'ಬೆಂಗಳೂರಲ್ಲಿ ಕೊರೋನಾ ಪಾಸಿಟಿವ್‌ ಕೇಸ್‌ ಕೊಂಚ ಇಳಿಕೆ'

By Kannadaprabha NewsFirst Published Oct 17, 2020, 8:27 AM IST
Highlights

ಈವರೆಗೆ 82.70 ಲಕ್ಷ ಮಂದಿಗೆ ಕೊರೋನಾ ಪರೀಕ್ಷೆ: ಮಂಜುನಾಥ್‌ ಪ್ರಸಾದ್‌| ಸೋಂಕು ದೃಢಪಟ್ಟ ವ್ಯಕ್ತಿ ಒಂದು ವೇಳೆ ನಾಪತ್ತೆಯಾದರೂ ಆತನ ಓಟಿಪಿ, ಮನೆ ವಿಳಾಸ ಎಲ್ಲವೂ ಇರುವುದರಿಂದ ಕೆಲವೇ ದಿನಗಳಲ್ಲಿ ಆತನ ಪತ್ತೆ|

ಬೆಂಗಳೂರು(ಅ.17): ಕಳೆದ ವಾರದಿಂದ ಬಿಬಿಎಂಪಿ ಎಂಟು ವಲಯಗಳಲ್ಲಿಯೂ ಕೊರೋನಾ ಪಾಸಿಟಿವ್‌ ಪ್ರಕರಣಗಳು ಶೇಕಡಾವಾರು ಕಡಿಮೆಯಾಗಿವೆ ಎಂದು ಬಿಬಿಎಂಪಿ ಆಯುಕ್ತ ಎನ್‌.ಮಂಜುನಾಥ ಪ್ರಸಾದ್‌ ಹೇಳಿದ್ದಾರೆ. 

ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಗರದಲ್ಲಿ ಕೊರೋನಾ ಪರೀಕ್ಷೆ ಪ್ರಮಾಣ ಹೆಚ್ಚು ಮಾಡಲಾಗಿದ್ದು, ಪ್ರತಿ ದಿನ 50 ಸಾವಿರ ಜನರಿಗೆ ಕೊರೋನಾ ಪರೀಕ್ಷೆ ಮಾಡಲಾಗುತ್ತಿದೆ. ಪ್ರತಿ ದಿನ ದಾಖಲಾಗುವ ಪಾಸಿಟಿವ್‌ ಪ್ರಕರಣಗಳ ಸಂಖ್ಯೆಗೆ ಅನುಗುಣವಾಗಿ 10 ಪಟ್ಟು ಹೆಚ್ಚು ಪರೀಕ್ಷೆ ಮಾಡಲಾಗುತ್ತಿದೆ. ಈವರೆಗೆ 82.70 ಲಕ್ಷ ಮಂದಿಗೆ ಕೊರೋನಾ ಪರೀಕ್ಷೆ ಮಾಡಲಾಗಿದೆ ಎಂದರು.

ವಿಷಮಶೀತ ಜ್ವರ, ತೀವ್ರ ಉಸಿರಾಟ ಸಮಸ್ಯೆ ಇರುವವರು, ಕಂಟೈನ್ಮೆಂಟ್‌ ವಲಯಗಳಲ್ಲಿ ಇರುವ ಸೋಂಕಿತರಿಗೆ ಹೆಚ್ಚಿನ ಸಂಖ್ಯೆಯಲ್ಲಿ ಪರೀಕ್ಷೆ ಮಾಡಲಾಗುತ್ತಿದೆ. ಈ ಪರೀಕ್ಷೆಗಳ ಆಧಾರದ ಮೇಲೆ ಶೇ.13ರಷ್ಟು ಪಾಸಿಟಿವ್‌ ಪ್ರಮಾಣ ಇದೆ, ಆದರೆ ಸಾವಿನ ಪ್ರಮಾಣ ಶೇ.1.17ರಷ್ಟಿದೆ ಎಂದರು.

ಶುಭ ಶುಕ್ರವಾರ ಕೊರೋನಾ ಸೋಂಕಿತರಿಗಿಂತ ಗುಣಮುಖರಾದವರ ಸಂಖ್ಯೆಯೇ ಹೆಚ್ಚು

‘ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ’

ಮೊದಲಿನ ಹಾಗೆ ಕೊರೋನಾ ಸೋಂಕಿತರು ಈಗ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಪಾಸಿಟಿವ್‌ ಇರುವುದು ಗೊತ್ತಾದ ತಕ್ಷಣ ಅವರ ಮೊಬೈಲ್‌ಗೆ ಕರೆ ಮಾಡಲಾಗುತ್ತದೆ. ಕರೆ ಮಾಡಿದಾಗ ಸ್ವೀಕರಿಸದ ಸೋಂಕಿತರ ಮಾಹಿತಿಯನ್ನು ಪೊಲೀಸ್‌ ಇಲಾಖೆಗೆ ಕಳುಹಿಸಲಾಗುತ್ತದೆ. ಸೋಂಕು ದೃಢಪಟ್ಟ ವ್ಯಕ್ತಿ ಒಂದು ವೇಳೆ ನಾಪತ್ತೆಯಾದರೂ ಆತನ ಓಟಿಪಿ, ಮನೆ ವಿಳಾಸ ಎಲ್ಲವೂ ಇರುವುದರಿಂದ ಕೆಲವೇ ದಿನಗಳಲ್ಲಿ ಆತನನ್ನು ಪತ್ತೆ ಮಾಡಲಾಗುತ್ತದೆ ಎಂದು ಬಿಬಿಎಂಪಿ ಆಯುಕ್ತ ಮಂಜುನಾಥ್‌ ಪ್ರಸಾದ್‌ ಹೇಳಿದ್ದಾರೆ. 
 

click me!