ಬಾಗಲಕೋಟೆ: ನಿಲ್ಲದ ಆಲಮಟ್ಟಿ ಹಿನ್ನೀರಿನ ಸಂತ್ರಸ್ಥರ ಗೋಳು, ಪರಿಹಾರ ನೀಡುವಂತೆ ಸಚಿವ ತಿಮ್ಮಾಪೂರಗೆ ಮನವಿ

By Girish GoudarFirst Published Sep 26, 2023, 12:56 PM IST
Highlights

ಸಾಮಾನ್ಯವಾಗಿ ಒಂದೆಡೆ ಕಾಣಸಿಗುವಂತಹ ಮೈದುಂಬಿ ನೀರಿನಿಂದ ಆವೃತ್ತವಾಗಿರೋ ಆಲಮಟ್ಟಿ ಜಲಾಶಯದ ಹಿನ್ನೀರು, ಮತ್ತೊಂದೆಡೆ ತಮ್ಮ ಬೇಡಿಕೆಗಳ ಈಡೇರಿಸುವಂತೆ ಮನವಿ ನೀಡುತ್ತಾ ಗೋಗರೆಯುವ ಸಂತ್ರಸ್ಥರು, ಇವುಗಳ ಮಧಯೆ ಸಂತ್ರಸ್ಥರ ಮನವಿಗೆ ಬರೀ ಭರವಸೆ ನೀಡುತ್ತಿರೋ ಜನಪ್ರತಿನಿಧಿಗಳು. ಅಂದಹಾಗೆ ಇಂತಹವೊಂದು ಅತಂತ್ರ ಪರಿಸ್ಥಿತಿ ಎದುರಿಸುತ್ತಿರೋರು ಬಾಗಲಕೋಟೆ ಜಿಲ್ಲೆಯ ಆಲಮಟ್ಟಿ ಹಿನ್ನೀರು ಭಾಧಿತ ಸಂತ್ರಸ್ಥರು

ವರದಿ: ಮಲ್ಲಿಕಾರ್ಜುನ ಹೊಸಮನಿ, ಏಷಿಯಾನೆಟ್ ಸುವರ್ಣ ನ್ಯೂಸ್, ಬಾಗಲಕೋಟೆ

ಬಾಗಲಕೋಟೆ(ಸೆ.26):  ಆಲಮಟ್ಟಿ ಹಿನ್ನೀರಿನ ಸಂತ್ರಸ್ಥರು ಒಂದಿಲ್ಲೊಂದು ಸಮಸ್ಯೆ ಎದುರಿಸುತ್ತಲೇ ಇದ್ದು, ಇದೀಗ ಕೃಷ್ಣಾ ಮೇಲ್ದಂಡೆ ಯೋಜನೆಯಲ್ಲಿ ಮುಳುಗಡೆಯಾಗುವ ಭೂಮಿಗೆ ಒಂದೇ ಹಂತದಲ್ಲಿ ಪರಿಹಾರ ಕೊಡಿ ಎಂಬ ಕೂಗು ಕೇಳಿ ಬರುತ್ತಿದೆ. ಈ ಸಂಬಂಧ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆಶಿ ಸೇರಿದಂತೆ ಎಲ್ಲ ಜನಪ್ರತಿನಿಧಿಗಳಿಗೆ ಭೇಟಿ ಮಾಡಿ ಮನವಿ ಮಾಡಿಕೊಳ್ಳುತ್ತಾ ಬಂದ್ರೂ ಪ್ರಯೋಜನವಾಗ್ತಿಲ್ಲ, ಹೀಗಾಗಿ ಸಂತ್ರಸ್ಥರು ಮತ್ತಷ್ಟು ಅಸಮಾಧಾನಗೊಂಡಿದ್ದು, ಆಕ್ರೋಶ ಹೊರ ಹಾಕಿದ್ದಾರೆ. ಈ ಕುರಿತ ವರದಿ ಇಲ್ಲಿದೆ...

ಸಾಮಾನ್ಯವಾಗಿ ಒಂದೆಡೆ ಕಾಣಸಿಗುವಂತಹ ಮೈದುಂಬಿ ನೀರಿನಿಂದ ಆವೃತ್ತವಾಗಿರೋ ಆಲಮಟ್ಟಿ ಜಲಾಶಯದ ಹಿನ್ನೀರು, ಮತ್ತೊಂದೆಡೆ ತಮ್ಮ ಬೇಡಿಕೆಗಳ ಈಡೇರಿಸುವಂತೆ ಮನವಿ ನೀಡುತ್ತಾ ಗೋಗರೆಯುವ ಸಂತ್ರಸ್ಥರು, ಇವುಗಳ ಮಧಯೆ ಸಂತ್ರಸ್ಥರ ಮನವಿಗೆ ಬರೀ ಭರವಸೆ ನೀಡುತ್ತಿರೋ ಜನಪ್ರತಿನಿಧಿಗಳು. ಅಂದಹಾಗೆ ಇಂತಹವೊಂದು ಅತಂತ್ರ ಪರಿಸ್ಥಿತಿ ಎದುರಿಸುತ್ತಿರೋರು ಬಾಗಲಕೋಟೆ ಜಿಲ್ಲೆಯ ಆಲಮಟ್ಟಿ ಹಿನ್ನೀರು ಭಾಧಿತ ಸಂತ್ರಸ್ಥರು.

ಅಧಿಕಾರದ ಆಸೆಗೆ ಬಿಜೆಪಿ ಸಂಗ ಮಾಡಿದ ಜೆಡಿಎಸ್‌ನ ನಿಜ ಬಣ್ಣ ಬಯಲು: ಸಚಿವ ತಿಮ್ಮಾಪೂರ

ಹೌದು,  ಆಲಮಟ್ಟಿ ಆಣೆಕಟ್ಟನ್ನ ನಿರ್ಮಾಣ ಮಾಡಿ 130 ಟಿಎಂಸಿ ನೀರನ್ನು ಹಿಡಿದಿಟ್ಟು, 15 ಲಕ್ಷ ಎಕರೆಗೂ ಅಧಿಕ ಭೂಮಿಗೆ ನೀರಾವರಿ ಮಾಡುವಂತಹ ಯೋಜನೆ ಇದಾಗಿದ್ದು,  ಇದಕ್ಕೆ ಸಂಭಂದಪಟ್ಟಂತೆ ಆಲಮಟ್ಟಿ ಜಲಾಶಯದ ಹಿನ್ನೀರಿನಲ್ಲಿ ಕೃಷ್ಣಾ ನದಿಯಲ್ಲಿ ಸಾಕಷ್ಟು ಗ್ರಾಮಗಳು ಮುಳುಗಡೆಯಾಗಿವೆ, ಇದಕ್ಕೆ ಪರಿಹಾರವನ್ನೂ ಸಹ ಸರ್ಕಾರ ನೀಡುತ್ತಾ ಬರ್ತಿದೆ, ಆದ್ರೆ ಈ ಪರಿಹಾರವನ್ನ ಮಾತ್ರ ಒಂದೇ ಹಂತದಲ್ಲಿ ಕೊಡಿ ಅನ್ನೋ ಕೂಗು ಕೇಳಿ ಬರ್ತಿದೆ. ಯಾಕಂದ್ರೆ ಕೃಷ್ಣಾ ಮೇಲ್ದಂಡೆ ಯೋಜನೆಯ ಎರಡನೇ ಹಂತದಲ್ಲಿ ಆಗಾಗ ಬೇರೆ ಬೇರೆ ಹಂತದಲ್ಲಿ ಪರಿಹಾರ ನೀಡಿದ್ದರಿಂದ ಆ ಪರಿಹಾರದ ಹಣ ಸಂಪೂರ್ಣವಾಗಿ ಸಂತ್ರಸ್ಥರ ಬಳಿ ಉಳಿಯಲೇ ಇಲ್ಲ, ಮದುವೆ, ಮುಂಜಿವಿ, ಆಸ್ಪತ್ರೆ ಹೀಗೆ ನಾನಾ ಕಾರಣಗಳಿಗೆ ಬದುಕಿನ ಬಂಡಿ ಸಾಗಿಸುವಲ್ಲಿ ಮುಗಿದು ಹೋಯ್ತು, ಮೇಲಾಗಿ ಒಂದೇ ದೊಡ್ಡ ಮೊತ್ತದ ಪರಿಹಾರದ ಹಣ ಸಿಗದೇ ಇದ್ದರಿಂದ ಮುಳುಗಡೆಯಾಗಿ ಹೋದ ಭೂಮಿ ಬದಲಾಗಿ ಮತ್ತೊಂದು ಭೂಮಿಯನ್ನ ಹಿಡಿಯಲು ಸಹ ಆಗಲಿಲ್ಲ. ಹೀಗಾಗಿ ಅದೆಷ್ಟೋ ಸಂತ್ರಸ್ಥರು ಬೀದಿಪಾಲಾಗುವಂತಹ ಪರಿಸ್ಥಿತಿ ಎದುರಾಯ್ತು, ಆದ್ರೆ ಈ ಬಾರಿ ಹಾಗೆ ಆಗೋದು ಬೇಡ, ತಕ್ಷಣ ಸರ್ಕಾರ ಕೃಷ್ಣಾ ಮೇಲ್ದಂಡೆ ಯೋಜನೆಯ ಮೂರನೇ ಹಂತದಲ್ಲಿ ಅಂದ್ರೆ 522 ಮತ್ತು 524ರ ಪರಿಹಾರವನ್ನ ಒಂದೇ ಹಂತದಲ್ಲಿ ನೀಡುವಂತಾಬೇಕೆಂದು ಹೋರಾಟಗಾರರಾದ ಪ್ರಕಾಶ ಅಂತರಗೊಂಡ ಆಗ್ರಹಿಸಿದ್ದಾರೆ.                  

ಸಭೆ ಕರೆಯುವಂತೆ ಸಿಎಂ & ಡಿಸಿಎಂಗೆ ಮನವಿ ಮಾಡಿರುವ ಹಿನ್ನೀರು ಸಂತ್ರಸ್ಥರು...

ಇನ್ನು ಅತಂತ್ರವಾಗುತ್ತಾ ಬಂದಿರುವ ಆಲಮಟ್ಟಿ ಹಿನ್ನೀರಿನ ಸಂತ್ರಸ್ಥರು ಇದೇ ತಿಂಗಳು ಆಲಮಟ್ಟಿ ಜಲಾಶಯಕ್ಕೆ ಬಾಗಿನ ಅರ್ಪಣೆಗೆ ಆಗಮಿಸಿದ್ದ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆಶಿ ಅವರನ್ನ ಭೇಟಿಯಾಗಿ ಎರಡು ಹಂತದ ಬದಲಾಗಿ ಒಂದೇ ಹಂತದಲ್ಲಿ ಪರಿಹಾರ ನೀಡುವಂತೆ ಆಗ್ರಹಿಸಿದ್ದರು, ಇದಕ್ಕೆ ಬಾಗಲಕೋಟೆ ಜಿಲ್ಲಾ ಉಸ್ತುವಾರಿ ಸಚಿವ ಆರ್​.ಬಿ.ತಿಮ್ಮಾಪೂರ ಅವರ ನೇತೃತ್ವದಲ್ಲಿ ನಿಯೋಗ ಬರುವಂತೆಯೂ ಸಿಎಂ ತಿಳಿಸಿದ್ದರು, ಆದ್ರೆ ಈವರೆಗೂ ಸಹ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸಭೆ ಕರೆದಿಲ್ಲ, ಕೂಡಲೇ ಸಭೆ ಕರೆಯುವಂತಾಗಬೇಕು ಮತ್ತು ಮೇಲಾಗಿ ಪರಿಹಾರ ನೀಡುವ ಸಂಭಂದ ಸೂಕ್ತ ಕ್ರಮಕೈಗೊಂಡು ಒಂದೇ ಹಂತದಲ್ಲಿ ಪರಿಹಾರ ನೀಡುವಂತಾಬೇಕು, ಇದ್ರಿಂದ ಸಂತ್ರಸ್ಥರ ಬದುಕಿಗೆ ಅತ್ಯಂತ ಅನುಕೂಲವಾಗಲಿದೆ ಎಂದು ಸಂತ್ರಸ್ಥರು ಹೇಳಿದ್ದಾರೆ.             

ಒಟ್ಟಿನಲ್ಲಿ ಸಮಸ್ಯೆಗಳ ಮೇಲೆ ಸಮಸ್ಯೆ ಎದುರಿಸುತ್ತಿರೋ ಆಲಮಟ್ಟಿ ಹಿನ್ನೀರಿನ ಸಂತ್ರಸ್ಥರು ಒಂದೇ ಹಂತದಲ್ಲಿ ಪರಿಹಾರ ನೀಡುವಂತೆ ಸಿಎಂ & ಡಿಸಿಎಂ ಅವರಿಗೆ ಮನವಿ ಮಾಡಿದ್ದು, ಇನ್ನಾದ್ರೂ ಸಹ ಸಂತ್ರಸ್ಥರ ಸಮಸ್ಯೆಗೆ ಸರ್ಕಾರ ಶೀಘ್ರವಾಗಿ ಸ್ಪಂದಿಸುತ್ತಾ ಅಂತ ಕಾದು ನೋಡಬೇಕಿದೆ.

click me!