ಬಿಬಿಎಂಪಿ ಕೋಟಿ ವೃಕ್ಷ ಅಭಿಯಾನ-2023ಕ್ಕೆ ಮುಖ್ಯ ಆಯುಕ್ತರಿಂದ ಚಾಲನೆ

By Suvarna NewsFirst Published Jan 21, 2023, 6:12 PM IST
Highlights

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಸಹಯೋಗದೊಂದಿಗೆ ಕೋಟಿ ವೃಕ್ಷ ಸೈನ್ಯವು ಹಮ್ಮಿಕೊಂಡಿರುವ ಬಿಬಿಎಂಪಿ ಕೋಟಿ ವೃಕ್ಷ ಅಭಿಯಾನ-2023ಕ್ಕೆ ಪಾಲಿಕೆಯ ಕೇಂದ್ರ ಕಛೇರಿ ಡಾ. ರಾಜ್ ಕುಮಾರ್ ಗಾಜಿನ ಮನೆಯ ಮುಂಭಾಗ ಸಾಂಕೇತಿಕವಾಗಿ ಸಸಿ ನೆಡುವ ಮೂಲಕ ಚಾಲನೆ ನೀಡಲಾಯಿತು.

ಬೆಂಗಳೂರು (ಜ.21): ಬೆಂಗಳೂರು ನಗರ ಭಾರತದಲ್ಲೇ ಸಾಕಷ್ಟು ವೇಗವಾಗಿ ಬೆಳೆಯುತ್ತಿರುವ ನಗರವಾಗಿದ್ದು, ಉದ್ಯೋಗಕ್ಕಾಗಿ ಅಪಾರ ಸಂಖ್ಯೆಯಲ್ಲಿ ನಗರಕ್ಕೆ ಬಂದು ನೆಲೆಸುತ್ತಾರೆ. ಈ ವೇಳೆ ಜನರಿಗೆ ಸ್ಥಳ ಹಾಗೂ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸುವ ಸಲುವಾಗಿ ಸ್ವಲ್ಪ ಪ್ರಮಾಣದಲ್ಲಿ ಪರಿಸರಕ್ಕೆ ಹಾನಿಯುಂಟಾಗುತ್ತದೆ. ಈ ಸಂಬಂಧ ನಾವೆಲ್ಲರೂ ನಗರದಾದ್ಯಂತ ಹೆಚ್ಚು ಸಸಿಗಳನ್ನು ನೆಟ್ಟು ಅವು ಬೆಳೆಯುವವರೆಗೆ ಪೋಷಿಸಬೇಕೆಂದು ಮುಖ್ಯ ಆಯುಕ್ತರಾದ ಶ್ರೀ ತುಷಾರ್ ಗಿರಿ ನಾಥ್ ರವರು ತಿಳಿಸಿದರು.

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಸಹಯೋಗದೊಂದಿಗೆ ಕೋಟಿ ವೃಕ್ಷ ಸೈನ್ಯವು ಹಮ್ಮಿಕೊಂಡಿರುವ ಬಿಬಿಎಂಪಿ ಕೋಟಿ ವೃಕ್ಷ ಅಭಿಯಾನ-2023ಕ್ಕೆ ಪಾಲಿಕೆಯ ಕೇಂದ್ರ ಕಛೇರಿ ಡಾ. ರಾಜ್ ಕುಮಾರ್ ಗಾಜಿನ ಮನೆಯ ಮುಂಭಾಗ ಸಾಂಕೇತಿಕವಾಗಿ ಸಸಿ ನೆಡುವ ಮೂಲಕ ಚಾಲನೆ ನೀಡಿದ ಬಳಿಕ ಮಾತನಾಡಿದ ಅವರು, ಅರಣ್ಯ ಇಲಾಖೆ, ಪಾಲಿಕೆಯ ಅರಣ್ಯ ವಿಭಾಗವು ಸಮನ್ವಯ ಮಾಡಿಕೊಂಡು ನಗರದಾದ್ಯಂತ ಎತೇಚ್ಛವಾಗಿ ಸಸಿಗಳನ್ನು ನೆಡಲು ಯೋಜನೆ ರೂಪಿಸಲಾಗಿದೆ. ಅದರ ಜೊತೆಗೆ ಕೋಟಿ ವೃಕ್ಷ ಸೈನ್ಯದ ವತಿಯಿಂದಲೂ ನಗರದ ಕೆರೆಗಳು, ಉದ್ಯಾನವನಗಳು, ಮೀಸಲು ಅರಣ್ಯ ಹಾಗೂ ಇನ್ನಿತರೆ ಖಾಲಿ ಸ್ಥಳಗಳಲ್ಲಿ ಸಸಿಗಳನ್ನು ನೆಟ್ಟು 3 ವರ್ಷಗಳ ಕಾಲ ಪೋಷಣೆ ಮಾಡಲಿದ್ದಾರೆ ಎಂದು ತಿಳಿಸಿದರು.

ಕಳೆದ 3 ವರ್ಷಗಳಿಂದ ಕೋವಿಡ್ ಇದ್ದ ಪರಿಣಾಮ ನಗರದಲ್ಲಿ ಹೆಚ್ಚಾಗಿ ಸಸಿಗಳನ್ನು ನೆಡಲು ಸಾಧ್ಯವಾಗಿಲ್ಲ. ಪ್ರಸಕ್ತ ಸಾಲಿನಿಂದ ಸಸಿಗಳನ್ನು ನೆಡುವ ಪ್ರಮಾಣವನ್ನು ವರ್ಷದಿಂದ ವರ್ಷಕ್ಕೆ ಹೆಚ್ಚಿಕೊಂಡು ಹೋಗುತ್ತಾ ನಗರಲ್ಲಿ ಹೆಚ್ಚು ಸಸಿಗಳನ್ನು ಬೆಳೆಸಲು ಕ್ರಮವಹಸಿಬೇಕು. ಅದಕ್ಕಾಗಿ ನಗರದಲ್ಲಿ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘಗಳು, ನಾಗರಿಕರು ಹಾಗೂ ವಿದ್ಯಾರ್ಥಿಗಳು ಸಸಿಗಳನ್ನು ನೆಟ್ಟು ಅವುಗಳು ಬೆಳೆಯುವವರೆಗೆ ಪೋಷಣೆ ಮಾಡಬೇಕೆಂದು ಹೇಳಿದರು.

ನಗರದಲ್ಲಿ ಸದ್ಯ ಇರುವ ಮರಗಳ ಮೇಲೆ ಬಿತ್ತಿಪತ್ರಗಳನ್ನು ಅಂಟಿಸುವುದು, ಮೊಳೆ ಹೊಡೆಯುವುದು, ಮರಗಳನ್ನು ನಾಶ ಪಡಿಸಲು ಆಸಿಡ್‌ ಹಾಕುವ ಕೆಲಸ ಮಾಡುತ್ತಾರೆ. ಅಂತಹ ಘಟನೆಗಳು ಕಂಡುಬಂದಲ್ಲಿ ಅದನ್ನು ಕೂಡಲೆ ತಡೆಯುವ ಕೆಲಸ ಮಾಡಬೇಕು. ನಗರದಲ್ಲಿ ಹಸಿರೀಕರಣವನ್ನು ವೃದ್ಧಿಸುವ ಕೆಲಸ ಮಾಡಬೇಕು. ಇದರಿಂದ ವಾಯು ಮಾಲೀನ್ಯ ಕಡಿಮೆಯಾಗಿ ನಾಗರಿಕರಿಗೆ ಉತ್ತಮ ಆಮ್ಲಜನಕ ಸಿಗಲಿದೆ ಎಂದು ತಿಳಿಸಿದರು. 

ಉಪ ಅರಣ್ಯ ಸಂರಕ್ಷಣಾಧಿಕಾರಿಯಾದ ಸರಿನಾ ಸಿಕ್ಕಲಿಗರ್ ರವರು ಮಾತನಾಡಿ ನಗರದಲ್ಲಿ ಸಾಮನ್ಯ ಕಾರಣಗಳಿಗಾಗಿ ಮರಗಳನ್ನು ಕಡಿಯುವಂತೆ ಸಾಕಷ್ಟು ಅರ್ಜಿಗಳು ಬರುತ್ತವೆ. ಮರಗಳನ್ನು ಕಡಿಯುತ್ತಾ ಹೋದರೆ ಪರಿಸರ ಹಾಳಾಗಲಿದ್ದು, ಮರಗಳನ್ನು ಉಳಿಸುವುದು ಹಾಗೂ ಹೆಚ್ಚಾಗಿ ಬೆಳೆಸುವುದರಿಂದ ಪರಿಸರ ಉಳಿಯುತ್ತದೆ. ಈ ಸಂಬಂಧ ನಾಗರಿಕರಿಗೆ ಸಸಿಗಳನ್ನು ನೆಡುವ ಹಾಗೂ ಮರಗಳನ್ನು ಕಾಪಾಡುವ ಬಗ್ಗೆ ಹೆಚ್ಚು ಜಾಗೃತಿ ಮೂಡಿಸುವ ಅವಶ್ಯಕತೆಯಿದೆ ಎಂದು ತಿಳಿಸಿದರು. 

ಬೆಂಗಳೂರು ಸಾಕಷ್ಟು ಅಭಿವೃದ್ಧಿ ಯಾಗುತ್ತಿದ್ದು, ಅಭಿವೃದ್ಧಿಯ ಜೊತೆ ಜೊತೆಗೆ ಮರಗಳನ್ನು ಉಳಿಸುವ ಹಾಗೂ ಹೆಚ್ಚು ಸಸಿಗಳನ್ನು ನೆಡುವ ಕೆಲಸ ಮಾಡಬೇಕು. ಇದರಿಂದ ಮಾಲಿನ್ಯವನ್ನು ತಡೆಗಟ್ಟಬಹುದು. ಪಾಲಿಕೆಯ ನರ್ಸರಿಗಳಲ್ಲಿ ಸಸಿಗಳನ್ನು ಬೆಳೆಸಲಾಗುತ್ತಿದ್ದು, ಪ್ರತಿ ವರ್ಷವೂ ಪಾಲಿಕೆಯಿಂದ ಸಸಿಗಳನ್ನು ನಟ್ಟು ಪೋಷಣೆ ಮಾಡಲಾಗುತ್ತದೆ ಎಂದರು.

Bengaluru: ಮಹಿಳೆಯರಿಗೆ 100 ವಿಶೇಷ ಶೌಚಾಲಯ ನಿರ್ಮಾಣ: ಹಾಲುಣಿಸಲು, ಬಟ್ಟೆ ಬದಲಿಸಲು ಅವಕಾಶ

ಕೋಟಿ ವೃಕ್ಷ ಸೈನ್ಯದ ವತಿಯಿಂದ ಪಾಲಿಕೆಯ ಎಲ್ಲಾ ವಾರ್ಡ್ ವಾರು ತಂಡಗಳನ್ನು ಮಾಡಿಕೊಂಡು ಸಸಿಗಳನ್ನು ನೆಟ್ಟು 3 ವರ್ಷಗಳ ಕಾಲ ಪೋಷಣೆ ಮಾಡಲಿದ್ದಾರೆ. ಈ ಮೂಲಕ ಬೆಂಗಳೂರು ನಗರವನ್ನು ಮತ್ತೆ ಉದ್ಯಾನ ನಗರಿಯನ್ನಾಗಿ ಮಾಡಲು ಎಲ್ಲಾ ಎನ್.ಜಿ.ಒಗಳು, ನಾಗರಿಕರು ಕೂಡಾ ಕೈ ಜೋಡಿಸಬೇಕೆಂದು ತಿಳಿಸಿದರು.

 

Bengaluru: ಫೆ.15ರ ನಂತರ ಬಿಬಿಎಂಪಿ ಬಜೆಟ್‌: ತುಷಾರ್ ಗಿರಿನಾಥ್

ಪ್ರಶಂಸನಾ ಪ್ರಮಾಣ ಪತ್ರ ವಿತರಣೆ: ನಗರದಲ್ಲಿ ಸಸಿ ನೆಡಲು ಪಾಲ್ಗೊಂಡಿರುವಂತಹ ತಂಡಗಳಿಗೆ ಬಿಬಿಎಂಪಿ ವತಿಯಿಂದ ವಿಧಾನಸಭಾ ಕ್ಷೇತ್ರವಾರು ಪ್ರಶಂಸನಾ ಪ್ರಮಾಣ ಪತ್ರವನ್ನು ವಿತರಿಸಲಾಯಿತು. ಈ ವೇಳೆ ವಿಶೇಷ ಆಯುಕ್ತರಾದ ಡಾ. ಆರ್.ಎಲ್ ದೀಪಕ್, ಕೋಟಿ ವೃಕ್ಷ ಸೈನ್ಯದ ಸಂಸ್ಥಾಪಕರಾದ ಸುರಭಿ, ಪಾಲಿಕೆ ಅಧಿಕಾರಿಗಳು, ಶಾಲಾ-ಕಾಲೇಜು ವಿದ್ಯಾರ್ಥಿಗಳು ಹಾಗೂ ಇನ್ನಿತರರು ಉಪಸ್ಥಿತರಿದ್ದರು.

click me!