45,000 ಕೋಟಿ ವೆಚ್ಚ​ದಲ್ಲಿ ಬೆಂಗ​ಳೂರು-ಪುಣೆ ಹೆದ್ದಾರಿ: ಕೇಂದ್ರ ಸಚಿವ ನಿತಿನ್‌ ಗಡ್ಕರಿ

By Kannadaprabha NewsFirst Published Jan 6, 2023, 2:30 AM IST
Highlights

ಒಟ್ಟು 700 ಕಿ.ಮೀ. ಪೈಕಿ ಕರ್ನಾ​ಟ​ಕ​ದಲ್ಲಿ 500, ಮಹಾ​ರಾಷ್ಟ್ರ 200 ಕಿ.ಮೀ. ಸಂಪರ್ಕ, ಭವಿ​ಷ್ಯ​ದಲ್ಲಿ ಶಿರಡಿ ಕೇವಲ 7 ಗಂಟೆ ಪ್ರಯಾಣ ಆಗ​ಲಿದೆ: ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್‌ ಗಡ್ಕರಿ

ರಾಮನಗರ(ಜ.06):  ಭಾರತ್‌ ಮಾಲಾ ಯೋಜನೆಯ ಎರಡನೇ ಹಂತದಲ್ಲಿ ಬೆಂಗಳೂರು - ಪುಣೆ ನಗರಗಳ ನಡುವಿನ 700 ಕಿ.ಮೀ ಹೆ​ದ್ದಾ​ರಿ​ ಅಭಿವೃದ್ಧಿ ಕಾಮ​ಗಾರಿ ಕೈಗೆ​ತ್ತಿ​ಕೊ​ಳ್ಳಲಾಗುತ್ತಿದೆ ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್‌ ಗಡ್ಕರಿ ತಿಳಿ​ಸಿ​ದರು.  ಸುದ್ದಿ​ಗೋ​ಷ್ಠಿ​ಯಲ್ಲಿ ಮಾತ​ನಾ​ಡಿದ ಅವರು, ಬೆಂಗ​ಳೂರು - ಪುಣೆ ಹೆದ್ದಾರಿ ನಿರ್ಮಾ​ಣಕ್ಕೆ ಸುಮಾರು 45 ಸಾವಿರ ಕೋಟಿ ರುಪಾಯಿ ವೆಚ್ಚ​ ತಗು​ಲ​ಲಿದೆ. ಒಟ್ಟು 700 ಕಿ.ಮೀ ಪೈಕಿ ಕರ್ನಾ​ಟ​ಕ​ದಲ್ಲಿ 500, ಮಹಾ​ರಾಷ್ಟ್ರ 200 ಕಿ.ಮೀ. ಹೆದ್ದಾರಿ ಇರ​ಲಿ​ದೆ. ಈ ಹೆದ್ದಾ​ರಿ​ಯು ಮುಂಬೈ - ಪುಣೆ ಮತ್ತು ಬೆಂಗಳೂರು- ಚೆನ್ನೈ ಹೆದ್ದಾರಿಗಳಿಗೆ ಸಂಪರ್ಕ ಸಾಧಿಸಲಿದೆ. ಬೆಂಗ​ಳೂರು - ಚೆನ್ನೈ ಎಕ್ಸ್‌ಪ್ರೆಸ್‌ ಹೆದ್ದಾರಿಗೆ 16730 ಕೋಟಿ ರು. ವೆಚ್ಚವಾಗ​ಲಿದ್ದು, ಕಾಮ​ಗಾರಿ ಪ್ರಗ​ತಿ​ಯ​ಲ್ಲಿದೆ. ಈ ಹೆದ್ದಾರಿ 262 ಕಿಮೀ ಉದ್ದ ಇದೆ. ಕರ್ನಾಟಕ, ಆಂಧ್ರ ಪ್ರದೇಶ ಮತ್ತು ತಮಿಳುನಾಡು ರಾಜ್ಯಗಳ ಮೂಲಕ ಹೆದ್ದಾರಿ ಹಾದು ಹೋಗ​ಲಿದೆ.

ಕರ್ನಾಟಕದಲ್ಲಿ ಒಟ್ಟು 71 ಕಿಮಿ ಉದ್ದದ ರಸ್ತೆಯನ್ನು 5069 ಕೋಟಿ ರು. ವೆಚ್ಚದಲ್ಲಿ ನಿರ್ಮಿಸಲಾಗುತ್ತಿದೆ. ಈ ರಸ್ತೆಯಲ್ಲಿ ವಾಹನಗಳು ಸುಮಾರು 120 ಕಿಮೀ ವೇಗದಲ್ಲಿ ಸಂಚರಿಸಲು ಅನುಕೂಲವಾಗುವಂತೆ ನಿರ್ಮಿಸಲಾಗಿದೆ. ಬೆಂಗಳೂರು - ಚೆನ್ನೈ ನಡುವೆ ಶೇ.15ರಷ್ಟು ರಸ್ತೆ ಕಡಿಮೆಯಾಗಲಿದೆ. ಅಲ್ಲದೆ ಸಂಚಾರದ ಸಮಯ ಐದು ಗಂಟೆಯಿಂದ ಎರಡೂವರೆ ಗಂಟೆಗೆ ಇಳಿಕೆಯಾಗಲಿದೆ ಎಂದು ಹೇಳಿದರು.

ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ ಹೈವೆ ವೈಮಾನಿಕ ಸಮೀಕ್ಷೆ ನಡೆಸಿದ ನಿತಿನ್ ಗಡ್ಕರಿ

ಇನ್ನು 13,600 ಕೋಟಿ ರುಪಾಯಿ ವೆಚ್ಚ​ದಲ್ಲಿ ಬೆಂಗ​ಳೂರು - ಕಡಪ - ವಿಜ​ಯ​ವಾಡ ಹೆದ್ದಾರಿ ನಿರ್ಮಾಣ ಕಾರ್ಯ ಕೈಗೆ​ತ್ತಿ​ಕೊ​ಳ್ಳ​ಲಾ​ಗಿದೆ. ಈ ಹೆದ್ದಾರಿ ರಸ್ತೆ ನಿರ್ಮಾಣವಾದ ನಂತರ ಎರಡೂ ನಗರಗಳ ನಡುವಿನ ಅಂತ ಸುಮಾರು 75 ಕಿಮೀನಷ್ಟುಕಡಿಮೆಯಾಗುತ್ತದೆ. ಸಂಚಾರ ಸಮಯ 5 ಗಂಟೆಯಷ್ಟುಉಳಿತಾಯವಾಗಲಿದೆ. 2025-26ರವೇಳೆಗೆ ಈ ರಸ್ತೆಯ ಕಾಮಗಾರಿ ಪೂರ್ಣಗೊಳ್ಳುವ ವಿಶ್ವಾ​ಸ​ವಿದೆ ಎಂದು ತಿಳಿ​ಸಿದರು.

ಮುಂಬೈ- ಕನ್ಯಾಕುಮಾರಿ ಹೆದ್ದಾರಿ ರಸ್ತೆ ಡಿಪಿಆರ್‌ ಹಂತದಲ್ಲಿದೆ. ಸೋಲಾಪುರ-ಕರ್ನೂಲು- ಚನ್ನೈ ಹೆದ್ದಾರಿ ರಸ್ತೆ 2025ರ ಜೂನ್‌ ವೇಳೆಗೆ ಪೂರ್ಣಗೊಳ್ಳಲಿದೆ. ಈ ಯೋಜನೆ 6 ಲೇನ್‌ ರಸ್ತೆಯಾಗಿದ್ದು, 47 ಸಾವಿರ ಕೋಟಿ ವೆಚ್ಚವಾಗ​ಲಿ​ದೆ. ಮಹರಾಷ್ಟ್ರ , ಕರ್ನಾಟಕ, ತೆಲಂಗಾಣ ಮತ್ತು ಆಂಧ್ರ ಪ್ರದೇಶದ ಮೂಲಕ ಹೆದ್ದಾ​ರಿ ಸಾಗಲಿದೆ ಎಂದು ಹೇಳಿ​ದರು.

ಬೆಂಗಳೂರು-ದಿಂಡಿಗಲ್‌ ರಾಷ್ಟ್ರೀಯ ಹೆದ್ದಾರಿ 209ರಲ್ಲಿನ ಕಾಮಗಾರಿ ವಿಳಂಬದ ಕುರಿತು ಪ್ರತಿಕ್ರಿಯಿಸಿದ ಸಚಿವರು, ಗುತ್ತಿಗೆದಾರರ ಸಮಸ್ಯೆಯಿಂದ ಕಾಮಗಾರಿ ಸ್ಥ​ಗಿ​ತ​ಗೊಂಡಿತ್ತು. ಈಗ ಗುತ್ತಿಗೆದಾರನ್ನು ಬದಲಿಸಿದ್ದು, 2024ರ ಮಾಚ್‌ರ್‍ ವೇಳೆಗೆ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದು ನಿತಿನ್‌ ಗಡ್ಕರಿ ಪ್ರಶ್ನೆ​ಯೊಂದಕ್ಕೆ ಉತ್ತ​ರಿ​ಸಿದರು.

ಬೆಂ - ಮೈ ಹೆದ್ದಾರಿಯಲ್ಲಿ ಕೆಲವು ಕಡೆ ಅಪಾಯಕಾರಿ ತಿರುವುಗಳಿದ್ದು, ಹೆಚ್ಚು ಅಪಘಾತಗಳು ಸಂಭವಿಸುತ್ತಿವೆ ಎಂಬ ದೂರಿದೆ. ಉದ್ಘಾಟನೆಗೆ ಮುನ್ನ ರಸ್ತೆ ಸುರಕ್ಷತೆ ಆಡಿಟ್‌ ನಡೆಯಲಿದ್ದು, ಲೋಪಗಳು ಇದ್ದಲ್ಲಿ ಸರಿಪಡಿಸಲಾಗುವುದು. ಹೆದ್ದಾರಿ ಬದಿ ಇರುವ ಜಾಗದಲ್ಲಿ ಸ್ಥಳೀಯ ಕರಕುಶಲ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟಕ್ಕೆ ಅವಕಾಶಇರುತ್ತದೆ. ರಾಜ್ಯ ಸರ್ಕಾರ ಬಯಸಿದಲ್ಲಿ ಜಾಗ ಒದಗಿಸುತ್ತೇವೆ. ಪ್ರಮುಖ ನಗರಗಳಿಗೆ ಪ್ರವೇಶ-ನಿರ್ಗಮನ ದ್ವಾರಗಳ ಸಂಪರ್ಕ ನೀಡಲಾಗುವುದು ಅಂತ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿ​ವ ನಿತಿನ್‌ ಗಡ್ಕರಿ ತಿಳಿಸಿದ್ದಾರೆ. 

Assembly election: ರಾಜಕೀಯ ಬದ್ಧ ವೈರಿ ಯೋಗೇಶ್ವರ್- ಡಿ.ಕೆ. ಸುರೇಶ್‌ ಹಸ್ತಲಾಘವ: ಕಾಲೆಳೆದುಕೊಂಡ ನಾಯಕರು

ಶಿರಡಿ ತಲುಪಲು 6-7 ಗಂಟೆ ಸಾಕು!

ಭಾರತ್‌ ಮಾಲಾ ಎರಡನೇ ಹಂತದಲ್ಲಿ ಕೈಗೆ​ತ್ತಿ​ಕೊ​ಳ್ಳಲು ಉದ್ದೇ​ಶಿ​ಸಿ​ರುವ ಬೆಂಗಳೂರು - ಪುಣೆ ಹೆದ್ದಾರಿ ನಿರ್ಮಾ​ಣ​ದಿಂದ ಕೇಂದ್ರ ಸಚಿವ ನಿತಿನ್‌ ಗಡ್ಕರಿರವರ ಪ್ರಕಾರ ಬೆಂಗ​ಳೂ​ರಿ​ನಿಂದ ಸಾಯಿ​ಬಾ​ಬಾರ ಸನ್ನಿಧಿ ಶಿರ​ಡಿ ತಲು​ಪಲು ಕೇವಲ

6 ರಿಂದ 7 ಗಂಟೆ ಸಾಕು!

ಈಗ ರಸ್ತೆ ಮೂಲಕ ಶಿರಡಿ ತಲುಪಲು 18 ರಿಂದ 20 ಗಂಟೆಗಳು ಬೇಕಾಗಿದೆ. ಕೇಂದ್ರ ಹೆದ್ದಾರಿ ಸಚಿವರ ಪ್ರಕಾರ 45 ಸಾವಿರ ಕೋಟಿ ರು. ವೆಚ್ಚದಲ್ಲಿ ಅಭಿವೃದ್ದಿಯಾಗುವ ಬೆಂಗಳೂರು - ಪುಣೆ ರಸ್ತೆ ಕಾಮಗಾರಿ ನಂತರ ಶಿರಡಿ ತಲುಪಲು ಬೆಂಗಳೂರಿನಿಂದ 6 ರಿಂದ 7 ಗಂಟೆ ಸಾಕು. 6 ಲೇನ್‌ ಗಳ ಈ ರಸ್ತೆಯಲ್ಲಿ ವಾಹನಗಳು ಸುಮಾರು 120 ಕಿಮೀ ವೇಗದಲ್ಲಿ ಸಂಚರಿಸಲು ಸಾಧ್ಯವಾಗಲಿದೆ. ಹೀಗಾಗಿ ಸಂಚಾರ ಸಮಯದಲ್ಲಿ ಕಡಿತವಾಗಲಿದೆ. ಪುಣೆಯಿಂದ ಮುಂಬಾಯಿ ನಗರಕ್ಕೆ ಹೆದ್ದಾರಿ ರಸ್ತೆ ಪ್ರಗತಿಯಲ್ಲಿದ್ದು, ಬೆಂಗಳೂರು ಪುಣೆ ರಸ್ತೆ ಪುಣೆ-ಮುಂಬಾಯಿ ರಸ್ತೆಗೂ ಸಂಪರ್ಕ ಕಲ್ಪಿಸಲಿದೆ. ಅಲ್ಲದೆ ಇದೇ ರಸ್ತೆ ಮೂಲಕ ಇದೀಗ ಪ್ರಗತಿಯಲ್ಲಿರುವ ಬೆಂಗಳೂರು - ಚೆನ್ನೈ ರಸ್ತೆಗೂ ಸಂಪರ್ಕ ಸಾಧಿಸಬಹುದಾಗಿದೆ ಎಂದು ಸಚಿ​ವರು ಹೇಳಿ​ದರು.

click me!