ಈ ಬಾರಿ ದ.ಕ.ದಲ್ಲಿ ವಿಧಾನ ಪರಿಷತ್‌ ಆಕಾಂಕ್ಷಿಗಳಿಗೆ ನಿರಾಸೆ?

Kannadaprabha News   | Asianet News
Published : Jun 17, 2020, 07:44 AM IST
ಈ ಬಾರಿ ದ.ಕ.ದಲ್ಲಿ ವಿಧಾನ ಪರಿಷತ್‌ ಆಕಾಂಕ್ಷಿಗಳಿಗೆ ನಿರಾಸೆ?

ಸಾರಾಂಶ

ಮಂಗಳೂರಿನ ಐವನ್‌ ಡಿಸೋಜಾ ಹಾಗೂ ಕರಾವಳಿಯ ನಟಿ ಜಯಮಾಲಾ ಅವರ ವಿಧಾನ ಪರಿಷತ್‌ ಸದಸ್ಯತ್ವದ ಅವಧಿ ಜೂನ್‌ 22ಕ್ಕೆ ಅಂತ್ಯಗೊಳ್ಳಲಿದೆ. ಇದೇ ವೇಳೆ ವಿಧಾನ ಪರಿಷತ್‌ನ 7 ಸ್ಥಾನ ಹಾಗೂ 5 ನಾಮನಿರ್ದೇಶಿತ ಸ್ಥಾನಕ್ಕೆ ದ.ಕ.ಜಿಲ್ಲೆಯಲ್ಲಿ ಬಿಜೆಪಿ ಅಥವಾ ಕಾಂಗ್ರೆಸ್‌ನಿಂದ ಆಕಾಂಕ್ಷಿಗಳಿದ್ದರೂ ಈಗಿನ ವಿದ್ಯಮಾನದಲ್ಲಿ ಆಯ್ಕೆಯಾಗುವ ಸಾಧ್ಯತೆ ವಿರಳ ಎಂದು ಹೇಳಲಾಗಿದೆ.

ಮಂಗಳೂರು(ಜೂ.17): ಮಂಗಳೂರಿನ ಐವನ್‌ ಡಿಸೋಜಾ ಹಾಗೂ ಕರಾವಳಿಯ ನಟಿ ಜಯಮಾಲಾ ಅವರ ವಿಧಾನ ಪರಿಷತ್‌ ಸದಸ್ಯತ್ವದ ಅವಧಿ ಜೂನ್‌ 22ಕ್ಕೆ ಅಂತ್ಯಗೊಳ್ಳಲಿದೆ.

ಇದೇ ವೇಳೆ ವಿಧಾನ ಪರಿಷತ್‌ನ 7 ಸ್ಥಾನ ಹಾಗೂ 5 ನಾಮನಿರ್ದೇಶಿತ ಸ್ಥಾನಕ್ಕೆ ದ.ಕ.ಜಿಲ್ಲೆಯಲ್ಲಿ ಬಿಜೆಪಿ ಅಥವಾ ಕಾಂಗ್ರೆಸ್‌ನಿಂದ ಆಕಾಂಕ್ಷಿಗಳಿದ್ದರೂ ಈಗಿನ ವಿದ್ಯಮಾನದಲ್ಲಿ ಆಯ್ಕೆಯಾಗುವ ಸಾಧ್ಯತೆ ವಿರಳ ಎಂದು ಹೇಳಲಾಗಿದೆ.

ಮಂಗಳೂರಲ್ಲಿ ಕೊರೋನಾ ಸ್ಫೋಟ: ಒಂದೇ ದಿನ 79 ಪಾಸಿಟಿವ್‌

ಒಟ್ಟು ಏಳು ಸ್ಥಾನ ಪೈಕಿ ಕಾಂಗ್ರೆಸ್‌ಗೆ ಸಿಗುವುದು ಎರಡನೇ ಸ್ಥಾನ. ಇದರಲ್ಲಿ ವಿಧಾನ ಪರಿಷತ್‌ ಹಾಲಿ ಸದಸ್ಯ ಐವನ್‌ ಡಿಸೋಜಾ ಎರಡನೇ ಬಾರಿ ಆಯ್ಕೆ ಬಯಸಿದ್ದಾರೆ. ಆದರೆ ರಾಜ್ಯದಲ್ಲಿ ಹಲವು ಮಂದಿ ಈಗಾಗಲೇ ಕೆಪಿಸಿಸಿ ವರಿಷ್ಠರು ಹಾಗೂ ಹೈಕಮಾಂಡ್‌ ಬಾಗಿಲು ತಟ್ಟಿರುವುದರಿಂದ ಐವನ್‌ ಡಿಸೋಜಾಗೆ ಎರಡನೇ ಛಾನ್ಸ್‌ ಸಿಗುವುದು ಕಡಿಮೆ ಎಂದು ಕಾಂಗ್ರೆಸ್‌ ವಲಯ ಹೇಳುತ್ತಿದೆ. ಇದೇ ರೀತಿ ದ.ಕ. ಮೂಲದ, ಹಾಲಿ ಪರಿಷತ್‌ ಸದಸ್ಯೆ ಜಯಮಾಲಾ ಕೂಡ ಮರು ಆಯ್ಕೆ ಬಯಸಿದ್ದಾರೆ. ಈ ಮಧ್ಯೆ ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿದ್ದ, ಮಾಜಿ ರಾಜ್ಯಪಾಲೆ ಮಾರ್ಗರೆಟ್‌ ಆಳ್ವರ ಪುತ್ರ ನಿವೇದಿತ್‌ ಆಳ್ವಗೆ ಅವಕಾಶ ಸಿಗುವ ನಿರೀಕ್ಷೆ ಇದೆ ಎಂದು ಮೂಲಗಳು ತಿಳಿಸಿವೆ.

ಬಿಜೆಪಿಯಲ್ಲಿ ಕರಾವಳಿಗಿಲ್ಲ ಸ್ಥಾನ?:

ಬಿಜೆಪಿಯಲ್ಲಿ ಎಲ್ಲ ಐದು ಸ್ಥಾನಗಳಿಗೆ ನಾಮನಿರ್ದೇಶನ ಮಾಡುವ ಅವಕಾಶ ರಾಜ್ಯ ಸರ್ಕಾರಕ್ಕೆ ಇದ್ದರೂ ಕರಾವಳಿಗೆ ಅವಕಾಶ ಸಿಗುವ ಸಾಧ್ಯತೆ ತೀರಾ ಕ್ಷೀಣ ಎಂದು ಹೇಳಲಾಗುತ್ತಿದೆ. ವಿಧಾನ ಪರಿಷತ್ತಿಗೆ ಪ್ರಬಲ ಆಕಾಂಕ್ಷಿಯಾಗಿದ್ದ ಬಿಜೆಪಿ ಮುಖಂಡ ಹರಿಕೃಷ್ಣಬಂಟ್ವಾಳ್‌ಗೆ ಕಿಯೋನಿಕ್ಸ್‌ ಅಧ್ಯಕ್ಷ ಸ್ಥಾನ ನೀಡಿ ತೃಪ್ತಿಪಡಿಸುವ ಕೆಲಸ ಮಾಡಲಾಗಿದೆ. ಹಾಗಾಗಿ ಉಳಿದಂತೆ ಇಲ್ಲಿನ ಬಿಜೆಪಿಯಲ್ಲಿ ಆಕಾಂಕ್ಷಿಗಳಿಲ್ಲ. ರಾಜ್ಯಸಭೆಗೆ ಪ್ರಯತ್ನಿಸಿದ್ದ ಉದ್ಯಮಿ ಪ್ರಕಾಶ್‌ ಶೆಟ್ಟಿಅವರು ನಾನು ವಿಧಾನ ಪರಿಷತ್‌ ಆಕಾಂಕ್ಷಿ ಅಲ್ಲ ಎಂದು ಬಹಿರಂಗವಾಗಿ ಪ್ರಕಟಣೆ ನೀಡಿದ್ದಾರೆ.

ದೇಶದಲ್ಲಿ ಒಂದೇ ದಿನ 8122 ಮಂದಿಗೆ ಕೊರೋನಾ, 10400 ಮಂದಿ ಆಸ್ಪತ್ರೆಯಿಂದ ಡಿಸ್ಚಾರ್ಜ್!

ಉಡುಪಿ ಜಿಲ್ಲೆಗೂ ಅವಕಾಶ ಸಿಗುವ ಸಾಧ್ಯತೆ ಕಡಿಮೆ ಎನ್ನಲಾಗಿದೆ. ಯಾಕೆಂದರೆ, ಕಾಂಗ್ರೆಸ್‌ನ ಪ್ರತಾಪಚಂದ್ರ ಶೆಟ್ಟಿಮತ್ತು ಬಿಜೆಪಿಯ ಕೋಟ ಶ್ರೀನಿವಾಸ ಪೂಜಾರಿ ವಿಧಾನ ಪರಿಷತ್‌ ಸದಸ್ಯರಾಗಿದ್ದಾರೆ. ಜಿಲ್ಲೆಯ ಎಲ್ಲ ಐದು ಕ್ಷೇತ್ರಗಳಲ್ಲಿ ಬಿಜೆಪಿ ಶಾಸಕರಿದ್ದಾರೆ. ಹಾಗಾಗಿ ಉಡುಪಿ ಜಿಲ್ಲೆಗೂ ಈ ಬಾರಿ ಪ್ರಾತಿನಿಧ್ಯ ನೀಡುವ ಸಾಧ್ಯತೆ ಕ್ಷೀಣ.

ಪರಿಷತ್‌ನಲ್ಲಿ ಕರಾವಳಿಗರು

ವಿಧಾನ ಪರಿಷತ್‌ನ್ನು ಈ ವರೆಗೆ ಕರಾವಳಿ ಜಿಲ್ಲೆಯ 17 ಮಂದಿ ಪ್ರತಿನಿಧಿಸಿದ್ದಾರೆ. ಅವರಲ್ಲಿ ಕೆ.ಕೆ. ಶೆಟ್ಟಿ, ಶಂಕರ ಆಳ್ವ, ಕುಂಬ್ರ ಜತ್ತಪ್ಪ ರೈ, ಬಂಟ್ವಾಳ ನಾರಾಯಣ ನಾಯಕ್‌, ಕರಂಬಳ್ಳಿ ಸಂಜೀವ ಶೆಟ್ಟಿ, ಫೆಲಿಕ್ಸ್‌ ರಾಡ್ರಿಗಸ್‌, ಒಕ್ಟೋವಿಯಾ ಅಲ್ಬುಕರ್ಕ್, ಡಾ.ವಿ.ಎಸ್‌. ಆಚಾರ್ಯ, ಬಿ.ಎ. ಮೊಯಿದ್ದೀನ್‌, ಮಾಣೂರು ವಾಸುದೇವ ಕಾಮತ್‌, ಕೆ.ಎಸ್‌.ಎಂ. ಮಸೂದ್‌, ಬ್ಲೇಸಿಯಸ್‌ ಡಿಸೋಜಾ, ಅಣ್ಣಾ ವಿನಯಚಂದ್ರ, ಬಾಲಕೃಷ್ಣ ಭಟ್‌, ಅಭಯಚಂದ್ರ ಜೈನ್‌, ಶೋಭಾ ಕರಂದ್ಲಾಜೆ ಹಾಗೂ ಡಿ.ವಿ. ಸದಾನಂದ ಗೌಡ ಸೇರಿದ್ದಾರೆ.

PREV
click me!

Recommended Stories

ಡಿಜಿಪಿಯಾಗಿ ಅಲೋಕ್‌ ಕುಮಾರ್ ಮುಂಬಡ್ತಿ, ಸರ್ಕಾರದ ವಿರುದ್ಧ 8 ತಿಂಗಳ ಕಾನೂನು ಹೋರಾಟಕ್ಕೆ ಜಯ!
ರಾಮನಗರ: ರಸ್ತೆಗೆ ಕುರಿಗಳು ಅಡ್ಡಿ, ಹಾರ್ನ್ ಮಾಡಿದ್ದಕ್ಕೆ ಬಸ್ ಚಾಲಕನ ಮೇಲೆ ಗ್ರಾಮಸ್ಥರಿಂದ ಹಲ್ಲೆ!