ಚಾಮುಂಡಿ ಬೆಟ್ಟದಲ್ಲಿ ಹರಕೆ ಹೊತ್ತ ಸಚಿವೆ ಶೋಭಾ

By Kannadaprabha NewsFirst Published Aug 18, 2021, 9:26 AM IST
Highlights
  • ನಾನು ಪ್ರತಿ ವರ್ಷ ಆಷಾಢ ಮಾಸದಲ್ಲಿ ಚಾಮುಂಡಿ ಬೆಟ್ಟದ ಮೆಟ್ಟಿಲುಗಳನ್ನು ಹತ್ತುತ್ತಿದ್ದೆ
  • ಈ ವರ್ಷ ಸಚಿವರೆಲ್ಲ ದೇಹಲಿಯಲ್ಲೇ ಇರಬೇಕು ಎಂಬ ಆದೇಶ ಬಂದಿತ್ತು. ಈ ಹಿನ್ನೆಲೆಯಲ್ಲಿ ಆಷಾಢಕ್ಕೆ ಬರಲು ಸಾಧ್ಯ ಆಗಿರಲಿಲ್ಲ
  • ನವರಾತ್ರಿಗೆ ಬಂದು ಮೆಟ್ಟಿಲು ಹತ್ತುತ್ತೇನೆ - ಸಚಿವೆ ಶೋಭಾ ಕರಂದ್ಲಾಜೆ

 ಮೈಸೂರು (ಆ.18):  ನಾನು ಪ್ರತಿ ವರ್ಷ ಆಷಾಢ ಮಾಸದಲ್ಲಿ ಚಾಮುಂಡಿ ಬೆಟ್ಟದ ಮೆಟ್ಟಿಲುಗಳನ್ನು ಹತ್ತುತ್ತಿದ್ದೆ. ಈ ವರ್ಷ ಸಚಿವರೆಲ್ಲ ದೇಹಲಿಯಲ್ಲೇ ಇರಬೇಕು ಎಂಬ ಆದೇಶ ಬಂದಿತ್ತು. ಈ ಹಿನ್ನೆಲೆಯಲ್ಲಿ ಆಷಾಢಕ್ಕೆ ಬರಲು ಸಾಧ್ಯ ಆಗಿರಲಿಲ್ಲ. ಮುಂದೆ ನವರಾತ್ರಿಗೆ ಬಂದು ಮೆಟ್ಟಿಲು ಹತ್ತುತ್ತೇನೆ ಎಂದು ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ತಿಳಿಸಿದರು.

ಕೇಂದ್ರ ಸಚಿವೆಯಾದ ಬಳಿಕ ಮೊದಲ ಬಾರಿಗೆ ಮೈಸೂರಿನ ಚಾಮುಂಡಿಬೆಟ್ಟಕ್ಕೆ ಮಂಗಳವಾರ ಭೇಟಿ ನೀಡಿ ಚಾಮುಂಡೇಶ್ವರಿ ದರ್ಶನ ಪಡೆದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಾಯಿ ಚಾಮುಂಡೇಶ್ವರಿ ನನಗೆ ಎಲ್ಲಾ ಬಗೆಯ ಶಕ್ತಿ ತುಂಬಿದ್ದಾಳೆ. ನಾನು ಮೊದಲು ಮೈಸೂರಿಗೆ ಬಂದಾಗ ಎಲ್ಲರೂ ಗೇಲಿ ಮಾಡಿದ್ದರು. ದಸರಾ ಆಚರಣೆ ಮಾಡೋದು ಗೊತ್ತಿಲ್ಲ ಅಂತ ಗೇಲಿ ಮಾಡ್ತಿದ್ರು. ಆದರೆ, ತಾಯಿ ಕೃಪೆಯಿಂದ ಅದನ್ನ ಮಾಡಿ ತೋರಿಸಿದ್ದೇನೆ ಎಂದು ಹೇಳಿದರು.

ರಾಕ್ಷಸರನ್ನು ಬೆಳೆಸಿದ್ರೆ ಏನಾಗುತ್ತದೆ ಎನ್ನುವುದಕ್ಕೆ ಅಫ್ಘಾನಿಸ್ತಾನ ಉದಾಹರಣೆ: ಶೋಭಾ ಕರಂದ್ಲಾಜೆ

ಕೇಂದ್ರ ಕೃಷಿ ಸಚಿವೆಯಾದ ನಂತರ ರಾಜ್ಯದಲ್ಲಿ ಎಲ್ಲಾ ಜಿಲ್ಲೆಗಳಿಗೂ ಪ್ರವಾಸ ಮಾಡುವೆ. ಒಂದೊಂದು ಜಿಲ್ಲೆಯ ರೈತರ ಸಮಸ್ಯೆ ಬೇರೆಯದಾಗಿದೆ. ಅಯಾ ಜಿಲ್ಲೆಗಳಿಗೆ ತೆರಳಿ ಅಲ್ಲಿನ ಬೆಳೆ, ಸಮಸ್ಯೆಗಳನ್ನು ಪರಿಹಾರ ಮಾಡುವ ಕೆಲಸ ಮಾಡುತ್ತೇನೆ ಎಂದು ಅವರು ತಿಳಿಸಿದರು.

ಕೊರೊನಾದಿಂದ ಕೃಷಿಗೆ ತೊಡಕಾಗಿದೆ ಅಂತ ಇಲ್ಲ. ದೇಶದಲ್ಲಿ ದಾಖಲೆ ಪ್ರಮಾಣದಲ್ಲಿ ಆಹಾರ ಪದಾರ್ಥಗಳ ಶೇಖರಣೆ ಆಗಿರೋದನ್ನು ವರದಿಗಳು ಹೇಳುತ್ತಿವೆ. ಕೊರೊನಾ ಸಂದರ್ಭದಲ್ಲೂ ದೇಶದಲ್ಲಿ ದಾಖಲೆ ಪ್ರಮಾಣದ ಕೃಷಿ ಉತ್ಪನ್ನ ಶೇಖರಣೆಯಾಗಿದೆ. ಅದೇ ರೀತಿ ದಾಖಲೆ ಪ್ರಮಾಣದಲ್ಲಿ ಹಣ್ಣು ತರಕಾರಿ ಬೆಳೆಯಲಾಗಿದೆ. ನಗರಗಳಲ್ಲಿ ಇದ್ದ ನಮ್ಮ ಯುವಕರು ಹಳ್ಳಿಗೆ ಹೋಗಿ ಕೃಷಿ ಮಾಡಿದರ ಪರಿಣಾಮ ಇದು ಸಾಧ್ಯವಾಗಿದೆ ಎಂದರು.

ಪ್ರಧಾನಿ ಮೋದಿ ದೇಶದ ರೈತನ ಮಗಳೊಬ್ಬಳಿಗೆ ಗುರುತಿಸಿ ಕೃಷಿ ಖಾತೆ ನೀಡಿದ್ದಾರೆ. ಹಳ್ಳಿಯಲ್ಲಿ ನಾನು ಓದುವಾಗ ಕರೆಂಟ್‌, ರಸ್ತೆ ಕೂಡ ಇರಲಿಲ್ಲ. ಅಂತಹ ಹಳ್ಳಿಯಿಂದ ಬಂದವಳಿಕೆ ಇಂತಹ ಖಾತೆ ಕೊಟ್ಟು ಕೆಲಸ ಮಾಡಲು ಅನುಕೂಲ ಮಾಡಿಕೊಟ್ಟಿದ್ದಾರೆ. ನಾವು ದೇಶದ ಶೇ. 80 ರಷ್ಟುರೈತರ ಹಿತ ಕಾಯಬೇಕಿದೆ. ಅವರು ಬೇರೆ ಬೇರೆ ಕೆಲಸಗಳಿಗೆ ಹೋಗದೆ ಕೃಷಿಯಲ್ಲೇ ಉಳಿಯುವಂತೆ ಮಾಡಬೇಕಿದೆ. ಈ ನಿಟ್ಟಿನಲ್ಲಿ ಇಲಾಖೆಯಿಂದ ಕಾರ್ಯಯೋಜನೆ ರೂಪಿಸುತ್ತೇನೆ ಎಂದು ಅವರು ತಿಳಿಸಿದರು.

ಆಷ್ಘಾನಿಸ್ತಾನದಲ್ಲಿ ತಾಲಿಬಾನ್‌ ಉಗ್ರರ ಅಟ್ಟಹಾಸ ತೀವ್ರ ಖಂಡನೀಯ. ಪ್ರಜಾಪ್ರಭುತ್ವ ರಾಷ್ಟ್ರಗಳ ಮೇಲೆ ಇಂತಹ ದಾಳಿ ನಡೆಯುತ್ತಿರುವುದು ಆತಂಕ ತಂದಿದೆ. ಆಷ್ಘಾನಿಸ್ತಾನದ ಪಕ್ಕದಲ್ಲೇ ಪಾಕಿಸ್ತಾನ ಇದೆ. ಈ ವಿಚಾರದಲ್ಲಿ ಎಲ್ಲಾ ದೇಶಗಳು ಒಟ್ಟಾಗಿ ದನಿ ಎತ್ತಬೇಕು. ವಿಶ್ವಸಂಸ್ಥೆ ಮೇಲೆ ಒತ್ತಡ ಹೇರಿ ಸಮಸ್ಯೆ ಬಗೆ ಹರಿಸಬೇಕು ಎಂದು ಅವರು ಹೇಳಿದರು.

click me!