Bagalkote News: ಹಿರೇಮಾಗಿಯಿಂದ 40 ಕುಟುಂಬಗಳ ಸ್ಥಳಾಂತರ

By Kannadaprabha NewsFirst Published Sep 9, 2022, 1:15 PM IST
Highlights
  • 2009ರಲ್ಲಿ ಆದ ಪ್ರವಾಹದಿಂದ ಸಂತ್ರಸ್ತರಿಗೆ ಬೇರೆಡೆ ವಸತಿ ಕಲ್ಪಿಸಲಾಗಿದೆ.
  • ಆದರೆ ಅಲ್ಲಿನ 386 ಮನೆಗಳಿಗೆ ಇದುವರೆಗೂ ವಿವಿಧ ಕಾರಣಗಳನ್ನು ನೀಡಿ, ಗ್ರಾಮ ಪಂಚಾಯತಿ, ತಾಲೂಕು ಪಂಚಾಯತಿ ಹಕ್ಕುಪತ್ರಗಳನ್ನು ನೀಡಿಲ್ಲ.
  • -ಇದರಿಂದ ನಮ್ಮದು ಎಂದು ಹೇಳಲು ದಾಖಲಾತಿ ಇಲ್ಲ.
  • ನಮಗೆ ಹಕ್ಕು ಪತ್ರ ನೀಡಿ ಹಾಗೂ ಕೃಷ್ಣಾ ಮೇಲ್ದಂಡೆ ಯೋಜನೆ ರೀತಿ ನಮಗೆ ಸಂತ್ರಸ್ತರೆಂದು ಪರಿಗಣಿಸಿ ಎಂದು ಗ್ರಾಮಸ್ಥರು ಶಾಸಕರಲ್ಲಿ ಹಕ್ಕೊತ್ತಾಯ

ಅಮೀನಗಡ (ಸೆ.9) : ಪ್ರವಾಹದಿಂದ ಸಂಪೂರ್ಣ ಜಲಾವೃತವಾಗಿರುವ ಹಿರೇಮಾಗಿ ಗ್ರಾಮದ 40ಕ್ಕೂ ಹೆಚ್ಚು ಕುಟುಂಬಗಳನ್ನು ಗುರುವಾರ ಸ್ಥಳಾಂತರ ಮಾಡಲಾಗಿದೆ. ನಡುಗಡ್ಡೆಯಂತಾದ ಹಿರೇಮಾಗಿ ಗ್ರಾಮದ ಕುಟುಂಬಸ್ಥರನ್ನು ಗ್ರಾಮ ಪಂಚಾಯತಿ ಸಿಬ್ಬಂದಿ, ಕಂದಾಯ ಇಲಾಖೆಯ ಅಧಿಕಾರಿಗಳು ಸ್ಥಳಾಂತರಿಸಿದ್ದಾರೆ. ಬಾಗಲಕೋಟೆ ಮತಕ್ಷೇತ್ರದ ಕಟ್ಟಕಡೆಯ ಗ್ರಾಮ ಎನಿಸಿದ ಹಿರೇಮಾಗಿ ನಿರಂತರ ಮಳೆಯಿಂದ ಉಕ್ಕಿ ಹರಿದ ಮಲಪ್ರಭೆ ನದಿಯ ಆರ್ಭಟದಿಂದ ನಡುಗಡ್ಡೆಯಂತಾಗಿದೆ. ಗ್ರಾಮಕ್ಕೆ ಹೊರಗಿನಿಂದ ಬರಲು ರಸ್ತೆಗಳು ಸಂಪೂರ್ಣ ಕಟ್‌ ಆಗಿವೆ. ಹೀಗಾಗಿ ಹೊರಗಿನ ಸಂಪರ್ಕವೇ ಕಡಿತವಾಗಿದೆ.

 

Bagalkot News : ವಿವಿಧ ಅಭಿವೃಧ್ದಿ ಕಾಮಗಾರಿಗಳಿಗೆ ಶಾಸಕ ವೀರಣ್ಣ ಚರಂತಿಮಠ ಚಾಲನೆ 

ನೆರೆಯ ಗ್ರಾಮಗಳಿಂದ ಬರುವ ಶಾಲೆಯ ವಿದ್ಯಾರ್ಥಿಗಳು ತೀವ್ರ ತೊಂದರೆಪಡುವಂತಾಗಿದೆ. ಸ್ಥಳದಲ್ಲಿದ್ದ ಹಿರೇಮಾಗಿ ಗ್ರಾಮ ಪಂಚಾಯತಿ ಪಿಡಿಒ ಎಸ್‌.ಬಿ. ಚಂದರಗಿ, ಗ್ರಾಮ ಲೆಕ್ಕಾಧಿಕಾರಿ ಶರಣು ಇಟಗಿ, ವಾಲಿಕಾರ ಸಣ್ಣಪ್ಪ ಕೆಂಗಾರ ಮುಂತಾದವರು ಕುಟುಂಬಸ್ಥರನ್ನು ಈಗಾಗಲೇ ಸಿದ್ಧಗೊಂಡಿರುವ ಪುನರ್ವಸತಿ ಕೇಂದ್ರಗಳಿಗೆ ಸ್ಥಳಾಂತರಿಸುತ್ತಿದ್ದಾರೆ.

ಸ್ಥಳಕ್ಕೆ ಭೇಟಿ ನೀಡಿದ ಬಾಗಲಕೋಟೆ ಶಾಸಕ ಡಾ. ವೀರಣ್ಣ ಚರಂತಿಮಠ ಅವರಿಗೆ ಗ್ರಾಮಸ್ಥರು ಚರ್ಚಿಸಿದರು. 2009ರಲ್ಲಿ ಆದ ಪ್ರವಾಹದಿಂದ ಸಂತ್ರಸ್ತರಿಗೆ ಬೇರೆಡೆ ವಸತಿ ಕಲ್ಪಿಸಲಾಗಿದೆ. ಆದರೆ ಅಲ್ಲಿನ 386 ಮನೆಗಳಿಗೆ ಇದುವರೆಗೂ ವಿವಿಧ ಕಾರಣಗಳನ್ನು ನೀಡಿ, ಗ್ರಾಮ ಪಂಚಾಯತಿ, ತಾಲೂಕು ಪಂಚಾಯತಿ ಹಕ್ಕುಪತ್ರಗಳನ್ನು ನೀಡಿಲ್ಲ. ಇದರಿಂದ ನಮ್ಮದು ಎಂದು ಹೇಳಲು ದಾಖಲಾತಿ ಇಲ್ಲ. ನಮಗೆ ಹಕ್ಕು ಪತ್ರ ನೀಡಿ ಹಾಗೂ ಕೃಷ್ಣಾ ಮೇಲ್ದಂಡೆ ಯೋಜನೆ ರೀತಿ ನಮಗೆ ಸಂತ್ರಸ್ತರೆಂದು ಪರಿಗಣಿಸಿ ಎಂದು ಗ್ರಾಮಸ್ಥರು ಶಾಸಕರಲ್ಲಿ ಹಕ್ಕೊತ್ತಾಯ ಮಾಡಿದರು. ಅದನ್ನು ಪರಿಶೀಲಿಸಲಾಗುವುದು ಸದ್ಯಕ್ಕೆ ಅವರಿಗೆ ಹಕ್ಕುಪತ್ರ ನೀಡಿ ಎಂದು ಸ್ಥಳದಲ್ಲೇ ಇದ್ದ ಹುನಗುಂದ ತಹಸೀಲ್ದಾರ್‌ ಬಸವಂತಪ್ಪ ನ್ಯಾಕೋಡಿ ಅವರಿಗೆ ಶಾಸಕರು ಸೂಚಿಸಿದರು.

ಈ ವೇಳೆ ಉಪತಹಸೀಲ್ದಾರ್‌ ಮೋಹನ ಹಣಗಿ, ಗ್ರಾಮ ಪಂಚಾಯಿತಿ ಪಿಡಿಒ ಎಸ್‌.ಬಿ. ಚಂದರಗಿ, ಗ್ರಾಮ ಲೆಕ್ಕಾಧಿಕಾರಿ ಶರಣು ಇಟಗಿ, ಅಮೀನಗಡ ಠಾಣಾಧಿಕಾರಿ ಎಂ.ಜಿ. ಕುಲಕರ್ಣಿ ಮುಂತಾದವರಿದ್ದರು. ಹಿರೇಮಾಗಿ ಗ್ರಾಮಕ್ಕೆ ವಿಧಾನ ಪರಿಷತ್‌ ಸದಸ್ಯ ಪಿ.ಎಚ್‌.ಪೂಜಾರ್‌, ಮಾಜಿ ಸಚಿವ ಎಚ್‌.ವೈ. ಮೇಟಿ ಭೇಟಿ ನೀಡಿದರು. ಬಂದ ಪ್ರತಿಯೊಬ್ಬ ಜನಪ್ರತಿನಿಧಿಗಳ ಮುಂದೆ ಗ್ರಾಮಸ್ಥರು ತಮ್ಮ ಅಳಲು ತೋಡಿಕೊಂಡರು.

ಈ ಹಿಂದೆಯೇ ಪ್ರವಾಹ ಬಂದ ಸಂದರ್ಭದಲ್ಲಿ, ಹಿರೇಮಾಗಿ ಸಂತ್ರಸ್ತರಿಗೆ ಬೇರೆಡೆ ಪುನರ್‌ವಸತಿ ಕೇಂದ್ರ ನಿರ್ಮಿಸಲಾಗಿತ್ತು. ಕೆಲವು ಕುಟುಂಬಗಳು ಅಲ್ಲಿ ವಾಸಿಸುತ್ತಿವೆ. ಇಂದು 40ಕ್ಕೂ ಹೆಚ್ಚು ಕುಟುಂಬದವರನ್ನು ಟ್ರ್ಯಾಕ್ಟರ್‌, ಚಕ್ಕಡಿ ಬಂಡಿಗಳಲ್ಲಿ ಸ್ಥಳಾಂಥರಿಸುತ್ತಿದ್ದೇವೆ. ಯಾವುದೇ ಅಹಿತಕರ ಘಟನೆಯಾಗದಂತೆ ಜಾಗೂರೂಕತೆ ವಹಿಸಲಾಗಿದೆ ಎಂದರು.

- ಹಿರೇಮಾಗಿ ಗ್ರಾಮ ಪಂಚಾಯತಿ ಪಿಡಿಒ ಎಸ್‌.ಬಿ. ಚಂದರಗಿ,

ಚಿತ್ತರಗಿ ಪ್ರಾಥಮಿಕ ಆರೋಗ್ಯ ಕೇಂದ್ರ ಜಲಾವೃತ

ಅಮೀನಗಡ: ಸಮೀಪದ ಚಿತ್ತರಗಿ ಗ್ರಾಮದಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರದ ಸುತ್ತಲೂ ಹಳ್ಳದ ನೀರು ನಿಂತು, ಆರೋಗ್ಯ ಕೇಂದ್ರ ಅನಾರೋಗ್ಯ ಕೇಂದ್ರವಾಗಿ ಪರಿಣಮಿಸಿದೆ. ಗ್ರಾಮದ ಹಳ್ಳದ ನೀರು ಹರಿದು ನದಿಗೆ ಸೇರಬೇಕಿರುವುದು, ಮಲಪ್ರಭ ನದಿ ಉಕ್ಕಿಹರಿದ ಪರಿಣಾಮ, ಹಳ್ಳದ ನೀರು ಹಿಂದಕ್ಕೆ ಬಂದ ನೀರು, ಆರೋಗ್ಯ ಕೇಂದ್ರ ಸುತ್ತಲೂ ಜಲಾವೃತಗೊಂಡಿದೆ.

ಅದರಂತೆ ಗ್ರಾಮ ಪಂಚಾಯತಿ ಸುತ್ತಲೂ ನೀರು ನಿಂತು ಜಲಾವೃತಗೊಂಡಿದೆ. ನದಿ ಪಕ್ಕದ ಹೊಲಗಳಲ್ಲಿ ನೀರು ನಿಂತಿದೆ. ಹೀಗಾಗಿ ವಿಜಯಮಹಾಂತೇಶ್ವರ ಮಠದಲ್ಲಿ ರೋಗಿಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ.

 ಬಾಗಲಕೋಟೆ: ಸರ್ಕಾರಕ್ಕೆ ಡೆಡ್‌ಲೈನ್‌ ಕೊಟ್ಟ ಗ್ರಾಮ ವಿದ್ಯುತ್ ಪ್ರತಿನಿಧಿಗಳು..!

ಸ್ಥಳಕ್ಕೆ ತಾಲೂಕು ವೈದ್ಯಾಧಿಕಾರಿ ಡಾ. ಪ್ರಶಾಂತ ತುಂಬಗಿ ಭೇಟಿ ನೀಡಿ ಪರಿಶೀಲಿಸಿದ್ದಾರೆ. ತಾತ್ಕಾಲಿಕವಾಗಿ ಗ್ರಾಮದಲ್ಲಿರುವ ವಿಜಯಮಹಾಂತೇಶ್ವರ ಮಠದ ಒಂದು ಕೊಠಡಿಯಲ್ಲಿ ಹೊರ ರೋಗಿಗಳ ಚಿಕಿತ್ಸೆಗಾಗಿ ವ್ಯವಸ್ಥೆ ಮಾಡಲಾಗಿದೆ. ಅಂಥಹ ಗಂಭೀರ ಪರಿಸ್ಥಿತಿಯ ರೋಗಿಗಳು ಬಂದರೆ ತಕ್ಷಣವೇ ತಾಲೂಕು ಕೇಂದ್ರಕ್ಕೆ ವ್ಯವಸ್ಥೆ ಮಾಡಲಾಗುವುದು. ನೀರು ಇಳಿದ ನಂತರ ಮತ್ತೆ ಆರೋಗ್ಯ ಕೇಂದ್ರದಲ್ಲೇ ರೋಗಿಗಳನ್ನು ಪರಿಶೀಲಿಸಲಾಗುವುದು. ಈಗಾಗಲೇ ಮಠದ ಧ್ವನಿವರ್ಧಕದ ಮೂಲಕ ಜನತೆಗೆ ಎಚ್ಚರ ನೀಡಲಾಗಿದ್ದು, ಮಲೇರಿಯಾ, ಡೆಂಘಿ ಕಾಯಿಲೆಗಳ ನಿವಾರಣೆಗಾಗಿ ಮುನ್ನೆಚ್ಚರಿಕೆ ವಹಿಸಲಾಗಿದೆ.

-ಡಾ.ಹರ್ಷವರ್ಧನ ಸಜ್ಜನ ವೈದ್ಯಾಧಿಕಾರಿ

click me!