ಬೆಂಗಳೂರಿನಲ್ಲಿ ಚಿಂದಿ ಆಯುವ ವ್ಯಕ್ತಿಗೆ ಸಿಕ್ತು ಕಂತೆ ಕಂತೆ ಡಾಲರ್‌ ನೋಟುಗಳು!

By Sathish Kumar KHFirst Published Nov 9, 2023, 9:33 AM IST
Highlights

ಬೆಂಗಳೂರಿನ ವೀರಣ್ಣಪಾಳ್ಯ ರೈಲ್ವೆ ಗೇಟ್‌ ಬಳಿ ಚಿಂದಿ ಆಯುತ್ತಿದ್ದ ಸುಲೇಮಾನ್‌ ಎಂಬ ವ್ಯಕ್ತಿಗೆ ಸುಮಾರು 30 ಲಕ್ಷ ರೂ. ಮೌಲ್ಯದ ಕಂತೆ ಕಂತೆ ಅಮೇರಿಕಾ ಡಾಲರ್ ನೋಟುಗಳು ಸಿಕ್ಕಿವೆ. 

ಬೆಂಗಳೂರು (ನ.09): ರಾಜ್ಯದಲ್ಲಿ ವಿದೇಶಿ ಕರೆನ್ಸಿಗಳ ಅಕ್ರಮ ಸಾಗಣೆ ಮೇಲೆ ಪೊಲೀಸರು ಹದ್ದಿನ ಕಣ್ಣಿಟ್ಟಿದ್ದಾರೆ. ಈ ನಡುವೆಯೇ ಅಮೇರಿಕಾ ಕರೆನ್ಸಿ ಡಾಲರ್‌ ನೋಟುಗಳನ್ನು ಬದಲಾವಣೆ ಮಾಡಲಾಗದೇ ಕಸದ ತೊಟ್ಟಿಗೆ ಎಸೆಯಲಾಗಿದೆ. ಪ್ರತಿನಿತ್ಯ ಚಿಂದಿ ಆಯಲು ಹೋಗುವಂತೆ ಹೋದ ವ್ಯಕ್ತಿಗೆ ಕಂತೆ ಕಂತೆ ಡಾಲರ್‌ ನೋಟುಗಳು ಪತ್ತೆಯಾಗಿದೆ. 

ಬೆಂಗಳೂರಿನಲ್ಲಿ ಚಿಂದಿ ಪೇಪರ್ ಆಯುವ ವ್ಯಕ್ತಿಗೆ ಕಂತೆ ಕಂತೆ ಡಾಲರ್ ನೋಟುಗಳು ಸಿಕ್ಕಿವೆ. ಸಲೇಮಾನ್ ಶೇಕ್ ಎಂಬ ವ್ಯಕ್ತಿಗೆ ಡಾಲರ್ ನೋಟುಗಳು ಸಿಕ್ಕಿವೆ. 100 ಡಾಲರ್ ಡಿನಾಮೇಷನ್ ನ ಒಟ್ಟು 25 ಕಟ್ಟು ನೋಟು ಪತ್ತೆಯಾಗಿವೆ. ಇದರ ಭಾರತೀಯ ರೂಪಾಯಿ ಮೌಲ್ಯ 30 ಲಕ್ಷ ಎಂದು ಅಂದಾಜಿಸಲಾಗಿದೆ. ವೀರಣ್ಣಪಾಳ್ಯ ರೈಲ್ವೆ ಗೇಟ್ ಬಳಿ ಪತ್ತೆಯಾದ ಡಾಲರ್ ನೋಟುಗಳನ್ನು ಅಪರಿತ ವ್ಯಕ್ತಿಗಳು ಕಪ್ಪು ಬಣ್ಣದ ಚೀಲವೊಂದರಲ್ಲಿ ಎಸೆದು ಹೋಗಿದ್ದಾರೆ ಎಂದು ಹೇಳಲಾಗುತ್ತಿದೆ.

Bengaluru: ಕನಕಪುರ ರಸ್ತೆಯಲ್ಲಿ 2000 ರೂ. ಮುಖಬೆಲೆಯ ಕಂತೆ ಕಂತೆ ನೋಟುಗಳು ಪತ್ತೆ

ಚಿಂದಿ ಆಯುವ ವ್ಯಕ್ತಿ ಸುಲೇಮಾನ್ ಮೂಲಕ ಸ್ಥಳೀಯ ವ್ಯಕ್ತಿ ಕರೀಂ ಎಂಬುವ ವರಿಗೆ ಮಾಹಿತಿ ಗೊತ್ತಾಗಿತ್ತು. ಇದಾದ ನಂತರ ಡಾಲರ್‌ಗಳನ್ನು ಏನು ಮಾಡಬೇಕೆಂಬುದು ತಿಳಿಯದೇ ಕರೀಂ ಅವರು ಸಾಮಾಜಿಕ ಜಾಲತಾಣದಲ್ಲಿರುವ ನಗರ ಪೊಲೀಸ್ ಆಯುಕ್ತ ಬಿ. ದಯಾನಂದ್ ಅವರ ಫೋನ್‌ ನಂಬರ್‌ ಅನ್ನು ಮಡೆದು ಅವರಿಗೆ ಮಾಹಿತಿ ನೀಡಿದ್ದಾರೆ. ನಂತರ ಕಮಿಷನರ್ ದಯಾನಂದ್‌ ಸ್ಥಳೀಯ ಹೆಬ್ಬಾಳ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ತೆರಳಿದ ಹೆಬ್ಬಾಳ ಪೊಲೀಸರು ಚಿಂದಿ ಆಯುವ ವ್ಯಕ್ತಿಗೆ ಸಿಕ್ಕಿದ್ದ ಡಾಲರ್‌ ನೋಟುಗಳನ್ನ ವಶಕ್ಕೆ ಪಡೆದಿದ್ದಾರೆ. 

ಇನ್ನು ಚಿಂದಿ ಆಯುವವನಿಗೆ ಸಿಕ್ಕಿರುವ ಡಾಲರ್ ನೋಟುಗಳು ಕಲರ್‌ ಜೆರಾಕ್ಸ್‌ ರೀತಿಯಲ್ಲಿವೆ ಎಂದು ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ. ಯಾರೋ ಕಿಡಿಗೇಡಿಗಳು ನಕಲಿ ನೋಟು ತಯಾರಿಸಲು ಪ್ರಯತ್ನಿಸಿ, ಸರಿಯಾಗಿ ಮುದ್ರಣವಾಗದ ಹಿನ್ನೆಲೆಯಲ್ಲಿ ಅವುಗಳನ್ನು ಬೀಸಾಡಿ ಹೋಗಿರಬಹುದು ಎಂಬ ಸಾಧ್ಯತೆಯನ್ನು ಪೊಲೀಸರು ಬಿಚ್ಚಿಟ್ಟಿದ್ದಾರೆ. ಆದರೂ, ಸದ್ಯ ಸಿಕ್ಕಿರುವ ನೋಟುಗಳನ್ನು ಹೆಬ್ಬಾಳ ಪೊಲೀಸರು ಪರಿಶೀಲನೆಗೆ ಕಳುಹಿಸಿದ್ದಾರೆ. ಪರಿಶೀಲನೆ ನಂತರ ಡಾಲರ್‌ ನೋಟುಗಳು ಅಸಲಿಯೋ, ನಕಲಿಯೋ ಎಂದು ತಿಳಿಯಲಿದೆ. ನಂತರ, ನೋಟುಗಳನ್ನು ಎಸೆದು ಹೋದ ಆರೋಪಿಗಳ ಪತ್ತೆಗೆ ಬಲೆ ಬೀಸುವುದಾಗಿ ಪೊಲೀಸರು ತಿಳಿಸಿದ್ದಾರೆ.

ಕಾಂಗ್ರೆಸ್ ಮಾಜಿ ಕಾರ್ಪೋರೇಟರ್ ಮನೇಲಿ ಕೋಟಿ ಕೋಟಿ ಹಣ ಪತ್ತೆ; ಸಿಎಂ ಸಿದ್ದು, ಡಿಕೆಶಿ ಮೇಲೆ ಮುಗಿಬಿದ್ದ ಎಚ್‌ಡಿ ಕುಮಾರಸ್ವಾಮಿ

ಕನಕಪುರ ರಸ್ತೆಯಲ್ಲಿ ಕಂತೆ ಕಂತೆ 2000 ರೂ. ನೋಟುಗಳು ಪತ್ತೆಯಾಗಿದ್ದವು:
ಈಗಾಗಲೇ ದೇಶದಲ್ಲಿ ರಿಸರ್ವ್‌ ಬ್ಯಾಂಕ್‌ ಆಫ್‌ ಇಂಡಿಯಾ (ಆರ್‌ಬಿಐ) ನಿಂದ 2 ಸಾವಿರ ರೂ. ಮುಖಬೆಲೆಯ ನೋಟುಗಳ ಚಲಾವಣೆಯನ್ನು ನಿಲ್ಲಿಸಿದೆ. ಇನ್ನು ನೋಟುಗಳು ಇದ್ದವರು ಬ್ಯಾಂಕ್‌ನಲ್ಲಿ ಬಂದು ಡೆಪಾಸಿಟ್‌ ಮಾಡಿ ಬದಲಿಸಿಕೊಳ್ಳುವಂತೆ ತಿಳಿಸಲಾಗಿದೆ. ಇನ್ನು ನೋಟು ಚಲಾವಣೆ ಮಾಡಲು ಸಾಧ್ಯವಿಲ್ಲವೆಂದರಿತ ದುಷ್ಕರ್ಮಿಗಳು 2000 ರೂ. ಮುಖಬೆಲೆಯ ಕಂತೆ ಕಂತೆ ನೋಟುಗಳನ್ನು ಜುಲೈ 25ರಂದು ಬೆಂಗಳೂರಿನ ಕನಕಪುರ ರಸ್ತೆ ಬದಿಯಲ್ಲಿ ಎಸೆದು ಹೋಗಿದ್ದರು.

ದೇಶದಲ್ಲಿ ಭಾರತೀಯ ರಿಸರ್ವ್‌ ಬ್ಯಾಂಕ್‌ ವತಿಯಿಂದ 2,000 ರೂ. ಮುಖಬೆಲೆಯ ನೋಟುಗಳ ಚಲಾವಣೆಯನ್ನು ನಿಲ್ಲಿಸಿದೆ. ಬ್ಯಾಂಕ್‌ಗಳಿಂದ ಯಾವುದೇ ಗ್ರಾಹಕರಿಗೆ ಈ ನೋಟುಗಳನ್ನು ನೀಡುವುದಿಲ್ಲ. ಜೊತೆಗೆ, ಯಾವುದೇ ಬ್ಯಾಂಕ್‌ಗಳ ಎಟಿಎಂನಲ್ಲಿಯೂ 2000 ರೂ. ಮುಖಬೆಲೆಯ ನೋಟುಗಳನ್ನು ಹಾಕುತ್ತಿಲ್ಲ. ಆದರೆ, ಗ್ರಾಹಕರಿಂದ ಈ ನೋಟುಗಳನ್ನು ಬ್ಯಾಂಕ್‌ಗಳಲ್ಲಿ ಪಡೆಯಲಾಗುತ್ತದೆ. ಗ್ರಾಹಕರು ಈ ನೋಟುಗಳನ್ನು ತಂದು ಬ್ಯಾಂಕ್‌ ಖಾತೆಗೆ ಜಮಾ ಮಾಡಬಹುದು ಎಂದು ತಿಳಿಸಿದೆ. ಆದರೆ, ಸರ್ಕಾರಕ್ಕೆ ಯಾವುದೇ ಮಾಹಿತಿ ನೀಡದ ತೆರಿಗೆ ವಂಚಿತ (ಕಪ್ಪುಹಣ- ಬ್ಲಾಕ್‌ ಮೊನಿ) ಹಣವಿದ್ದರೆ ಅದನ್ನು ಬ್ಯಾಂಕ್‌ಗೆ ಡೆಪಾಸಿಟ್‌ ಮಾಡುವ ಮುನ್ನವೇ ಸೂಕ್ತ ದಾಖಲೆಗಳನ್ನು ಕೊಡಬೇಕಾಗುತ್ತದೆ. ಆದರೆ, ಹೆಚ್ಚಿನ ನೋಟುಗಳಿದ್ದವರು ಈಗ ಸಂಕಷ್ಟಕ್ಕೆ ಸಿಲುಕಿದ್ದರು.

click me!