Singatalur Lift Irrigation Scheme: ಒಂಬತ್ತು ವರ್ಷದಿಂದ 90 ಟಿಎಂಸಿ ನೀರು ಪೋಲು..!

Kannadaprabha News   | Asianet News
Published : Dec 13, 2021, 01:58 PM IST
Singatalur Lift Irrigation Scheme: ಒಂಬತ್ತು ವರ್ಷದಿಂದ 90 ಟಿಎಂಸಿ ನೀರು ಪೋಲು..!

ಸಾರಾಂಶ

*  ಸಿಂಗಟಾಲೂರು ಏತ ನೀರಾವರಿ ಯೋಜನೆಯ ದುರ್ಗತಿಯಿದು *  ಕಾಲುವೆ ನೀರಾವರಿಯೂ ಇಲ್ಲ, ಹನಿ ನೀರಾವರಿಯೂ ಆಗಲಿಲ್ಲ *  ನೀರಾವರಿ ಯೋಜನೆ ಕಾರ್ಯಗತ ಮಾಡಲು ಸರ್ಕಾರದ ಚಿಂತನೆ   

ಸೋಮರಡ್ಡಿ ಅಳವಂಡಿ

ಕೊಪ್ಪಳ(ಡಿ.13):  ಜಲಾಶಯ ನಿರ್ಮಾಣವಾಗದೇ ನದಿ ನೀರು ಪೋಲಾಗುವುದು ಸಾಮಾನ್ಯ. ಆದರೆ, ಇಲ್ಲಿ ನೀರು ಸಂಗ್ರಹ ಮಾಡಿ, ಏತ ನೀರಾವರಿ ಯೋಜನೆ(Irrigation Project) ಲೋಕಾರ್ಪಣೆ ಮಾಡಿಯೂ ನೀರು ಪೋಲಾಗುತ್ತಿದೆ. ಕಾಲುವೆ(Canal) ಇಲ್ಲದಿರುವುದಕ್ಕೆ 9 ವರ್ಷದಲ್ಲಿ 90 ಟಿಎಂಸಿ ನೀರು(Water) ಪೋಲಾಗಿದೆ! ಇದು, ಅಚ್ಚರಿಯಾದರೂ ಸತ್ಯ. ಜಿಲ್ಲೆಯ ಜನಪ್ರತಿನಿಧಿಗಳು ತಲೆ ತಗ್ಗಿಸಬೇಕಾದ, ಸರ್ಕಾರಕ್ಕೂ(Government of Karnataka) ನಾಚಿಕೆಯಾಗುವ ವಿಷಯ. ಕೊಪ್ಪಳ(Koppal), ಗದಗ(Gadag) ಜಿಲ್ಲೆಯ ಜನರಿಗೆ ವರವಾಗಬೇಕಾಗಿದ್ದ ಸಿಂಗಟಾಲೂರು ಏತ ನೀರಾವರಿ ಯೋಜನೆಯ ದುರ್ಗತಿ ಇದು.

ಸಿಂಗಟಾಲೂರು ಏತ ನೀರಾವರಿ ಯೋಜನೆಯನ್ನು(Singatalur Lift Irrigation Scheme) 2012ರಲ್ಲಿಯೇ ಲೋಕಾರ್ಪಣೆ ಮಾಡಲಾಗಿದೆ. ಈಗಿನ ಸಿಎಂ ಆಗಿನ ಜಲಸಂಪನ್ಮೂಲ ಸಚಿವರ ಉಪಸ್ಥಿತಿಯಲ್ಲಿಯೇ ಆಗಿನ ಸಿಎಂ ಜಗದೀಶ ಶೆಟ್ಟರ್(Jagadish Shettar) ಲೋಕಾರ್ಪಣೆ ಮಾಡಿದ್ದಾರೆ. ಈಗಲೂ ಕೇವಲ ಬಳ್ಳಾರಿ(Ballari) ಜಿಲ್ಲೆಯ ಹಡಗಲಿ ತಾಲೂಕಿನ ವ್ಯಾಪ್ತಿಯಲ್ಲಿ ಮಾತ್ರ ನೀರಾವರಿಯಾಗುತ್ತಿದ್ದು, ಎಡ ಭಾಗದ ಗದಗ ಮತ್ತು ಕೊಪ್ಪಳ ಜಿಲ್ಲೆಯ ರೈತರ(Farmers) ಹೊಲಕ್ಕೆ ಹನಿ ನೀರು ಕೊಡಲು ಆಗುತ್ತಿಲ್ಲ.

Koppal| ಸಿಂಗಟಾಲೂರು ಹನಿ ನೀರಾವರಿ ಕೈಬಿಟ್ಟ ಸರ್ಕಾರ?

90 ಟಿಎಂಸಿ ಪೋಲು: 

ಸಿಂಗಟಾಲೂರು ಏತ ನೀರಾವರಿ ಯೋಜನೆ ಲೋಕಾರ್ಪಣೆಯಾದ ಮೇಲೆಯೇ ಬರೋಬ್ಬರಿ 90 ಟಿಎಂಸಿ ನೀರು ಪೋಲಾಗುತ್ತಿದೆ. ಏತ ನೀರಾವರಿ ಯೋಜನೆಗೆ ವಾರ್ಷಿಕ 18 ಟಿಎಂಸಿ ನೀರು ಬಳಕೆಯ ಸಾಮರ್ಥ್ಯವಿದೆ. ಈಗ ಕೇವಲ 6-8 ಟಿಎಂಸಿ ನೀರು ಬಳಕೆ ಮಾತ್ರ ಸಾಧ್ಯವಾಗಿದೆ. ಉಳಿದಂತೆ ಪ್ರತಿ ವರ್ಷವೂಹತ್ತು ಟಿಎಂಸಿಯಂತೆ 9 ವರ್ಷಗಳಿಂದ ನೀರು ಪೋಲಾಗುತ್ತಿದೆ. ಜಲಾಶಯದಲ್ಲಿ(Dam) ಸಂಗ್ರಹವಾಗುವ ನೀರನ್ನು ಎತ್ತಿಹಾಕಲಾಗುತ್ತದೆ. ಅದು ಹರಿದು ಮತ್ತೆ ಬೇರೆ ಮಾರ್ಗದ ಮೂಲಕ ನದಿಯನ್ನೇ(River) ಸೇರುತ್ತದೆ. ಕೇವಲ ಕಾಲುವೆ ಅಥವಾ ಪೈಪ್‌ಲೈನ್ ಇಲ್ಲದಿರುವುದಕ್ಕೆ ಈ ಸಮಸ್ಯೆಯಾಗಿದೆ. 

ಪರಿಶೀಲನೆಯಲ್ಲಿ:

ಸಿಂಗಟಾಲೂರು ಏತ ನೀರಾವರಿ ಯೋಜನೆಯ ಕನಸು ಸುಮಾರು 40 ವರ್ಷಗಳಷ್ಟು ಹಳೆಯದು. ಅದು 1992ರಲ್ಲಿ ಕೇವಲ 62 ಕೋಟಿ. ಆದರೆ, ಅದು ಕುಂಟುತ್ತಾ ತೆವಳುತ್ತಾ ಸಾಗಿ ನೂರಾರು ಕೋಟಿ ರುಪಾಯಿ ವೆಚ್ಚದಲ್ಲಿ 2012ರಲ್ಲಿ ಪೂರ್ಣಗೊಂಡು ಲೋಕಾರ್ಪಣೆ ಮಾಡಲಾಗಿದೆ.

ಬಲಭಾಗದಲ್ಲಿ ಹಡಗಲಿ ತಾಲೂಕಿನಲ್ಲಿ ಸುಮಾರು 30-40 ಸಾವಿರ ಎಕರೆ ಪ್ರದೇಶಕ್ಕೆ ನೀರಾವರಿಯಾಗುತ್ತಿದೆ. ಆದರೆ, ಬಲಭಾಗದಲ್ಲಿ ಸುಮಾರು 1 ಲಕ್ಷ ಎಕರೆ ಪ್ರದೇಶಕ್ಕೆ ನೀರಾವರಿ(Irrigation) ಯೋಜನೆ ಕಾಲುವೆ ನಿರ್ಮಾಣ ಮಾಡದೆ ನನೆಗುದಿಗೆ ಬಿದ್ದಿತು. ಹನಿ ನೀರಾವರಿ ಮಾಡಿ, 2.96 ಲಕ್ಷ ಎಕರೆ ಪ್ರದೇಶಕ್ಕೆ ನೀರಾವರಿ ವಿಸ್ತರಣೆ ಮಾಡಲಾಯಿತು. ಇದಕ್ಕಾಗಿ ಪ್ರಾಯೋಗಿಕ ಯೋಜನೆ ರೂಪಿಸಿ, 3 ಸಾವಿರ ಕೋಟಿ ವ್ಯಯ ಮಾಡಲಾಯಿತು. ಆದರೆ, ಒಂದು ಎಕರೆ ಪ್ರದೇಶಕ್ಕೂ ನೀರಾವರಿಯಾಗಲೇ ಇಲ್ಲ. ಹೀಗಾಗಿ ಈಗ ಹನಿ ನೀರಾವರಿ ಕೈಬಿಡಲು ನಿರ್ಧರಿಸಿರುವ ಸರ್ಕಾರ ಕಾಲುವೆ ಮೂಲಕವೇ ನೇರವಾಗಿ ರೈತರಿಗೆ ನೀರು ಕೊಡಲು ಚಿಂತನೆ ನಡೆಸಿದೆ. ಅದಿನ್ನು ಕಾರ್ಯರೂಪಕ್ಕೂ ಬಂದಿಲ್ಲ. ಹೀಗೆ, ಕಾಲುವೆ ನಿರ್ಮಾಣ ಮಾಡಬೇಕೋ ಅಥವಾ ಹನಿ ನೀರಾವರಿ ಮಾಡಬೇಕೋ ಎನ್ನುತ್ತಲೇ ಎಡಭಾಗದಲ್ಲಿ ಹನಿ ನೀರನ್ನು ರೈತರಿಗೆ ಕೊಡಲು ಆಗಿಲ್ಲ. ಇದರಿಂದ 9 ವರ್ಷದಲ್ಲಿ 90 ಟಿಎಂಸಿ ನೀರು ಪೋಲಾಗಿದೆ. 

ಕೊಪ್ಪಳ ಏತ ನೀರಾವರಿ ಈಗ ಕುಡಿಯುವ ನೀರಿಗೆ ಸೀಮಿತ: ರೈತರಿಗೆ ಬಿಗ್ ಶಾಕ್!

ಸಿಂಗಟಾಲೂರು ಏತ ನೀರಾವರಿ ಯೋಜನೆ ವಿಳಂಬವಾಗಿರುವುದು ನಮಗೂ ಗೊತ್ತಿದೆ. ಅದನ್ನು ಈಗ ಕಾರ್ಯಗತ ಮಾಡಲು ಸರ್ಕಾರ ಚಿಂತನೆ ನಡೆಸಿದೆ. ಚೇಂಬರ್ ಮೂಲಕ ನೀರಾವರಿ ಕಲ್ಪಿಸುವ ಯೋಚನೆ ಇದೆ ಅಂತ ಜಿಲ್ಲಾ ಉಸ್ತುವಾರಿ ಸಚಿವ ಹಾಲಪ್ಪ ಆಚಾರ್(Halappa Achar) ತಿಳಿಸಿದ್ದಾರೆ. 

ಇದು ರಾಜ್ಯದ ನೀರಾವರಿ ಯೋಜನೆಗಳಲ್ಲಿಯೇ ದುರಂತವೇ ಸರಿ. ಸಿಂಗಟಾಲೂರು ಏತ ನೀರಾವರಿ ಯೋಜನೆ ಪೂರ್ಣಗೊಂಡು 9 ವರ್ಷವೇ ಕಳೆದಿದೆ. ನೀರು ಸಂಗ್ರವಾಗಿದ್ದರೂ ಬಳಕೆ ಮಾಡಿಕೊಳ್ಳಲು ಆಗದೆ ನೀರು ಪೋಲಾಗುತ್ತಿದೆ ಅಂತ ಹೋರಾಟಗಾರ ವೈ.ಎನ್. ಗೌಡರ್ ಹೇಳಿದ್ದಾರೆ. 

ನಮಗೂ ನೋವಿದೆ. ಅದಕ್ಕಾಗಿಯೇ ಹೋರಾಟ ಮಾಡಿದ್ದೇವೆ. ಈಗ ಅದನ್ನು ಜಾರಿ ಮಾಡಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು. ಹನಿ ನೀರಾವರಿ ಕಾರ್ಯ ಸಾಧುವಾಗುತ್ತಿಲ್ಲವಾದ್ದರಿಂದ ಛೇಂಬರ್ ಮೂಲಕ ನೀರು ಕೊಡುವ ಚಿಂತನೆ ನಡೆದಿದೆ ಅಂತ ಕೊಪ್ಪಳ ಸಂಸದ ಸಂಗಣ್ಣ ಕರಡಿ ತಿಳಿಸಿದ್ದಾರೆ. 
 

PREV
Read more Articles on
click me!

Recommended Stories

ನಾದಬ್ರಹ್ಮ ಇಡ್ಲಿ ಸೆಂಟರ್‌ ಮಾಲೀಕ, 28 ವರ್ಷದ ಸಂದೇಶ್‌ ಹೃದಯಾಘಾತದಿಂದ ಸಾವು
ಆನೆ ಕಾರಿಡಾರ್ ನಿರ್ಮಾಣಕ್ಕೆ ಹೆಚ್ಚು ಒತ್ತು ನೀಡಬೇಕು: ಮಾಜಿ ಸಂಸದ ಪ್ರತಾಪ್ ಸಿಂಹ