ಬೆಂಗಳೂರಿನ ಅಪಾರ್ಟ್‌ಮೆಂಟ್‌ಗಳು, ಹೋಟೆಲ್‌ಗಳಿಗೆ ಶೇ.10 ನೀರು ಕಡಿತ; ಪಂಚಸೂತ್ರ ಪಾಲನೆಗೆ ಜಲಮಂಡಳಿ ಸೂಚನೆ

By Sathish Kumar KHFirst Published Apr 1, 2024, 9:11 PM IST
Highlights

ಬೆಂಗಳೂರಿನ ಬೃಹತ್ ಪ್ರಮಾಣದ ನೀರು ಬಳಸುವ ಅಪಾರ್ಟ್‌ಮೆಂಟ್‌ಗಳು ಹಾಗೂ ಹೋಟೆಲ್‌ಗಳಿಗೆ ಏ.10ರ ನಂತರ ಶೇ.10 ನೀರು ಪೂರೈಕೆ ಸ್ಥಗಿತಗೊಳಿಸಲಾಗುವುದು. 

ಬೆಂಗಳೂರು (ಏ.01): ರಾಜ್ಯ ರಾಜಧಾನಿ ಬೆಂಗಳೂರಿನ ಬೃಹತ್ ಪ್ರಮಾಣದ ನೀರು ಬಳಸುವ ಗ್ರಾಹಕರು 'ಪಂಚ ಸೂತ್ರ'ಗಳನ್ನು ಅಳವಡಿಸಿಕೊಳ್ಳುವ ಮೂಲಕ ನೀರು ಉಳಿತಾಯ ಮತ್ತು ಮರುಬಳಕೆಯ ಅಭಿಯಾನದಲ್ಲಿ ಕೈ ಜೋಡಿಸಬೇಕು ಎಂದು ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಅಧ್ಯಕ್ಷ ರಾದ ಡಾ. ರಾಮ್ ಪ್ರಸಾತ್ ಮನೋಹರ್ ಮನವಿ ಮಾಡಿದರು.

ಜಲಮಂಡಳಿ ಕೇಂದ್ರ ಕಛೇರಿಯಲ್ಲಿ  ಬೃಹತ್ ಪ್ರಮಾಣದ ನೀರು ಬಳಸುವ ಗ್ರಾಹಕರೊಂದಿಗೆ (40 ಲಕ್ಷ ಲೀ.ಗಳಿಂದ 2 ಕೋಟಿ ಲೀ.ಗಳಷ್ಟು) ಸೋಮವಾರ ಸಭೆ ನಡೆಸಿ ಗ್ರೀನ್ ಸ್ಟಾರ್ ಚಾಲೆಂಜ್‌ನ ಪಂಚ ಸೂತ್ರಗಳನ್ನು ಅಳವಡಿಸಿಕೊಳ್ಳುವಂತೆ ಸೂಚನೆ ನೀಡಿದರು. ನಗರದಲ್ಲಿ ಕುಡಿಯುವ ನೀರಿನ ಕೊರತೆ ಇಲ್ಲ. ಆದರೆ ಅಂತರ್ಜಲ ಕುಸಿತದಿಂದ ದಿನ ಬಳಕೆಯ ನೀರಿನ ಮೇಲೆ ಪರಿಣಾಮ ಬೀರಿದೆ. ಮುಂದಿನ ಎರಡು ತಿಂಗಳುಗಳ ಕಾಲ ನೀರಿನ ಮಿತವ್ಯಯ ಬಳಕೆಯಿಂದ ನಾವು ಈ ಪರಿಸ್ಥಿತಿಯನ್ನು ನಿಭಾಯಿಸಬಹುದಾಗಿದೆ. ಜಲಮಂಡಳಿ ಕೇವಲ ಇಂದಿನ ಪರಿಸ್ಥಿತಿ ಯನ್ನು ನಿಭಾಯಿಸಲು ಅಷ್ಟೇ ಅಲ್ಲದೆ, ಭವಿಷ್ಯದಲ್ಲಿ ಬೆಂಗಳೂರು ನಗರವನ್ನು ವಾಟರ್ ಸರ್ ಪ್ಲಸ್ (Water Surplus) ಮಾಡುವ ಗುರಿಯನ್ನು ಹೊಂದಿದೆ ಎಂದು ತಿಳಿಸಿದರು.

ಹೌದು, ರಂಗೋಲಿ ಕೆಡಿಸಿದ್ದು ನಾನೇ.. ಉತ್ತರ ಭಾರತೀಯರಿಗೆ ಬೆಂಗಳೂರು ಸೇಫ್‌ ಇಲ್ವಾ? ಎಂದು ಪ್ರಶ್ನಿಸಿದ ನೇಹಾ..!

ಪಂಚ ಸೂತ್ರಗಳನ್ನು ಒಳಗೊಂಡ ಗ್ರೀನ್ ಸ್ಟಾರ್ ಚಾಲೆಂಜ್ ಪಾಲಿಸಿ: 

  • ನೀರಿನ ಉಳಿತಾಯ ಮಾಡುವಂತಹ ತಂತ್ರಜ್ಞಾನಗಳನ್ನ ಅಳವಡಿಸಿಕೊಳ್ಳುವುದು.
  • ಸಂಸ್ಕರಿಸಿದ ನೀರಿನ ಬಳಕೆಯನ್ನು ಹೆಚ್ಚಿಸಿಕೊಳ್ಳುವುದು.
  • ಕೊಳವೆ ಬಾವಿಗಳ ಬಳಕೆಯಲ್ಲಿ ತಂತ್ರಜ್ಞಾನದ ಅಳವಡಿಕೆ ಮಾಡಿಕೊಳ್ಳುವುದು.
  • ಮಳೆ ನೀರು ಇಂಗು ಗುಂಡಿಗಳನ್ನ ಅಳವಡಿಸಿಕೊಳ್ಳುವುದು.
  • ಮೇಲಿನ ನಾಲ್ಕು ಹೊಸ ಅನುಷ್ಠಾನಗಳ ಬಗ್ಗೆ ನೀರು ಬಳಕೆದಾರರಿಗೆ ಮಾಹಿತಿ ಪ್ರಸರಿಸಿ ನೀರಿನ ಉಳಿತಾಯದ ಮಹತ್ವ ಸಾರುವುದು. 

ಈ ಪಂಚ ಸೂತ್ರಗಳನ್ನು ಅಳವಡಿಸಿಕೊಳ್ಳಲು ಈಗಾಗಲೇ ಅಪಾರ್ಟ್ಮೆಂಟ್ ಹಾಗೂ ಹೋಟೆಲ್ ಮತ್ತು ರೆಸ್ಟೋರೆಂಟ್ ಗಳು ಮುಂದೆ ಬಂದಿವೆ. ಈ ಚಾಲೆಂಜ್ ಅನ್ನು ನೀವು ಕೂಡಾ ಅಳವಡಿಸಿಕೊಳ್ಳುವ ಮೂಲಕ ಬೆಂಗಳೂರು ವಾಟರ್ ಸರ್ ಪ್ಲಸ್ ಅಭಿಯಾನದಲ್ಲಿ ಕೈಜೋಡಿಸಿ ಎಂದು ಕರೆ ನೀಡಿದರು. ಬಲ್ಕ್ ಬಳಕೆದಾರರು  ತಮ್ಮ  ಸಮುದಾಯದಲ್ಲಿ ಹೆಚ್ಚು ನೀರು ಬಳಕೆ ಮಾಡುವವರಲ್ಲಿ  ಜಾಗೃತಿ ಮೂಡಿಸಬೇಕು. ಅಂತರ್ಜಲ ಮಟ್ಟವನ್ನು ಕಾಯ್ದುಕೊಳ್ಳಲು ತಮ್ಮ ತಮ್ಮ ವ್ಯಾಪ್ತಿಯಲ್ಲಿ ಮಳೆ ನೀರು ಇಂಗು ಗುಂಡಿಗಳನ್ನು ನಿರ್ಮಿಸಿಕೊಳ್ಳಲು ಆದ್ಯತೆ ನೀಡುವಂತೆ ತಿಳಿಸಿದರು. 

ಏಪ್ರಿಲ್ 10 ಒಳಗಾಗಿ ಈ ಕ್ರಮಗಳನ್ನು ಅಳವಡಿಸಿಕೊಳ್ಳಿ:  ಏಪ್ರಿಲ್ 10ರ ಒಳಗಾಗಿ ಈ ಪಂಚ ಸೂತ್ರಗಳನ್ನು ಅಳವಡಿಸಿಕೊಳ್ಳಬೇಕು. ಏ.10 ರ ನಂತರ ಸರಬರಾಜು ಆಗುತ್ತಿರುವ ನೀರಿನಲ್ಲಿ ಶೇ.10ರಷ್ಟು ಕಡಿತಗೊಳಿಸಿ ಅಗತ್ಯವಿರುವ ಕಡೆಗಳಿಗೆ ಕಾವೇರಿ ನೀರನ್ನು ಸರಬರಾಜು ಮಾಡಲಾಗುವುದು ಎಂದು ಜಲಮಂಡಳಿ ಅಧ್ಯಕ್ಷ ರಾಮ್ ಪ್ರಸಾತ್ ಮನೋಹರ್ ತಿಳಿಸಿದರು.

ಇನ್ನು ಕಟ್ಟಡದಲ್ಲಿ ಸಂಸ್ಕರಿಸಿದ ನೀರನ್ನು ಸ್ವಚ್ಛತೆಗೆ, ಕಟ್ಟಡ ಕಾಮಗಾರಿಗಳಿಗೆ, ತೋಟಗಾರಿಕೆಗೆ ಸಸ್ಯಗಳ ಆರೈಕೆಗೆ ಬಳಸಬಹುದಾಗಿದೆ. ಈ ಹಿನ್ನೆಲೆಯಲ್ಲಿ ಸಂಸ್ಕೃತ ನೀರಿನ ಬಳಕೆಯನ್ನು ಹೆಚ್ಚಿಸುವಂತೆ ಜಲಮಂಡಳಿ ಅಧ್ಯಕ್ಷರು ಕರೆ ನೀಡಿದರು. ಅಲ್ಲದೆ ನೀರು ಬಳಕೆ ಹಾಗೂ  ಮರು ಬಳಕೆ ಬಗ್ಗೆ ಮನೆಯ ನೆರೆಮನೆಯವರಿಗೂ ಜಾಗೃತಿ ಮೂಡಿಸಬೇಕು. ಈಗಾಗಲೇ 133 ಬಿಲ್ಡರ್ ಗಳೊಂದಿಗೆ ಸಭೆ ನಡೆಸಲಾಗಿದೆ. ಅವರಿಗೆ ಸಂಸ್ಕರಿಸಿದ ನೀರು ಬಳಸುವಂತೆ ಸೂಚಿಸಲಾಗಿದೆ ಎಂದು ಜಲಮಂಡಳಿ ಅಧ್ಯಕ್ಷ ರಾಮ್‌ಪ್ರಸಾತ್ ತಿಳಿಸಿದರು.

15 ವರ್ಷ ಬಳಿಕ ರಾಜ್ಯದಲ್ಲಿ ವಿದ್ಯುತ್‌ ದರ ಕಡಿತ: ಇಂದಿನಿಂದಲೇ ಜಾರಿ

ನೀರಿನ ಉಳಿತಾಯಕ್ಕೆ ಸಾಮಾನ್ಯ ಸೂತ್ರಗಳು:

  • ಈ ಹಿಂದಿನಕ್ಕಿಂತ ಮಿತವಾಗಿ ನೀರು ಬಳಸಬೇಕು. 
  • ಮನೆಯಲ್ಲಿ ಹೆಚ್ಚು  ನೀರುವ ಬಳಸುವ ಜಾಗದಲ್ಲಿ ಏರಿಯೆಟರ್ ಅಳವಡಿಸಬೇಕು.
  • ವಾಷಿಂಗ್‌ಮಿಷನ್ ಒಳಗೆ ಬರುವ ನೀರನ್ನು ಮರುಬಳಕೆ ಮಾಡಿ.
  • ಒಂದು ಫ್ಲಷ್‌ಗೆ 20 ಲೀಟರ್ ಹೊರ ಹೋಗುತ್ತಿದ್ದು, ಇದನ್ನ ತಡೆಗಟ್ಟಲು ಫ್ಲಷ್‌ ಬ್ಯಾಗ್ ಆಳವಡಿಸಬೇಕು. 
  • ಅಗತ್ಯವಿರುವ ಕಡೆಗಳಲ್ಲಿ ಸಂಸ್ಕರಿಸಿದ ನೀರು ಬಳಕೆ ಮಾಡಬೇಕು.

click me!