ಪಕೋಡ ಮಾಡುವ ಮೂಲಕ ವಿಭಿನ್ನ ಪ್ರತಿಭಟನೆ: ಮೊಗೇರರಿಂದ ಮುಂದುವರಿದ ಧರಣಿ ಸತ್ಯಾಗ್ರಹ

By Govindaraj SFirst Published Apr 3, 2022, 10:22 PM IST
Highlights

ರಸ್ತೆ ಬದಿಯಲ್ಲಿ ಪಕೋಡ ಮಾರಿ ಜೀವನ ಸಾಗಿಸುತ್ತಿದ್ದಾರೆ ಎಂದು ಬಿಂಬಿಸುವ ಅಣುಕು ಪ್ರದರ್ಶನ ಮೊಗೇರ ಸಮಾದ ಧರಣಿ ಸತ್ಯಾಗ್ರಹದ ಭಾಗವಾಗಿ ಭಟ್ಕಳದಲ್ಲಿ ಪ್ರದರ್ಶಿಸಲಾಯಿತು.

ಭರತ್‌ರಾಜ್ ಕಲ್ಲಡ್ಕ, ಏಷಿಯಾನೆಟ್ ಸುವರ್ಣ ನ್ಯೂಸ್, ಕಾರವಾರ

ಭಟ್ಕಳ (ಏ.03): ಉತ್ತರ ಕನ್ನಡ ಜಿಲ್ಲೆಯ ಮೊಗೇರ ಸಮಾಜಕ್ಕೆ (Mogera Community) ಪರಿಶಿಷ್ಟ ಜಾತಿ ಪ್ರಮಾಣ ಪತ್ರ ಕೊಡುವುದನ್ನು ನಿಲ್ಲಿಸಿದ್ದರಿಂದ ಅನೇಕ ವಿದ್ಯಾವಂತ ಯುವಕರು ನಿರುದ್ಯೋಗಿಗಳಾಗಿದ್ದಾರೆ. ಅವರು ರಸ್ತೆ ಬದಿಯಲ್ಲಿ ಪಕೋಡ ಮಾರಿ ಜೀವನ ಸಾಗಿಸುತ್ತಿದ್ದಾರೆ ಎಂದು ಬಿಂಬಿಸುವ ಅಣುಕು ಪ್ರದರ್ಶನ ಮೊಗೇರ ಸಮಾದ ಧರಣಿ ಸತ್ಯಾಗ್ರಹದ (Protest) ಭಾಗವಾಗಿ ಭಟ್ಕಳದಲ್ಲಿ ಪ್ರದರ್ಶಿಸಲಾಯಿತು. ಉತ್ತರಕನ್ನಡ ಜಿಲ್ಲೆಯ ಭಟ್ಕಳದಲ್ಲಿ (Bhatkal) ಮೊಗೇರ ಸಮಾಜದವರು ನಡೆಸುತ್ತಿರುವ ಧರಣಿ ಸತ್ಯಾಗ್ರಹದ ಸ್ಥಳದಲ್ಲಿ ಸಮಾಜದ ಕೆಲವು ನಿರುದ್ಯೋಗಿ ಯುವಕರು ಪಕೋಡಾ, ಬೋಂಡಾ, ಮೆಣಸು ಬಜ್ಜಿ ತಯಾರು ಮಾಡಿ ಮಾರಾಟ ಮಾಡುವುದರ ಮೂಲಕ ತಮಗಾಗಿರುವ ಅನ್ಯಾಯದ ವಿರುದ್ಧ ಸರಕಾರದ ಗಮನ ಸೆಳೆಯಲು ಪ್ರಯತ್ನಿಸಿದರು.

ಈ ವೇಳೆ ಮಾತನಾಡಿದ ಮೊಗೇರ‌ ಸಮುದಾಯದ ಮುಖಂಡರು, ನಮ್ಮ ಸಹೋದರರು ಶಿಕ್ಷಣ ಪಡೆದಿದ್ದರೂ, ಈ ಹಿಂದೆ ನೀಡಲಾಗುತ್ತಿದ್ದ ಪರಿಶಿಷ್ಟ ಜಾತಿ ಪ್ರಮಾಣ ಪತ್ರವನ್ನು ಸರಕಾರ ಸ್ಥಗಿತಗೊಳಿಸಿದ್ದರಿಂದ ಸಿಂಧುತ್ವ ಪ್ರಮಾಣ ಪತ್ರ ಸಿಗದೇ ಸರಕಾರಿ ಉದ್ಯೋಗಕ್ಕೆ ಹೋಗಲು ಆಗಿಲ್ಲ. ಹೀಗಾಗಿ ನಾವೆಲ್ಲಾ ಸ್ವ ಉದ್ಯೋಗ ಮಾಡಿಕೊಂಡು ಪಕೋಡಾ ಮಾರಿ ಜೀವನ ಸಾಗಿಸುತ್ತೇವೆ. ಸಮಾಜದಲ್ಲಿ  ಸುಮಾರು 3 ಸಾವಿರಕ್ಕೂ ಅಧಿಕ ಜನರು ಉನ್ನತ ಶಿಕ್ಷಣ ಕಲಿತಿದ್ದರೂ ಜಾತಿ ಪ್ರಮಾಣ ಪತ್ರ ರದ್ದತಿಯಿಂದ ಸರಕಾರಿ ಉದ್ಯೋಗ ಮಾಡಲು ಹಿನ್ನಡೆಯಾಗಿದೆ. ಸರಕಾರ ಇನ್ನಾದರೂ ನಮ್ಮ ಸಮಾಜದ ಬೇಡಿಗೆ ಈಡೇರಿಸಿ ಸ್ಥಗಿತಗೊಳಿಸಲಾಗಿದ್ದ ಪರಿಶಿಷ್ಟ ಜಾತಿ ಪ್ರಮಾಣ ಪತ್ರವನ್ನು ಪುನಃ ನೀಡಲು ಮುಂದಾಗಬೇಕು ಎಂದು ಆಗ್ರಹಿಸಿದ್ದಾರೆ. 

Kumta: ಅಬ್ಬೊಳ್ಳಿಯಲ್ಲಿ 3 ಕಾಳಿಂಗ ಸರ್ಪಗಳ ರಕ್ಷಣೆ ಮಾಡಿದ ಅರಣ್ಯ ಇಲಾಖೆಯ ಸಿಬ್ಬಂದಿ

ಪರಿಶಿಷ್ಟ ಜಾತಿ ಸೌಲಭ್ಯ ನೀಡುವಂತೆ ಪಟ್ಟು: ಮೊಗೇರರಿಗೆ ಈ ಹಿಂದೆ ನೀಡುತ್ತಿದ್ದ ಪರಿಶಿಷ್ಟಜಾತಿ ಪ್ರಮಾಣಪತ್ರ ವಿತರಿಸುವುದನ್ನು ಮುಂದುವರಿಸಬೇಕು ಮತ್ತು ಸರ್ಕಾರ ಸಮಾಜದವರಿಗೆ ಹೊಸದಾಗಿ ನೀಡುತ್ತಿರುವ ಪ್ರವರ್ಗ-1ರ ಪ್ರಮಾಣಪತ್ರ ರದ್ದುಪಡಿಸಬೇಕೆಂದು ಆಗ್ರಹಿಸಿ ತಾಲೂಕಿನ ಮೊಗೇರ ಸಮಾಜದ ಸಾವಿರಾರು ಮಂದಿ ಬೃಹತ್‌ ಪ್ರತಿಭಟನಾ ರ್ಯಾಲಿ ನಡೆಸಿದರು. 

ಇತ್ತೀಚೆಗೆ ಸರ್ಕಾರ ಕಂದಾಯ ದಾಖಲೆಗಳು ಮನೆ ಬಾಗಿಲಿಗೆ ಕಾರ್ಯಕ್ರಮದಲ್ಲಿ ಭಟ್ಕಳ ತಾಲೂಕಿನ ಬೆಳ್ನಿ ಮುಂತಾದ ಕಡೆ ಮೊಗೇರರಿಗೆ ಪ್ರವರ್ಗ-1ರಲ್ಲಿ ಜಾತಿ ಪ್ರಮಾಣಪತ್ರ ನೀಡಲು ಕಂದಾಯ ಇಲಾಖೆ ಮುಂದಾಗಿತ್ತು. ಇದರಿಂದ ತೀವ್ರ ಆಕ್ರೋಶಗೊಂಡ ಮೊಗೇರ ಸಮಾಜದ ಜನರು ಆಕ್ರೋಶಗೊಂಡು ಬೀದಿಗಿಳಿದಿದ್ದರು. ಸುಮಾರು 4.5 ಕಿ.ಮೀ. ಪ್ರತಿಭಟನಾ ರಾರ‍ಯಲಿ ನಡೆಸಿದ ಮೊಗೇರ ಸಮಾಜದ ಜನರು ತಾಲೂಕು ಪಂಚಾಯತ್‌ ಬಳಿ 20 ನಿಮಿಷಕ್ಕೂ ಹೆಚ್ಚು ಕಾಲ ಹೆದ್ದಾರಿ ತಡೆದು ಆಗ್ರಹಿಸಿದರು. ಬೇಡಿಕೆ ಈಡೇರಿಸದಿದ್ರೆ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ. 

ಮೊಗೇರರಿಗೆ ಎಸ್ಸಿ ಪ್ರಮಾಣಪತ್ರ ನೀಡದಿರಿ: ಉತ್ತರ ಕನ್ನಡದ ಮೀನುಗಾರ ಮೊಗೇರರಿಗೆ ಪರಿಶಿಷ್ಟಜಾತಿ ಪ್ರಮಾಣಪತ್ರ ನೀಡುವುದಕ್ಕೆ ಉತ್ತರ ಕನ್ನಡ ಜಿಲ್ಲಾ ನೈಜ ಪರಿಶಿಷ್ಟಜಾತಿ/ಪಂಗಡಗಳ ಸಾಂವಿಧಾನಿಕ ಹಕ್ಕುಗಳ ರಕ್ಷಣಾ ಒಕ್ಕೂಟ ತೀವ್ರ ವಿರೋಧ ವ್ಯಕ್ತಪಡಿಸಿದೆ. ಅಲ್ಲದೆ, ದಂಡಿನದುರ್ಗಾ ದೇವಸ್ಥಾನದಿಂದ ಗುರುವಾರ ಸಂಜೆ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು. ಬಳಿಕ ಸಹಾಯಕ ಆಯುಕ್ತರಿಗೆ ಮನವಿ ಸಲ್ಲಿಸಲಾಯಿತು. ಒಕ್ಕೂಟದ ಮುಖಂಡ ತುಳಸೀದಾಸ ಪಾವಸ್ಕರ್‌ ಮಾತನಾಡಿ, ಉತ್ತರ ಕನ್ನಡ ಜಿಲ್ಲೆಯ ಮೊಗೇರರು ಪರಿಶಿಷ್ಟಜಾತಿಗೆ ಸೇರಿದ ಮೊಗೇರರೇ ಅಲ್ಲ.

Uttara Kannada: ಕುಮಟಾದಲ್ಲಿ ಶಾಲಾ ಬಳಿಯೇ ಎಂಎಸ್‌ಐಎಲ್ ನಿರ್ಮಾಣಕ್ಕೆ ಸಿದ್ಧತೆ

ಅವರು ಹಿಂದುಳಿದ ಪ್ರವರ್ಗ-1ರಲ್ಲಿ ಬರುವ ಮೊಗೇರರಾಗಿದ್ದು ಅವರಿಗೆ ಪರಿಶಿಷ್ಟಜಾತಿ ಪ್ರಮಾಣಪತ್ರ ನೀಡುವುದರಿಂದ ನೈಜ ಪರಿಶಿಷ್ಟರಿಗೆ ಅನ್ಯಾಯವಾಗಲಿದೆ ಎಂದರು. ಉತ್ತರ ಕನ್ನಡ ಜಿಲ್ಲೆಯ ಮೀನುಗಾರ ವೃತ್ತಿಯ ಪ್ರವರ್ಗ-1ರ ಯಾದಿಯಲ್ಲಿನ ಮೊಗೇರ ಸಮಾಜದವರು ಭಟ್ಕಳದಲ್ಲಿ ಎಸ್ಸಿ ಪ್ರಮಾಣಪತ್ರಕ್ಕಾಗಿ ಧರಣಿ ಸತ್ಯಾಗ್ರಹ ನಡೆಸುತ್ತಿರುವುದು ಜಿಲ್ಲೆಯ ನೈಜ ಪರಿಶಿಷ್ಟರಾದ ಸಮಗಾರ, ಕೊರಾರ, ಭಂಗಿ, ಝಾಡಮಾಲಿ, ಹಳ್ಳೇರ, ಹಸ್ಲರ, ಬಾಕಡ, ಮುಕ್ರಿ, ಅಗೇರ ಹುಲಸ್ವಾರ ಇತ್ಯಾದಿ ಜನತೆಯಲ್ಲಿ ಆತಂಕ ಮನೆ ಮಾಡಿದ್ದು ನಮ್ಮ ಸಾಂವಿಧಾನಿಕ ಹಕ್ಕನ್ನು ಮೇಲ್ಜಾತಿಯವರು ಕಬಳಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದರು.

click me!