ದೇಶದಲ್ಲೇ ವಿಶಿಷ್ಟ ಅಮರಗಿರಿಯ ಅಮರಜ್ಯೋತಿ ಮಂದಿರ: ಫೆ.11 ರಂದು ಅಮಿತ್ ಶಾ ಲೋಕಾರ್ಪಣೆ

By Kannadaprabha NewsFirst Published Feb 8, 2023, 7:34 AM IST
Highlights

ಕೇಂದ್ರ ಗೃಹ ಸಚಿವ ಅಮಿತ್‌ ಶಾ ಫೆ.11ರಂದು ಲೋಕಾರ್ಪಣೆಗೊಳಿಸುವ ಪುತ್ತೂರು ತಾಲೂಕಿನ ಈಶ್ವರಮಂಗಲ ಹನುಮಗಿರಿಯ ಅಮರಗಿರಿ ‘ಶ್ರೀಭಾರತಿ ಅಮರ ಜ್ಯೋತಿ ಮಂದಿರ’ ವಿಶಿಷ್ಟರೀತಿಯಲ್ಲಿ ನಿರ್ಮಾಣಗೊಂಡಿದ್ದು, ದೇಶದಲ್ಲೇ ಗಮನ ಸೆಳೆಯುವ ರೀತಿಯಲ್ಲಿ ಇದೆ.

ಮಂಗಳೂರು (ಫೆ.8) : ಕೇಂದ್ರ ಗೃಹ ಸಚಿವ ಅಮಿತ್‌ ಶಾ ಫೆ.11ರಂದು ಲೋಕಾರ್ಪಣೆಗೊಳಿಸುವ ಪುತ್ತೂರು ತಾಲೂಕಿನ ಈಶ್ವರಮಂಗಲ ಹನುಮಗಿರಿಯ ಅಮರಗಿರಿ ‘ಶ್ರೀಭಾರತಿ ಅಮರ ಜ್ಯೋತಿ ಮಂದಿರ’ ವಿಶಿಷ್ಟರೀತಿಯಲ್ಲಿ ನಿರ್ಮಾಣಗೊಂಡಿದ್ದು, ದೇಶದಲ್ಲೇ ಗಮನ ಸೆಳೆಯುವ ರೀತಿಯಲ್ಲಿ ಇದೆ.

ತಮಿಳುನಾಡಿನ ಕನ್ಯಾಕುಮಾರಿಯಲ್ಲಿ ಸಿಂಹವಾಹಿನಿಯಲ್ಲಿ ವಿರಾಜಮಾನವಾದ ಭಾರತ ಮಾತೆಯ ಮಂದಿರ ಇದೆ, ಅದನ್ನು ಹೊರತುಪಡಿಸಿದರೆ ಅಮರಗಿರಿಯ ಮಂದಿರ ವೈಶಿಷ್ಟ್ಯ ಪೂರ್ಣವಾಗಿ ತಲೆ ಎತ್ತಿದೆ. ಅಷ್ಟಭುಜಾಕೃತಿಯ ಕಟ್ಟಡದಲ್ಲಿ ಮಂದಿರ ನಿರ್ಮಾಣಗೊಂಡಿದ್ದು, ಜೈ ಜವಾನ್‌-ಜೈ ಕಿಸಾನ್‌ ಘೋಷಣೆಯನ್ನು ಇಲ್ಲಿ ಸಾಕಾರಗೊಳಿಸಲಾಗಿದೆ. ಭಾರತಮಾತೆ ಜತೆಗೆ ದೇಶವನ್ನು ಕಾಯುವ ಯೋಧರು ಹಾಗೂ ದೇಶಕ್ಕೆ ಅನ್ನ ನೀಡುವ ರೈತರ ಕಾರ್ಯ ನೆನಪಿಸುವ ಉದ್ದೇಶದಲ್ಲಿ ರಚಿಸಲಾದ ಈ ಮಂದಿರವನ್ನು ದೇಶದಲ್ಲೇ ಮಾದರಿ ಎನಿಸುವಂತೆ ರೂಪಿಸಲಾಗಿದೆ.

ಮಂಗಳೂರು ಫುಡ್ ಪಾಯ್ಸನ್ ಕೇಸ್: ಸಿಟಿ ನರ್ಸಿಂಗ್ ಕಾಲೇಜು ವಿರುದ್ದ ಎಫ್ಐಆರ್

ಸುಮಾರು ಎರಡು ಎಕರೆ ಪ್ರದೇಶದಲ್ಲಿ ಈ ವಿಶಾಲ ಅಮರಗಿರಿ ಮೈದಳೆದಿದ್ದು, ಪ್ರವಾಸಿಗರಿಗೆ ದೇಶಭಕ್ತಿಯನ್ನು ಉದ್ದೀಪಿಸಲಿದೆ. ಪ್ರತಿದಿನ ಸಂಜೆ 6ರಿಂದ ರಾತ್ರಿ 8 ಗಂಟೆ ವರೆಗೆ ವಿದ್ಯುತ್‌ದೀಪಗಳಿಂದ ನಾನಾ ಅಲಂಕಾರಗೊಳ್ಳಲಿದೆ. ದೇಶಕ್ಕಾಗಿ ಹುತಾತ್ಮರಾದ ಯೋಧರ ಚಿತ್ರ, ಸೈನಿಕರ ಹೋರಾಟದ ಸಾಹಸ ಚಿತ್ರಗಳು, ಗೋಡೆಯಲ್ಲಿ ವರ್ಲಿ ಚಿತ್ರ, ಅಖಂಡ ಭಾರತ ಪರಿಕಲ್ಪನೆಯಲ್ಲಿ ನಾನಾ ವಿಶೇಷತೆಗಳಿಂದ ಅಮರಗಿರಿ ಗಮನ ಸೆಳೆಯುತ್ತಿದೆ.

ಸಾಂಪ್ರದಾಯಿಕ ಕಲ್ಲು ಮತ್ತು ಹೆಂಚಿನ ಮಾಡಿನ ಈ ಮಂದಿರ ಹನುಮಗಿರಿ ಪಂಚಮುಖ ಆಂಜನೇಯ ಹಾಗೂ ಕೋದಂಡರಾಮ ದೇವಸ್ಥಾನದ ಹಿಂಭಾಗದಲ್ಲಿದೆ. ಈ ವಿಶೇಷ ಕಟ್ಟಡದಲ್ಲಿ ನಾಲ್ಕು ಪ್ರತ್ಯೇಕ ವಿಭಾಗಗಳಿದ್ದು, ಸಿಂಹವಾಹನ ರೂಢ ಭಾರತಮಾತೆಯ ಅಮೃತ ಶಿಲೆ ವಿಗ್ರಹದ ಎದುರಿನ ಭಾಗದಲ್ಲಿ ಯೋಧರ ಸ್ಮಾರಕ ಶಿಲೆಯನ್ನು ಪ್ರತಿಷ್ಠಾಪಿಸಲಾಗಿದೆ.

ಮಂದಿರದ ಪ್ರವೇಶದಲ್ಲಿ ‘ಅಮರಗಿರಿ-ಒಂದೇ ಭಾರತಂ’-ಬದುಕು ಸಮಾಜಕ್ಕಾಗಿ, ಪ್ರಾಣ ದೇಶಕ್ಕಾಗಿ ಎಂಬ ಅರ್ಥಪೂರ್ಣ ಸೂಕ್ತಿ ಗಮನ ಸೆಳೆಯುತ್ತಿದೆ. ಸರ್ಕಾರದ ನೆರವು ರಹಿತವಾಗಿ ದಾನಿಗಳಿಂದಲೇ ಅಮರಗಿರಿ ಮಂದಿರ ನಿರ್ಮಾಣವಾಗಿದ್ದು, ಹನುಮಗಿರಿಯ ಧರ್ಮಶ್ರೀ ಪ್ರತಿಷ್ಠಾನ ಇದರ ಉಸ್ತುವಾರಿ ನೋಡಿಕೊಳ್ಳುತ್ತಿದೆ.

ಅಮರಗಿರಿ ಮಂದಿರ ಉದ್ಘಾಟನೆಗೆ ಅಮಿತ್‌ ಶಾ ಯಾಕೆ?

ಅಮರಗಿರಿ ಅಮರಜ್ಯೋತಿ ಮಂದಿರ ಉದ್ಘಾಟನೆಗೆ ಅಮಿತ್‌ ಶಾ ಅವರೇ ಯಾಕೆ ಎಂಬ ಪ್ರಶ್ನೆಗೆ ಧರ್ಮಶ್ರೀ ಪ್ರತಿಷ್ಠಾನ ಉತ್ತರ ನೀಡಿದೆ. ಸ್ವಾತಂತ್ರ್ಯಾ ನಂತರದ ಕಾಲದಲ್ಲಿ ದೇಶ ಕಂಡ ಅತ್ಯುತ್ತಮ ಗೃಹ ಸಚಿವರಾಗಿದ್ದವರು ಸರ್ದಾರ್‌ ವಲ್ಲಭಭಾಯಿ ಪಟೇಲ್‌. ಆ ಬಳಿಕ ಅಂತಹ ಸ್ಥಾನ ತುಂಬುವಲ್ಲಿ ಶ್ರಮಿಸುತ್ತಿರುವ ಹೆಸರು ಈಗಿನ ಗೃಹ ಸಚಿವ ಅಮಿತ್‌ ಶಾ. ಇದೇ ಕಾರಣಕ್ಕೆ ಪುರಾಣದಲ್ಲೂ ದಿಟ್ಟತನದಿಂದ ಹೋರಾಟ ನಡೆಸಿ, ನೆರವಾಗುತ್ತಿದ್ದುದು ಆಂಜನೇಯ. ಅಂತಹ ಆಂಜನೇಯನ ಕ್ಷೇತ್ರದಲ್ಲಿ ಅಮರಗಿರಿ ರೂಪಿಸಿರುವುದರಿಂದ ಶೌರ್ಯದ ಸಂಕೇತವಾಗಿಯೂ ಅಮಿತ್‌ ಶಾ ಅವರನ್ನು ಕರೆಸಲಾಗುತ್ತಿದೆ ಎನ್ನುತ್ತಾರೆ ಪ್ರತಿಷ್ಠಾನ ಟ್ರಸ್ಟಿಶಿವರಾಮ ಈಶ್ವರಮಂಗಲ.

10 ನಿಮಿಷ ಅಮಿತ್‌ ಶಾ ಮಾತು:

ಫೆ.11ರಂದು ಕಣ್ಣೂರಿನಿಂದ ವಿಶೇಷ ಹೆಲಿಕಾಪ್ಟರ್‌ ಮೂಲಕ ಈಶ್ವರಮಂಗಲಕ್ಕೆ ಮಧ್ಯಾಹ್ನ 1.50ಕ್ಕೆ ಆಗಮಿಸುವ ಅಮಿತ್‌ ಶಾ ನೇರವಾಗಿ ಪಂಚಮುಖಿ ಆಂಜನೇಯ ಹಾಗೂ ಕೋದಂಡರಾಮನ ದರ್ಶನ ಪಡೆಯುವರು. ಅಲ್ಲಿ ಲೋಕಕಲ್ಯಾಣಾರ್ಥ ಪ್ರಾರ್ಥನೆ ಸಲ್ಲಿಸಿ, ಪ್ರಸಾದ ಸ್ವೀಕರಿಸಿ 2 ಗಂಟೆಗೆ ಅಲ್ಲೇ ಸಮೀಪದ ಅಮರಗಿರಿಗೆ ಆಗಮಿಸುವರು. ಅಲ್ಲಿ ಸಾಂಪ್ರದಾಯಿಕ ಸ್ವಾಗತ ಸ್ವೀಕರಿಸಿ, ದೀಪಪ್ರಜ್ವಲಿಸಿ ಭಾರತಮಾತೆ ಹಾಗೂ ಯೋಧರ ಸ್ಮಾರಕಕ್ಕೆ ಪುಷ್ಪ ನಮನ ಸಲ್ಲಿಸುವರು. ಅಲ್ಲಿಂದ ಅಮರಜ್ಯೋತಿ ಮಂದಿರ ವೀಕ್ಷಿಸಿ ಹೊರಗೆ 10 ನಿಮಿಷ ಕಾಲ ಪುಟ್ಟಸಮಾರಂಭವನ್ನು ಉದ್ದೇಶಿಸಿ ಮಾತನಾಡುವರು. ಅಲ್ಲಿಂದ 2.30 ಗಂಟೆಗೆ ವಿಶೇಷ ಹೆಲಿಕಾಪ್ಟರ್‌ ಮೂಲಕ ಪುತ್ತೂರಿಗೆ ತೆರಳುವರು.

ಇದು ಕರಾವಳಿಯಲ್ಲಿ ನಡೆಯುವ ಏಕೈಕ ನವ ಗುಳಿಗ ಸೇವೆ: ವಿಶೇಷತೆ ಏನು ಗೊತ್ತಾ?

ಮಿತ್‌ ಶಾಗೆ ಕಾರ್ಣಿಕದ ಕುಟ್ಟಿಚ್ಚಾತ ಪ್ರತಿಮೆ!

ಕೇಂದ್ರ ಗೃಹ ಸಚಿವ ಅಮಿತ್‌ ಶಾಗೆ ಅಮರಗಿರಿ ಭೇಟಿಯ ನೆನಪಿಗೋಸ್ಕರ ಕೇರಳದ ಕಾರಣಿಕ ಪ್ರಸಿದ್ಧ ದೈವವಾದ ಕುಟ್ಟಿಚ್ಚಾತನ ಕಂಚಿನ ಪ್ರತಿಮೆಯನ್ನು ಸ್ಮರಣಿಕೆಯಾಗಿ ನೀಡಲಾಗುತ್ತದೆ.

ಕೇರಳದ ಪಯ್ಯನ್ನೂರಿ®ಲ್ಲಿ ಇದಕ್ಕೆಂದೇ ವಿಶೇಷವಾಗಿ ಕುಟ್ಟಿಚ್ಚಾತ ಪ್ರತಿಮೆಯನ್ನು ನಿರ್ಮಿಸಲಾಗಿದ್ದು, ಇದನ್ನು ಸಮಾರಂಭದಲ್ಲಿ ಧರ್ಮಶ್ರೀ ಪ್ರತಿಷ್ಠಾನ ಹಸ್ತಾಂತರಿಸಲಿದೆ. ಕೇರಳದಲ್ಲಿ ಕುಟ್ಟಿಚ್ಚಾತ ಭಾರಿ ನಂಬಿಕೆ ಹಾಗೂ ಶಕ್ತಿಯ ದೈವವಾಗಿದ್ದು, ನಂಬಿದವರಿಗೆ ಇಂಬು ನೀಡುತ್ತದೆ ಎಂಬ ಪ್ರತೀತಿ ಇದೆ. ಇದೇ ಹಿನ್ನೆಲೆಯಲ್ಲಿ ಅಮಿತ್‌ ಶಾ ಅವರಿಗೆ ದೈವದ ಅಭಯಪ್ರದವಾಗಿ ಈ ಕುಟ್ಟಿಚ್ಚಾತ ಪ್ರತಿಮೆಯನ್ನು ನೀಡಲಾಗುತ್ತದೆ ಎಂದು ಟ್ರಸ್ಟ್‌ ಅಧ್ಯಕ್ಷ ನನ್ಯ ಅಚ್ಚುತ ಮೂಡಿತ್ತಾಯ ತಿಳಿಸಿದ್ದಾರೆ.

click me!