ಕದ್ದ ಮೊಬೈಲ್ ನಿಂದ ರ್ಯಾಪಿಡೋ ಬುಕ್ ಮಾಡಿ ಆಟೋ ಡ್ರೈವರ್ ಥಳಿಸಿದ್ರು, ಅದೇ ರಿಕ್ಷಾ ಅಡವಿಟ್ಟು ದುಡ್ಡು ಮಾಡಿದ್ರು!

Published : Apr 04, 2026, 03:27 PM IST
auto driver assault Bengaluru

ಸಾರಾಂಶ

ಬೆಂಗಳೂರಿನಲ್ಲಿ, ರಿಹ್ಯಾಬ್ ಸೆಂಟರ್‌ನಿಂದ ತಪ್ಪಿಸಿಕೊಂಡಿದ್ದ ಇಬ್ಬರು ಯುವಕರು ಕದ್ದ ಮೊಬೈಲ್‌ನಿಂದ ರ್ಯಾಪಿಡೋ ಆಟೋ ಬುಕ್ ಮಾಡಿದ್ದಾರೆ. ಬಳಿಕ ಚಾಲಕನ ಮೇಲೆ ಹಲ್ಲೆ ನಡೆಸಿ, ಆತನ ಆಟೋ ಹಾಗೂ ಮೊಬೈಲ್ ದೋಚಿ ಪರಾರಿಯಾಗಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಗಲೂರು ಪೊಲೀಸರು ಅಪ್ರಾಪ್ತ ಬಾಲಕ ಸೇರಿದಂತೆ ಇಬ್ಬರನ್ನು ಬಂಧಿಸಿದ್ದಾರೆ.

ಬೆಂಗಳೂರು: ಕದ್ದ ಮೊಬೈಲ್ ಬಳಸಿ ರ್ಯಾಪಿಡೋ ಸೇವೆ ಬುಕ್ ಮಾಡಿಕೊಂಡು ಆಟೋ ಚಾಲಕನ ಮೇಲೆ ಹಲ್ಲೆ ನಡೆಸಿ, ಆಟೋ ಹಾಗೂ ಮೊಬೈಲ್ ಕದ್ದೊಯ್ದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಈ ಪ್ರಕರಣದಲ್ಲಿ ಅಪ್ರಾಪ್ತ ಬಾಲಕ ಸೇರಿ ಇಬ್ಬರು ಆರೋಪಿಗಳನ್ನು ಬಾಗಲೂರು ಪೊಲೀಸರು ಬಂಧಿಸಿದ್ದಾರೆ.

ರಿಹ್ಯಾಬಿಲಿಟೇಶನ್ ಸೆಂಟರ್‌ನಿಂದ ಪ್ಲಾನ್ ಮಾಡಿ ಎಸ್ಕೇಪ್

ಬಂಧಿತರಾದ ಯುವಕರು ಮಾದಕ ವಸ್ತುಗಳ ಚಟಕ್ಕೆ ಒಳಗಾಗಿದ್ದವರಾಗಿದ್ದು, ಅವರನ್ನು ಕುಟುಂಬಸ್ಥರು ಎಲೆಕ್ಟ್ರಾನಿಕ್ ಸಿಟಿಯಲ್ಲಿರುವ ರಿಹ್ಯಾಬಿಲಿಟೇಶನ್ ಸೆಂಟರ್‌ಗೆ ಸೇರಿಸಿದ್ದರು. ಆದರೆ ಅಲ್ಲಿ ಮಾದಕ ವಸ್ತುಗಳು ಸಿಗದೆ ಕಂಗಾಲಾಗಿದ್ದ ಇಬ್ಬರು, ಅಲ್ಲಿಂದ ತಪ್ಪಿಸಿಕೊಳ್ಳಲು ಸಂಚು ರೂಪಿಸಿ ಕೊನೆಗೆ ಎಸ್ಕೇಪ್ ಆಗಿದ್ದರು. ಎಸ್ಕೇಪ್ ಆಗುವ ಮೊದಲು ರಿಹ್ಯಾಬ್ ಸೆಂಟರ್‌ನ ಮಾಲೀಕರ ಮೊಬೈಲ್ ಫೋನ್ ಕದ್ದು ಪರಾರಿಯಾಗಿದ್ದರು.

ಕದ್ದ ಮೊಬೈಲ್‌ನಲ್ಲಿ ರ್ಯಾಪಿಡೋ ಬುಕ್

ರಿಹ್ಯಾಬ್‌ನಿಂದ ತಪ್ಪಿಸಿಕೊಂಡ ನಂತರ, ಆರೋಪಿಗಳು ಕದ್ದ ಮೊಬೈಲ್ ಬಳಸಿ ಎಲೆಕ್ಟ್ರಾನಿಕ್ ಸಿಟಿಯ ಹುಸ್ಕೂರು ಪ್ರದೇಶದಿಂದ ರ್ಯಾಪಿಡೋ ಸೇವೆ ಬುಕ್ ಮಾಡಿದರು. ಆಟೋ ಚಾಲಕ ಬಂದ ಬಳಿಕ, ಅವರನ್ನು ಜೋಹಳ್ಳಿಯ KIADB ಇಂಡಸ್ಟ್ರಿಯಲ್ ಪ್ರದೇಶಕ್ಕೆ ಕರೆದುಕೊಂಡು ಹೋಗಲು ಹೇಳಿದರು.

ಡ್ರಾಪ್ ಬಳಿಕ ಹಲ್ಲೆ, ದರೋಡೆ

ನಿಗದಿತ ಸ್ಥಳಕ್ಕೆ ತಲುಪಿದ ನಂತರ ಆಟೋ ಚಾಲಕ ಬಾಡಿಗೆ ಹಣ ಕೇಳಿದಾಗ, ಆರೋಪಿಗಳು ಏಕಾಏಕಿ ಅವನ ಮೇಲೆ ಹಲ್ಲೆ ನಡೆಸಿದರು. ಅಪ್ರಾಪ್ತ ಯುವಕ ನಡೆಸಿದ ಹಲ್ಲೆಯಿಂದ ಚಾಲಕನ ನಾಲ್ಕು ಹಲ್ಲುಗಳು ಮುರಿದು ಬಿದ್ದಿದ್ದು, ಗಂಭೀರವಾಗಿ ಗಾಯಗೊಂಡಿದ್ದಾನೆ. ಭಯಗೊಂಡ ಚಾಲಕ ಅಲ್ಲಿಂದ ಓಡಿ ಪ್ರಾಣ ಉಳಿಸಿಕೊಂಡಿದ್ದಾನೆ.

ಆಟೋ ಹಾಗೂ ಮೊಬೈಲ್ ಕದ್ದೊಯ್ದು ಎಸ್ಕೇಪ್

ಹಲ್ಲೆಯ ನಂತರ ಆರೋಪಿಗಳು ಆಟೋ ಮತ್ತು ಮೊಬೈಲ್ ಕದ್ದೊಯ್ದು ಮಾಲೂರಿನತ್ತ ಪರಾರಿಯಾಗಿದ್ದಾರೆ. ಅಲ್ಲಿ ತಂದೆಯ ಆರೋಗ್ಯ ಸಮಸ್ಯೆ ಎಂಬ ನೆಪ ಹೇಳಿ, ಆಟೋವನ್ನು ಅಡಮಾನ ಇಟ್ಟು ಹಣ ಪಡೆದುಕೊಂಡಿದ್ದಾರೆ. ನಂತರ ಮತ್ತೆ ಬೆಂಗಳೂರಿಗೆ ಮರಳಿ ನಗರದಲ್ಲಿ ಸುತ್ತಾಡುತ್ತಿದ್ದರು ಎಂಬುದು ತನಿಖೆಯಿಂದ ಬೆಳಕಿಗೆ ಬಂದಿದೆ.

ಪೊಲೀಸರ ಕಾರ್ಯಾಚರಣೆ

ಈ ಘಟನೆಗೆ ಸಂಬಂಧಿಸಿದಂತೆ ಗಾಯಗೊಂಡ ಆಟೋ ಚಾಲಕ ಬಾಗಲೂರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದನು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಆರಂಭಿಸಿ ಆರೋಪಿಗಳ ಸುಳಿವು ಪತ್ತೆ ಹಚ್ಚಿದರು. ಆರೋಪಿಗಳು ಹಣದ ಅಗತ್ಯವಿದ್ದಾಗ ಮಾತ್ರ ಕದ್ದ ಮೊಬೈಲ್ ಅನ್ನು ಆನ್ ಮಾಡಿ, ಬಳಿಕ ತಕ್ಷಣವೇ ಆಫ್ ಮಾಡುತ್ತಿದ್ದರು. ಈ ತಂತ್ರದ ನಡುವೆಯೂ ಪೊಲೀಸರು ಅವರ ಚಲನವಲನಗಳನ್ನು ಗಮನಿಸಿ ಕೊನೆಗೆ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಬಂಧಿತರ ಮಾಹಿತಿ

ಬಂಧಿತರಲ್ಲಿ ಕಾನಿಷ್ ಎಂಬ ಯುವಕ ಹಾಗೂ ಒಬ್ಬ ಅಪ್ರಾಪ್ತ ಬಾಲಕ ಸೇರಿದ್ದಾರೆ. ಇವರಿಬ್ಬರೂ ಮಾದಕ ವಸ್ತುಗಳ ಚಟಕ್ಕೆ ಒಳಗಾಗಿ ಈ ರೀತಿಯ ಕೃತ್ಯಕ್ಕೆ ಮುಂದಾಗಿರುವುದು ತನಿಖೆಯಿಂದ ತಿಳಿದುಬಂದಿದೆ. ಈ ಪ್ರಕರಣವು ನಗರದಲ್ಲಿ ಹೆಚ್ಚುತ್ತಿರುವ ಮಾದಕ ವಸ್ತುಗಳ ಚಟ ಮತ್ತು ಅದರ ಪರಿಣಾಮವಾಗಿ ನಡೆಯುತ್ತಿರುವ ಅಪರಾಧಗಳ ಬಗ್ಗೆ ಆತಂಕ ಮೂಡಿಸಿದೆ.

PREV
Read more Articles on
click me!

Recommended Stories

ಹಿಂದೂ ಹುಡುಗಿಯರೇ ಹುಷಾರ್​​! ಲವ್​​​ ನೆಪದಲ್ಲಿ ದೈಹಿಕ ಸಂಪರ್ಕ, ಅವನ ಜೇಬಿನಲ್ಲಿ ಸಿಕ್ಕಿದ್ದು ಭ್ರೂಣಹತ್ಯೆ ಮಾತ್ರೆ!
ಹುಬ್ಬಳ್ಳಿ Love Jihad ಕೇಸ್​ಗೆ ಟ್ವಿಸ್ಟ್​: ಮಲಗಿದ್ದು ಯಾರಂತ ಅವಳ ಫೋನ್​ ನೋಡಿ ಅಂದ ಸಮೀರ್​; ಅಕ್ಕ ಹೇಳಿದ್ದೇನು?