Belagavi: 'ಕೈ' ಶಾಸಕಿ ಅಂಜಲಿ‌ ನಿಂಬಾಳ್ಕರ್ ತರಾಟೆ ಬೆನ್ನಲ್ಲೇ ಆರೋಗ್ಯ ಇಲಾಖೆಗೆ ಡಿಹೆಚ್‌ಒ ಪತ್ರ

By Govindaraj SFirst Published Jul 30, 2022, 12:56 AM IST
Highlights

• ತಾಲೂಕು ಆಸ್ಪತ್ರೆಯ ವೈದ್ಯರು, ಸಿಬ್ಬಂದಿ ಬೆಳಗಾವಿ ಬಿಮ್ಸ್‌ಗೆ ನೇಮಕ
• ಬೆಳಗಾವಿ ಡಿಹೆಚ್‌ಒ‌ಗೆ ಕರೆ ಮಾಡಿ ಶಾಸಕಿ ಅಂಜಲಿ‌ ನಿಂಬಾಳ್ಕರ್ ತರಾಟೆ
• ಆರೋಗ್ಯ ಇಲಾಖೆ ಸರ್ಕಾರದ ಪ್ರಧಾನ ಕಾರ್ಯದರ್ಶಿಗೆ ಪತ್ರ ಬರೆದು ಸಮಸ್ಯೆ ಬಗ್ಗೆ ವಿವರಣೆ

ವರದಿ: ಮಹಾಂತೇಶ ಕುರಬೇಟ್, ಏಷ್ಯಾನೆಟ್ ಸುವರ್ಣನ್ಯೂಸ್, ಬೆಳಗಾವಿ

ಬೆಳಗಾವಿ (ಜು.30): ಖಾನಾಪುರ ತಾಲೂಕು ಆಸ್ಪತ್ರೆಯ ವೈದ್ಯರು ಬೆಳಗಾವಿ ಬಿಮ್ಸ್ ಆಸ್ಪತ್ರೆಗೆ ನಿಯೋಜನೆ ಮಾಡಿದ್ದಕ್ಕೆ ಖಾನಾಪುರ ಕಾಂಗ್ರೆಸ್ ಶಾಸಕಿ ಅಂಜಲಿ‌ ನಿಂಬಾಳ್ಕರ್ ಬೆಳಗಾವಿ ಡಿಹೆಚ್‌ಒ ಡಾ.ಮಹೇಶ್ ಕೋಣಿಗೆ ಕರೆ ಮಾಡಿ ತರಾಟೆಗೆ ತಗೆದುಕೊಂಡಿದ್ದಾರೆ. ಖಾನಾಪುರ ತಾಲೂಕು ಆಸ್ಪತ್ರೆಯ ಮೂರು ವೈದ್ಯರು ಬೆಳಗಾವಿ ಬಿಮ್ಸ್‌ಗೆ ನಿಯೋಜನೆ ಮಾಡಿದ್ದಕ್ಕೆ ಆಕ್ರೋಶಗೊಂಡ ಶಾಸಕಿ ಅಂಜಲಿ ನಿಂಬಾಳ್ಕರ್ ಬೆಳಗಾವಿ ಡಿಹೆಚ್‌ಒ ಡಾ.ಮಹೇಶ್ ಕೋಣಿಗೆ ತರಾಟೆ ಮಾಡಿ, 'ಖಾನಾಪುರ ತಾಲೂಕು ಆಸ್ಪತ್ರೆ ಮೂವರು ವೈದ್ಯರನ್ನು ಡೆಪ್ಯುಟೇಶನ್ ಮೇಲೆ ಬಿಮ್ಸ್‌ಗೆ ಏಕೆ ನಿಯೋಜಿಸಿದ್ದೀರಿ? 

ನಮ್ಮ ತಾಲೂಕು ಆಸ್ಪತ್ರೆಗೆ ಮೂರು ವೈದ್ಯರ ಮರಳಿ ಕಳಿಸಿ‌, ಅವರಿಗೆ ಕಷ್ಟ ಆದ್ರೆ ರಾಜೀನಾಮೆ ನೀಡಿ ಮನೆಯಲ್ಲಿ ಇರಲಿ.‌ ನನ್ನ ತಾಲೂಕು ಕಷ್ಟದಲ್ಲಿದೆ, ನನ್ನ ಗಮನಕ್ಕೆ ತರದೇ ಏಕೆ ಡೆಪ್ಯುಟೇಶನ್ ಮಾಡ್ತಿದೀರಿ. ಬಹಳ ಕಷ್ಟಪಟ್ಟು ಖಾನಾಪುರ ತಾಲೂಕು ಆಸ್ಪತ್ರೆಗೆ ವೈದ್ಯರ ನೇಮಿಸಿದ್ದೇನೆ.‌ ಇಲ್ಲಿ ಯಾರು ಕೆಲಸ ಮಾಡ್ತಾರೆ ಹಾಗಾದ್ರೆ? ಇನ್ನು ನಾಲ್ಕೈದು ದಿನಗಳಲ್ಲಿ ನಮ್ಮ ಮೂರು ವೈದ್ಯರು ನಮಗೆ ವಾಪಸ್ ಬೇಕು. ನೀವು ಏನ್ ಮಾಡ್ತೀರಾ ನಮಗೆ ಗೊತ್ತಿಲ್ಲ' ಅಂತಾ ತೀವ್ರ ತರಾಟೆಗೆ ತಗೆದುಕೊಂಡಿದ್ದಾರೆ. ಈ ವೇಳೆ ಪ್ರತಿಕ್ರಿಯಿಸಿದ ಡಿಹೆಚ್‌ಒ ಡಾ.ಮಹೇಶ್ ಕೋಣಿ, 'ನಾನು ಡೆಪ್ಯುಟೇಶನ್ ಮೇಲೆ ಕಳಿಸಿಲ್ಲ, ಪ್ರಾದೇಶಿಕ ಆಯುಕ್ತರು ಆರ್ಡರ್ ಮಾಡಿದ್ದಾರೆ. 

ಪ್ರವೀಣ್‌ ಹಂತಕರನ್ನು ಎನ್‌ಕೌಂಟರ್‌ ಮಾಡಿ: ಅಭಯ ಪಾಟೀಲ

ಪ್ರಾದೇಶಿಕ ಆಯುಕ್ತರು ಆದೇಶ ಮೇರೆಗೆ ಬೆಳಗಾವಿ ಬಿಮ್ಸ್‌ಗೆ ನಿಯೋಜನೆಗೊಂಡಿದ್ದಾಗಿ ಸಮಜಾಯಿಷಿ ನೀಡಿದ್ದಾರೆ. ಖಾನಾಪುರ ತಾಲೂಕು ಆಸ್ಪತ್ರೆಯಲ್ಲಿ ಕೆಲಸ ಮಾಡ್ತಿದ್ದ ಚರ್ಮರೋಗ ತಜ್ಞೆ ಡಾ.ತಸ್ನಿಮಬಾನು, ಡಾ.ಭೂಷಣ್, ಡಾ.ಯಲ್ಲನಗೌಡ ಪಾಟೀಲ್, ಡಾ.ಸರಳಾ ತಿಪ್ಪನ್ನವರ್ ಸೇರಿ ಕೆಲ ವೈದ್ಯರು ಬಿಮ್ಸ್‌ಗೆ ನಿಯೋಜನೆಗೊಂಡಿದ್ದರು. ಬಿಮ್ಸ್‌ಗೆ ಖಾನಾಪುರ ತಾಲೂಕು ಆಸ್ಪತ್ರೆ ವೈದ್ಯರ ನಿಯೋಜನೆ ಮಾಡಿದ್ದಕ್ಕೆ ಕೆರಳಿ ಕೆಂಡವಾದ ಶಾಸಕಿ ಅಂಜಲಿ‌ ನಿಂಬಾಳ್ಕರ್ ಡಿಹೆಚ್‌ಒ ಗೆ ಶಾಸಕಿ ಅಂಜಲಿ ನಿಂಬಾಳ್ಕರ್ ದೂರವಾಣಿ ಕರೆ ಮಾಡಿ ತರಾಟೆಗೆ ತಗೆದುಕೊಂಡ ವಿಡಿಯೋ ವೈರಲ್ ಆಗಿದೆ.

ಆರೋಗ್ಯ ಇಲಾಖೆ ಪ್ರಧಾನ ಕಾರ್ಯದರ್ಶಿಗೆ ಡಿಹೆಚ್‌ಒ ಪತ್ರ: ಇನ್ನು ತಮ್ಮದೇನೂ ತಪ್ಪು ಇಲ್ಲದೇ ಇದ್ದರೂ ಜನಪ್ರತಿನಿಧಿಗಳು ತಮಗೆ ಕರೆ ಮಾಡಿ ತರಾಟೆ ತಗೆದುಕೊಳ್ಳುತ್ತಿದ್ದಾರೆ ಎಂದು ಬೆಳಗಾವಿ ಡಿಹೆಚ್‌ಒ ಡಾ.ಮಹೇಶ್ ಕೋಣಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿಗೆ ಪತ್ರ ಬರೆದಿರುವ ಬೆಳಗಾವಿ ಡಿಹೆಚ್‌ಒ ಡಾ.ಮಹೇಶ್ ಕೋಣಿ ತಾಲೂಕು ಆಸ್ಪತ್ರೆಯಿಂದ ಬೆಳಗಾವಿಯ ಬಿಮ್ಸ್‌ಗೆ ನಿಯೋಜನೆಗೊಂಡ ತಜ್ಞ ವೈದ್ಯರು ಹಾಗೂ ಇತರ ಸಿಬ್ಬಂದಿ ಪಟ್ಟಿ ಸಮೇತ ಪತ್ರ ಬರೆದಿದ್ದಾರೆ. 

ಮಾನ್ಯ ಪ್ರಾದೇಶಿಕ ಆಯುಕ್ತರಾದ ಆದಿತ್ಯ ಅಮ್ಲಾನ್ ಬಿಸ್ವಾಸ್ ಇವರ ಪತ್ರಗಳ ಹಾಗೂ ಮೌಖಿಕ ಆದೇಶಗಳ ಅನ್ವಯ ವೈದ್ಯರು ಹಾಗೂ ಸಿಬ್ಬಂದಿ ಬಿಮ್ಸ್ ಗೆ ನಿಯೋಜಿಸಲಾಗಿದೆ ಎಂದು ಉಲ್ಲೇಖಿಸಿದ್ದಾರೆ. ಆಯಾ ತಾಲೂಕು ಕೇಂದ್ರಗಳಲ್ಲಿ ಕೆಲಸ ನಿರ್ವಹಿಸುತ್ತಿದ್ದ ವೈದ್ಯರು ಹಾಗೂ ಸಿಬ್ಬಂದಿಯನ್ನು ಬಿಮ್ಸ್‌ಗೆ ನಿಯೋಜನೆ ಮಾಡಿದ್ದರಿಂದ ಆಯಾ ಕ್ಷೇತ್ರದ ಜನಪ್ರತಿನಿಧಿಗಳು ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ. ತಜ್ಞ ವೈದ್ಯರು ಹಾಗೂ ಸಿಬ್ಬಂದಿಯನ್ನು ತಾಲೂಕು ಕೇಂದ್ರಗಳಿಂದ ಬಿಮ್ಸ್‌ಗೆ ನಿಯೋಜನೆ ಮಾಡುವುದರಿಂದ ಸಾರ್ವಜನಿಕರಿಗೆ ಉತ್ತಮ ಸೇವೆ ಒದಗಿಸಲು ಆಗುತ್ತಿಲ್ಲ ಅಂತಾ ಜನಪ್ರತಿನಿಧಿಗಳು ಆಕ್ಷೇಪಣೆ ವ್ಯಕ್ತಪಡಿಸುತ್ತಿದ್ದಾರೆ. 

ಬೆಳಗಾವಿ: ಕಲ್ಲು ಗಣಿಗಾರಿಕೆ, ಅಪಾಯದಲ್ಲಿ ಡ್ಯಾಮ್‌..!

ಬಿಮ್ಸ್‌ಗೆ ನಿಯೋಜನೆಗೊಂಡ ಸಿಬ್ಬಂದಿಯನ್ನು ಮೂಲ ಸಂಸ್ಥೆಗಳಲ್ಲಿ ಕರ್ತವ್ಯ ನಿರ್ವಹಿಸುವಂತೆ ಆದೇಶಿಸಲು ಸೂಚಿಸಿರುತ್ತಾರೆ. ಹೀಗಾಗಿ ನಿಯೋಜಿತ ಅಧಿಕಾರಿಗಳು, ಸಿಬ್ಬಂದಿ ಬಿಮ್ಸ್‌ಗೆ ಕಳಿಸುವುದರಿಂದ ಆಗುತ್ತಿರುವ ತೊಂದರೆ ನಿವಾರಿಸುವಂತೆ ಮನವಿ ಮಾಡಿದ್ದಾರೆ. ಆರೋಗ್ಯ ಇಲಾಖೆ ಮೂಲಗಳ ಪ್ರಕಾರ ಬೆಳಗಾವಿ ಜಿಲ್ಲೆಯಲ್ಲಿ 60ಕ್ಕೂ ಹೆಚ್ಚು ತಜ್ಞ ವೈದ್ಯರ ಕೊರತೆ ಇದೆ. ಈ ಮಧ್ಯೆ ತಾಲೂಕು ಕೇಂದ್ರಗಳಿಗೆ ನೇಮಕಗೊಂಡ ತಜ್ಞ ವೈದ್ಯರನ್ನು ಜಿಲ್ಲಾ ಕೇಂದ್ರಕ್ಕೆ ಕಳುಹಿಸಿದರೆ ತಾಲೂಕು ಆಸ್ಪತ್ರೆಗಳಿಗೆ ಬರುವ ಹಳ್ಳಿ ಜನರ ಪಾಡೇನು? ಈ ಬಗ್ಗೆ ಸರ್ಕಾರ ಸೂಕ್ತ ಗಮ‌ನ ಹರಿಸಲಿ, ಹಳ್ಳಿ ಜನರ ಆರೋಗ್ಯದ ಕಡೆ ಗಮನ ಹರಿಸಲಿ ಎಂಬುದು ಸಾರ್ವಜನಿಕರ ಅಭಿಪ್ರಾಯ.

click me!