ಬೆಂಗಳೂರು ವಾಹನ ಸವಾರರ ಗಮನಕ್ಕೆ: ವಾರಾಂತ್ಯ 27, 28 ರಂದು ಈ ರಸ್ತೆಗಳ ಸಂಚಾರ ಮಾರ್ಪಾಡು; ಪರ್ಯಾಯ ಮಾರ್ಗಗಳು ಇಲ್ಲಿವೆ!

Published : Jun 26, 2026, 09:45 PM IST
Bengaluru Traffic Diversion

ಸಾರಾಂಶ

ಜೂನ್ 27 ಮತ್ತು 28 ರಂದು ಬೆಂಗಳೂರಿನಲ್ಲಿ ಕೆಂಪೇಗೌಡ ಜಯಂತಿ ಮತ್ತು ಮಾದಕ ವ್ಯಸನ ವಿರೋಧಿ ದಿನಾಚರಣೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ, ಕೆಂಗೇರಿ, ಮೈಸೂರು ರಸ್ತೆ ಮತ್ತು ಕಂಠೀರವ ಕ್ರೀಡಾಂಗಣದ ಸುತ್ತಮುತ್ತಲಿನ ರಸ್ತೆಗಳಲ್ಲಿ ಸಂಚಾರ ನಿರ್ಬಂಧಗಳನ್ನು ವಿಧಿಸಲಾಗಿದೆ.

ಬೆಂಗಳೂರು (ಜೂ.26): ಈ ವಾರಾಂತ್ಯದಲ್ಲಿ ಸಿಲಿಕಾನ್ ಸಿಟಿಯಲ್ಲಿ ಎರಡು ದೊಡ್ಡ ಮಟ್ಟದ ಕಾರ್ಯಕ್ರಮಗಳು ನಡೆಯಲಿವೆ. ಜೂನ್ 27 ರಂದು ಕೆಂಗೇರಿ ಭಾಗದಲ್ಲಿ 'ಕೆಂಪೇಗೌಡ ಜಯಂತಿ' ಮತ್ತು ಜೂನ್ 28 ರಂದು ಕಂಠೀರವ ಕ್ರೀಡಾಂಗಣದಲ್ಲಿ 'ಮಾದಕ ವ್ಯಸನ ವಿರೋಧಿ ದಿನ' ಕಾರ್ಯಕ್ರಮಗಳು ನಡೆಯಲಿವೆ. ಈ ಹಿನ್ನೆಲೆಯಲ್ಲಿ ಕೆಂಗೇರಿ, ಮೈಸೂರು ರಸ್ತೆ ಮತ್ತು ನಗರದ ಮಧ್ಯಭಾಗದ ರಸ್ತೆಗಳಲ್ಲಿ ಸಂಚಾರ ದಟ್ಟಣೆ ಉಂಟಾಗುವ ಸಾಧ್ಯತೆಯಿದ್ದು, ಸಂಚಾರ ಪೊಲೀಸರು ಪರ್ಯಾಯ ಮಾರ್ಗಗಳನ್ನು ಸೂಚಿಸಿದ್ದಾರೆ.

ಜೂನ್ 27: ಕೆಂಗೇರಿ ಮತ್ತು ಮೈಸೂರು ರಸ್ತೆ ಭಾಗದಲ್ಲಿ ನಿರ್ಬಂಧ (ಬೆಳಿಗ್ಗೆ 6 ರಿಂದ ಸಂಜೆ 4 ರವರೆಗೆ)

ಕೆಂಗೇರಿ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯ ಎಂ.ಎ.ಆರ್ ರಸ್ತೆಯ ಉದ್ಘಾಟನೆ ಮತ್ತು ಕೆಂಪೇಗೌಡ ಜಯಂತಿ ಕಾರ್ಯಕ್ರಮಕ್ಕೆ ಮಾನ್ಯ ಮುಖ್ಯಮಂತ್ರಿಗಳು ಆಗಮಿಸುತ್ತಿದ್ದಾರೆ. ಸುಮಾರು 40 ರಿಂದ 50 ಸಾವಿರ ಜನರು ಸೇರುವ ನಿರೀಕ್ಷೆಯಿದೆ.

ಸಂಚಾರ ನಿರ್ಬಂಧ: ಮೈಸೂರು ರಸ್ತೆಯ ಮಾರಿಗೋಲ್ಡ್ ಶಾಲೆಯ ಜಂಕ್ಷನ್‌ನಿಂದ ಭೀಮನಕುಪ್ಪೆ ಜಂಕ್ಷನ್ ವರೆಗೆ ಮತ್ತು ಕೊಮ್ಮಘಟ್ಟ ಜಂಕ್ಷನ್‌ನಿಂದ ಹೊಸಕೆರೆ ಗ್ರಾಮದ ಜಂಕ್ಷನ್ ವರೆಗೆ ಎಲ್ಲಾ ರೀತಿಯ ಸರಕು ಸಾಗಣೆ ವಾಹನಗಳ ಸಂಚಾರವನ್ನು ನಿಷೇಧಿಸಲಾಗಿದೆ.

ಪರ್ಯಾಯ ಮಾರ್ಗ: ಸರಕು ವಾಹನಗಳು ಚಲ್ಲಘಟ್ಟ ಮೆಟ್ರೋ ನಿಲ್ದಾಣದ ಮೂಲಕ ನೈಸ್ ರಸ್ತೆಯನ್ನು ಬಳಸಬಹುದು ಅಥವಾ ವಿಶ್ವೇಶ್ವರಯ್ಯ ಲೇಔಟ್ ರಿಂಗ್ ರಸ್ತೆ ಹಾಗೂ ಉಲ್ಲಾಳು ಮೂಲಕ ಮಾಗಡಿ ರಸ್ತೆಗೆ ಸಾಗಬಹುದು.

ನಿಧಾನಗತಿ ಸಂಚಾರ: ಮೈಸೂರು ರಸ್ತೆಯ ಮಧು ಜಂಕ್ಷನ್‌ನಿಂದ ಕುಂಬಳಗೋಡು ವರೆಗೆ ಮತ್ತು ಕೆಂಗೇರಿ ಉಪನಗರದ ರೈನ್‌ಬೋ ಬ್ರಿಡ್ಜ್ ಸುತ್ತಮುತ್ತ ಸಂಚಾರ ನಿಧಾನಗತಿಯಲ್ಲಿರಲಿದೆ.

ಜೂನ್ 28: ಕಂಠೀರವ ಕ್ರೀಡಾಂಗಣದ ಸುತ್ತಮುತ್ತ ಬದಲಾವಣೆ

ಹಲಸೂರು ಗೇಟ್ ಸಂಚಾರ ಠಾಣಾ ವ್ಯಾಪ್ತಿಯ ಕಂಠೀರವ ಕ್ರೀಡಾಂಗಣದಲ್ಲಿ 'ನಶಮುಕ್ತ ಭಾರತ' ಕಾರ್ಯಕ್ರಮ ನಡೆಯಲಿದ್ದು, ಗಣ್ಯ ವ್ಯಕ್ತಿಗಳು ಸೇರಿದಂತೆ 15,000ಕ್ಕೂ ಹೆಚ್ಚು ಜನರು ಭಾಗವಹಿಸಲಿದ್ದಾರೆ.

ಪಾರ್ಕಿಂಗ್ ನಿಷೇಧಿತ ರಸ್ತೆಗಳು: ಶೇಷಾದ್ರಿ ರಸ್ತೆ, ನೃಪತುಂಗ ರಸ್ತೆ, ಕೆ.ಜಿ ರಸ್ತೆ, ವಿಠಲ ಮಲ್ಯ ರಸ್ತೆ ಮತ್ತು ಆರ್.ಆರ್.ಎಂ.ಆರ್ ರಸ್ತೆಗಳಲ್ಲಿ ವಾಹನ ನಿಲುಗಡೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.

ನಿಗದಿಪಡಿಸಿದ ಪಾರ್ಕಿಂಗ್ ಸ್ಥಳಗಳು: ಕಾರ್ಯಕ್ರಮಕ್ಕೆ ಬರುವವರು ಸೇಂಟ್ ಜೋಸೆಫ್ ಹೈಸ್ಕೂಲ್ ಮೈದಾನ, ಫ್ರೀಡಂ ಪಾರ್ಕ್ ಎಂಎಲ್‌ಸಿಪಿ ಪಾರ್ಕಿಂಗ್ ಅಥವಾ ಬೆಂಗಳೂರು ಅರಮನೆ ಮೈದಾನದ ಗೇಟ್ ನಂ. 4 ರಲ್ಲಿ ವಾಹನ ನಿಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.

ಸಾರ್ವಜನಿಕರು ಈ ಬದಲಾವಣೆಗಳನ್ನು ಗಮನಿಸಿ, ಪೊಲೀಸರೊಂದಿಗೆ ಸಹಕರಿಸಲು ಮತ್ತು ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲು ಕೋರಲಾಗಿದೆ.

PREV
Read more Articles on
click me!

Recommended Stories

ಆ 3 ನಿಮಿಷ..! ಬೆಂಗಳೂರಿನ ತ್ರಿವಳಿ ಮರ್ಡರ್ ಹಿಂದಿನ ಭಯಾನಕ ಸತ್ಯ: ಅಮ್ಮನ ರಕ್ತ ಒರೆಸುವಾಗಲೇ ಬಂದೇಬಿಟ್ಟ ಅಪ್ಪ!
ನಟಿ ಕೃಷಿ ತಾಪಂಡ ಬೆಡ್​ರೂಮಿನಲ್ಲಿ ಗೆಳೆಯನ ಡೆಡ್​​ಬಾಡಿ! 7 ತಿಂಗಳಲ್ಲಿ ಏನೆಲ್ಲಾ ನಡೆದುಬಿಡ್ತು ಅವಳ ಬಾಳಲ್ಲಿ!