
ಮೈಸೂರು (ಜೂ.28): ಈ ಬಾರಿಯ 2027ರ ಜನಗಣತಿಯಲ್ಲಿ ನೀವೆಲ್ಲರೂ ಧರ್ಮದ ಕಾಲಂನಲ್ಲಿ ಬೌದ್ಧ ಧರ್ಮ, ಜಾತಿಯ ಕಾಲಂನಲ್ಲಿ ಮಹಾರ್ ಮತ್ತು ಭಾಷೆಯ ಕಾಲಂನಲ್ಲಿ ಪಾಲಿ ಎಂದು ನಮೂದಿಸುವುದು ಮುಖ್ಯ ಎಂದು ಡಾ.ಬಿ,ಆರ್. ಅಂಬೇಡ್ಕರ್ ಮೊಮ್ಮಗ ಭೀಮರಾವ್ ಯಶ್ವಂತ್ ಅಂಬೇಡ್ಕರ್ ಕರೆ ನೀಡಿದರು.
ನಗರದ ಬಲ್ಲಾಳ್ ವೃತ್ತ ಸಮೀಪದ ವಿಶ್ವಮೈತ್ರಿ ಬುದ್ದ ವಿಹಾರಕ್ಕೆ ಭೇಟಿ ನೀಡಿ ಮಾತನಾಡಿದರು.ಬೌದ್ಧ ಧರ್ಮದ ಪ್ರಚಾರ ಮತ್ತು ಪ್ರಸಾರಕ್ಕೆ ಮೈಸೂರಿನ ಈ ವಿಹಾರವು ಪ್ರಮುಖ ಕೇಂದ್ರವಾಗಲಿ. ಕರ್ನಾಟಕದಲ್ಲಿ ಬೀದರ್, ಭಾಲ್ಕಿ ಮತ್ತು ಗುಲ್ಬರ್ಗಾದಲ್ಲಿ ಬೌದ್ಧ ಧರ್ಮ ಉತ್ತಮ ಪ್ರಭಾವ ಬೀರಿದೆ. ನಮ್ಮ ಪುರಾತತ್ವ ಇಲಾಖೆಯು ಭಗವಾನ್ ಬುದ್ಧ ಮತ್ತು ಸಾಮ್ರಾಟ್ ಅಶೋಕನ ಕಾಲದ ಇತಿಹಾಸ ಹಾಗೂ ಪವಿತ್ರ ಸ್ಥಳವನ್ನು ಸಂಶೋಧಿಸಿ, ಅವುಗಳನ್ನು ಪುನರ್ ನಿರ್ಮಿಸಲು ಕ್ರಮ ಕೈಗೊಳ್ಳಬೇಕು ಎಂದರು.
ಬಾಬಾಸಾಹೇಬ್ ಅಂಬೇಡ್ಕರ್ ಅವರು ದೇಶದಲ್ಲಿ ತಂದ ಧಮ್ಮ ಕ್ರಾಂತಿಯತ್ತ ನಾವೆಲ್ಲರೂ ಗಮನ ಹರಿಸಬೇಕು. ಬೌದ್ಧ ಧರ್ಮದ ಪ್ರಚಾರ ಮತ್ತು ಪ್ರಸಾರಕ್ಕೆ ಮೈಸೂರಿನ ಈ ವಿಹಾರವು ಪ್ರಮುಖ ಕೇಂದ್ರವಾಗಬೇಕು. ಭವಿಷ್ಯದ ಮಕ್ಕಳಿಗೆ ಇದು ಮಾರ್ಗದರ್ಶಕವಾಗಲಿ ಎಂದು ಅವರು ಆಶಿಸಿದರು.
ಯಾದಗಿರಿ ಸಮೀಪ ಚಕ್ರವರ್ತಿ ಸಾಮ್ರಾಟ ಅಶೋಕನ ಎರಡನೇ ರಾಜಧಾನಿಗೆ ಸಂಬಂಧಿಸಿದ ಮಹತ್ವದ ದಾಖಲೆ ಇದೆ ಎಂದು ತಿಳಿಯಿತು. ಆದರೆ ಅಲ್ಲಿಗೆ ಭೇಟಿ ನೀಡಲು ಸಾಧ್ಯವಾಗಲಿಲ್ಲ. ಯಾದಗಿರಿ ಜಿಲ್ಲೆಯಲ್ಲಿ ಭಾರತೀಯ ಬೌದ್ಧ ಮಹಾಸಭೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದೆ. ಅಲ್ಲಿನ ಬೌದ್ಧ ಸಮುದಾಯದ ಉತ್ಸಾಹ, ಸಂಘಟಿತ ಕಾರ್ಯವೈಖರಿ ಮತ್ತು ಧಮ್ಮದ ಮೇಲಿನ ನಿಷ್ಠೆ ನನ್ನನ್ನು ಆಳವಾಗಿ ಪ್ರಭಾವಿಸಿತು. ಅಲ್ಲಿ ಭಕ್ತರು ಸೇರಿ ಸುಂದರವಾದ ಬುದ್ಧ ವಿಹಾರ ನಿರ್ಮಿಸಿರುವುದು ನಿಜಕ್ಕೂ ಶ್ಲಾಘನೀಯ ಎಂದರು.
ಭಾರತೀಯ ಬೌದ್ಧ ಮಹಾಸಭೆಯು ಮುಖ್ಯಮಂತ್ರಿ ಹಾಗೂ ಪುರಾತತ್ವ ಇಲಾಖೆಗೆ ಮನವಿ ಸಲ್ಲಿಸಿ, ಅಮೂಲ್ಯ ಬೌದ್ಧ ಪರಂಪರೆಯ ತಾಣವನ್ನು ವೈಜ್ಞಾನಿಕವಾಗಿ ಸಂಶೋಸಿ, ಸಂರಕ್ಷಿಸಿ, ಅಭಿವೃದ್ಧಿಪಡಿಸಬೇಕು. ಆ ಮೂಲಕ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸುವಂತೆ ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದರು.
ಕೊಳ್ಳೆಗಾಲದ ಮನೋರಕ್ಷಿತ ಭಂತೇಜಿ, ಡಾ. ಕಲ್ಯಾಣಸಿರಿ ಭಂತೇಜಿ, ಗೌತಮ ಭಂತೇಜಿ, ಉರಿಲಿಂಗಿ ಪೆದ್ದಿಮಠದ ಶ್ರೀ ಜ್ಞಾನಪ್ರಕಾಶ್ ಸ್ವಾಮೀಜಿ, ನಿವೃತ್ತ ಡಿಸಿಪಿ ಸಿದ್ದರಾಜು, ಭಾಲ್ಕಿ, ಮಿಲಿಂದಾ, ಮಾಜಿ ಮೇಯರ್ ಪುರುಷೋತ್ತಮ್ ಮೊದಲಾದವರು ಇದ್ದರು.