
ಬೆಂಗಳೂರು (ಆ.29): ಬೂಕರ್ ಪ್ರಶಸ್ತಿ ವಿಜೇತೆ ಬಾನು ಮುಸ್ತಾಕ್ ಅವರನ್ನು ದಸರಾ ಉದ್ಘಾಟನೆಗೆ ಆಹ್ವಾನಿಸಿರುವ ವಿಚಾರದಲ್ಲಿ ಸರ್ಕಾರ ಹಾಗೂ ವಿರೋಧ ಪಕ್ಷಗಳ ನಡುವೆ ಭಾರೀ ಜಟಾಪಟಿ ನಡೆಯುತ್ತಿದೆ. ಇನ್ನು ಸಾಮಾನ್ಯ ಜನರ ನಡುವೆಯೂ ಇದರ ಬಗ್ಗೆ ಚರ್ಚೆಯಾಗುತ್ತಿದೆ. ದಸರಾ ಅನ್ನೋದು ನಾಡಹಬ್ಬ ರಾಜ್ಯಕ್ಕೆ ಕೀರ್ತಿ ತಂದವರಿಗೆ ಇದರ ಉದ್ಘಾಟನೆಯ ಅವಕಾಶ ನೀಡಲಾಗಿದೆ ಎಂದು ಸರ್ಕಾರ ಹಾಗೂ ಸಚಿವರು ಹೇಳುತ್ತಿದ್ದರೆ, ದಸರಾ ಅನ್ನೋದು ಧಾರ್ಮಿಕ ಆಚರಣೆ. ಮೂರ್ತಿ ಪೂಜೆಯನ್ನೇ ಮಾಡದ ಬಾನು ಮುಸ್ತಾಕ್ ಅವರು ದಸರಾ ಉದ್ಘಾಟನೆ ಮಾಡೋದು ಸರಿಯಲ್ಲ. ಅದಲ್ಲದೆ, ಕನ್ನಡ ಭುವನೇಶ್ವರಿ, ಅರಿಶಿನ-ಕುಂಕುಮ ಅನ್ನೋ ಸಂಪ್ರದಾಯವನ್ನೇ ಒಪ್ಪದ ಬಾನು ಮುಸ್ತಾಕ್ ಅವರಿಗೆ ಉದ್ಘಾಟನೆ ಅವಕಾಶ ನೀಡೋದು ಸರಿಯಲ್ಲ ಎಂದಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮುಸ್ಲಿಮ್ ಮುಖಂಡ ಅಬ್ದುಲ್ ರಜಾಕ್, 'ಬೂಕರ್ ಪ್ರಶಸ್ತಿ ಗೆಲ್ಲುವ ಮೂಲಕ ಕನ್ನಡಕ್ಕೆ ತಂದ ಹೆಮ್ಮೆಯ ಕನ್ನಡತಿ ಬಾನು ಮುಸ್ತಾಕ್. ಇದು ಅಂತರಾಷ್ಟ್ರೀಯ ಮಟ್ಟದಲ್ಲಿ ಗೌರವ ತಂದು ಕೊಟ್ಟ ಮಹಿಳೆಗೆ ಸಿಎಂ ಗೌರವದಿಂದ ಕರೆದಿದ್ದಾರೆ. ಫತ್ವಾ ಇದರಲ್ಲಿ ಬರೋದಿಲ್ಲ. ಪವಿತ್ರ ಕುರಾನ್ ಮತ್ತು ಪ್ರವಾದಿಯವರ ಜೀವನದಲ್ಲಿ ಯಾವುದೇ ಘಟನೆಯಿಂದ ಪರಿಹಾರ ಸಿಕ್ಕಿಲ್ಲ ಅಂದ್ರೆ ನಮ್ಮ ಸಂಸ್ಥೆಗಳಿಗೆ ಬರೆದು ಕೊಟ್ಟರೆ ಅದಕ್ಕೆ ಉತ್ತರ ನೀಡುತ್ತಾರೆ ಎಂದು ಹೇಳಿದ್ದಾರೆ.
1442ನಲ್ಲಿ ಮೊದಲ ಬಾರಿಗೆ ದಸರಾ ಬಗ್ಗೆ ಬರೆದಿದ್ದು ಮುಸ್ಲಿಂ. ಮಿರ್ಜಾ ಇಸ್ಮಾಯಿಲ್ ಅವರು ಬೆಂಗಳೂರಿಗೆ ಅನೇಕ ಕೊಡುಗೆ ಕೊಟ್ಟಿದ್ದಾರೆ. ಒಡೆಯರು ಅವರನ್ನೇ ಕರೆದು ದಸರಾ ಮಾಡಿಲ್ವಾ? ನಮ್ಮ ಇಮಾಮ್ದಾರಿ ದರ್ಗಾಕ್ಕೆ ಬಂದು ಆನೆಗಳು ಬಂದು ಹೋದ ಮೇಲೆ ದಸರಾ ಆಗೋದು. ಮುಸ್ಲಿಮರೇ ದಸರಾ ಆನೆಗಳಿಗೆ ಇವತ್ತಿಗೂ ಅಂಬಾರಿ ಕಟ್ಟುತ್ತಾರೆ. ಪಶುವೈದ್ಯರು ಮುಸ್ಲಿಂ. ರಾಜರ ಕಾಲದಲ್ಲಿ ಯುದ್ದಕ್ಕೆ ಹೋಗುವ ಮೊದಲು ಇಮಾಮ್ದಾರಿ ದರ್ಗಾಕ್ಕೆ ಬಂದು ಹೋಗುತ್ತಿದ್ದರು ಎಂದು ಹೇಳಿದ್ದಾರೆ.
ದಸರಾ ಹೇಗೆ ಧಾರ್ಮಿಕ ಹಬ್ಬ ಆಗುತ್ತೆ? ಇದು ನಾಡಹಬ್ಬ. ಕೆ.ಎಸ್ ನಿಸಾರ್ ಅಹ್ಮದ್ ನಿತ್ಯೋತ್ಸವ ಕವಿ ದಸರಾ ಉದ್ಘಾಟನೆ ಸಂದರ್ಭದಲ್ಲಿ ಅಲ್ಲಿರ್ಲಿಲ್ವಾ. ಪ್ರತಾಪ್ ಸಿಂಹ ಸುದ್ದಿಯಲ್ಲಿರ್ಬೇಕು ಅಂತ ಹೀಗೆ ಮಾತನಾಡ್ತಾರೆ. ಈ ರಾಜ್ಯ ಸರ್ವಜನಾಂಗದ ಶಾಂತಿಯ ತೋಟ. ಈ ಉದ್ಯಾನವನ್ನು ಸ್ಮಶಾನ ಮಾಡಲು ಹೊರಟಿರೋದು ಪ್ರತಾಪ್ ಸಿಂಹ ಎಂದು ಕಿಡಿಕಾರಿದ್ದಾರೆ.