ಬೆಂಗಳೂರು ಏರ್‌ಪೋರ್ಟ್‌ನಲ್ಲಿ ಪ್ರಯಾಣಿಕರಿಗೆ ಇನ್ಮುಂದೆ ಕಡ್ಡಾಯ ಸ್ಕ್ರೀನಿಂಗ್; ಜೀನೋಮ್‌ ಸೀಕ್ವೆನ್ಸಿಂಗ್‌ಗೆ ಕ್ರಮ

By BK AshwinFirst Published Dec 21, 2022, 7:54 PM IST
Highlights

ಅಲ್ಲದೆ, ಜೀನೋಮ್ ಸೀಕ್ವೆನ್ಸಿಂಗ್‌ಗಾಗಿ  ಕೋವಿಡ್-19 ಪರೀಕ್ಷಾ ಮಾದರಿಗಳನ್ನು ಕಳುಹಿಸಲು ಕರ್ನಾಟಕ ಸಿದ್ಧತೆ ನಡೆಸುತ್ತಿದೆ ಎಂದೂ ರಾಜ್ಯ ಸರ್ಕಾರ ಮಾಹಿತಿ ನೀಡಿದೆ. 

ಜಗತ್ತಿನ ಹಲವು ದೇಶಗಳಲ್ಲಿ (Countries) ಕೊರೊನಾ ವೈರಸ್ (Coronavirus) ಪ್ರಕರಣಗಳ ಹೆಚ್ಚಳದ ಕುರಿತು ಕೇಂದ್ರ ಸರ್ಕಾರದ (Central Government) ಎಚ್ಚರಿಕೆಯ ನಂತರ ಶೀಘ್ರದಲ್ಲೇ ಬೆಂಗಳೂರು ವಿಮಾನ ನಿಲ್ದಾಣದಲ್ಲಿ (Bengaluru Airport) ಪ್ರಯಾಣಿಕರನ್ನು ಪರೀಕ್ಷಿಸಲು ಅಥವಾ ಸ್ಕ್ರೀನಿಂಗ್ (Screening) ಮಾಡಲು ಪ್ರಾರಂಭಿಸಲಿದೆ ಎಂದು ರಾಜ್ಯ ಸರ್ಕಾರ (State Government) ಬುಧವಾರ ತಿಳಿಸಿದೆ. ಅಲ್ಲದೆ, ಜೀನೋಮ್ ಸೀಕ್ವೆನ್ಸಿಂಗ್‌ಗಾಗಿ  ಕೋವಿಡ್-19 ಪರೀಕ್ಷಾ ಮಾದರಿಗಳನ್ನು ಕಳುಹಿಸಲು ಕರ್ನಾಟಕ (Karnataka) ಸಿದ್ಧತೆ ನಡೆಸುತ್ತಿದೆ ಎಂದೂ ರಾಜ್ಯ ಸರ್ಕಾರ ಮಾಹಿತಿ ನೀಡಿದೆ. 

"ಇತರ ದೇಶಗಳಲ್ಲಿ ಕಂಡುಬರುವ ಹೊಸ ರೂಪಾಂತರಗಳ ಹಿನ್ನೆಲೆಯಲ್ಲಿ, ಜೀನೋಮಿಕ್ ಸೀಕ್ವೆನ್ಸಿಂಗ್‌ಗಾಗಿ ಎಲ್ಲ ಹೊಸ ಕೋವಿಡ್ ಪ್ರಕರಣಗಳ ಮಾದರಿಗಳನ್ನು ಕಳುಹಿಸಲು ಕೇಂದ್ರ ಆರೋಗ್ಯ ಸಚಿವಾಲಯವು ರಾಜ್ಯಗಳಿಗೆ ನಿರ್ದೇಶಿಸಿದೆ ಮತ್ತು ನಾವು ಅದನ್ನು ಕಾರ್ಯಗತಗೊಳಿಸಲು ಈಗಾಗಲೇ ಕ್ರಮಗಳನ್ನು ತೆಗೆದುಕೊಂಡಿದ್ದೇವೆ" ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್ ಹೇಳಿದರು. 

ಬೆಳಗಾವಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಡಾ. ಸುಧಾಕರ್, ಚೀನಾ, ಜಪಾನ್ ಸೇರಿದಂತೆ ಕೆಲವು ದೇಶಗಳಲ್ಲಿ ಹಠಾತ್ ಪ್ರಕರಣಗಳು ಹೆಚ್ಚಾಗುತ್ತಿವೆ. ಚೀನಾದ ಆಸ್ಪತ್ರೆಗೆ ದಾಖಲಾಗುವ ಪ್ರಮಾಣವು ವಿಶೇಷವಾಗಿ ಆತಂಕಕಾರಿಯಾಗಿದೆ. "ಆದ್ದರಿಂದ, ನಾವು ಬೂಸ್ಟರ್ ಡೋಸ್ ವ್ಯಾಪ್ತಿಯ ಮೇಲೆ ಗಮನಹರಿಸಬೇಕು. ಕೇಂದ್ರದ ಮಾರ್ಗಸೂಚಿಗಳ ಪ್ರಕಾರ ಹೊಸ ರೂಪಾಂತರಗಳನ್ನು ಪತ್ತೆಹಚ್ಚಲು ಜೀನೋಮಿಕ್ ಸೀಕ್ವೆನ್ಸಿಂಗ್‌ಗಾಗಿ ಮಾದರಿಗಳನ್ನು ಕಳುಹಿಸಲು ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಮುಂದಿನ ಕ್ರಮಗಳ ಕುರಿತು ಚರ್ಚಿಸಲು ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿ ಉನ್ನತ ಮಟ್ಟದ ಸಭೆ ನಡೆಯಲಿದೆ ಎಂದು ಸಚಿವರು ಹೇಳಿದರು.

''ಜಾಗತಿಕ ಪರಿಸ್ಥಿತಿಯ ಹಿನ್ನೆಲೆಯಲ್ಲಿ ನಾವು ಕೆಲವು ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ಬೆಂಗಳೂರು ವಿಮಾನ ನಿಲ್ದಾಣಕ್ಕೆ ಅಂತಾರಾಷ್ಟ್ರೀಯ ಪ್ರಯಾಣಿಕರ ಒಳಹರಿವು ಹೆಚ್ಚಿದೆ. ನಾವು ಅಲ್ಲಿ ಪ್ರಯಾಣಿಕರನ್ನು ಪರೀಕ್ಷಿಸಲು ಪ್ರಾರಂಭಿಸುತ್ತೇವೆ. ನಾವು ಎರಡು ಡೋಸ್‌ಗಳಲ್ಲಿ ಶೇಕಡಾ 100 ರಷ್ಟು ವ್ಯಾಪ್ತಿ ಸಾಧಿಸಿದ್ದರೂ, ಮೂರನೆಯ ಡೋಸ್‌ ಪ್ರಮಾಣವನ್ನು ಇನ್ನೂ ಹೆಚ್ಚಿನ ಜನರು ತೆಗೆದುಕೊಳ್ಳಬೇಕಾಗಿದೆ. ಬೂಸ್ಟರ್‌ ಲಸಿಕೆ ಪಡೆಯಬೇಕಾದ ಎಲ್ಲರೂ ಸ್ವಯಂಪ್ರೇರಣೆಯಿಂದ ಮುಂದೆ ಬಂದು ಅದನ್ನು ಪಡೆದುಕೊಳ್ಳಬೇಕು ಎಂದೂ ಡಾ. ಸುಧಾಕರ್‌ ಹೇಳಿದ್ದಾರೆ. 

ಅಲ್ಲದೆ,  ರಾಜ್ಯವು ಯಾವುದೇ ರೀತಿಯ ಪರಿಸ್ಥಿತಿಯನ್ನು ಎದುರಿಸಲು ಸಿದ್ಧತೆ ನಡೆಸುತ್ತಿದೆ ಎಂದೂ ಸುಧಾಕರ್‌ ಹೇಳಿದರು. ನಾವು ಎಲ್ಲಾ ಅಗತ್ಯ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುತ್ತೇವೆ ಮತ್ತು ಈ ನಿಟ್ಟಿನಲ್ಲಿ ಹೊಸ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಲಾಗುವುದು ಎಂದೂ ಅವರು ಹೇಳಿದರು. 

ಇಲ್ಲಿಯವರೆಗೆ 4.4 ಕೋಟಿಗೂ ಹೆಚ್ಚು ಕೋವಿಡ್ ಪ್ರಕರಣಗಳೊಂದಿಗೆ, ಯುನೈಟೆಡ್ ಸ್ಟೇಟ್ಸ್ ನಂತರ ಭಾರತವು ವಿಶ್ವದಲ್ಲಿ ಅತಿ ಹೆಚ್ಚು ಪ್ರಕರಣಗಳನ್ನು ವರದಿ ಮಾಡಿದೆ. ಆದರೂ, ಕೊರೊನಾ ದೃಢಪಡಿಸಿದ ಸೋಂಕುಗಳ ಸಂಖ್ಯೆಯು ಕಳೆದ ಕೆಲವು ತಿಂಗಳುಗಳಲ್ಲಿ ತೀವ್ರವಾಗಿ ಕುಸಿದಿದೆ. ಪ್ರಸ್ತುತ ಪ್ರತಿ ವಾರ ಸುಮಾರು 1,200 ಪ್ರಕರಣಗಳು ಮಾತ್ರ  ವರದಿಯಾಗುತ್ತಿವೆ.

click me!