆ. ಕೊರೋನಾ ಎರಡನೆ ಅಲೆ ಇರುವುದರಿಂದ ಮುನ್ನೆಚ್ಚರಿಕಾ ಕ್ರಮವಾಗಿ ಬಿಜೆಪಿಯ ಯಾವ ನಾಯಕರು ಇತ್ತ ಕಡೆ ಸುಳಿಯಲಿಲ್ಲ.