Asianet Suvarna News Asianet Suvarna News

ಪ್ರವೀಣ್‌ ಹಂತಕರನ್ನು ಎನ್‌ಕೌಂಟರ್‌ ಮಾಡಿ: ಅಭಯ ಪಾಟೀಲ

ಪ್ರವೀಣ್‌ ಹತ್ಯೆಗೆ ಸಂಬಂಧಿಸಿದಂತೆ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ವಿಧಿಸುವಂತೆ ಮುಖ್ಯಮಂತ್ರಿ, ಗೃಹ ಸಚಿವರಲ್ಲಿ ಮನವಿ ಮಾಡುತ್ತೇನೆ: ಅಭಯ 

Encounter the Praveen Nettaru Assassins Says BJP MLA Abhay Patil grg
Author
Bengaluru, First Published Jul 29, 2022, 8:38 AM IST

ಬೆಳಗಾವಿ(ಜು.29):  ಮಂಗಳೂರಿನಲ್ಲಿ ಬಿಜೆಪಿ ಕಾರ್ಯಕರ್ತ ಪ್ರವೀಣ್‌ ಹತ್ಯೆ ಮಾಡಿದ ಕೊಲೆಗಡುಕರನ್ನು ಎನ್‌ಕೌಂಟರ್‌ ಮಾಡಬೇಕು ಎಂದು ಬೆಳಗಾವಿ ದಕ್ಷಿಣ ಬಿಜೆಪಿ ಶಾಸಕ ಅಭಯ ಪಾಟೀಲ ಆಗ್ರಹಿಸಿದರು. ನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರ ಏನೂ ಮಾಡುತ್ತಿಲ್ಲ ಎನ್ನುವ ಭಾವನೆ ತಪ್ಪು. ಈ ಘಟನೆಯನ್ನು ನಾನು ತೀವ್ರವಾಗಿ ಖಂಡಿಸುತ್ತೇನೆ ಎಂದು ಹೇಳಿದರು. ಪ್ರವೀಣ್‌ ಹತ್ಯೆಗೆ ಸಂಬಂಧಿಸಿದಂತೆ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ವಿಧಿಸುವಂತೆ ಮುಖ್ಯಮಂತ್ರಿ, ಗೃಹ ಸಚಿವರಲ್ಲಿ ಮನವಿ ಮಾಡುತ್ತೇನೆ. ಭಾರತ ಸಂವಿಧಾನ ಒಪ್ಪದವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಆಗಬೇಕು. ಎರಡನೇ ಘಟನೆಯಾಗಿ ಕಟ್ಟುನಿಟ್ಟಿನ ಕ್ರಮ ವಹಿಸುವುದು ಅನಿವಾರ್ಯವಾಗಿದೆ ಎಂದರು.

ಹತ್ಯೆಕೋರರಿಗೆ ತ್ವರಿತವಾಗಿ ಶಿಕ್ಷೆ ವಿಧಿಸಲು ವಿಶೇಷ ಕೋರ್ಟ್‌ ಮಾಡಬೇಕು. ಈ ರೀತಿ ಮಾಡುವವರನ್ನು ಎನ್‌ಕೌಂಟರ್‌ ಮಾಡಬೇಕು. ಇದು ನನ್ನ ವೈಯಕ್ತಿಕ ಅಭಿಪ್ರಾಯ. ನಾನು 32 ವರ್ಷಗಳಿಂದ ಬಿಜೆಪಿ ಕಾರ್ಯಕರ್ತನಾಗಿ ಕೆಲಸ ಮಾಡುತ್ತಿದ್ದೇನೆ. ಇಷ್ಟೊಂದು ಆಕ್ರೋಶ ಎಂದಿಗೂ ವ್ಯಕ್ತವಾಗಿರಲಿಲ್ಲ. ಇದೇ ಮೊದಲು ಆಕ್ರೋಶ ವ್ಯಕ್ತವಾಗಿದ್ದು ಸತ್ಯವು ಇದೆ. ಕಾರ್ಯಕರ್ತರು ಪಕ್ಷಕ್ಕಾಗಿ ಶ್ರಮ ವಹಿಸುತ್ತಾರೆ. ಅವರ ಕುಟುಂಬ, ಅವರ ಜವಾಬ್ದಾರಿ ಪಕ್ಷದ ಮೇಲೆ ಇದೆ ಎಂದರು.

ಪ್ರವೀಣ್‌ ಹತ್ಯೆ ಪ್ರಕರಣ: ಇಬ್ಬರು ಆರೋಪಿಗಳ ಬಂಧನ

ಪ್ರವೀಣ್‌ ಹತ್ಯೆಗೆ ಸಂಬಂಧಿಸಿದಂತೆ ರಾಜ್ಯಾದ್ಯಂತ ಎಲ್ಲೆಡೆ ಕಾರ್ಯಕರ್ತರಿಂದ ಆಕ್ರೋಶ ವ್ಯಕ್ತವಾಗುತ್ತಿದೆ. ಸಿಎಂ ಬಸವರಾಜ ಬೊಮ್ಮಾಯಿ ಕಾರ್ಯಕ್ರಮ ರದ್ದು ಮಾಡಿ ಕಾರ್ಯಕರ್ತರ ಭಾವನೆಗೆ ಸ್ಪಂದಿಸಿದ್ದಾರೆ. ಹತ್ಯೆಕೋರರ ವಿರುದ್ಧ ಕಾನೂನು ಪ್ರಕಾರ ಶಿಕ್ಷೆ ವಿಧಿಸಬೇಕು. ತಪ್ಪಿತಸ್ಥರ ಮೇಲೆ ಉಗ್ರ ಕ್ರಮ ಕೈಗೊಂಡರೆ ಇಂತಹ ಘಟನೆ ಮರುಕಳಿಸುವುದಿಲ್ಲ ಎಂದರು.

ಎಸ್‌ಡಿಪಿಐ, ಪಿಎಫ್‌ಐ ಸಂಘಟನೆಗಳನ್ನು ರಾಜ್ಯದಲ್ಲಿ ನಿಷೇಧಿಸುವಂತೆ ಬಹಳಷ್ಟುಜನರ ಬೇಡಿಕೆಯಿದೆ. ಈ ವಿಚಾರದಲ್ಲಿ ಯಾರ ಮರ್ಜಿಯನ್ನು ಕಾಯುವ ಪ್ರಶ್ನೆಯೇ ಇಲ್ಲ. ಕಟ್ಟುನಿಟ್ಟಿನ ಕ್ರಮ ವಹಿಸಿದರೆ ಯಾವ ಸಂಘಟನೆಯೂ ಬೆಳೆಯುವುದಿಲ್ಲ ಎಂದು ಅವರು ಹೇಳಿದರು.

ಪ್ರವೀಣ್‌ ಕೊಲೆಗಡುಕರಿಗೆ ಶಿಕ್ಷೆಯಾಗಲಿ

ಬೈಲಹೊಂಗಲ: ದಕ್ಷಿಣ ಕನ್ನಡ ಜಿಲ್ಲೆಯ ಯುವ ಮೋರ್ಚಾ ಮುಖಂಡ ಪ್ರವೀಣ್‌ ನೆಟ್ಟಾರ್‌ ಒಬ್ಬ ಪ್ರಾಮಾಣಿಕ ಸಕ್ರಿಯ ಯುವ ನಾಯಕ, ಇಂತಹ ಯುವಕನ ಹತ್ಯೆಯಾಗಿರುವುದು ತೀವ್ರ ಖಂಡನೀಯ ಎಂದು ಪುರಸಭೆ ಸದಸ್ಯ ಭಾಜಪ ಜಿಲ್ಲಾ ಕಾರ್ಯದರ್ಶಿ ಗುರು ಮೆಟಗುಡ್‌ ಹೇಳಿದರು.

Praveen Nettaru Murder: ಶಫೀಕ್‌ ಕೊಲೆ ಮಾಡಿಲ್ಲ: ತಂದೆ, ಪತ್ನಿ ಸಮರ್ಥನೆ

ಪ್ರವೀಣ್‌ ನೆಟ್ಟಾರ್‌ ಇವರು ಬಿಜೆಪಿ ನಿಷ್ಠಾವಂತ ಸಕ್ರಿಯ ಮುಖಂಡನಾಗಿದ್ದು ಇವರ ಹತ್ಯೆಗೈದ ದುಷ್ಕರ್ಮಿಗಳನ್ನು ಕೂಡಲೇ ರಾಜ್ಯ ಸರ್ಕಾರ ಬಂಧಿಸಿ, ಕಠಿಣ ಕ್ರಮಕೊಳ್ಳಬೇಕು. ಸಹೋದರನ ಆತ್ಮಕ್ಕೆ ಭಗವಂತ ಚಿರಶಾಂತಿ ಕರುಣಿಸಿ, ಅವರ ಕುಟುಂಬ ವರ್ಗಕ್ಕೆ ದುಃಖ ಭರಿಸುವ ಶಕ್ತಿದಯಪಾಲಿಸಲಿ ಎಂದು ಕಂಬನಿ ಮಿಡಿದರು.

ಈ ಸಂದರ್ಭದಲ್ಲಿ ಜಿಲ್ಲಾ ಸಹಕಾರ ಪ್ರಕೋಷ್ಠ ಸಂಚಾಲಕ ಸುನೀಲ ಮರಕುಂಬಿ, ಜಿಲ್ಲಾ ಒಬಿಸಿ ಮೋರ್ಚಾ ಉಪಾಧ್ಯಕ್ಷ ಸಂತೋಷ ಹಡಪದ, ಜಿಲ್ಲಾ ಯುವ ಮೋರ್ಚಾ ಕೋಶಾಧ್ಯಕ್ಷ ಸಚಿನ್‌ ಕಡಿ, ಜಿಲ್ಲಾ ಸೈನಿಕರ ಪ್ರಕೋಷ್ಠ ಸಂಚಾಲಕ ಬಸವರಾಜ ಗುರುವಣ್ಣವರ, ಮಂಡಲ ಉಪಾಧ್ಯಕ್ಷ ಸುಭಾಷ ತುರುಮರಿ, ಪುರಸಭೆ ಸದಸ್ಯ ಹಾಗೂ ಯುವ ಮೋರ್ಚಾ ಕಾರ್ಯಕಾರಿಣಿ ಸದಸ್ಯ ಸಾಗರ ಬಾವಿಮನಿ, ಯುವ ಮೋರ್ಚಾ ಸದಸ್ಯ ಪಿಂಟು ಕರಿಬಲೆ, ಯುವ ಮೋರ್ಚಾ ಕಾರ್ಯದರ್ಶಿ ನಾಗಪ್ಪ ಸಂಗೊಳ್ಳಿ, ರವಿ ತುರುಮರಿ, ವಿನಾಯಕ ಕಬ್ಬಲಗಿ, ಚಂದ್ರಶೇಖರ ಸವದತ್ತಿ, ವಿನಾಯಕ ಹಂಪನ್ನವರ, ಗುರುಪಾದ ಅಂಗಡಿ, ಅರುಣ ತುರಮರಿ, ಬಸವರಾಜ ರಾಜಣ್ಣವರ, ರಾಘು ಕುಮುಚಿ, ಪವನಕುಮಾರ ಅಕ್ಕಿ ಹಾಗೂ ಪದಾಧಿಕಾರಿಗಳು, ಕಾರ್ಯಕರ್ತರು ಉಪಸ್ಥಿತರಿದ್ದರು.
 

Follow Us:
Download App:
  • android
  • ios