ಏಪ್ರಿಲ್‌ 1ರಿಂದ ಆಟೋರಿಕ್ಷಾ ಪ್ರಯಾಣ ದರ ಜಾಸ್ತಿ

By Suvarna NewsFirst Published Feb 28, 2020, 8:33 AM IST
Highlights

ಮಂಗಳೂರಿನಲ್ಲಿ ಏಪ್ರಿಲ್‌ 1ರಿಂದ ಆಟೋರಿಕ್ಷಾದಲ್ಲಿ ಪ್ರಯಾಣಿಸಬೇಕಾದರೆ ಏರಿಕೆಯಾದ ಪ್ರಯಾಣ ದರ ನೀಡಬೇಕು. ಏ.1ರಿಂದ ಜಾರಿಗೆ ಬರುವಂತೆ ಆಟೋರಿಕ್ಷಾ ಪ್ರಯಾಣದರವನ್ನು ಹೆಚ್ಚಳಗೊಳಿಸಿ ಪ್ರಾದೇಶಿಕ ಸಾರಿಗೆ ಅಧಿಕಾರಿ ಆದೇಶ ಹೊರಡಿಸಿದ್ದಾರೆ.

ಮಂಗಳೂರು(ಫೆ.28): ಮಂಗಳೂರಿನಲ್ಲಿ ಏಪ್ರಿಲ್‌ 1ರಿಂದ ಆಟೋರಿಕ್ಷಾದಲ್ಲಿ ಪ್ರಯಾಣಿಸಬೇಕಾದರೆ ಏರಿಕೆಯಾದ ಪ್ರಯಾಣ ದರ ನೀಡಬೇಕು. ಏ.1ರಿಂದ ಜಾರಿಗೆ ಬರುವಂತೆ ಆಟೋರಿಕ್ಷಾ ಪ್ರಯಾಣದರವನ್ನು ಹೆಚ್ಚಳಗೊಳಿಸಿ ಪ್ರಾದೇಶಿಕ ಸಾರಿಗೆ ಅಧಿಕಾರಿ ಆದೇಶ ಹೊರಡಿಸಿದ್ದಾರೆ.

ಪ್ರಸ್ತುತ ಇರುವ ಕನಿಷ್ಠ ದರ (ಮೊದಲ 1.5 ಕಿ.ಮೀ.) 25 ರು. ಇನ್ನು 30 ರು. ಆಗಲಿದೆ. ಪ್ರತಿ ಕಿ.ಮೀ.ಗೆ ನಿಗದಿಯಾಗಿದ್ದ 14 ರು. ದರ ಇನ್ನು 15 ರು.ಗೆ ಏರಿಕೆಯಾಗಲಿದೆ. ಆಟೋ ಪ್ರಯಾಣ ದರ ಪರಿಷ್ಕರಣೆ ಕುರಿತು ಗುರುವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಭೆ ನಡೆಯಿತು.

ಆಟೋ ಬಿಟ್ರು ಶಾಸಕ ತನ್ವೀರ್‌ಸೇಠ್..! ನೋಡಿ ಫೋಟೋಸ್

ವಿವಿಧ ಆಟೋ ಸಂಘಟನೆಗಳ ಪ್ರತಿನಿಧಿಗಳ ಅಹವಾಲು ಆಲಿಸಿದ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಸಾರಿಗೆ ಪ್ರಾಧಿಕಾರದ ಅಧ್ಯಕ್ಷೆ ಸಿಂಧೂ ರೂಪೇಶ್‌ ಅವರು ದರ ಏರಿಕೆ ನಿರ್ಧಾರ ಪ್ರಕಟಿಸಿದರು. ಏಪ್ರಿಲ್‌ 1ರಿಂದ ಹೊಸ ದರ ಅನ್ವಯವಾಗಲಿದೆ ಎಂದು ಅವರು ತಿಳಿಸಿದರು.

ತೈಲ ಹಾಗೂ ಎಲ್‌ಪಿಜಿ ದರ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗಿದೆ. ಆಟೋ ಬಿಡಿಭಾಗಗಳ ದರ ಕೂಡಾ ಏರಿಕೆಯಾಗಿದೆ. ಕಳೆದ 6 ವರ್ಷದಿಂದ ದ.ಕ.ಜಿಲ್ಲೆಯಲ್ಲಿ ಆಟೋ ಪ್ರಯಾಣ ದರ ಪರಿಷ್ಕರಣೆಯಾಗಿಲ್ಲ. ಉಡುಪಿ ಜಿಲ್ಲೆಯಲ್ಲಿ ಕನಿಷ್ಠ ದರ 30 ರು. ನಿಗದಿಯಾಗಿದೆ. ದ.ಕ.ಜಿಲ್ಲೆಗೂ ಈ ಕನಿಷ್ಠ ದರವನ್ನು ಜಾರಿ ಮಾಡುವಂತೆ ಆಟೋ ಮಾಲೀಕ ಸಂಘದ ಪದಾಧಿಕಾರಿಗಳು ಹಕ್ಕೊತ್ತಾಯ ಮಂಡಿಸಿದರು.

ಮಂಗಳೂರು-ಬೆಂಗಳೂರು ರಾತ್ರಿ ರೈಲು ಬುಕ್ಕಿಂಗ್‌ ರದ್ದು

ಹೊಟೇಲ್‌ ತಿಂಡಿ, ಹಾಲು, ಜೀನಸು ಸಾಮಾಗ್ರಿ ಬೆಲೆ ಗಗನಕ್ಕೇರಿದೆ. ಇತರ ಎಲ್ಲ ವೃತ್ತಿಯವರು ಮನಬಂದಂತೆ ದರ ಏರಿಸುತ್ತಾರೆ. ಆದರೆ ಆಟೋ ಪ್ರಯಾಣದರ ಏರಿಸಲು ಸಾರಿಗೆ ಪ್ರಾಧಿಕಾರದ ಅನುಮತಿಗೆ ಕಾಯಬೇಕು. ಪ್ರಾಧಿಕಾರದ ಸಭೆಗಳು ನಡೆಯುತ್ತಿಲ್ಲ. ಸಾಕಷ್ಟುಬಾರಿ ಮನವಿ ಸಲ್ಲಿಸಿದರೂ ಯಾರೂ ಸ್ಪಂದಿಸಿಲ್ಲ. ರಾಜ್ಯದ ಯಾವುದೇ ಜಿಲ್ಲೆಯಲ್ಲಿ ಆಟೋ ಚಾಲಕರು ಮೀಟರ್‌ ನಿಯಮ ಪಾಲಿಸುತ್ತಿಲ್ಲ. ಮಂಗಳೂರಿನ ಆಟೋ ಚಾಲಕರು ಪ್ರಾಮಾಣಿಕವಾಗಿ ಮೀಟರ್‌ ದರ ಪಡೆಯುತ್ತಿದ್ದಾರೆ. ಆದರೆ ನಮಗೆ ಅನ್ಯಾಯ ಮಾಡಲಾಗುತ್ತಿದೆ ಎಂದು ಆಟೋ ಮಾಲೀಕರು ದೂರಿದರು.

ಪರ-ವಿರೋಧ ಅಭಿಪ್ರಾಯ :

ಪ್ರಸ್ತುತ ಇರುವ ಕನಿಷ್ಠ ದರ 25 ರು. ದರವನ್ನು 30 ರು.ಗೆ ಏರಿಕೆ ಮಾಡುವ ನಿರ್ಧಾರವನ್ನು ಜಿಲ್ಲಾಧಿಕಾರಿ ಅವರು ಪ್ರಕಟಿಸಿದಾಗ ಎಲ್ಲ ಸಂಘಟನೆಯ ಪದಾಧಿಕಾರಿಗಳು ಸ್ವಾಗತಿದರು. ಆದರೆ ಪ್ರತಿ ಕಿ.ಮೀ.ಗೆ ನಿಗದಿಯಾಗಿದ್ದ 14 ರು. ದರ ಇನ್ನು 15 ರು.ಗೆ ಏರಿಕೆ ಮಾಡುವ ಬಗ್ಗೆ ಪರ, ವಿರೋಧ ಅಭಿಪ್ರಾಯ ವ್ಯಕ್ತವಾಯಿತು. 15 ರು. ಏರಿಕೆಗೆ ಸಹಮತವಿದೆ ಎಂದು ಕೆಲವು ಸಂಘಟನೆಯ ಪದಾಧಿಕಾರಿಗಳು ತಿಳಿಸಿದರು.

ದಕ್ಷಿಣ ಕನ್ನಡದಲ್ಲಿ ಗುಡುಗು ಸಹಿತ ಭಾರೀ ಮಳೆ

ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಇನ್ನೊಂದು ಗುಂಪಿನವರು ಉಡುಪಿಯಲ್ಲಿ ಪ್ರತಿ ಕಿ.ಮೀ.ಗೆ 17 ರು. ದರ ನಿಗದಿಯಾಗಿದೆ. ಇಲ್ಲಿ 16 ರು. ನಿಗದಿಪಡಿಸಿ ಎಂದು ಪಟ್ಟು ಹಿಡಿದರು. ಸಾರ್ವಜನಿಕ ಹಿತದೃಷ್ಟಿಯಿಂದ 15 ರು. ದರ ನಿಗದಿ ಪಡಿಸಲಾಗಿದೆ. ಸದ್ಯ ಇದಕ್ಕಿಂತ ಹೆಚ್ಚು ದರ ಏರಿಕೆ ಮಾಡಲು ಸಾಧ್ಯವಿಲ್ಲ ಎಂದು ಜಿಲ್ಲಾಧಿಕಾರಿ ಸಿಂಧೂ ರೂಪೇಶ್‌ ಸ್ಪಷ್ಟಪಡಿಸಿದರು. ಮಂಗಳೂರು ಸಾರಿಗೆ ಆಧಿಕಾರಿ ರಾಮಕೃಷ್ಣ ರೈ, ಪುತ್ತೂರು ಸಾರಿಗೆ ಅಧಿಕಾರಿ ಆನಂದ್‌, ಹೆಚ್ಚುವರಿ ಪೊಲೀಸ್‌ ಅಧೀಕ್ಷಕ ವಿಕ್ರಂ ಅಮ್ಟೆ, ಎಸಿಪಿ ಮಂಜುನಾಥ ಶೆಟ್ಟಿಇದ್ದರು.

click me!