ಹೊಂಡಾ ಗುಂಡಿ ರಸ್ತೆಯಲ್ಲೇ ಹೆರಿಗೆ: ಅಭಿವೃದ್ಧಿ ಹೊಂದಿದ ಉಡುಪಿಯಲ್ಲಿ ಇದೆಂಥಾ ಅವ್ಯವಸ್ಥೆ?

By Govindaraj SFirst Published Nov 25, 2022, 7:41 PM IST
Highlights

ಹೊಂಡ ಗುಂಡಿ ರಸ್ತೆಯಲ್ಲಿ ಬಿದ್ದು ಎದ್ದು ಬರುತ್ತಿದ್ದ ಆಂಬುಲೆನ್ಸ್.. ಆಂಬುಲೆನ್ಸ್ ಒಳಗೆ ಮಹಿಳೆಯ ಚೀರಾಟ. ಸ್ಥಳಕ್ಕೆ ದೌಡಾಯಿಸಿದ ಉಡುಪಿ ಪೊಲೀಸರು, ತುರ್ತು ಚಿಕಿತ್ಸಾ ವಾಹನದ ಎದುರು ಬಿದ್ದು ಬಿದ್ದು ಅಳುತ್ತಿರುವ ವ್ಯಕ್ತಿ. 

ಉಡುಪಿ (ನ.25): ಹೊಂಡ ಗುಂಡಿ ರಸ್ತೆಯಲ್ಲಿ ಬಿದ್ದು ಎದ್ದು ಬರುತ್ತಿದ್ದ ಆಂಬುಲೆನ್ಸ್.. ಆಂಬುಲೆನ್ಸ್ ಒಳಗೆ ಮಹಿಳೆಯ ಚೀರಾಟ. ಸ್ಥಳಕ್ಕೆ ದೌಡಾಯಿಸಿದ ಉಡುಪಿ ಪೊಲೀಸರು, ತುರ್ತು ಚಿಕಿತ್ಸಾ ವಾಹನದ ಎದುರು ಬಿದ್ದು ಬಿದ್ದು ಅಳುತ್ತಿರುವ ವ್ಯಕ್ತಿ. ಆರ್‌ಪಿಎಫ್ ಪೊಲೀಸರಿಂದ ಮಹಿಳೆ ಮಕ್ಕಳ ರಕ್ಷಣೆ. ಉಡುಪಿಯ ಇಂದ್ರಾಳಿಯಲ್ಲಿ ನಡೆದ ಘಟನೆ ಇದು. ಉಡುಪಿಯ ಇಂದ್ರಾಡಿ ಬ್ರಿಡ್ಜಿನಿಂದ ರೈಲ್ವೆ ನಿಲ್ದಾಣದವರೆಗಿನ ರಸ್ತೆ ಸಂಪೂರ್ಣವಾಗಿ ಹದಗೆಟ್ಟಿದ್ದು ಕಳೆದ ಒಂದುವರೆ ಎರಡು ವರ್ಷದಿಂದ ಪ್ರಯಾಣಿಕರು ಹಿಂಸೆ ಅನುಭವಿಸುತ್ತಿದ್ದಾರೆ. ವಾಹನ ಚಾಲಕರಂತೂ ಭೂಮಿ ಮೇಲಿನ ನರಕದಲ್ಲಿ ವಾಹನ ಓಡಿಸುವ ಚಿಂತಾಜನಕ ಸ್ಥಿತಿಯಲ್ಲಿದ್ದಾರೆ. 

ಈ ಬಗ್ಗೆ ನಗರಸಭೆ ಶಾಸಕರಿಗೆ ಹಲವು ಬಾರಿ ಮನವಿ ಕೊಟ್ಟರು ಸಮಸ್ಯೆ ಬಗೆಹರಿದಿಲ್ಲ. ಮೇಲಿಂದ ಮೇಲೆ ಮನವಿ ಬಂದ ಹಿನ್ನೆಲೆಯಲ್ಲಿ ಸಮಾಜ ಸೇವಕ, ಉಡುಪಿ ಜನಸಾಮಾನ್ಯರ ಧನಿಯಾಗಿ ಕೆಲಸ ಮಾಡುತ್ತಿರುವ ನಿತ್ಯಾನಂದ ಒಳಕಾಡು, ವಿಭಿನ್ನ ರೀತಿಯ ಪ್ರತಿಭಟನೆ ಮಾಡಿದ್ದಾರೆ. ಈ ರೀತಿ ಪರಿಣಾಮಕಾರಿಯಾಗಿ ಪ್ರತಿಭಟನೆ ನಡೆಸುವ ಮೂಲಕ ಸರ್ಕಾರದ ಗಮನ ಸೆಳೆಯಲು ಪ್ರಯತ್ನಿಸಿದ್ದಾರೆ. ಪ್ರತಿನಿತ್ಯ ನಿಜ ಜೀವನದಲ್ಲಿ ಅನುಭವಿಸುವ ಸಮಸ್ಯೆಯನ್ನು ಅಣಕು ಪ್ರದರ್ಶನದ ಮೂಲಕ ಆಳುವ ಸರಕಾರದ ಮುಂದೆ ತೆರೆದಿಟ್ಟಿದ್ದಾರೆ. ಗರ್ಭಿಣಿ ಸ್ತ್ರೀಯರು ಈ ರಸ್ತೆಯಲ್ಲಿ ಹೋದರೆ ಹೊಂಡಗುಂಡಿಗೆ ವಾಹನ ಬಿದ್ದು ರಸ್ತೆಯಲ್ಲೇ ಹೆರಿಗೆ ಆಗುತ್ತದೆ ಎಂಬುದನ್ನು ಮಾರ್ಮಿಕವಾಗಿ ಉಡುಪಿ ಜಿಲ್ಲಾ ನಾಗರಿಕ ಸಮಿತಿ ತೆರೆದಿಟ್ಟಿತು. 

Ticket Fight: ಉಡುಪಿ ಜಿಲ್ಲೆಯಲ್ಲಿ ಬಿಜೆಪಿ ಟಿಕೆಟ್‌ಗೆ ಜಿದ್ದಾಜಿದ್ದಿ ಪೈಪೋಟಿ

ರಾಜು ಮತ್ತು ಹರೀಶ್ ಅಣಕು ಪ್ರದರ್ಶನದಲ್ಲಿ ನಟಿಸಿದರು. ಈ ಹಿಂದೆಯೂ ನಿತ್ಯಾನಂದ ಬಳಕಾಡು ರೈಲ್ವೆ ಬ್ರಿಜ್ಜಿನಲ್ಲಿ ಉರುಳು ಸೇವೆ ನಡೆಸುವ ಮೂಲಕ ದೇಶದ ಗಮನ ಸೆಳೆದಿದ್ದರು. ದೇಶಾದ್ಯಂತ ವೈರಲ್ ಆಗಿದ್ದ ವಿಡಿಯೋ ಸಂಚಲನ ಸೃಷ್ಟಿಸಿತ್ತು. ಈ ಪ್ರತಿಭಟನೆಯ ಬಳಿಕ ಹಾಳಾದ ರಸ್ತೆ ಕಾಮಗಾರಿ ಗೆ ಮರುಚಲನೆ ದೊರಕಿತ್ತು. ನಿತ್ಯಾನಂದ ಒಳಕಾಡು ಅವರ ಪ್ರತಿಭಟನೆಗೆ ರೈಲು ನಿಲ್ದಾಣದ ಆಟೋ ಚಾಲಕರು ಟ್ಯಾಕ್ಸಿಮನ್ ಅಸೋಸಿಯೇಷನ್ ಬೆಂಬಲ ನೀಡಿತು. ಇಂದ್ರಾಳಿ ರೈಲ್ವೆ ಸ್ಟೇಷನ್ ರಸ್ತೆಯನ್ನು ಕೂಡಲೇ ದುರಸ್ತಿ ಮಾಡಬೇಕು. ರೈಲಿನ ಮೂಲಕ ಮಣಿಪಾಲಕ್ಕೆ ಹಲವಾರು ರೋಗಿಗಳು ಬರುತ್ತಾರೆ. ಅನೇಕ ವಯೋವೃದ್ಧರು ಧಾರ್ಮಿಕ ಕ್ಷೇತ್ರಗಳಿಗೆ ಭೇಟಿಕೊಡಲು ರೈಲಲ್ಲಿ ಬರ್ತಾರೆ. 

ಕಾಂತಾರ ಎಫೆಕ್ಟ್: ದೈವವನ್ನೇ ಬಂಡವಾಳ ಮಾಡಿಕೊಂಡು ದಂಧೆ!

ಸಾವಿರಾರು ಸಂಖ್ಯೆಯಲ್ಲಿ ಪ್ರವಾಸಿಗರು ಉಡುಪಿ ಜಿಲ್ಲೆಗೆ ರೈಲಿನ ಮೂಲಕ ಬರುತ್ತಾರೆ. ಬಂದ ಹೊರ ರಾಜ್ಯದ ಹೊರ ಜಿಲ್ಲೆಯ ಜನ ಅಭಿವೃದ್ಧಿ ಹೊಂದಿದ ಉಡುಪಿಯಲ್ಲಿ ಇಂತಹ ಹೊಂಡ ಗುಂಡಿ ರಸ್ತೆಯೇ ಎಂದು ನಮ್ಮನ್ನು ಕೇಳುವಾಗ ನಮಗೂ ಇರುಸು ಮುರುಸಾಗುತ್ತದೆ ಎಂದು ಆಟೋ ಚಾಲಕರು ಟ್ಯಾಕ್ಸಿಯವರು ಹೇಳಿದ್ದಾರೆ. ಒಂದು ಕೋಟಿ ರೂಪಾಯಿಯ ಕಾಂಕ್ರೀಟ್ ರಸ್ತೆಗೆ ಮಂಜೂರಾಗಿದ್ದರೆ ಬೇಗ ಕಾಮಗಾರಿ ಆರಂಭಿಸಿ ಎಂದು ನಿತ್ಯಾನಂದ ಒಳಕಾಡು ಒತ್ತಾಯಿಸಿದ್ದಾರೆ. ಕಳೆದ ಹಲವಾರು ವಾರಗಳಿಂದ ಜನರು ಈ ರಸ್ತೆಯ ಅವ್ಯವಸ್ಥೆಯಿಂದ ರೋಸಿ ಹೋಗಿದ್ದಾರೆ. ಮಣಿಪಾಲ ತಲುಪಲು ಸುತ್ತಿ ಬಳಸಿ ಒಳ ರಸ್ತೆಗಳಲ್ಲಿ ಸಂಚರಿಸಬೇಕಾದ ಅನಿವಾರ್ಯತೆ ಇದೆ. ಹಾಗಾಗಿ ಈ ಸಮಸ್ಯೆಗೆ ಶೀಘ್ರ ಪರಿಹಾರ ದೊರಕಲಿ ಎಂದು ನಾಗರಿಕರು ಬಹು ಕಾಲದಿಂದ ಕಾಯುತ್ತಿದ್ದಾರೆ.

click me!